ಹೀರೋ ಆಗುವ ಅವಕಾಶ ನಿಮಗಿದೆ!


Team Udayavani, Jun 9, 2017, 1:40 AM IST

Steven-Spielberg-600.jpg

ಇತಿಹಾಸ ಅರಿಯದೆ ಮುಂದೆ ಸಾಗಿದರೆ ಪ್ರಯೋಜನವೇನು?
2 ತಾಸಿನ ಸಿನೆಮಾದಲ್ಲಿ ಪಾತ್ರಕ್ಕೆ ತಿರುವು ನೀಡುವ ಘಟನೆಗಳು ಬೆರಳೆಣಿಕೆಯಷ್ಟಿರುತ್ತವೆ. ಆದರೆ ನಿಜ ಜೀವನದಲ್ಲಿ ನಿತ್ಯವೂ ನಿಮ್ಮ ಜೀವನವನ್ನು ಬದಲಾಯಿಸುವಂಥ ತಿರುವುಗಳು ಎದುರಾಗುತ್ತಲೇ ಇರುತ್ತವೆ. ನಾನು ಲಕ್ಕಿ ಆಗಿದ್ದೆ. 18ನೇ ವಯಸ್ಸಿಗೇ ಮುಂದೆ ‘ನಾನೇನು ಮಾಡಬೇಕು’ ಎನ್ನುವುದು ಸ್ಪಷ್ಟವಾಗಿಬಿಟ್ಟಿತ್ತು. ಆದರೆ ‘ನಾನ್ಯಾರು’ ಎನ್ನುವ ಪ್ರಮುಖ ಪ್ರಶ್ನೆಗೆ ಮಾತ್ರ ಆಗ ಉತ್ತರ ಸಿಕ್ಕಿರಲಿಲ್ಲ. ಉತ್ತರ ಸಿಗುವುದು ಅಷ್ಟು ಸುಲಭವೇನು?

ನಾನು ಕಾಲೇಜಿಗೆ ಸೇರಿ ಕೆಲವೇ ದಿನಗಳಾಗಿದ್ದವು, ಆಗ ಯೂನಿವರ್ಸಲ್‌ ಸ್ಟೂಡಿಯೋದಿಂದ ನನ್ನ ಕನಸಿನ ಕೆಲಸಕ್ಕೆ ಆಫ‌ರ್‌ ಬಂದಿತ್ತು. ಹೀಗಾಗಿ ಕಾಲೇಜು ಅರ್ಧಕ್ಕೆ ಬಿಟ್ಟು ಸಿನೆಮಾ ಸ್ಟೂಡಿಯೋ ಸೇರಿದೆ. ‘ಒಂದು ವೇಳೆ ನನ್ನ ಸಿನೆಮಾ ವೃತ್ತಿ ಕೈಕೊಟ್ಟಿತೆಂದರೆ ವಾಪಸ್‌ ಬಂದು ಕಾಲೇಜಿಗೆ ಸೇರಿ ಪದವಿ ಪೂರ್ಣಗೊಳಿಸುತ್ತೇನೆ’ ಎಂದು ಪೋಷಕರಿಗೆ ಭರವಸೆ ನೀಡಿದೆ. ನನ್ನ ಸಿನೆಮಾ ಯಾತ್ರೆ ಸುಸೂತ್ರವಾಗಿಯೇ ಸಾಗಿತು. ಆದರೂ ನಾನು 53ನೇ ವಯಸ್ಸಿನಲ್ಲಿ ಮತ್ತೆ ಕಾಲೇಜಿಗೆ ಸೇರಿ ಪದವಿ ಪಡೆದೆ. ಇದಕ್ಕೆ ಬಹುದೊಡ್ಡ ಕಾರಣವಿದೆ. ಬಹತೇಕರು ಕಾಲೇಜು ಮೆಟ್ಟಿಲು ಹತ್ತುವುದು ಶಿಕ್ಷಣಕ್ಕಾಗಿ, ಇನ್ನೂ ಕೆಲವರು ತಮ್ಮ ಪೋಷಕರಿಗಾಗಿ. ಆದರೆ ನಾನು ಮತ್ತೆ ಕಾಲೇಜಿಗೆ ಸೇರಿದ್ದು ನನ್ನ ಮಕ್ಕಳಿಗಾಗಿ! ನನಗೆ 7 ಮಕ್ಕಳಿದ್ದಾರೆ. ಶಿಕ್ಷಣದ ಮಹತ್ವದ ಬಗ್ಗೆ ನಾನು ಅವರಿಗೆ ಯಾವಾಗಲೂ ತಿಳಿಹೇಳುತ್ತಿದ್ದೆ. ಆದರೆ ನಾನೇ ಕಾಲೇಜು ಪೂರ್ಣಗೊಳಿಸಿರಲಿಲ್ಲ! ಈ ಕಾರಣಕ್ಕಾಗಿ ಮಾತನಾಡುವ ಮುನ್ನ ಮಾಡಿ ತೋರಿಸಬೇಕೆಂದು ನಿರ್ಧರಿಸಿದೆ.

ಜೀವನದಲ್ಲಿ ಸಿನೆಮಾ ನಿರ್ದೇಶಕನಾಗಬೇಕು ಎನ್ನುವುದು ಹದಿಹರೆಯದಲ್ಲೇ ನನಗೆ ಸ್ಪಷ್ಟವಾಗಿತ್ತು. ನಿಮ್ಮಲ್ಲೂ ಕೆಲವರಿಗೆ ಯಾವ ಮಾರ್ಗದಲ್ಲಿ ನಡೆಯಬೇಕು ಎನ್ನುವ ಅರಿವಾಗಿರಬಹುದು. ಮೊದಲು ಆಯ್ಕೆ ಮಾಡಿಕೊಂಡ ಮಾರ್ಗ ಸರಿಯಾಗಿಲ್ಲ ಎನ್ನುವ ಅನುಮಾನವೂ ಆರಂಭವಾಗಿರಬಹುದು. ನಿಮ್ಮ ಕನಸಿನ ಬಗ್ಗೆ ತಂದೆ ತಾಯಿಗೆ ಹೇಗೆ ವಿವರಿಸಿ ಹೇಳಬೇಕೆಂಬ ಇಕ್ಕಟ್ಟಿನಲ್ಲಿ ನೀವು ಸಿಲುಕಿರಬಹುದು. ನೀವು ಈ ವಿಷಯದಲ್ಲಿ ಯಾವ ಹೆಜ್ಜೆಯಿಡಲಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಸಿನೆಮಾ ಭಾಷೆಯಲ್ಲಿ ಇದನ್ನು ‘ಪಾತ್ರಕ್ಕೆ ತಿರುವು ಸಿಕ್ಕ ಘಳಿಗೆ’ ಎಂದು ಕರೆಯಲಾಗುತ್ತದೆ. 2 ತಾಸಿನ ಸಿನೆಮಾದಲ್ಲಿ ಪಾತ್ರದ ಜೀವನಕ್ಕೆ ತಿರುವು ನೀಡುವ ಘಟನೆಗಳು ಬೆರಳೆಣಿಕೆಯಷ್ಟಿರುತ್ತವೆ. ಆದರೆ ನಿಜ ಜೀವನದಲ್ಲಿ ನಿತ್ಯವೂ ನಿಮ್ಮ ಜೀವನವನ್ನು ಬದಲಾಯಿಸುವಂಥ ತಿರುವುಗಳು ಎದುರಾಗುತ್ತಲೇ ಇರುತ್ತವೆ. ನಾನು ಲಕ್ಕಿ ಆಗಿದ್ದೆ. 18ನೇ ವಯಸ್ಸಿಗೇ ಮುಂದೆ ‘ನಾನೇನು ಮಾಡಬೇಕು’ ಎನ್ನುವುದು ಸ್ಪಷ್ಟವಾಗಬಿಟ್ಟಿತ್ತು. ಆದರೆ ‘ನಾನ್ಯಾರು’ ಎನ್ನುವ ಪ್ರಮುಖ ಪ್ರಶ್ನೆಗೆ ಮಾತ್ರ ಆಗ ಉತ್ತರ ಸಿಕ್ಕಿರಲಿಲ್ಲ. ಉತ್ತರ ಸಿಗುವುದು ಅಷ್ಟು ಸುಲಭ ಸಾಧ್ಯವೇನು? ನಮ್ಮ ಜೀವನದ ಮೊದಲ 25 ವರ್ಷಗಳನ್ನು ನಾವು ನಮ್ಮದಲ್ಲದ ಧ್ವನಿಗಳನ್ನು ಕೇಳುತ್ತಾ ಬೆಳೆಯುತ್ತೇವೆ. ಹೇಗೆ ಯೋಚಿಸಬೇಕು, ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಿಮ್ಮ ತಂದೆ – ತಾಯಿ, ಪ್ರೊಫೆಸರ್‌ಗಳು ತಲೆಯಲ್ಲಿ ತುಂಬುತ್ತಾ ಹೋಗುತ್ತಾರೆ. ನಂತರ ಉದ್ಯೋಗದಾತರು, ಇನ್ನಿತರ ಹಿರಿಯರು ಅವರ ಜಾಗದಲ್ಲಿ ನಿಂತು, ಈ ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನಿಮಗೆ ವಿವರಿಸುತ್ತಾರೆ.

