ಅವ್ಯವಸ್ಥೆಯ ಆಗರ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶೌಚಾಲಯ
Team Udayavani, Jan 24, 2019, 12:50 AM IST
ಉಡುಪಿ: ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಉಡುಪಿ ಕೆಎಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.
ನಿಲ್ದಾಣಕ್ಕೆ ಹೋದರೆ ಸಾಕು, ಗಬ್ಬೆನ್ನುವ ದುರ್ನಾತ, ನೀರಿನ ಸಮಸ್ಯೆ, ತುಂಡಾದ ಫ್ಲಶ್! ಇದು ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾಮಾನ್ಯವೇನೋ ಎಂಬಂತೆ ಇದೆ.
ನಿಲ್ದಾಣದಲ್ಲಿ ಕೂರುವುದು ಸಮಸ್ಯೆ
ಶೌಚಾಲಯದ ವಾಸನೆ ನಿಲ್ದಾಣದ ಹೊರಕ್ಕೂ ವ್ಯಾಪಿಸಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಸಿಬಂದಿಯನ್ನು ಪ್ರಶ್ನಿಸಿದರೆ ದಿನಕ್ಕೆ 4ರಿಂದ 5 ಬಾರಿ ಕ್ಲೀನಿಂಗ್ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇಲ್ಲಿ ಆ ಯಾವ ಅಂಶಗಳು ಕಾಣುತ್ತಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ಒಂದೇ ರೀತಿಯ ವಾತಾವರಣವಿದೆ ಎನ್ನುತ್ತಾರೆ ಸ್ಥಳೀಯರು.
ಇಲ್ಲಿ ದಿನನಿತ್ಯ 300ಕ್ಕೂ ಅಧಿಕ ಬಸ್ಸುಗಳು ಆಗಮಿಸುತ್ತಿದ್ದು ಸಾವಿರಾರು ಪ್ರಯಾಣಿಕರು ಈ ಶೌಚಾಲಯವನ್ನು ಬಳಸುತ್ತಾರೆ. ಆದರೆ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ನೀರು ಇಲ್ಲ
ನಗರಸಭೆಯಿಂದ ಟ್ಯಾಂಕರ್ ಮೂಲಕ ಇಲ್ಲಿಗೆ ನೀರು ಪೂರೈಸುತ್ತಿದ್ದು, ನೀರು ಖಾಲಿಯಾದರೆ, ವಿದ್ಯುತ್ ಕೈಕೊಟ್ಟರೆ ಪರ್ಯಾಯ ವ್ಯವಸ್ಥೆಯೇ ಇಲ್ಲದಂತಾಗಿದೆ. ಈ ಬಗ್ಗೆ ನಗರಸಭೆಗೆ ಹೇಳಿದರೆ “ಈಗ ಬರುತ್ತೇನೆ’ ಎಂದು ಕೇಳಿ ಹಲವು ತಾಸು ತಗೊಳ್ಳುತ್ತಾರೆ ಎನ್ನುತ್ತಾರೆ ಅಲ್ಲಿನ ಸಿಬಂದಿ.
ಫ್ಲಶ್ ಸಮಸ್ಯೆ
ಶೌಚಾಲಯದೊಳಗೆ ಫ್ಲಶ್ ಔಟ್ ಸಿಸ್ಟಮ್ ಜೋಡಿಸಲಾಗಿದೆ. ಆದರೆ ಫ್ಲಶ್ ಔಟ್ನ ಪೈಪ್ ತುಂಡಾಗಿದ್ದು, ಕಬ್ಬಿಣದ ರಾಡ್ ಮಾತ್ರ ಉಳಿದುಕೊಂಡಿದೆ. ಅಲ್ಲದೆ, ಪುರುಷರ ಶೌಚಾಲಯದ ಫ್ಲಶ್ ಔಟ್ ಸಿಸ್ಟಮ್ನ ಮೇಲ್ಭಾಗ ಸಂಪೂರ್ಣ ತೆರೆದುಕೊಂಡಿದೆ. ಟ್ಯಾಪ್ನಲ್ಲಿ ಕೆಲವೊಮ್ಮೆ ನೀರೂ ಅಲಭ್ಯವಾಗುವುದರಿಂದ ಫ್ಲಶ್ ಔಟ್ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಪೈಪ್ ಸಂಪರ್ಕ ಇಲ್ಲದೆ, ಇದರಲ್ಲಿ ನೀರೇ ಬರುತ್ತಿಲ್ಲ. ಟ್ಯಾಪ್ಗ್ಳು ಕೂಡ ನಾದುರಸ್ತಿಯಲ್ಲಿವೆ.
ಬಳಕೆ ಅನಿವಾರ್ಯ
” ದರ ವಸೂಲಿ ಮೂಡಿಯೂ ನಿರ್ವಹಣೆ ಇಲ್ಲದಿರುವುದು ವಿಪರ್ಯಾಸ. ಸಂಬಂಧಪಟ್ಟವರು ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಅನುಕೂಲ ಮಾಡಬೇಕು.
-ಹೇಮಂತ್ ಪ್ರಯಾಣಿಕರು
ಶೀಘ್ರ ಕ್ರಮ
ಕೆಎಸ್ಸಾರ್ಟಿಸಿ ಶೌಚಾಲಯದ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ಆನಂದ್ ಕೆ. ಪೌರಾಯುಕ್ತರು, ನಗರಸಭೆ