ಉಡುಪಿ: 5 ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭ
Team Udayavani, Dec 19, 2018, 9:27 AM IST
ಉಡುಪಿ: ಉಡುಪಿ ಜಿಲ್ಲೆಯ ಸಿಆರ್ಝಡ್ ವ್ಯಾಪ್ತಿಯ ಉಪ್ಪೂರು, ಹಾವಂಜೆ ಮತ್ತು ಮೂಡುತೋನ್ಸೆಯ ಐದು ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಗೊಂಡಿದೆ.
ರಾಜಧನ ಪಾವತಿಸಿರುವ 33 ಮಂದಿ ಪರವಾನಿಗೆದಾರರ ಪೈಕಿ 12 ಮಂದಿ ಮರಳು ದಿಬ್ಬ ತೆರವು (ಮರಳುಗಾರಿಕೆ) ಆರಂಭಿಸಿದ್ದು, ಈ ಪೈಕಿ ಓರ್ವರು ನಿರ್ಮಿತಿ ಕೇಂದ್ರಕ್ಕೆ ವಿತರಣೆ ಮಾಡಿದ್ದಾರೆ. ಉಳಿದವರು ವಿತರಣೆ ಇನ್ನಷ್ಟೇ ಆರಂಭಿಸ ಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಐದು ದಿಬ್ಬಗಳಲ್ಲಿ 16,910 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಇದು ಸುಮಾರು 1,691 ಲೋಡ್ಗಳಷ್ಟಾಗುತ್ತದೆ. ಇದರಲ್ಲಿ ಶೇ. 10ರಷ್ಟನ್ನು ಅಂದರೆ 169 ಲೋಡ್ ಸರಕಾರಿ ಯೋಜನೆಗಳ ಕಾಮಗಾರಿ ನಡೆಸುವ ನಿರ್ಮಿತಿ ಕೇಂದ್ರಕ್ಕೆ ಮೀಸಲಿಡಬೇಕಾಗಿದೆ. ಈಗ ಗುರುತಿಸಲಾಗಿರುವ ದಿಬ್ಬಗಳ ಪೈಕಿ ಕೆಲವು ದಿಬ್ಬಗಳಲ್ಲಿ ಕೇವಲ 2 ದಿನಗಳಿಗೆ ಮಾತ್ರ ಮರಳು ದೊರೆಯಲಿದೆ. ಉಳಿದ ಕೆಲವು ದಿಬ್ಬಗಳಲ್ಲಿ 5-6 ದಿನಗಳ ಕಾಲ ತೆಗೆಯಬಹುದಾದಷ್ಟು ಮರಳು ಇದೆ.
ಅನಂತರ ಮರಳುಗಾರಿಕೆ ಮುಂದುವರಿಸಲಾಗದು. ಮತ್ತೂಮ್ಮೆ ನಡೆಸಲಾಗಿರುವ ಬೇಥಮೆಟ್ರಿಕ್ ಸಮೀಕ್ಷೆಯಂತೆ ಸುಮಾರು 25 ಲಕ್ಷ ಮೆಟ್ರಿಕ್ ಟನ್ ಮರಳು ಸಿಗಬಹುದೆಂದು ಹೇಳಲಾಗುತ್ತಿದೆ. ಅದು ಹೌದಾದರೆ ಎಲ್ಲ 171 ಮಂದಿ ಪರವಾನಿಗೆದಾರರಿಗೆ ಲೀಸ್ ದೊರೆಯಬಹುದೆಂಬ ನಿರೀಕ್ಷೆ ಇದೆ. ಆಗ ಮರಳಿಗೆ ಬೆಲೆಯೂ ಕಡಿಮೆಯಾಗಬಹುದು ಎಂದು ಮರಳು ದೋಣಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.