ಸಹಜವಾಗಿಯೇ ಇವರೆಲ್ಲರ ಮಾತುಗಳು ಸರಿಯೆಂದೇ ಅನಿಸುತ್ತವೆ. ಆದರೆ ಒಂದು ಸಂದರ್ಭದಲ್ಲಿ ನಮ್ಮ ಹೃದಯ ಮತ್ತು ಮಿದುಳಲ್ಲಿ ಅನುಮಾನ ಹುಟ್ಟಿಕೊಳ್ಳಲಾರಂಭಿಸುತ್ತದೆ. ‘ಅರೆ ನಾನು ನೋಡುತ್ತಿರುವ ಜಗತ್ತು ಇವರ ಜಗತ್ತಿಗಿಂತ ಭಿನ್ನವಾಗಿದೆ’ ಎಂದು ನಿಮಗೆ ಅರಿವಾತೊಡಗುತ್ತದೆ. ಮೊದ ಮೊದಲು ನನ್ನೊಳಗಿನ ಧ್ವನಿ ಬಹಳ ಮಂದವಾಗಿ, ಅಸ್ಪಷ್ಟವಾಗಿರುತ್ತಿತ್ತು. ಆದರೆ ಯಾವಾಗ ನಾನು ಮನದ ಮಾತನ್ನು ಕಿವಿಗೊಟ್ಟು ಕೇಳತೊಡಗಿದೆನೋ ಆಗ ನನ್ನ ಅಂತದೃಷ್ಟಿ ಬಲವಾಗತೊಡಗಿತು. ಅಂತದೃಷ್ಟಿಗೂ ಅಂತಃಸಾಕ್ಷಿಗೂ ವ್ಯತ್ಯಾಸವಿದೆ. ಅಂತಃಸಾಕ್ಷಿ ‘ನೀನು ಮಾಡಬೇಕಾದದ್ದು ಇದನ್ನು’ ಎಂದು ಕೂಗುತ್ತದೆ. ಅದೇ ಅಂತದೃಷ್ಟಿ ‘ನೀನು ಇದನ್ನು ಮಾಡಬಹುದು’ ಎನ್ನುತ್ತದೆ. ಮಾಡಬೇಕು ಎಂದು ಹೇಳುವ ಧ್ವನಿಗಿಂತ, ಮಾಡಬಹುದು ಎಂದು ಹೇಳುವ ಧ್ವನಿಯನ್ನು ನಾವು ಕೇಳಿಸಿಕೊಳ್ಳಬೇಕು.

