ತಿಂಗಳೆ ಗರಡಿಗೆ ಐತಿಹಾಸಿಕ ಹಿನ್ನೆಲೆ: ಕೋಟ
Team Udayavani, Feb 16, 2019, 12:55 AM IST
ಹೆಬ್ರಿ: ತಿಂಗಳೆ ಗರಡಿ ಸಮಗ್ರ ಜೀರ್ಣೋದ್ಧಾರಗೊಂಡಿದ್ದು ಇಲ್ಲಿ ಮಾತ್ರ ಶಿವರಾಯ ದೈವದ ಕೋಲ ಹಾಗೂ ದರ್ಶನ ಸೇವೆ ನಡೆಯುತ್ತದೆ. ಬ್ರಹ್ಮ ಕಲಶೋತ್ಸವದಲ್ಲಿ ಪಾಲು ಪಡೆದ ಎಲ್ಲರೂ ಧನ್ಯರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಿಂಗಳೆ ಗರಡಿಯ ಧರ್ಮದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀ ಶಿವರಾಯ ದೈವದ ಶಿಲಾಮಯ ಗುಡಿ-ಧ್ವಜಸ್ತಂಭ ಸಮರ್ಪಣೆ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ತಿಂಗಳೆ ಮನೆತನ ಹಾಗೂ ತಿಂಗಳೆ ಗರಡಿಯ ಆಡಳಿತ ಮೊಕ್ತೇಸರ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ನೇತೃತ್ವ ಗರಡಿ ಜೀರ್ಣೋದ್ಧಾರ ಆಗಿದೆ. 58 ವರ್ಷಗಳಿಂದ ವಾರ್ಷಿಕ ಉತ್ಸವದ ಜತೆಗೆ ಧರ್ಮ, ಕಲೆ, ಸಾಹಿತ್ಯೋತ್ಸವ ಆಯೋಜಿಸುತ್ತಿದೆ ಎಂದರು.
ಗರಡಿಯ ಕಾಮಗಾರಿ ಮಾಡಿದ ಗುತ್ತಿಗೆದಾರ ಶ್ರೀಧರ್ ಹೆಗ್ಡೆ ಹಾಗೂ ಶಿಲ್ಪಿ ರಾಜು ಕಾರ್ಕಳ ಮತ್ತು ದಾನಿಗಳನ್ನು ಸಮ್ಮಾನಿಸಲಾಯಿತು.
ಸಾಹಿತಿ ಅಂಬಾತನಯ ಮುದ್ರಾಡಿ, ನೀರೆ ಕೃಷ್ಣ ಶೆಟ್ಟಿ, ಪಳ್ಳಿ ಜಗದೀಶ್ ಹೆಗ್ಡೆ, ವಾಸುದೇವ ಶೆಟ್ಟಿ, ನಾಗೇಶ್ ಹೆಗ್ಡೆ, ಅಶೋಕ್ ಶೆಟ್ಟಿ, ತಿಂಗಳೆ ಮನೆತನದ ಕೆ. ಪ್ರಕಾಶ್ ಶೆಟ್ಟಿ, ಡಾ| ಕೆ. ಅಣ್ಣಪ್ಪ ಶೆಟ್ಟಿ, ಶೌರಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಧರ್ಮಸ್ಥಳ ಯೋಜನೆಯ ಪ್ರವೀಣ್ ವಂದಿಸಿದರು. ಸೀತಾನದಿ ವಿಠuಲ ಶೆಟ್ಟಿ ನಿರೂಪಿಸಿದರು.
ಮಾ. 8: ಶ್ರೀನಿವಾಸ ಕಲ್ಯಾಣ
ಗರಡಿಯ ಆಡಳಿತ ಮೊಕ್ತೇಸರ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮಾತನಾಡಿ, ತಿಂಗಳೆ ಗರಡಿಯಲ್ಲಿ ಮಾರ್ಚ್ 5ರಿಂದ 9ರ ವರೆಗೆ ವರ್ಷಾವಧಿ ಮಹೋತ್ಸವ ನಡೆಯಲಿದ್ದು ಮಾ. 8ರಂದು ಧರ್ಮ-ಕಲೆ-ಸಾಹಿತ್ಯೋತ್ಸವದ 58ನೇ ಅಧಿವೇಶನದ ಜತೆಗೆ ಶ್ರೀನಿವಾಸ ಕಲ್ಯಾಣ ನಡೆಯಲಿದೆ ಎಂದು ತಿಳಿಸಿದರು.