ಶೀರೂರು ಮೂಲಮಠದಲ್ಲಿ ಶ್ರೀಗಳ ವೃಂದಾವನ ಪ್ರವೇಶ
Team Udayavani, Jul 20, 2018, 5:35 AM IST
ಉಡುಪಿ: ಐಹಿಕವನ್ನು ತ್ಯಜಿಸಿದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ವೃಂದಾವನ ಪ್ರವೇಶ ಗುರುವಾರ ಸಂಜೆ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ಜರಗಿತು. ತೆರೆದ ಜೀಪಿನಲ್ಲಿ ಉಡುಪಿ ರಥಬೀದಿಯಿಂದ ಸಂಜೆ 6 ಗಂಟೆಗೆ ಹೊರಟ ಸ್ವಾಮೀಜಿ ಪಾರ್ಥಿವ ಶರೀರಕ್ಕೆ ದಾರಿಯುದ್ದಕ್ಕೂ ಜನರು ಕಾದು ನಿಂತು ಗೌರವ ಸಲ್ಲಿಸಿದರು. ಸುಮಾರು 7 ಗಂಟೆಗೆ ಶೀರೂರು ಮಠಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ದೇವರ ಸ್ಮರಣೆಯೊಂದಿಗೆ ಶರೀರವನ್ನು ಶಿಖೀಯಲ್ಲಿ (ಬುಟ್ಟಿ ) ಇರಿಸಿ ಮುಖ್ಯದ್ವಾರದಿಂದ ಒಳಗೆ ಕರೆದುಕೊಂಡು ಹೋಗಿ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಲಾಯಿತು. ಅಲ್ಲಿ ಗೋಪಿಚಂದನವನ್ನು ಹಚ್ಚಿ ಹೊಸ ಕಾವಿಶಾಟಿಯನ್ನು ಉಡಿಸಲಾಯಿತು. ದೇವರಿಗೆ ಸಮರ್ಪಿಸಿದ ತುಳಸೀ ದಳದ ಮಾಲೆಯನ್ನು ಹಾಕಿ ವೇದೋಕ್ತ ವಿಧಿವಿಧಾನಗಳೊಂದಿಗೆ ಕಲಶಾಭಿಷೇಕ ನಡೆಸಲಾಯಿತು. ವಿರಜಾ ಮಂತ್ರ (ಸನ್ಯಾಸ ತೆಗೆದುಕೊಳ್ಳುವ ವಿಶೇಷ ಮಂತ್ರ), ಪವಮಾನ ಸೂಕ್ತ ಮೊದಲಾದ ವೇದೋಕ್ತ ಮಂತ್ರಗಳನ್ನು ಪಠಿಸುತ್ತ ಸಾಲಿಗ್ರಾಮದಿಂದ ತೀರ್ಥವನ್ನೂ ಸಮರ್ಪಿಸಲಾಯಿತು. ಬಳಿಕ ವಾದ್ಯಘೋಷದೊಂದಿಗೆ ಪಾರ್ಥಿವ ಶರೀರವನ್ನು ಮಠದೊಳಗೆ ತಂದು ದೇವರಿಗೆ ಸ್ವಾಮೀಜಿಯವರಿಂದ ಪೂಜೆ ಸಲ್ಲಿಸಲಾಯಿತು.
ಧಾರ್ಮಿಕ ವಿಧಿ ವಿಧಾನ
ಶೀರೂರು ಮೂಲ ಮಠದ ಮುಖ್ಯಪ್ರಾಣ ದೇವರ ಗುಡಿಯ ಹೊರಗೆ ಇರುವ ಜಾಗದಲ್ಲಿ ವೃಂದಾವನ ನಿರ್ಮಿಸಲು ಕುಣಿಯನ್ನು ತೆಗೆದಿಡಲಾಗಿತ್ತು. ಹೊಂಡದ ಎದುರು ಸಣ್ಣ ಕಿಂಡಿಯನ್ನು ನಿರ್ಮಿಸಲಾಗಿತ್ತು. ಕಿಂಡಿಯಲ್ಲಿ ದೇವರ ವಿಗ್ರಹ, ಶಂಖ, ಘಂಟಾಮಣಿಯನ್ನು ಇರಿಸಲಾಯಿತು. ಸ್ವಾಮೀಜಿಯವರನ್ನು ಕುಣಿಯಲ್ಲಿರಿಸಿ ಅಲ್ಲಿ ಜಪಮಾಲೆ, ಕಮಂಡಲು, ಗಿಂಡಿಯನ್ನು ಇರಿಸಲಾಯಿತು.
ಬಲಬದಿ ದಂಡವನ್ನು (ಸನ್ಯಾಸ ಸ್ವೀಕರಿಸುವಾಗ ನೀಡಿದ್ದು) ಇರಿಸಲಾಯಿತು. ಈ ಹೊತ್ತಿಗೆ ಪುರುಷ ಸೂಕ್ತವೇ ಮೊದಲಾದ ಮಂತ್ರಗಳನ್ನು ಪಠಿಸಲಾಯಿತು. ತಲೆಯ ಮೇಲಿಂದ ಸಾಂಕೇತಿಕವಾಗಿ ತೆಂಗಿನಕಾಯಿ ಒಡೆಯಲಾಯಿತು. ಪಾರ್ಥಿವ ಶರೀರದ ಸುತ್ತಲೂ ಸುಮಾರು 15 ಕೆ.ಜಿ. ಹತ್ತಿಯನ್ನು ಹಾಕಿ ಅದರ ಹೊರಭಾಗ ಉಪ್ಪು, ಸಾಸಿವೆ, ಪಚ್ಚ ಕರ್ಪೂರ, ಕಾಳುಮೆಣಸುಗಳನ್ನು ತಲಾ ಸುಮಾರು 1.5 ಕ್ವಿಂಟಾಲ್ನಷ್ಟು ಸುರಿಯಲಾಯಿತು. ಮೇಲ್ಭಾಗ ಕಲ್ಲು ಚಪ್ಪಡಿಯನ್ನು ಹಾಸಿ ಅದರ ಮೇಲೆ ತುಳಸಿ ಗಿಡವನ್ನು ನೆಟ್ಟರು.
ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಹೆರ್ಗ ವೇದವ್ಯಾಸ ಭಟ್ ಅವರ ನೇತೃತ್ವದಲ್ಲಿ ಜರಗಿದವು.
ಉತ್ತರಾಧಿಕಾರಿ ಆಯ್ಕೆ ಸೋದೆ ಶ್ರೀ ಹೆಗಲಿಗೆ
ಸೋದೆ ಮತ್ತು ಶೀರೂರು ದ್ವಂದ್ವ ಮಠಗಳ ಪರಂಪರೆ ವಿಶಿಷ್ಟವಾದುದು. ಸೋದೆ ಮಠದ ಪರಂಪರೆಯಲ್ಲಿ ಪ್ರತಿಯೊಬ್ಬ ಶಿಷ್ಯರನ್ನು ಅವರ ಮಠದ ಹಿರಿಯ ಸ್ವಾಮೀಜಿಯವರೇ ನೀಡಿದ್ದರು. ಶೀರೂರು ಮಠದ ಪ್ರತಿಯೊಬ್ಬ ಸ್ವಾಮೀಜಿಯವರನ್ನು ದ್ವಂದ್ವ ಮಠವಾದ ಸೋದೆ ಮಠಾಧೀಶರೇ ನೇಮಿಸಿದ್ದರು. ಈಗಲೂ ಶೀರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆ ಸೋದೆ ಮಠಾಧೀಶರ ಹೆಗಲೇರಿದೆ.
ಶೀರೂರು ಮಠಕ್ಕೆ ಯಾವಾಗ ಉತ್ತರಾಧಿಕಾರಿಯನ್ನು ನೇಮಿಸುತ್ತೀರಿ ಎಂದು ಪತ್ರಕರ್ತರು ಸೋದೆ ಮಠಾಧೀಶರನ್ನು ಕೇಳಿದಾಗ, ‘ಜಾತಕ ಪರಿಶೀಲನೆ ಮಾಡಿ ನೇಮಿಸಬೇಕಾಗುತ್ತದೆ’ ಎಂದರು. ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರ ನಡೆಸುವಂತಿಲ್ಲ, ಚಾತುರ್ಮಾಸ್ಯ ವ್ರತ ಸದ್ಯವೇ ಆರಂಭವಾಗುವ ಕಾರಣ ಬಳಿಕವೂ ನೇಮಿಸಬಹುದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿರುವುದರಿಂದ ಪೂಜೆಯ ಸಮಸ್ಯೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