ನನ್ನ ಐಡಿಯಾ ಕೇಳಿ ನಗುತ್ತಿದ್ದರು!


Team Udayavani, May 11, 2017, 11:59 PM IST

Alibaba-11-5.jpg

ನಮ್ಮೂರಿನಲ್ಲಿ ಕೆಎಫ್ಸಿ(ಚಿಕನ್‌ ಖಾದ್ಯ ಮಳಿಗೆ) ಓಪನ್‌ ಆಗಿತ್ತು. ಆ ಮಳಿಗೆಯು ಡೆಲಿವರಿ ಬಾಯ್ಸಗಳಿಗೆ ಮತ್ತು ನಿರ್ವಾಹಕರ ಹುದ್ದೆಗಳಿಗಾಗಿ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ನಾನೂ ಅರ್ಜಿ ಹಾಕಿದೆ. ಸಂದರ್ಶನಕ್ಕೆ ಆಹ್ವಾನ ಬಂದಾಗ ಖುಷಿಯಿಂದ ತಯಾರಿ ಮಾಡಿಕೊಂಡು ಹೋದೆ. ಅಂದು ಸುಮಾರು 24 ಜನ ಅಲ್ಲಿದ್ದೆವು. ನನ್ನ ವಿಧಿ ಹೇಗಿತ್ತೆಂದರೆ, ಸಂದರ್ಶನಕ್ಕೆ ಹಾಜರಾದವರಲ್ಲಿ 23 ಜನ ಕೆಲಸಗಿಟ್ಟಿಸಿಕೊಂಡರು, ನನ್ನೊಬ್ಬನನ್ನು ಬಿಟ್ಟು!

ನನ್ನ ತಂದೆ ಶ್ರೀಮಂತರಾಗಿರಲಿಲ್ಲ. ನಾನು ವಿದ್ಯಾವಂತ ಕುಟುಂಬದಿಂದಲೂ ಬಂದವನಲ್ಲ. ಮೊದಲಿನಿಂದಲೂ ನಾನು ಓದು ಬರಹದ ವಿಷಯದಲ್ಲಿ ಬಹಳ ಹಿಂದಿದ್ದೆ. ಸತ್ಯವೇನೆಂದರೆ ಪ್ರಾಥಮಿಕ ಶಾಲೆಯಲ್ಲಿ ಮೂರು ಬಾರಿ, ಪ್ರೌಢಶಾಲೆಯಲ್ಲೂ ಮೂರು ಬಾರಿ ನಾನು ಫೇಲ್‌ ಆಗಿದ್ದೇನೆ. ದೊಡ್ಡವನಾದ ಮೇಲೆ ಹಾರ್ವರ್ಡ್‌ ವಿಶ್ವವಿದ್ಯಾಲಯ ಸೇರಿಕೊಳ್ಳಬೇಕೆಂಬ ಅದಮ್ಯ ಕನಸು ನನ್ನಲ್ಲಿ ಚಿಗುರೊಡೆಯಿತು. ಪದವಿ ಸೇರುವ ವಯಸ್ಸಿಗೆ ಬಂದಾಗ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ನನ್ನ ಅರ್ಜಿ ತಿರಸ್ಕೃತವಾಯಿತು. ಅದೂ ಒಂದೆರಡು ಬಾರಿಯಲ್ಲ ಬರೋಬ್ಬರಿ 10 ಬಾರಿ! ಕಡೇಪಕ್ಷ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಅಥವಾ ಸಂದರ್ಶನ ಮಾಡಲೂ ಹಾರ್ವರ್ಡ್‌ ಸಿದ್ಧವಿರಲಿಲ್ಲ. ಆ ಸಮಯದಲ್ಲಿ ನಾನು ಬಹಳ ಬೇಸತ್ತಿದ್ದೆ, ಬಳಲಿ ಬೆಂಡಾಗಿದ್ದೆ. ಹಿಡಿದ ಯಾವ ಕೆಲಸವೂ ಕೈಗೂಡುತ್ತಿರಲಿಲ್ಲ. ಆದರೆ ಜೀವನದಲ್ಲಿ ನನಗಾಗಿ ಬೃಹತ್‌ ಆದದ್ದು ಏನೋ ಕಾದಿದೆ ಎಂದು ಆ ಕಡುಕಷ್ಟದ ಸಮಯದಲ್ಲೂ ನನಗೆ ಅನ್ನಿಸುತ್ತಿತ್ತು. ನನಗೆ ಅವಕಾಶಗಳು ಸಿಗುತ್ತಿಲ್ಲ ಎಂದರೆ, ನಾನು ಕಷ್ಟ ಪಟ್ಟು ಕೆಲಸ ಮಾಡುತ್ತಿಲ್ಲ ಎಂದು ಅರ್ಥವಾಗತೊಡಗಿತು. ನಾನು ಜೀವನದಲ್ಲಿ ಕಲಿತ ಅತಿದೊಡ್ಡ ಪಾಠವಿದು.

