ಬಳಕೆಯಾಗದ ತಹಶೀಲ್ದಾರ್ ಕಚೇರಿ ಸ್ಥಳ
Team Udayavani, Oct 15, 2018, 5:26 PM IST
ಕಾರವಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಿಸ್ತರಣೆಗೆ ಕಳೆದ 6 ವರ್ಷಗಳ ಹಿಂದೆ ತಹಶೀಲ್ದಾರ್ ಕಚೇರಿ ಕಟ್ಟಡ ಕೆಡವಿಹಾಕಲಾಯಿತು. ಆದರೆ ಆ ಸ್ಥಳವನ್ನು ಈತನಕ ಬಳಸಿಕೊಳ್ಳದೇ ಸ್ವಲ್ಪಭಾಗವನ್ನು ಮಾತ್ರ ಗ್ರಾಮಾಂತರ ಪ್ರದೇಶಕ್ಕೆ ತೆರಳುವ ಬಸ್ ಗಳ ನಿಲುಗಡೆಗೆ ಬಳಸಲಾಗುತ್ತಿದೆ. ಬಸ್ ನಿಲ್ದಾಣದ ವಿಸ್ತರಣೆಯೂ ಆಗಲಿಲ್ಲ. ಸುಧಾರಣೆಯೂ ಆಗಲಿಲ್ಲ.
ಪ್ರಯಾಣಿಕರಿಗೆ ಅನುಕೂಲವೂ ಆಗಲಿಲ್ಲ. ಕಳೆದ 5 ವರ್ಷದ ಹಿಂದೆ ಉದ್ಘಾಟನೆಯಾದ ಹೊಸ ಬಸ್ ನಿಲ್ದಾಣಕ್ಕೆ ಮೇಲ್ಛಾವಣೆ ಸಹ ಇಲ್ಲದೇ ಪ್ರಯಾಣಿಕರ ಪರದಾಟ ಮಾತ್ರ ತಪ್ಪಲಿಲ್ಲ. ದ್ವಿಚಕ್ರ ವಾಹನಗಳ ಪಾರ್ಕಿಂಗ್ ಹಾಗೂ ಗೋವಾದ ಕದಂಬ ಬಸ್ ನಿಲುಗಡೆಗೆ ಸ್ಥಳದ ಅಭಾವವೂ ಕಾಡುತ್ತಿದೆ. ಇದು ಇಲ್ಲಿನ ಬಸ್ ನಿಲ್ದಾಣದ ಸದ್ಯದ ಸ್ಥಿತಿ.
ನಗರಕ್ಕೆ ಒಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಈ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆಗ ಮೇಲ್ಛಾವಣೆ ನಿರ್ಮಾಣ ಬಾಕಿ ಇತ್ತು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತರಾತುರಿಯಲ್ಲಿ ಬಸ್ ನಿಲ್ದಾಣ ಉದ್ಘಾಟಿಸಿದ್ದರು. ಆಗ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಮುಂದೆ ಶಾಸಕರಾಗಿ 5 ವರ್ಷ ಇದ್ದ ಸತೀಶ್ ಸೈಲ್ ಬಸ್ ನಿಲ್ದಾಣದ ವಿಸ್ತರಣೆಗೆ ಮುಂದಾಗಲಿಲ್ಲ. ಬಸ್ ಡಿಪೋ ಸ್ಥಳಾಂತರ ವಿಷಯ ಸಹ ಹಾಗೆ ಉಳಿದಿದೆ. ಇದಕ್ಕೂ ಮುನ್ನ ಹತ್ತು ವರ್ಷಗಳ ಹಿಂದೆ 36 ತಿಂಗಳು ಶಾಸಕರಾಗಿದ್ದ ಗಂಗಾಧರ್ ಭಟ್ ಬಸ್ ನಿಲ್ದಾಣ ಇಕ್ಕಟ್ಟಿನ ಪ್ರದೇಶದಲ್ಲಿದೆ ಎಂದು ಅದರ ಸ್ಥಳಾಂತರಕ್ಕೆ ಯತ್ನಿಸಿದ್ದರು. ಈಗಿನ ಬಸ್ ನಿಲ್ದಾಣವನ್ನು ಸಿಟಿ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸಿ, ಪರ ಊರಿಗೆ ಹೊರಡುವ ಬಸ್ಗಳಿಗಾಗಿ ಬಾಂಡಿಶಿಟ್ಟಾದ ಎಪಿಎಂಸಿ ಯಾರ್ಡ್ ಅಥವಾ ಬಸ್ ಡಿಪೋ ಜಾಗದಲ್ಲಿ ನಿಲ್ದಾಣ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಅದು ಕಾರ್ಯಗತವಾಗಿರಲಿಲ್ಲ. ಅವರ ಬಳಿಕ ಶಾಸಕರಾದ ಆನಂದ್ ಅಸ್ನೋಟಿಕರ್ ಅವಧಿಯಲ್ಲಿ ಈಗಿರುವ ಸ್ಥಳದಲ್ಲಿಯೇ ಬಸ್ ನಿಲ್ದಾಣ ನಿರ್ಮಾಣವಾದರೂ ಪೂರ್ಣ ಪ್ರಮಾಣದ ನಿಲ್ದಾಣ ಪ್ರಯಾಣಿಕರ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಗೆ ದಕ್ಕಲಿಲ್ಲ.
ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಿಲ್ಲ: ಮೊದಲೇ ಇಕ್ಕಟ್ಟಿನ ಜಾಗದಲ್ಲಿ ನಿರ್ಮಿಸಲಾಗಿರುವ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸ್ಥಳದ ಅಭಾವದಿಂದ ಬಸ್ ನಿಲ್ದಾಣಕ್ಕೆ ಬರುವ ದ್ವಿಚಕ್ರ ವಾಹನಗಳು, ಆಟೋ, ಕಾರುಗಳು ನಿಲ್ದಾಣದ ಎದುರು ನಿಲ್ಲಿಸಿಡಲಾಗುತ್ತದೆ. ಅಲ್ಲದೇ ಬಸ್ ನಿಲ್ದಾಣದಲ್ಲಿ ತಮ್ಮ ವಾಹನ ನಿಲ್ಲಿಸಿ, ಬೇರೆ ಊರುಗಳಿಗೆ ದಿನ ನಿತ್ಯ ತೆರಳುವ ಉದ್ಯೋಗಿಗಳ ಕಷ್ಟ ಹೇಳತೀರದಾಗಿದೆ. ಕಾರಣ ಸಮೀಪದ ಪೊಲೀಸ್ ಠಾಣೆ ಆವಾರ, ಅಂಗಡಿಗಳ ಮುಂಭಾಗದಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಕೆಎಸ್ಆರ್ ಟಿಸಿ ಬಸ್ ಓಡಾಟಕ್ಕೂ ತೊಂದರೆಯಾಗುತ್ತಿದೆ.
ಬಸ್ಗಳಿಗೂ ಸ್ಥಳದ ಬಿಕ್ಕಟ್ಟು: ಪರ ಊರಿಗೆ ಹೊರಡುವ ಬಸ್ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲ. ಒಮ್ಮೆ ಬಸ್ ನಿಲ್ದಾಣದೊಳಗೆ ಪ್ರವೇಶಿಸಿದರೆ, ಪ್ರಯಾಣಿಕರನ್ನು ತುಂಬಿಸುವ ಮುಂಚೆನೇ ತರಾತುರಿಯಲ್ಲಿ ಬಿಡಬೇಕಾಗುತ್ತದೆ. ಹಿಂಬದಿ ಬಸ್ಗಳು ಸರದಿ ಸಾಲಿನಲ್ಲಿ ಹಾರ್ನ್ ಹಾಕುತ್ತಾ ಶಬ್ದ ಮಾಲಿನ್ಯ ಮಾಡುತ್ತವೆ. ಪ್ರಯಾಣಿಕರಿಗೆ ಆಗುವ ಕಿರುಕುಳ ಮಾತ್ರ ಹೇಳತೀರದ್ದು.
ಮೇಲ್ಛಾವಣಿ ಇಲ್ಲ: ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ತಹಶೀಲ್ದಾರ್ ಕಚೇರಿ ಇದ್ದ ಹಳೆಯ ಕಟ್ಟಡದ ವಿಶಾಲವಾದ ತೆರೆದ ಜಾಗದಲ್ಲಿ ಸಿಟಿ ಬಸ್ಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲಿಂದಲೇ ಗ್ರಾಮೀಣ ಭಾಗಕ್ಕೆ ತೆರಳುವ ಪ್ರಯಾಣಿಕರು ಬಸ್ ಏರಬೇಕಾಗುತ್ತದೆ. ಇದರಿಂದ ಭಾರಿ ಮಳೆ ಹಾಗೂ ಬಿಸಿಲಿನ ಸಮಯದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಸಿಟಿ ಬಸ್ ನಿಲ್ದಾಣ ನಿರ್ಮಿಸುವ ಅವಶ್ಯಕತೆಯಿದೆ.
