ಬಸ್- ಟಿಪ್ಪರ್ ಢಿಕ್ಕಿ: ಯುವತಿ ಸ್ಥಳದಲ್ಲೇ ಸಾವು
Team Udayavani, Feb 24, 2019, 1:00 AM IST
ಬೆಳ್ಮಣ್/ಕಾರ್ಕಳ: ಬಸ್ಮತ್ತು ಟಿಪ್ಪರ್ ಮುಖಾಮುಖೀ ಢಿಕ್ಕಿ ಹೊಡೆದು ಯುವತಿಯೊಬ್ಬಳು ಸ್ಥಳದÇÉೇ ಮೃತಪಟ್ಟ ದಾರುಣ ಘಟನೆ ಬೆಳ್ಮಣ್ ಸಮೀಪದ ಜಂತ್ರ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ಯುವತಿಯನ್ನು ಪಿಯುಸಿ ವಿದ್ಯಾರ್ಥಿನಿ ಮೋಕ್ಷಿತಾ (18) ಎಂದು ಗುರುತಿಸಲಾಗಿದೆ.
ಬಸ್ಸಿನ ಚಾಲಕ ಶಿರ್ವ ನಿವಾಸಿ ರವಿ ಅವರ ಕಾಲು ಮುರಿದಿದ್ದು, ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಮಹಮ್ಮದ್ ಹುಸೇನ್ ಕಟಪಾಡಿ (40), ಯಶೋದಾ ಶಿರ್ವ (49), ಬೇಬಿ ಕುತ್ಯಾರು (66), ಫಿಲೋಮಿನಾ ಜಂತ್ರ (62), ಸುಂದರಿ ಜಂತ್ರ (50), ಪ್ರಶಾಂತ್ ಕುಲಾಲ್ ನಿಟ್ಟೆ (30), ಬಸವರಾಜ್ (55) ಸಹಿತ ಸುಮಾರು 21 ಮಂದಿ ಗಾಯಗೊಂಡು ಶಿರ್ವ, ಮಣಿಪಾಲ ಮತ್ತು ಉಡುಪಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ
ಬೆಳ್ಮಣ್ಣಿನಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಬಸ್ಸಿಗೆ ಶನಿವಾರ ಸಂಜೆ ಸುಮಾರು 5. 30ರ ಹೊತ್ತಿಗೆ ಜಂತ್ರದ ಅಪಾಯಕಾರಿ ಸ್ಥಳದಲ್ಲಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಮುಖಾಮುಖೀ ಢಿಕ್ಕಿ ಹೊಡೆಯಿತು. ಪರಿಣಾಮ ಮೋಕ್ಷಿಕಾ ಅವರು ಬಸ್ಸಿನಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳವು ತುಂಬಾ ಅಪಾಯಕಾರಿಯಾಗಿದ್ದು, ಈ ಹಿಂದೆಯೂ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಜತೆಗೆ ಅಮಿತ ವೇಗದಿಂದ ಮತ್ತು ಅಜಾಗರೂಕತೆಯಿಂದ ಸಂಚರಿಸುವ ಟಿಪ್ಪರ್ ಲಾರಿಗಳು ಕೂಡ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಶಿರ್ವ ಎಸ್ಐ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಂಡರು. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.