ಗರ್ಭಿಣಿ ಮೇಲೆ ರೇಪ್, ಕೊಲೆ; ಗಲ್ಲುಶಿಕ್ಷೆ ವಿಧಿಸಿ ಪೆನ್ ಎಸೆದ ಜಡ್ಜ್
Team Udayavani, Feb 20, 2018, 6:38 PM IST
ಕುಂದಾಪುರ: ಸುಮಾರು 3 ವರ್ಷಗಳ ಹಿಂದೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಗರ್ಭಿಣಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಪ್ರಶಾಂತ್ ಮೊಗವೀರನಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿ ಪ್ರಶಾಂತ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಓದುತ್ತಿದ್ದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಭಾವುಕರಾದರು. ಬಳಿಕ ತಮ್ಮ ಕೈಯಲ್ಲಿದ್ದ ಪೆನ್ ಅನ್ನು ಎಸೆದಿದ್ದರು. ಖಂಡೇರಿ ಅವರು ಮುಂದಿನ ವರ್ಷ ನಿವೃತ್ತರಾಗುತ್ತಿದ್ದು, ತನ್ನ ಸೇವಾವಧಿಯ ಕೊನೆಯಲ್ಲಿ ಇಂತಹದ್ದೊಂದು ತೀರ್ಪು ನೀಡುವ ಪ್ರಸಂಗ ಒದಗಿ ಬಂದಿತ್ತಲ್ಲ ಎಂದು ಭಾವುಕರಾಗಿದ್ದರು.
ಇಂದು ತೀರ್ಪು ನೀಡುವ ಹಿನ್ನೆಲೆಯಲ್ಲಿ ಕುಂದಾಪುರ ಕೋರ್ಟ್ ಆವರಣದ ಸುತ್ತ ಜನಜಂಗುಳಿ ಸೇರಿತ್ತು.
(ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ )
ಏನಿದು ಘಟನೆ:
ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿ ಸಮುದ್ರ ಕಿನಾರೆ ಸಮೀಪದ ಲಿಂಗಜ್ಜಿ ಮನೆ ನಿವಾಸಿಯಾಗಿದ್ದ 7 ತಿಂಗಳ ಗರ್ಭಿಣಿ ಇಂದಿರಾ ಎಂಬವರನ್ನು 2015ರ ಏಪ್ರಿಲ್ 11ರಂದು ಅತ್ಯಾಚಾರ ಎಸಗಿ ಬರ್ಬರವಾಗಿ ಪ್ರಶಾಂತ್ ಕೊಲೆ ಮಾಡಿದ್ದ.
ಇಂದಿರಾ ಪುಟ್ಟ ಮಗುವಿನೊಂದಿಗೆ ಮನೆಯಲ್ಲಿದ್ದಾಗ ನೀರು ಕೇಳುವ ನೆಪದಲ್ಲಿ ಆರೋಪಿ ಪ್ರಶಾಂತ್ ಮನೆಯೊಳಗೆ ನುಗ್ಗಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು, ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಂದಾಪುರ ಪೊಲೀಸರು ಪ್ರಶಾಂತ್ ಮೊಗವೀರನನ್ನು ಏ.12ರಂದು ವಶಕ್ಕೆ ತೆಗೆದುಕೊಂಡಿದ್ದರು. ಈ ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಕುಟುಂಬಸ್ಥರ ಕೋರಿಕೆ ಮೇರೆಗೆ ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು. ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ವಕೀಲ ರವಿಕಿರಣ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು.
ಶಿಕ್ಷೆಯ ಪ್ರಮಾಣ:
ಅಪರಾಧಿ ಪ್ರಶಾಂತನಿಗೆ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಹತ್ತು ವರ್ಷ, ಕಳ್ಳತನಕ್ಕೆ ಹತ್ತು ವರ್ಷ, ಅಪಹರಣ ಯತ್ನಕ್ಕೆ ನಾಲ್ಕು ವರ್ಷ, ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಒಂದು ವರ್ಷ ಹಾಗೂ ಮಹಿಳೆಯ ಹೊಟ್ಟೆಯಲ್ಲಿದ್ದ ಭ್ರೂಣದ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಲಾಗಿದೆ.