ಲೋಕಸಭೆ ಚುನಾವಣೆ ಬಳಿಕ ಶಿಕ್ಷಕರ ವರ್ಗಾವಣೆ ಸಾಧ್ಯತೆ
Team Udayavani, Mar 16, 2019, 12:30 AM IST
ಉಡುಪಿ: ಲೋಕಸಭೆ ಚುನಾವಣೆ ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಅಧಿಸೂಚನೆ ಹೊರ ಬೀಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ವಿಧಾನಮಂಡಲದಲ್ಲಿ ವರ್ಗಾವಣೆ ಕುರಿತ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಚುನಾವಣೆ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಹೆಚ್ಚಿದೆ. ಇದರಿಂದ 3 ವರ್ಷಗಳಿಂದ ವರ್ಗಾವಣೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಶಿಕ್ಷಕರು ನಿಟ್ಟುಸಿರು ಬಿಡುವಂತಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆ (ತಿದ್ದುಪಡಿ) 2007ರ ಅನ್ವಯ ಪ್ರತೀ ವರ್ಷ ಮಾರ್ಚ್, ಎಪ್ರಿಲ್ನಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಆದರೆ ರಾಜ್ಯ ಸರಕಾರ ಚುನಾವಣೆ ನೀತಿ ಸಂಹಿತೆ ಸಹಿತ ಅನಿವಾರ್ಯ ಕಾರಣಗಳನ್ನು ಹೇಳಿ 3 ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆಸಿರಲಿಲ್ಲ.
ಎರಡು ಅಂಶಗಳ ಸೇರ್ಪಡೆ
ಕಾಯ್ದೆಗೆ 2019ರ ಜನವರಿಯಲ್ಲಿ ಎರಡು ಪ್ರಮುಖ ಅಂಶಗಳು ಸೇರ್ಪಡೆಯಾಗಿವೆ. ಮೊದಲನೆಯದು, ಪ್ರತಿ ಎರಡು ವರ್ಷಗಳಿಗೊಮ್ಮೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಶೇ.5ಕ್ಕೆ ಮೀರದಂತೆ ಮಾಡಬೇಕು. ಇದಕ್ಕೂ ಮುನ್ನ ವಿದ್ಯಾರ್ಥಿ- ಶಿಕ್ಷಕ ಅನುಪಾತದ ಆಧಾರದ ಮೇಲೆ ಹೆಚ್ಚುವರಿಯನ್ನು ನಿಗದಿಪಡಿಸಿಕೊಳ್ಳಬೇಕು. ಎರಡನೇ ಅಂಶ, 10 ವರ್ಷಗಳಿಗಿಂತ ಹೆಚ್ಚು ಅವಧಿಗೆ ಒಂದೇ ವಲಯದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಶೇ.5 ಕ್ಕೆ ಮೀರದಂತೆ ಕಡ್ಡಾಯ ವರ್ಗಾವಣೆ ಮಾಡಬೇಕು. ಈ ಎರಡೂ ಪ್ರಕ್ರಿಯೆಗಳ ಅನಂತರವೇ ಕೋರಿಕೆ ವರ್ಗಾವಣೆ ಕೈಗೆತ್ತಿಕೊಳ್ಳಬೇಕು. ಒಟ್ಟಾರೆ ಈ ಎಲ್ಲ ವರ್ಗಾವಣೆಯು ಶೇ.15ರ ಮಿತಿಗೆ ಒಳಪಟ್ಟಿರಬೇಕು ಎಂಬುದಾಗಿದೆ. ಮೊದಲು ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಎರಡನೇ ಸುತ್ತಿನಲ್ಲಿ ಕೋರಿಕೆ ವರ್ಗಾವಣೆ, ಮೂರನೆಯದಾಗಿ ಕಡ್ಡಾಯ ವರ್ಗಾವಣೆ ಆಗಬೇಕಿದೆ. ಬಳಿಕ ಘಟಕದ ಹೊರಗಿನ ಕೋರಿಕೆ ವರ್ಗಾವಣೆಯನ್ನು ಅನುಕ್ರಮವಾಗಿ ಕಡ್ಡಾಯಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಬದಲಾವಣೆಗೆ ಅವಕಾಶವಿಲ್ಲ. ಇದೇ ವಿಳಂಬಕ್ಕೆ ಕಾರಣವಾಗಿದೆ.
ಶಿಕ್ಷಕರ ಅಸಮಾಧಾನ
ಹಲವು ವರ್ಷಗಳಿಂದ ಗ್ರಾಮ ಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ನಗರದಲ್ಲಿ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ನಗರಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದವರನ್ನು ಕಡ್ಡಾಯವಾಗಿ ಜೇಷ್ಠತೆಯ ಆಧಾರದ ಮೇಲೆ ಗ್ರಾಮೀಣ ಸೇವೆಗೆ ಕಳುಹಿಸುವುದು ಕಾಯ್ದೆಯ ಆಶಯ. ಇದರ ಅನ್ವಯ ಪ್ರದೇಶಗಳನ್ನು ಎ, ಬಿ, ಸಿ ವಲಯ ಎಂದು ವರ್ಗೀಕರಿಸಲಾಗಿದೆ. ಅನಾರೋಗ್ಯ ವಿನಾ ಉಳಿದ ಯಾವ ಕಾರಣಕ್ಕೂ ರಿಯಾಯಿತಿ ನೀಡದಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣ.
“ಎ’ ವಲಯದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು “ಸಿ’ ವಲಯಕ್ಕೆ (ಗ್ರಾಮೀಣ ಪ್ರದೇಶ) ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ಶಿಕ್ಷಕರು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಕೋರ್ಟ್ನಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾದುದು ವರ್ಗಾವಣೆಗೆ ಅಡ್ಡಿಯಾಯಿತು. ಪ್ರಕರಣಗಳು ಇತ್ಯರ್ಥವಾದ ಅನಂತರವೂ ವರ್ಗಾವಣೆಗೆ ಅನುಸರಿಸಬೇಕಾದ ಮಾನದಂಡಗಳ ಅಸ್ಪಷ್ಟತೆ, ತಂತ್ರಾಂಶದಲ್ಲಿನ ದೋಷ, ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ವಿರೋಧ ವಿಳಂಬಕ್ಕೆ ಕಾರಣವಾಯಿತು. ಒಟ್ಟಾರೆಯಾಗಿ ಇಡೀ ಪ್ರಕ್ರಿಯೆಯೇ ಗೊಂದಲಮಯವಾಯಿತು. ಹೀಗಾಗಿ 2017ರ ನವೆಂಬರ್ನಿಂದ 2018ರ ಅಕ್ಟೋಬರ್ ವರೆಗೆ ಆರು ಬಾರಿ ವರ್ಗಾವಣೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಮಸೂದೆ ಅಂಗೀಕಾರ
ವಿಧಾನಮಂಡಲದಲ್ಲಿ ವರ್ಗಾವಣೆ ಕುರಿತ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ರಾಜ್ಯಪಾಲರ ಅಂಕಿತ ಮಾತ್ರ ಬಾಕಿಯಿದೆ. ಲೋಕಸಭೆ ಚುನಾವಣೆ ಮುಗಿದ ಅನಂತರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ.
ಎಸ್.ಆರ್. ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