1980ರ ದಶಕದವರೆಗೂ ನಾನು ನಿರ್ಮಿಸಿದ ಚಿತ್ರಗಳೆಲ್ಲ ‘ಪಲಾಯನವಾದಿ’ಯಾಗಿದ್ದವು. ಏಕೆಂದರೆ ಆ ಸಮಯದಲ್ಲಿ ನನ್ನ ಲೋಕದೃಷ್ಟಿ ಬಹಳ ಕಿರಿದಾಗಿತ್ತು. ಆಗ ನನ್ನ ತಲೆಯಲ್ಲಿನ ಪ್ರಪಂಚವನ್ನು ನಾನು ಬೆಳ್ಳಿತೆರೆಯ ಮೇಲೆ ತೊರಿಸಲು ಶಕ್ತನಾಗಿದ್ದೆನೇ ಹೊರತು, ಜಗತ್ತು ನನಗೆ ಕಲಿಸಬಹುದಾಗಿದ್ದ ಅನುಭವವನ್ನಲ್ಲ. ಆದರೆ 1985ರಲ್ಲಿ ಯಾವಾಗ ‘ದಿ ಕಲರ್‌ ಪರ್ಪಲ್‌’ ಸಿನೆಮಾದ ನಿರ್ದೇಶನಕ್ಕಿಳಿದೆನೋ ಆಗ ನನ್ನ ಕಣ್ಣುಗಳು ತೆರೆದುಕೊಂಡವು. 20ನೇ ಶತಮಾನದ ಆದಿಯಲ್ಲಿ ಆಫ್ರಿಕನ್‌ ಅಮೆರಿಕನ್‌ ಮಹಿಳೆಯರು ಎದುರಿಸುತ್ತಿದ್ದ ಬಡತನ, ಜನಾಂಗೀಯ ನಿಂದನೆ, ಕೌಟುಂಬಿಕ ಹಿಂಸೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಆ ಸಿನೆಮಾದ ಕಥೆ ಹೇಳುತ್ತಿತ್ತು. ನಾನು ಊಹಿಸಲಾರದಂಥ ವಾಸ್ತವಗಳು ಜಗತ್ತಿನಲ್ಲಿ ಇವೆಯೆಂಬುದು ಅ‌ರ್ಥವಾಗತೊಡಗಿತು. ಆಗ ನನಗೆ ‘ಸಿನೆಮಾ ಅನ್ನೋದು ಒಂದು ಗುರಿ ಕೂಡ ಆಗಬಲ್ಲದು’ ಎಂದು ಅರಿವಾಯಿತು. ನಿಮಗೂ ಅಂಥ ಗುರಿ ಸಿಗಲಿ ಎಂದು ನಾನು ಆಶಿಸುತ್ತೇನೆ. ನಿಮ್ಮನ್ನು ಯಾವ ಸಂಗತಿ ಕಲಕಿಹಾಕುತ್ತದೋ, ಯಾವ ವಿಷಯ ನೋವು ಕೊಡುತ್ತದೋ ಅದರಿಂದ ವಿಮುಖರಾಗಬೇಡಿ. ಅದನ್ನು ಪರೀಕ್ಷಿಸಿ, ಎದುರು ನಿಂತು ಅದಕ್ಕೆ ಸವಾಲೆಸೆಯಿರಿ. 

2 ತಾಸಿನ ಜಗತ್ತನ್ನು ನಿರ್ಮಿಸುವುದು ನನ್ನ ಕೆಲಸ. ಆದರೆ ಯುವಕರಾಗಿರುವ ನಿಮ್ಮ ಕೆಲಸ ದೀರ್ಘ‌ಕಾಲಿಕ ಸುಂದರ ಜಗತ್ತನ್ನು ನಿರ್ಮಿಸುವುದು! ಉತ್ತಮ ಜಗತ್ತನ್ನು, ಅಂದರೆ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ಹೇಗೆ? ಈ ಪ್ರಶ್ನೆಗೆ ಸರಳ ಉತ್ತರವಿದೆ. ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ! ‘ಜ್ಯುರಾಸಿಕ್‌ ಪಾರ್ಕ್‌’ ಲೇಖಕ ಮೈಕಲ್‌ ಕ್ರಿಚ್ಟಾನ್‌ ತಮ್ಮ ಪ್ರೊಫೆಸರ್‌ ಹೇಳಿದ್ದ ಮಾತನ್ನು ಯಾವಾಗಲೂ ನೆನಪಿಸಿ ಕೊಳ್ಳುತ್ತಿದ್ದರು: ‘ನಿಮಗೆ ಇತಿಹಾಸ ತಿಳಿದಿಲ್ಲವೆಂದರೆ, ಏನೇನೂ ತಿಳಿದಿಲ್ಲವೆಂದರ್ಥ. ತಾನೊಂದು ಮರದ ಭಾಗವಾಗಿದ್ದೆ ಎನ್ನುವುದನ್ನೂ ಅರಿಯದ ಎಲೆ ನೀವು!” ಈ ಸಾಮಾಜಿಕ ಮಾಧ್ಯಮವೇನಿದ್ದರೂ “ಈಗ ಈ ಕ್ಷಣದಲ್ಲಿ ಏನಾಗುತ್ತಿದೆ’ ಎನ್ನುವುದನ್ನಷ್ಟೇ ನಮಗೆ ತೋರಿಸುತ್ತದೆ. ಈ ಕಾರಣಕ್ಕಾಗಿಯೇ ನಾನು ನನ್ನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬಿಟ್ಟು ಇತಿಹಾಸವನ್ನು ತಿಳಿದುಕೊಳ್ಳಿ ಎಂದು ಹೇಳುತ್ತಿರುತ್ತೇನೆ. ತಾವು ಎಲ್ಲಿಂದ ಬಂದೆವು, ತಮ್ಮ ಅಜ್ಜ – ಅಜ್ಜಿ ಎಲ್ಲಿಯವರು, ಅವರು ಅಮೆರಿಕಕ್ಕೆ ವಲಸೆ ಬಂದಾಗ ಈ ದೇಶದ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ತಿಳಿದುಕೊಂಡಾಗ ಮಾತ್ರ ತಾವು ಯಾರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಾಧ್ಯ. ನಿಮ್ಮ ಕುಟುಂಬದ, ದೇಶದ, ಸಮಾಜದ ಇತಿಹಾಸವನ್ನು ತಿಳಿದುಕೊಳ್ಳಿ. ನಿಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮನೊಂದಿಗೆ ಮಾತನಾಡಿ ಅವರ ಕಥೆಗಳನ್ನು ಕೇಳಿ. ಅದ್ಭುತ ಕಥೆಗಳು ಅವರಲ್ಲಿರುತ್ತವೆ ನಾವು ಅವಕ್ಕೆ ಕಿವಿಗೊಡುವುದನ್ನು ಕಲಿಯಬೇಕು. ಈ ಕಾರಣಕ್ಕಾಗಿಯೇ ನಾನು ನೈಜ ಘಟನೆಗಳನ್ನು ಆಧರಿಸಿದ ಸಿನೆಮಾಗಳನ್ನೇ ಹೆಚ್ಚಾಗಿ ನಿರ್ಮಿಸುತ್ತೇನೆ. ಹೀರೋ ಮತ್ತು ವಿಲನ್‌ ಎನ್ನುವ ಪಾತ್ರಗಳು ಬರೀ ಸಾಹಿತ್ಯದ ಸರಕಲ್ಲ. ಇತಿಹಾಸದ ಹೃದಯದಲ್ಲಿ ಅವರೆಲ್ಲ ಬದುಕಿದ್ದರು.
***

ಒಬ್ಬ ವ್ಯಕ್ತಿ ಹೀರೋ ಎಂದು ಕರೆಸಿಕೊಳ್ಳುತ್ತಾನೆಂದರೆ ಆತನ ಜೀವನದಲ್ಲಿ ಏನಿರಬೇಕು? ಪ್ರೀತಿ, ಬೆಂಬಲ, ಧೈರ್ಯ, ಅಂತದೃಷ್ಟಿ? ಖಂಡಿತ ಹೌದು. ಆದರೆ ಅಷ್ಟಕ್ಕೇ ಅವನು ಹೀರೋ ಆಗಿಬಿಡುವುದಿಲ್ಲ. ಹೀರೋಗೆ ಒಬ್ಬ ವಿಲನ್‌ ಬೇಕು! ಆ ವಿಲನ್‌ನನ್ನು ಸೋಲಿಸಿದಾಗ ಅವನು ಹೀರೋ ಆಗುತ್ತಾನೆ. ಹಾಗೆ ನೋಡಿದರೆ ಈ ವಿಷಯದಲ್ಲಿ ನೀವೆಲ್ಲ ತುಂಬಾ ಲಕ್ಕಿ! ಏಕೆಂದರೆ ಈ ಜಗತ್ತಿನಲ್ಲಿ ಅನೇಕ ದುಷ್ಟಶಕ್ತಿಗಳಿವೆ. ವರ್ಗ ದ್ವೇಷ, ವರ್ಣ ದ್ವೇಷ, ರಾಜಕೀಯ ದ್ವೇಷ, ಧಾರ್ಮಿಕ ದ್ವೇಷ…ಇವೆಲ್ಲ ವಿಲನ್‌ಗಳೇ ಅಲ್ಲವೇ?

ನಾನು ಯಹೂದಿ ಜನಾಂಗದವನೆಂಬ ಕಾರಣಕ್ಕೆ ಶಾಲೆಯಲ್ಲಿ ನನ್ನನ್ನು ರೇಗಿಸಲಾಗುತ್ತಿತ್ತು. ಈ ಸಂಗತಿಯಿಂದ ನನಗೆ ಬಹಳ ನೋವಾಗುತ್ತಿತ್ತಾದರೂ, ನನ್ನ ಪೋಷಕರು ಮತ್ತು ಅಜ್ಜ – ಅಜ್ಜಿ ಎದುರಿಸಿದ ನೋವಿನ ಮುಂದೆ ಅದೇನೂ ಅಲ್ಲ. ಜರ್ಮನಿಯ ಪತನಾನಂತರ ಯಹೂದಿಗಳೆಡೆಗಿನ ದ್ವೇಷ ಕಡಿಮೆಯಾಗುತ್ತಾ ಸಾಗುತ್ತಿದೆ ಎಂದೇ ನಾವು ಭಾವಿಸಿದ್ದೆವು. ಆದರೆ ಈಗಲೂ ಆ ದ್ವೇಷ ಕಡಿಮೆಯಾಗಿಲ್ಲ. ಕಳೆದ ಮೂರು ವರ್ಷಗಳಲ್ಲಿ 20,000 ಯಹೂದಿಗಳು ಜನಾಂಗೀಯ ದ್ವೇಷದಿಂದ ತಪ್ಪಿಸಿಕೊಳ್ಳಲು ಯುರೋಪ್‌ ಅನ್ನು ತೊರೆದಿದ್ದಾರೆ. 

ನಾನು 1994ರಲ್ಲಿ “ಶೋಆ’ ಫೌಂಡೇಷನ್‌ ಅನ್ನು ಸ್ಥಾಪಿಸಿದೆ. ಈ ಫೌಂಡೇಷನ್‌ನ ಮೂಲಕ ನಾಜಿ ಹತ್ಯಾಕಾಂಡದಿಂದ ಹೇಗೋ ತಪ್ಪಿಸಿಕೊಂಡ ಮತ್ತು ಅದನ್ನು ನೋಡಿದ ಸುಮಾರು 53,000 ಜನರನ್ನು ನಾವು ಇದುವರೆಗೂ ಸಂದರ್ಶಿಸಿದ್ದೇವೆ. ಈ ಕಾರಣಕ್ಕಾಗಿ 63 ರಾಷ್ಟ್ರಗಳಿಗೆ ಅಲೆದಾಡಿದ್ದೇವೆ. ಈಗ ನಾವು ರವಾಂಡಾ, ಕಾಂಬೋಡಿಯಾ, ಅರ್ಮೇನಿಯಾ ಮತ್ತು ನಾನ್‌ಕಿಂಗ್‌ನ ಹತ್ಯಾಕಾಂಡಗಳ ಬಗ್ಗೆ ವಿವರ ಕಲೆಹಾಕುತ್ತಿದ್ದೇವೆ. ಇದರ ಅಗತ್ಯವೇನು ಎಂದು ನೀವು ಪ್ರಶ್ನಿಸಬಹುದು. ಆದರೆ ಒಂದು ವಿಷಯ ಮರೆಯದಿರಿ. ಹಿಂದೆ ಆದದ್ದು ಮುಂದೆಯೂ ಆಗಬಲ್ಲದು. ಈಗಲೂ ಹತ್ಯಾಕಾಂಡಗಳು ನಡೆಯುತ್ತಿಲ್ಲವೇನು? ಏಕೆ ನಡೆಯುತ್ತಿವೆ? ಏಕೆಂದರೆ ಇತಿಹಾಸ ಎದುರಿಡುತ್ತಿರುವ ಪಾಠವನ್ನು ನಾವು ಕಲಿಯುತ್ತಿಲ್ಲ. ಮನುಷ್ಯ ತನ್ನ ಉಗಮಕಾಲದಿಂದಲೂ ಗುಂಪು ಕಟ್ಟಿಕೊಂಡು ಬದುಕುವುದನ್ನು ಕಲಿತಿದ್ದಾನೆ. ಈ ಗುಣ ನಮ್ಮೊಳಗೆ ಅಂತರ್ಗತವಾಗಿದೆ ಎಂದು ವಾದಿಸಬಹುದು. ಆದರೆ ಈ ಅಂತರ್ಗತ ಗುಣದಲ್ಲಿ ಒಂದು ಘೋರ ಸಂಗತಿಯೂ ಅಡಕವಾಗಿದೆ. ನಾವಿಂದು ‘ನಾನು’ ಮತ್ತು ‘ಅವನು’ ಎಂಬ ಜಗತ್ತನ್ನು ಸೃಷ್ಟಿಸಿದ್ದೇವೆ. ನಾನು ಮತ್ತು ಅವನು ಸೇರಿ ‘ನಾವು’ ಆಗುವುದ್ಯಾವಾಗ? ಜಗತ್ತಲ್ಲಿಂದು ಬರೀ ಯಹೂದಿ ವಿರೋಧಿ ದ್ವೇಷವಷ್ಟೇ ಬೆಳೆಯುತ್ತಿಲ್ಲ, ಮುಸಲ್ಮಾನರು, ಅಲ್ಪಸಂಖ್ಯಾತರು, ಎಲ್‌ಜಿಬಿಟಿ ಸಮುದಾಯದವರು… ಹೀಗೆ ದ್ವೇಷಕ್ಕೆ ತುತ್ತಾಗುತ್ತಿರುವ ವರ್ಗ ಬಹಳ ದೊಡ್ಡದಿದೆ.

ಹೆಚ್ಚುತ್ತಿರುವ ದ್ವೇಷಕ್ಕೆ ಪ್ರತ್ಯುತ್ತರವೆಂದರೆ ಮಾನವೀಯತೆಯನ್ನು ಹೆಚ್ಚಿಸುವುದು! ತಾರತಮ್ಯ, ದ್ವೇಷ ಅಳಿಯಬೇಕೆಂದರೆ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿರುವ ಭಯವನ್ನು ಕಿತ್ತೆಸೆದು, ಅದರ ಜಾಗದಲ್ಲಿ ಕುತೂಹಲವನ್ನು ಪ್ರತಿಷ್ಠಾಪಿಸಬೇಕು. ಎದುರಿನ ವ್ಯಕ್ತಿಯನ್ನು ಆತನ ವರ್ಣ, ಧರ್ಮ, ಪ್ರದೇಶದ ಆಧಾರದಲ್ಲಿ ಜಡ್ಜ್ ಮಾಡುವುದನ್ನು ಬಿಟ್ಟು, ಆತ ನಿಜಕ್ಕೂ ಯಾರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನಮಗೆದುರಾಗುವ ಪ್ರತಿಯೊಬ್ಬ ವ್ಯಕ್ತಿಯೆಡೆಗೂ ನಾವು ಸಹಾನುಭೂತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಆಗಲೇ ಹೇಳಿದಂತೆ ಸಿನೆಮಾದಲ್ಲಿನ ಹೀರೋಗೆ ಒಬ್ಬ ವಿಲನ್‌ ಇರುತ್ತಾನೆ. ನಿಜ ಜೀವನದಲ್ಲಿ ನೂರಾರು ವಿಲನ್‌ ರೂಪಿ ವ್ಯಾಘ್ರಗಳು ನಿಮಗೆದುರಾಗುತ್ತಲೇ ಇರುತ್ತವೆ. ಅವನ್ನು ಸೋಲಿಸಿ ಹೀರೋಗಳಾಗು ತ್ತೀರೋ ಅಥವಾ ಅವುಗಳ ಕೈಜೋಡಿಸಿ ವಿಲನ್‌ ಆಗುತ್ತೀರೋ?

– ಸ್ಟೀವನ್‌ ಸ್ಪೀಲ್‌ಬರ್ಗ್‌ ; ಹಾಲಿವುಡ್‌ ನಿರ್ದೇಶಕ

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.