ಉಡುಪಿ ಸಂಗೀತ ಸಭಾ : ಭಕ್ತಿಸುಧೆಯಲ್ಲಿ ತೇಲಿಸಿದ ‘ತೀರ್ಥ ವಿಟ್ಠಲ್’
Team Udayavani, Nov 19, 2018, 4:50 AM IST
ಉಡುಪಿ: ವಿಜಯನಾಥ ಶೆಣೈ ಅವರಿಂದ 1962ರಲ್ಲಿ ಸ್ಥಾಪನೆಗೊಂಡ ಉಡುಪಿ ಸಂಗೀತ ಸಭಾದ ಆಶ್ರಯದಲ್ಲಿ ಆಯೋಜನೆಗೊಂಡ ‘ತೀರ್ಥ ವಿಟ್ಠಲ್’- ಅಭಂಗಗಳು ಮತ್ತು ಭಕ್ತಿ ಸಂಗೀತ ರವಿವಾರ ಕೇಳುಗರನ್ನು ಭಕ್ತಿ ಸುಧೆಯಲ್ಲಿ ತೇಲಿಸಿತು. ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮಕ್ಕೆ ಆಭರಣ ಜುವೆಲರ್ಸ್ ಸಹಯೋಗ ನೀಡಿತ್ತು. ಆಭರಣ ಜುವೆಲರ್ಸ್ನ ರಾಧಾ ಎಂ. ಕಾಮತ್ ಉದ್ಘಾಟಿಸಿದರು. ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ, ಸಂಗೀತ ಸಭಾದ ಟ್ರಸ್ಟಿಗಳಾದ ಶಶಿಕಲಾ ಎನ್. ಭಟ್, ಸಂಧ್ಯಾ ಸುಭಾಷ್ ಕಾಮತ್, ಸುಧಾ ಅನಂತನಾರಾಯಣ ಪೈ ಉಪಸ್ಥಿತರಿದ್ದರು. ಸಿಎ ಸುಶ್ಮಿತಾ ಪ್ರಭು, ಅದಿತಿ ಶ್ಯಾನುಭೋಗ್ ನಿರೂಪಿಸಿದರು.
ಹೆಸರಾಂತ ಸಂಗೀತಗಾರ ಆನಂದ ಭಾಟೆ, ಪುಣೆಯ ರಾಹುಲ್ ದೇಶ್ಪಾಂಡೆ ಹಾಗೂ ಸಾಥಿಗಳಾಗಿದ್ದ ಮೃದಂಗವಾದಕ ಪ್ರಸಾದ್ ಜೋಷಿ, ತಬಲ ವಾದಕ ನಿಖೀಲ್ ಪಾಠಕ್, ಹಾರ್ಮೋನಿಯಂ ವಾದಕ ರಾಹುಲ್ ಗೋಲೆ, ಡ್ರಮ್ಸ್ ವಾದಕ ಉದ್ಧವ್ ಕುಂಭಾರ್ ಅವರನ್ನು ಭಜನ್ ಸಂಗೀತ್ ಸಂಧ್ಯಾ ಕಾರ್ಯಕ್ರಮಕ್ಕೆ ಸಂಗೀತ ಸಭಾದ ಅಧ್ಯಕ್ಷ ಟಿ. ರಂಗ ಪೈ ಸ್ವಾಗತಿಸಿದರು. ಟ್ರಸ್ಟಿಗಳಾದ ಜಗದೀಶ್ ಪೈ, ಅಜಿತ್ ಪೈ, ಸುರೇಶ್, ಅನಂತನಾರಾಯಣ ಭಟ್ ಉಪಸ್ಥಿತರಿದ್ದರು.
ಮನಸೂರೆಗೊಂಡ ಸಂಗೀತ
ಆನಂದ ಭಾಟೆ ಮತ್ತು ರಾಹುಲ್ ದೇಶ್ಪಾಂಡೆ ಆರಂಭದಲ್ಲಿ ದೇವರ ನಾಮದೊಂದಿಗೆ ಜತೆಯಾಗಿ ‘ಜಯ ಜಯ ರಾಮಕೃಷ್ಣ ಹರಿ’ ಅಭಂಗವನ್ನು ವಿಶಿಷ್ಟ ಆಲಾಪನೆಗಳ ಮೂಲಕ ಹಾಡಿ ರಂಜಿಸಿದರು. ಆನಂದ ಭಾಟೆ ಮತ್ತು ರಾಹುಲ್ ದೇಶಪಾಂಡೆ ಜತೆಯಾಗಿ ಮತ್ತು ಸೊಲೊ ಆಗಿ ಸುಮಾರು 3 ತಾಸು ಕಾಲ ಮರಾಠಿ ಅಭಂಗಗಳು ಮತ್ತು ಭಕ್ತಿ ಸಂಗೀತ ಹಾಡಿದರು. ಆನಂದ ಭಾಟೆ ಅವರ ‘ದಯ ಮಾಡೋ ರಂಗ ದಯ ಮಾಡೋ ಕೃಷ್ಣ’ ಎಂಬ ಪುರಂದರದಾಸರ ಕೀರ್ತನೆ ಮೆಚ್ಚುಗೆಗೆ ಪಾತ್ರವಾಯಿತು.