ಕಿಡಿಗೇಡಿಗಳಿಗೆ ಪ್ರಶಸ್ತ ತಾಣ: ಇಲ್ಲಿನ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ಹೆಚ್ಚಿದೆ. ಕಾಲೇಜು ಹುಡುಗಿಯರನ್ನು ಚುಡಾಯಿಸುವ ಪಡ್ಡೆ ಹುಡುಗರಿಗಂತೂ ಕಾಯಂ ಆಶ್ರಯ ತಾಣವಾಗಿದೆ. ಹಾಗಾಗಿ ಪೊಲೀಸ್ ಬೀಟ್ ಹೆಚ್ಚಿಸಬೇಕು. ಸಿಸಿಟಿವಿ ಹಾಕಬೇಕು ಎಂಬ ಆಗ್ರಹ ಪ್ರಯಾಣಿಕರಿಂದ ಮತ್ತು ಸಾರ್ವಜನಿಕರಿಂದ ಕೇಳಿ ಬಂದಿದೆ.
ಕಾರವಾರ, ಅಂಕೋಲಾ ಹಾಗೂ ಭಟ್ಕಳವರೆಗಿನ ತಾಲೂಕುಗಳ ಸಾರಿಗೆ ವ್ಯವಸ್ಥೆ ಅನುಕೂಲಕ್ಕೆ ಪ್ರತ್ಯೇಕವಾಗಿ ಕಾರವಾರ ವಿಭಾಗೀಯ ನಿಯಂತ್ರಣ ಕಚೇರಿ ಪ್ರಾರಂಭಿಸುವುದು ಸೂಕ್ತ. ಇದರಿಂದ ಸಾರಿಗೆ ವ್ಯವಸ್ಥೆ ಸಹ ಸುಧಾರಿಸಲಿದೆ. ರಾತ್ರಿ ವೇಳೆ ಕರಾವಳಿ ತಾಲೂಕಿನಿಂದ ಪಕ್ಕದ ತಾಲೂಕಿಗೆ ಸಂಚರಿಸಲು ಬಸ್ ಪ್ರಾರಂಭಿಸಬಹುದು. ಕಾರವಾರದಿಂದ ಅಂಕೋಲಾ, ಕುಮಟಾ, ಭಟ್ಕಳ, ಶಿರಸಿ, ಜೋಯಿಡಾ, ದಾಂಡೇಲಿ, ಹುಬ್ಬಳ್ಳಿಗೆ ರಾತ್ರಿ 9ರ ನಂತರವೂ ಬಸ್ ಸಂಚಾರ ವ್ಯವಸ್ಥೆ ಬೇಕಾಗಿದ್ದು, ಇದನ್ನು ಪ್ರಾರಂಭಿಸಲು ಪ್ರತ್ಯೇಕ ವಿಭಾಗೀಯ ಕಚೇರಿ ಅವಶ್ಯಕತೆಯಿದೆ.
ರೂಪಾಲಿ ನಾಯ್ಕ, ಶಾಸಕಿ
ಬಸ್ ನಿಲ್ದಾಣದ ಪಕ್ಕದ ತಹಶೀಲ್ದಾರ್ ಕಚೇರಿ ಸ್ಥಳವನ್ನು ಬಸ್ ನಿಲ್ದಾಣ ವಿಸ್ತರಣೆಗಾಗಿಯೇ ಪಡೆಯಲಾಗಿದೆ. ಪಾರ್ಕಿಂಗ್ ಹಾಗೂ ಸಿಟಿ ಬಸ್ಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಶೆಲ್ಟರ್ ನಿರ್ಮಿಸಲು ಯೋಜನೆ ತಯಾರಿಸಿ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಹುಬ್ಬಳ್ಳಿ ಮುಖ್ಯ ಕಚೇರಿಗೆ ಕಳಿಸಲಾಗಿದೆ. ಮಂಜೂರಾತಿ ನಿರೀಕ್ಷೆಯಲ್ಲಿದ್ದೇವೆ.
ತುಷಾರ್, ಡಿಪೋ ಮೆನೇಜರ್, ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