90ರ ಶುರುವಾತದು. ಕೆಲಸವಿಲ್ಲದೇ ನಾನು ಬಹಳ ಒದ್ದಾಡುತ್ತಿದ್ದೆ. ಅದೇ ಸಮಯದಲ್ಲೇ ನಮ್ಮೂರಿನಲ್ಲಿ ಕೆಎಫ್ಸಿ(ಚಿಕನ್‌ ಖಾದ್ಯ ಮಳಿಗೆ) ಓಪನ್‌ ಆಗಿತ್ತು. ಆ ಮಳಿಗೆಯು ಡೆಲಿವರಿ ಬಾಯ್ಸಗಳಿಗೆ ಮತ್ತು ನಿರ್ವಾಹಕರಿಗಾಗಿ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ನಾನೂ ಅರ್ಜಿ ಹಾಕಿದೆ. ಸಂದರ್ಶನಕ್ಕೆ ಆಹ್ವಾನ ಬಂದಾಗ ಖುಷಿಯಿಂದ ತಯಾರಿ ಮಾಡಿಕೊಂಡು ಹೋದೆ. ಅಂದು ಸುಮಾರು 24 ಜನ ಅಲ್ಲಿದ್ದೆವು. ನನ್ನ ವಿಧಿ ಹೇಗಿತ್ತೆಂದರೆ, 23 ಜನ ಕೆಲಸಗಿಟ್ಟಿಸಿಕೊಂಡರು, ನನ್ನೊಬ್ಬನನ್ನು ಬಿಟ್ಟು! ಈ ಘಟನೆಯ ನಂತರ ನನಗೆ ಯಾವುದೋ ಕಂಪನಿಯಲ್ಲಿ ದುಡಿಯುವುದಕ್ಕಿಂತ ನಾನೇ ಏಕೆ ಸ್ವಂತ ಉದ್ಯಮ ಸ್ಥಾಪಿಸಬಾರದು ಎಂಬ ಆಲೋಚನೆ ಮೊಳಕೆಯೊಡೆಯಿತು. ನನ್ನ ಬ್ಯುಸಿನೆಸ್‌ ಐಡಿಯಾಗಳನ್ನೆಲ್ಲ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಚರ್ಚಿಸಲಾರಂಭಿಸಿದೆ. ಆದರೆ ಎಲ್ಲರೂ ನನ್ನನ್ನು ಆಗ ಹುಚ್ಚ ಎನ್ನುವಂತೆ ನೋಡಿದರು! ನಾನು ಯಶಸ್ವಿಯಾಗುತ್ತೇನೆ ಎಂದು ಯಾರೊಬ್ಬರಿಗೂ ನಂಬಿಕೆ ಇರಲಿಲ್ಲ. ನನ್ನ ಐಡಿಯಾಗಳೆಲ್ಲ ಅವರಿಗೆ ವಿಚಿತ್ರ ಎನಿಸುತ್ತಿದ್ದದ್ದೇ ಇದಕ್ಕೆ ಕಾರಣವಿದ್ದಿರಲೂಬಹುದು.

