SSLC ಪರೀಕ್ಷೆ :ಹ್ಯಾಟ್ರಿಕ್ ಪ್ರಥಮಕ್ಕೆ ಉಡುಪಿ ಶತಪ್ರಯತ್ನ
Team Udayavani, Mar 18, 2019, 3:56 AM IST
ಉಡುಪಿ: ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಮಾ. 21ರಂದು ಆರಂಭಗೊಂಡು ಎ. 4ರ ವರೆಗೆ ನಡೆಯಲಿದೆ. ಕಳೆದೆರಡು ವರ್ಷ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ ಸತತ ಮೂರನೆಯ ವರ್ಷವೂ ಇದನ್ನು ಉಳಿಸಿ ಹ್ಯಾಟ್ರಿಕ್ ಸಾಧಿಸಿಕೊಳ್ಳಲು ಶತಪ್ರಯತ್ನಕ್ಕೆ ಮುಂದಾಗಿದೆ.
ವರ್ಷಾರಂಭದಲ್ಲಿಯೇ ಶಿಕ್ಷಣ ಇಲಾಖೆ ಈ ದಾಖಲೆಗೆ ಸನ್ನದ್ಧವಾಗಿತ್ತು. ಜುಲೈನಿಂದ ಡಿಸೆಂಬರ್ವರೆಗೆ ಪ್ರತಿನಿತ್ಯ ಬೆಳಗ್ಗೆ ಒಂದು ಗಂಟೆ ಹೆಚ್ಚುವರಿ ಪಾಠವನ್ನು ನಡೆಸಿ ಎಲ್ಲ ಪಾಠಗಳನ್ನು ಮುಗಿಸಲು ಯೋಜನೆ ಹಾಕಿಕೊಂಡಿತು. ಜನವರಿಯಿಂದ ಮಾರ್ಚ್ ತನಕ ಮಾಡಿದ ಪಾಠದ ಕೋಚಿಂಗ್ ನಡೆಸಲಾಯಿತು. ಏತನ್ಮಧ್ಯೆ ಅಕ್ಟೋಬರ್ ಬಳಿಕ ನಿತ್ಯ ಸಂಜೆ ಒಂದು ಗಂಟೆ ಪರಿಹಾರ ಬೋಧನೆಯಲ್ಲಿ ಹೆಚ್ಚುವರಿ ಪಾಠವನ್ನು ಮಾಡಲಾಯಿತು. ಕೆಲವು ಶಾಲೆಗಳಲ್ಲಿ ಶಿಕ್ಷಕರು ಸ್ವತಃ ಆಸಕ್ತಿಯಿಂದ ಒಂದಕ್ಕಿಂತ ಹೆಚ್ಚು ಅವಧಿ ಪಾಠ ಮಾಡಿರುವುದೂ ಇದೆ.
ಅಕ್ಟೋಬರ್ ಪರೀಕ್ಷೆ ಆದ ಬಳಿಕ ಆ ಪ್ರಶ್ನೆ ಪತ್ರಿಕೆಯನ್ನಾಧರಿಸಿ ಶೇ. 100 ಅಂಕ ಗಳಿಸುವುದು ಹೇಗೆಂಬ ಕುರಿತು ಗುಂಪು ಚರ್ಚೆ ನಡೆಸಲಾಗಿದೆ. ಈ ಪರೀಕ್ಷೆ ಬಳಿಕ ನಡೆಯುವ ಜಿಲ್ಲಾ, ಶಾಲಾ ಮತ್ತು ರಾಜ್ಯ ಮಟ್ಟದ ಪ್ರಿಪರೇಟರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ಶೇ. 100 ಅಂಕ ಗಳಿಸಲು ಬೇಕಾದ ಸಿದ್ಧತೆ ನಡೆಸಲಾಗಿದೆ. ಈ ಪ್ರಯತ್ನ
ದಲ್ಲಿ ಬುದ್ಧಿವಂತರು ಮತ್ತು ಕಡಿಮೆ ಸಾಮರ್ಥ್ಯದವರನ್ನು ಮಿಶ್ರ ಮಾಡಿ ಸಿದ್ಧತೆ ನಡೆಸಲಾಯಿತು.
ಕಡಿಮೆ ಸಾಮರ್ಥ್ಯದ ವಿದ್ಯಾರ್ಥಿ ಗಳಿಗೆ ಕೆಲವೊಮ್ಮೆ ಯಾವ ಪ್ರಶ್ನೆ ಯಾವ ಪಾಠದಿಂದ ಬಂದಿರುವುದು ಎಂದು ತಿಳಿದಿರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಇಡೀ ಪ್ರಶ್ನೆ ಪತ್ರಿಕೆಯನ್ನು ಬರೆಸಿ ಬಳಿಕ ಉತ್ತರ ಬರೆಸುವ ಪ್ರಯತ್ನವನ್ನೂ ನಡೆಸಲಾ ಗಿದೆ. ಉತ್ತರಗಳನ್ನು ನೋಡಿ ಬರೆದರೂ ವಿದ್ಯಾರ್ಥಿಗಳಿಗೆ ಒಂದಿಷ್ಟು ತಿಳಿವಳಿಕೆ ಹೆಚ್ಚಿಗೆ ಆಗುತ್ತದೆ ಎಂಬ ಮಾನದಂಡದಲ್ಲಿ ಇಂತಹ ಪ್ರಯತ್ನ ಗಳನ್ನು ನಡೆಸಲಾಗಿದೆ.
ಪ್ರೇರಣಾ ಶಿಬಿರ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ತಾಲೂಕು ಮಟ್ಟದಲ್ಲಿ ಪ್ರೇರಣಾ ಶಿಬಿರವನ್ನು ಈ ವರ್ಷವೂ ನಡೆಸ ಲಾಗಿದೆ. ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? ಉತ್ತರಿಸುವಾಗ ಪ್ರಥಮ ಆದ್ಯತೆಗಳು ಏನಾಗಿರಬೇಕು ಎಂಬಿತ್ಯಾದಿ ಸಾಮಾನ್ಯ ಜ್ಞಾನವನ್ನು ಈ ಮಕ್ಕಳಿಗೆ ಕೊಡಲಾಗಿದೆ. ಕೊರಗ ಸಮುದಾಯದ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಇತ್ತೀಚೆಗೆ ಒಂದು ವಾರದ ಪರೀಕ್ಷಾ ತರಬೇತಿಯನ್ನು ನಡೆಸಲಾಗಿದೆ. ಇವರಿಗೂ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ
ವಿದ್ಯಾರ್ಥಿಗಳ ಸಂಖ್ಯೆ ನಿಧಾನ ಇಳಿಮುಖ
ಉಡುಪಿ ಜಿಲ್ಲೆಯಲ್ಲಿ 2016ರಲ್ಲಿ 14,880 ವಿದ್ಯಾರ್ಥಿಗಳು, 2017ರಲ್ಲಿ 14,315, 2018ರಲ್ಲಿ 14,309 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರೆ, ಈ ಬಾರಿ 14,214 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಅಂಕಿ-ಅಂಶದ ಪ್ರಕಾರ ಸಂಖ್ಯೆ ನಿಧಾನವಾಗಿ ಕಡಿಮೆಯಾಗಿರುವುದು ಗೋಚರಕ್ಕೆ ಬರುತ್ತದೆ.
ಹಿಂದಿನೆರಡು ವರ್ಷಗಳಂತೆ ಈ ವರ್ಷವೂ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ.
ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ.