ಸಮುದ್ರದಲ್ಲಿ ಡೀಸೆಲ್ ಅಂಶ ಪತ್ತೆ ವದಂತಿ: ಗೋವಾಕ್ಕೆ ತೆರಳಿದ ತಂಡ
Team Udayavani, Jan 23, 2019, 12:50 AM IST
ಮಲ್ಪೆ: ಗೋವಾದ ಪಣಜಿ ಬೈತುಲ್ ಸಮೀಪ ಸಮುದ್ರದಲ್ಲಿ ಡೀಸೆಲ್ ಸೋರಿಕೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿದ್ದು, ಅದು ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ಗೆ ಸಂಬಂಧಿಸಿದ್ದಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಉಡುಪಿ ನಗರ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ತಂಡ ಸೋಮವಾರ ರಾತ್ರಿ ಗೋವಾಕ್ಕೆ ತೆರಳಿ ಮಾಹಿತಿ ಕಲೆಹಾಕಿತು. ಕರಾವಳಿ ರಕ್ಷಣಾ ಪಡೆಯ ಸಿಬಂದಿ ತಮ್ಮ ನೌಕೆಯ ಮೂಲಕ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆದರೆ ಡೀಸೆಲ್ ಸೋರಿಕೆಯಾಗಿರುವ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ ಎಂದು ತಿಳಿಸಿವೆ. ನೌಕಾಪಡೆ ಹಡಗಿನ ಮೂಲಕ ಬೋಟ್ ಪತ್ತೆ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಕುಟುಂಬಿಕರ ಆಕ್ರೋಶ
ಸುವರ್ಣ ತ್ರಿಭುಜ ಬೋಟ್ , 7 ಮಂದಿ ಮೀನುಗಾರರು ಮಲ್ಪೆಯ ಕಡಲತೀರದಿಂದ ಹೊರಟು ಹೋಗಿ ಕಾಣೆಯಾಗಿ ತಿಂಗಳು ಕಳೆದರೂ ಇನ್ನೂ ಪತ್ತೆ ಯಾಗಿಲ್ಲ. ಮೀನುಗಾರರ ಕುಟುಂಬದಲ್ಲಿ ಮೂಡಿದ್ದ ಆತಂಕ, ದುಃಖಗಳು ಆಕ್ರೋಶವಾಗಿ ಬದಲಾಗುತ್ತಿವೆೆ. ನಾಪತ್ತೆಯಾದ ಮೀನುಗಾರರ ಕುಟುಂಬಗಳು ನಮ್ಮವರು ಎಲ್ಲಿದ್ದಾರೆ, ಏನಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿಗಳನ್ನು, ಇಲಾಖೆ ಅಧಿಕಾರಿಗಳನ್ನು ದಿನನಿತ್ಯದ ಕಾಯಕ ಎಂಬಂತೆ ಭೇಟಿಯಾಗಿ ಕೇಳುತ್ತಲೇ ಇದ್ದಾರೆ.