ಇಂಗ್ಲಿಷ್‌ ಕಲಿತೆ: ನಾನು ಅಜಮಾಸು ನಿರುದ್ಯೋಗಿಯಾಗಿಯೇ ಬದುಕಿದ್ದ ದಿನಗಳವು. ಆಗ ನಮ್ಮೂರಿನಲ್ಲಿ ದೊಡ್ಡ ಹೋಟೆಲ್‌ ಒಂದಕ್ಕೆ ವಿದೇಶಿ ಪ್ರವಾಸಿಗರು ಬರುತ್ತಿದ್ದರು. ಸಹಜವಾಗಿಯೇ ಅವರಿಗೆ ಚೀನಾದ ಸ್ಥಳೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ಆಸೆ ಇದ್ದೇ ಇರುತ್ತಿತ್ತು. ನಾನು ಸುಮಾರು ಒಂಬತ್ತು ವರ್ಷಗಳವರೆಗೆ ಪ್ರತಿ ದಿನ ಬೆಳಗ್ಗೆ ಅಂಥವರನ್ನು ಕರೆದುಕೊಂಡು ನಮ್ಮೂರನ್ನು ಸುತ್ತಾಡಿಸುತ್ತಿದ್ದೆ. ಅಲ್ಪಸ್ವಲ್ಪ ಹಣವೂ ಬರುತ್ತಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾನು ಅವರಿಂದ ಲಾಭ ಪಡೆದದ್ದು ‘ಇಂಗ್ಲಿಷ್‌’ ಭಾಷೆಯ ರೂಪದಲ್ಲಿ. ನೆನಪಿಡಿ. ನಾನು ಹುಟ್ಟಿ ಬೆಳೆದದ್ದು ಚೀನಾದಲ್ಲಿಯೇ. ಆ ಕಾಲದಲ್ಲಿ ನಮ್ಮ ದೇಶದಲ್ಲಿ ಇಂಗ್ಲಿಷ್‌ ಕಲಿಯುವುದಕ್ಕೆ ಬೇರೆ ದಾರಿಯೇ ಇರಲಿಲ್ಲ. ಹೊರದೇಶದವರೊಂದಿಗೆ ಒಡನಾಡುತ್ತಲೇ ನಾನು ಇಂಗ್ಲಿಷ್‌ ಕಲಿಯುತ್ತಾ ಹೋದೆ, ಅವರು ಕೊಟ್ಟ ಪುಸ್ತಕಗಳನ್ನು ಓದಲಾರಂಭಿಸಿದೆ. ಜಗತ್ತಿನ ಅತಿ ವಿಸ್ತೃತ ಭಾಷೆಯೊಂದನ್ನು ಕಲಿತದ್ದರಿಂದ ನನಗಾದ ಲಾಭವೆಂದರೆ, ನನ್ನ ಸೀಮಿತ ಮನೋಲೋಕ ವಿಸ್ತಾರವಾಗುತ್ತಾ ಸಾಗಿದ್ದು. ವಿವಿಧ ದೇಶಗಳ ಮಾರುಕಟ್ಟೆಯ ಸ್ಥಿತಿಗತಿಯ ಬಗ್ಗೆ, ವಿಭಿನ್ನ ಔದ್ಯಮಿಕ ಪ್ರಯತ್ನಗಳ ಬಗ್ಗೆ, ಆಯಾ ದೇಶಗಳ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. 

ಆ ಸಮಯದಲ್ಲೇ ನನಗೆ ಅಂತರ್ಜಾಲದ ತಾಕತ್ತಿನ ಬಗ್ಗೆ ಅರಿವಾಗತೊಡಗಿತು. ಹೇಗೆ ಅಮೆರಿಕದಲ್ಲಿ ಇ-ಕಾಮರ್ಸ್‌ ಉದ್ಯಮ ಬೆಳೆಯುತ್ತಿದೆ ಎನ್ನುವುದನ್ನು ಪ್ರವಾಸಿಗರಿಂದ ಕೇಳಿ ತಿಳಿದಿದ್ದೆ. ಆಗಿನ ಕಾಲದಲ್ಲಿ ಇ-ಕಾಮರ್ಸ್‌ ಎಂಬ ಪರಿಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ಪರಿಕಲ್ಪನೆ ಬಿಡಿ, ಅಂತರ್ಜಾಲವೇನೆಂದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ನನಗೆ ಅದೇಕೋ ಬಲವಾದ ನಂಬಿಕೆ ಮೂಡಿತು. ಅಂತರ್ಜಾಲವನ್ನು ಬಳಸಿಕೊಂಡು ವ್ಯಾಪಾರ ಮಾಡಲು ಸಾಧ್ಯವಿದೆ ಎಂದೆನಿಸತೊಡಗಿತು. ಆ ಯೋಚನೆಯ ಫ‌ಲವಾಗಿ ಹುಟ್ಟಿಕೊಂಡಿತು- ಅಲಿಬಾಬಾ ಕಂಪೆನಿ.

ಬಿಡಲಿಲ್ಲ ಪಟ್ಟು!: ಇದಕ್ಕಾಗಿ ನಾನು ಕುಟುಂಬವರ್ಗ ಮತ್ತು ಗೆಳೆಯರ ಬಳಿ 2000 ಡಾಲರ್‌ನಷ್ಟು ಹಣ ಕೇಳಿ ಪಡೆದೆ. ಆಗ ಮತ್ತು ಈಗಲೂ ನಾವು ಮಾಡುವ ಕೆಲಸವಿಷ್ಟೆ: ಗ್ರಾಹಕರನ್ನು, ಉದ್ಯಮಿಗಳ ಹತ್ತಿರ ಕರೆದೊಯ್ಯುವುದು. (ಉದ್ಯಮಿಗಳೆಂದರೆ ಚಿಕ್ಕ ವರ್ತಕರು). ಆದರೆ ಮೊದ ಮೊದಲು ಕಂಪನಿಯ ಆದಾಯ ಹೇಗಿತ್ತೆಂದರೆ, ಅದರಿಂದ ನಮ್ಮ ಕಟ್ಟಡದ ಬಾಡಿಗೆಯನ್ನೂ ಕಟ್ಟಲಾಗುತ್ತಿರಲಿಲ್ಲ! ವೇಗದ ಅಂತರ್ಜಾಲ ಸಿಕ್ಕರೆ ನಮ್ಮ ಉದ್ಯಮ ಬೆಳೆಯುತ್ತದೆ ಎಂದು ಗೊತ್ತಿತ್ತು. ಆದರೆ ಎಷ್ಟು ಪ್ರಯತ್ನಪಟ್ಟರೂ ನಮಗೆ ಚೀನಾದ ದೂರಸಂಪರ್ಕ ಇಲಾಖೆಯ ಬೆಂಬಲ ಸಿಗಲಿಲ್ಲ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವೂ ಕರಗತೊಡಗಿತ್ತು. ಬ್ಯಾಂಕುಗಳು ನಮ್ಮ ಕಂಪೆನಿಗೆ ಸಾಲ ನೀಡಲು ನಿರಾಕರಿಸತೊಡಗಿದವು. ಆದರೆ ನಾನು ಧೃತಿಗೆಡಲಿಲ್ಲ. ಸುಮಾರು ಮೂರ್ನಾಲ್ಕು ವರ್ಷ ಹೇಗೋ ಅಲಿಬಾಬಾವನ್ನು ಒದ್ದಾಡುತ್ತಾ ಉಳಿಸಿದೆ. ಅದು 1999. ನನ್ನ ಕೆಲವು ಸ್ನೇಹಿತರು ಮತ್ತು ಹೂಡಿಕೆದಾರರನ್ನು ನಮ್ಮ ಚಿಕ್ಕ ಅಪಾರ್ಟಮೆಂಟ್‌ಗೆ ಆಹ್ವಾನಿಸಿದೆ. ಅವರು ಒಟ್ಟು 18 ಮಂದಿಯಿದ್ದರು. ಅವರಿಗೆಲ್ಲ ಹೇಗೆ ‘ಅಂತರ್ಜಾಲವೇ ಜಗತ್ತಿನ ಭವಿಷ್ಯ’ ಎನ್ನುವುದನ್ನು ಅರ್ಥಮಾಡಿಸಲು ಪ್ರಯತ್ನಿಸಿದೆ. ಜಾಗತಿಕವಾಗಿ ಅಮೆರಿಕನ್ನರು ಹಾರ್ಡ್‌ವೇರ್‌ನಲ್ಲಿ ಪ್ರಬಲರಾಗಿರಬಹುದು. ಆದರೆ ಮಾಹಿತಿ ತಂತ್ರಜ್ಞಾನದಲ್ಲಿ ಚೀನಿಯರೇ ಮುಂದಿದ್ದಾರೆ. ನಮ್ಮ ಈ ಗುಣವನ್ನು ಬಳಸಿಕೊಂಡು ಅಮೆರಿಕನ್‌ ಉದ್ಯಮಗಳ ಸಮಕ್ಕೆ ನಾವು ಬೆಳೆದುನಿಲ್ಲಬಹುದು ಎಂದು ಅವರಿಗೆ ಸುಮಾರು ಮೂರು ಗಂಟೆಯವರೆಗೆ ವಿವರಿಸಿ ಹೇಳಿದೆ. ಆದರೆ ಇದೆಲ್ಲದರೊಟ್ಟಿಗೆ ಅಂದು ಅಲ್ಲಿ ನೆರೆದಿದ್ದವರಿಗೆಲ್ಲ ಒಂದು ಮಾತನ್ನಂತೂ ಸ್ಪಷ್ಟವಾಗಿ ಹೇಳಿಬಿಟ್ಟೆ: ‘ನೋಡಿ ನೀವು ಈ ಕಂಪನಿಯ ಭಾಗವಾದರೆ ಕಷ್ಟಪಟ್ಟು ದುಡಿಯಲೇಬೇಕು. ಬೆಳಗ್ಗೆ 10 ಗಂಟೆಗೆ ಬಂದು 5 ಗಂಟೆಗೆ ಮನೆಗೆ ಹೋಗಿಬಿಡುತ್ತೇನೆ ಎಂದರೆ ನಡೆಯುವುದಿಲ್ಲ. ಪರಿಶ್ರಮ ಹಾಕುವುದಿಲ್ಲ, 5 ಗಂಟೆಗೇ ನಾನು ಮನೆಗೆ ಹೋಗುತ್ತೇನೆ ಎಂದರೆ ನಾವು ಯಾವುದಾದರೂ ಕಾರ್ಪೊರೇಟ್‌ ಕೆಲಸಕ್ಕೆ ಸೇರಿಕೊಳ್ಳುವುದು ಒಳಿತು.’ಕೊನೆಗೂ ಅವರೆಲ್ಲ ನನ್ನ ಮಾತಿಗೆ ಸಹಮತಿಸುತ್ತಾ ತಮ್ಮ ಕೈಲಾದಷ್ಟು ಹಣ ಹೂಡಿಕೆ ಮಾಡಲು ಮುಂದೆ ಬಂದರು. ನಿಮಗೆ ಗೊತ್ತಿರಲಿ, ನಾನು ಜೀವನದಲ್ಲಿ ಎಂದಿಗೂ ಕೋಡ್‌ ಬರೆದವನಲ್ಲ. ಸಾಫ್ಟ್ವೇರ್‌ನ ಒಳಹೂರಣವೂ ನನಗೆ ತಿಳಿದಿಲ್ಲ. ಆದರೆ ಅದನ್ನು ಬಲ್ಲವರು, ನನ್ನ ಐಡಿಯಾಗಳಿಗೆ ರೂಪಕೊಡುವವರು ಇದ್ದಾರೆ, ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದಂತೂ ಗೊತ್ತಿತ್ತು!

ಬದಲಾಯಿತು ಬದುಕು: ಅಲಿಬಾಬಾ ಕಂಪನಿಯನ್ನು ಬೆಳೆಸಲು ನಾವು ಮುಂದಾದಾಗ ಮತ್ತು ಈಗಲೂ ಒಂದು ಸಿದ್ಧಾಂತವನ್ನು ಮಾತ್ರ ಚಾಚೂತಪ್ಪದೇ ಪಾಲಿಸುತ್ತ ಬಂದಿದ್ದೇವೆ. ನಮಗೆ ಗ್ರಾಹಕನ ಹಿತಾಸಕ್ತಿಯೇ ಮೊದಲ ಆದ್ಯತೆ, ನಂತರದ ಸ್ಥಾನ ವರ್ತಕರದ್ದು, ಕೊನೆಯ ಸ್ಥಾನ ಹೂಡಿಕೆದಾರರದ್ದು! ಈ ಕಾರಣಕ್ಕಾಗಿಯೇ ಇಂದು ನಮ್ಮ ಉದ್ಯಮಗಳೆಲ್ಲ ಗ್ರಾಹಕ ಸ್ನೇಹಿಯೆನೆಸಿಕೊಂಡಿವೆ. ಗ್ರಾಹಕರು ಮತ್ತು ವರ್ತಕರು ಇದನ್ನು ಬೆಳೆಸುತ್ತಿದ್ದಾರೆಯೇ ಹೊರತು ನಾವಂತೂ ಖಂಡಿತ ಅಲ್ಲ! ಈಗ 2 ದಶಕದ ನಂತರ ಅಲಿಬಾಬಾ ಸೇರಿದಂತೆ ಹತ್ತಾರು ಕಂಪನಿಗಳನ್ನು ನಾನು, ನನ್ನ ಗೆಳೆಯರು ಕಟ್ಟಿನಿಲ್ಲಿಸಿದ್ದೇವೆ. ದಿನಕ್ಕೆ ಏನಿಲ್ಲವೆಂದರೂ 10 ಕೋಟಿ ಗ್ರಾಹಕರು ನಮ್ಮ ತಾಣಕ್ಕೆ ಭೇಟಿಕೊಟ್ಟು ಖರೀದಿ ಮಾಡುತ್ತಿದ್ದಾರೆ. 2004ರಲ್ಲಿ ನಾನು ‘ಅಲಿಪೇ’ ಎಂಬ ಆನ್‌ಲೈನ್‌ ಪೇಮೆಂಟ್‌ ಕಂಪನಿಯನ್ನು ಸ್ಥಾಪಿಸಲು ಮುಂದಾದಾಗ ನನ್ನ ಐಡಿಯಾ ಕೇಳಿದ ಬಹುತೇಕರು ‘ಇಂಥ ಮೂರ್ಖ ಐಡಿಯಾವನ್ನು ಇದುವರೆಗೂ ಕೇಳಿರಲೇ ಇಲ್ಲ’ ಎಂದು ಮೂದಲಿಸಿದ್ದರು. ಆಲಿಬಾಬಾದಿಂದ ಗಳಿಸಿದ ಹಣವನ್ನೆಲ್ಲ ಅಲಿಪೇನಲ್ಲಿ ಕಳೆದುಕೊಳ್ಳುತ್ತೇನೆ ಎಂದೂ ಎಚ್ಚರಿಸಿದ್ದರು. ಇಂದು 8 ಕೋಟಿ ಗ್ರಾಹಕರು ಅಲಿಪೇ ಬಳಸುತ್ತಿದ್ದಾರೆ! ಈಗ ಇದನ್ನೆಲ್ಲ ನೋಡಿ ಜನ ಆಶ್ಚರ್ಯದಿಂದ ಕೇಳುತ್ತಾರೆ. “ಜಾಕ್‌ ಇದೆಲ್ಲ ಹೇಗೆ ಸಾಧ್ಯವಾಯಿತು? ನಿನಗೇ ಏಕೆ ಇಷ್ಟೊಂದು ಅವಕಾಶಗಳು ಎದುರಾಗುತ್ತವೆ? ನಿನ್ನಂಥ ಅದೃಷ್ಟ ಬೇರೆಯವರಿಗೇಕೆ ಎದುರಾಗುತ್ತಿಲ್ಲ?”.  

ಇವರೆಲ್ಲ “ಜಾಕ್‌ ನನಗೆ ಅವಕಾಶಗಳು ಸಿಗುತ್ತಿಲ್ಲ, ಜಾಬ್‌ ಸಿಗುತ್ತಿಲ್ಲ, ಕೆಲಸ ಖುಷಿ ಕೊಡುತ್ತಿಲ್ಲ’ ಎಂದು ಗೋಳಾಡುತ್ತಲೇ ಇರುತ್ತಾರೆ. ಅವಕಾಶಗಳು ಎದುರಾಗದಿದ್ದರೆ ಅದನ್ನು ನಾವೇ ಸೃಷ್ಟಿಸಿಕೊಳ್ಳಬೇಕಲ್ಲವೇ?  ನಾನು ಬಹಳಷ್ಟು ಯುವಕರನ್ನು ನೋಡುತ್ತೇನೆ. ಅವರ ಬಳಿ ಫೆಂಟಾಸ್ಟಿಕ್‌ ಎನ್ನುವಂಥ ಐಡಿಯಾಗಳಿರುತ್ತವೆ. ಆದರೆ ಅವರು ಆ ಐಡಿಯಾವನ್ನು ಮೂಲೆಗೆ ತಳ್ಳಿ, ಮತ್ತದೇ ಬೋರಿಂಗ್‌ ಕೆಲಸಕ್ಕೆ ಹಿಂದಿರುಗುತ್ತಾರೆ. ನಿಮಗೆ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೆ ಮುನ್ನುಗ್ಗುವುದನ್ನು ನಿಲ್ಲಿಸಬೇಡಿ. ಎಡವಿ ಬಿದ್ದರೇನಂತೆ? ಮೈಕೊಡವಿಕೊಂಡು ಏಳಲು ಸಾಧ್ಯವಿಲ್ಲವೇನು?  ತಂದೆ -ತಾಯಿಯ ಒತ್ತಡಕ್ಕೋ, ಸ್ನೇಹಿತರ ಮೂದಲಿಕೆಗೋ, ಎದುರಾಗುವ ಕಷ್ಟಗಳಿಗೋ ತಲೆಬಾಗುತ್ತೀರಿ ಎಂದಾದರೆ ಜೀವನ ಪರ್ಯಂತ ಅದೇ ಸ್ಥಿತಿಯಲ್ಲೇ ಬದುಕುತ್ತೀರಿ!

ನನ್ನ ಜೀವನಾನುಭವದ ಆಧಾರದಲ್ಲಿ ಈ ಮಾತು ಹೇಳುತ್ತಿದ್ದೇನೆ: ‘ಎಂದಿಗೂ ಕೈ ಚೆಲ್ಲಬೇಡಿ. ಇಂದು ನೀವು ಕಷ್ಟವೆದುರಿಸುತ್ತಿರಬಹುದು. ನಾಳೆ ನಿಮಗೆ ಇನ್ನಷ್ಟು ಕಷ್ಟ ಎದುರಾಗಬಹುದು. ಆದರೆ ನಾಡಿದ್ದು ನಿಮ್ಮ ಜೀವನದಲ್ಲಿ ಗಾಢಾಂದಕಾರವನ್ನು ಹಿಮ್ಮೆಟ್ಟಿಸುತ್ತಾ ಬರುತ್ತದೆ ಸೂರ್ಯೋದಯ!.ಆದರೆ ಅಲ್ಲಿಯವರೆಗೂ ನೀವು ಗಟ್ಟಿಯಾಗಿ ನಿಲ್ಲಬೇಕಷ್ಟೆ!”

– ಜಾಕ್‌ ಮಾ, ಚೀನದ ಉದ್ಯಮಿ, ಅಲಿಬಾಬಾ ಸಮೂಹದ ಸ್ಥಾಪಕ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.