ವರಾಹಾವತಾರ ; ಭೂರಕ್ಷಣೆ, ಲೋಕಕಂಟಕ ಹಿರಣ್ಯಾಕ್ಷನ ವಧೆ….
Team Udayavani, Aug 7, 2018, 12:33 PM IST
ಹಿಂದೆ ಮಹಾಪ್ರಳಯದ ನಂತರ ಬ್ರಹ್ಮನು ಸೃಷ್ಟಿಯನ್ನು ಮಾಡುತ್ತಿರುವಾಗ ಆ ಪ್ರಳಯದ ಜಲದಲ್ಲಿ ಭೂಮಿಯು ಸಂಪೂರ್ಣ ಮುಳುಗಿಹೋಗಿತ್ತು, ದೇವತೆಗಳು ದೇವಲೋಕದಲ್ಲೂ, ರಾಕ್ಷಸರು ರಸಾತಳದಲ್ಲೂ ವಾಸಿಸುತ್ತಿದ್ದರು.
ಹೀಗಿರುವಾಗ ಬ್ರಹ್ಮನು ಮನು ಮತ್ತು ಶತರೂಪಾದೇವಿಯರನ್ನು ಸೃಷ್ಟಿಸಿದನು. ಅವರು ವಿನಯದಿಂದ ಬ್ರಹ್ಮದೇವರನ್ನು ಸ್ತುತಿಸಲು ಬ್ರಹ್ಮದೇವರು ಅವರನ್ನು ಕುರಿತು “ತನಗೆ ಸಮಾನವಾದ ಸಂತಾನವನ್ನು ಪಡೆದು ಧರ್ಮದಿಂದ ಪೃಥ್ವಿಯನ್ನು ಪಾಲಿಸುತ್ತಾ, ಯಜ್ಞಗಳ ಮೂಲಕ ಶ್ರೀಹರಿಯನ್ನು ಆರಾಧಿಸಿ” ಎಂದು ಹೇಳಿದರು. ಮನುವು ತನಗೂ , ತನ್ನ ಪ್ರಜೆಗಳಿಗೂ ವಾಸಿಸಲು ಯೋಗ್ಯವಾದ, ಪ್ರಳಯಜಲದಲ್ಲಿ ಮುಳುಗಿರುವ ಭೂಮಿಯನ್ನು ಮೇಲಕ್ಕೆತ್ತಲು ತಾವು ಪ್ರಯತ್ನಿಸಬೇಕು ಎಂದು ಬೇಡಿಕೊಂಡನು.
ಬ್ರಹ್ಮದೇವರು ಅದನ್ನು ಮೇಲೆತ್ತುವ ಬಗೆಯನ್ನು ಅರಿಯದೆ ಬಹಳ ಚಿಂತಿತರಾದರು. ಹೀಗೆ ಚಿಂತಿಸುತ್ತಿರಲು ಅವರ ಮೂಗಿನ ಹೊಳ್ಳೆಯಿಂದ ಇದ್ದಕ್ಕಿದ್ದಂತೆ ಹೆಬ್ಬೆರಳಿನ ಗಾತ್ರದ ಒಂದು ಪುಟ್ಟ ಹಂದಿಮರಿಯು ಹೊರಬಂತು. ಬ್ರಹ್ಮದೇವರು ನೋಡುತ್ತಿರುವಂತೆಯೇ ಆ ಹಂದಿಮರಿಯು ಬೃಹದಾಕಾರವಾಗಿ ಬೆಳೆದು ನಿಂತಿತು. ಸಾಕ್ಷಾತ್ ಭಗವಂತನೇ ಒರಟಾದ ಮೈಗೂದಲುಗಳಿಂದ ಕೂಡಿದ ಕಠೋರವಾದ ದೇಹವುಳ್ಳ, ತೆಳುವಾದ ಬಾಲ, ಕೆಂಡಕಾರುತ್ತಿರುವಂತೆ ಭಾಸವಾಗುತ್ತಿರುವ ಕಣ್ಣುಗಳು, ಬೆಳ್ಳನೆಯ ಕೋರೆಹಲ್ಲುಗಳಿಂದ ಕೂಡಿದ ವರಾಹ ರೂಪದಿಂದ ಪ್ರಕಟಗೊಂಡನೆಂದು ತಿಳಿದ ಬ್ರಹ್ಮದೇವರು ವರಾಹ ರೂಪೀ ಭಗವಂತನನ್ನು ವೇದಮಂತ್ರಗಳಿಂದ ಸ್ತುತಿಸಿದರು.
ವರಾಹರೂಪಿಯು ಬಾಲವನ್ನು ಮೇಲಕ್ಕೆ ಮಾಡಿಕೊಂಡು ಗುರ್ಗುರು ಸ್ವರದಿಂದ ಘರ್ಜಿಸುತ್ತಾ ಭೂಮಿಯನ್ನು ಮೇಲೆತರುವುದಾಗಿ ತಿಳಿಸಿ, ಆಕಾಶದೆತ್ತರಕ್ಕೆ ಹಾರಿ ಪ್ರಳಯ ಜಲವನ್ನು ಪ್ರವೇಶಿಸಿದನು, ಭೀಕರವಾದ ಕೋರೆ ಹಲ್ಲುಗಳಿಂದ ಪ್ರಳಯಜಲವನ್ನು ಸೀಳುತ್ತ ರಸಾತಳ (ತಳಭಾಗವನ್ನು) ತಲುಪಿದನು. ಅಲ್ಲಿ ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ತನ್ನ ಕೋರೆಹಲ್ಲುಗಳ ಮೇಲೆ ಇಟ್ಟುಕೊಂಡು ಹಿಂದಿರುಗುತ್ತಿರುವಾಗ ಶ್ರೀಹರಿಯನ್ನು ಸಂಹರಿಸಲು ಕಟಿಬದ್ಧನಾದ ಹಿರಣ್ಯಾಕ್ಷನು ಹರಿಯು ರಸಾತಳಕ್ಕೆ ಹೋಗಿರುವ ವಿಷಯವನ್ನು ನಾರದರಿಂದ ತಿಳಿದು ಅಲ್ಲಿಗೆ ಧಾವಿಸಿದನು.
ಅಲ್ಲಿ ವರಾಹರೂಪದಿಂದಿರುವ ಶ್ರೀಹರಿಯು ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲೆ ಇರಿಸಿಕೊಂಡು ಬರುತ್ತಿರುವುದನ್ನು ಕಂಡು ” ಎಲವೋ ಮೂಢನೆ, ಇತ್ತ ಬಾ…. ರಸಾತಳದಲ್ಲಿ ವಾಸಿಸುವ ನಮಗೆ ಬ್ರಹ್ಮ ನಿಂದ ಕೊಡಲ್ಪಟ್ಟ ಈ ಭೂಮಿಯನ್ನು ಇಲ್ಲಿಯೇ ಬಿಟ್ಟುಬಿಡು ಎಂದು ಘರ್ಜಿಸುತ್ತಾ ದುರ್ವಚನಗಳಿಂದ ಭಗವಂತನನ್ನು ನಿಂದಿಸತೊಡಗಿದನು.
ಇದನ್ನು ಕೇಳಿ ಭೂದೇವಿಯು ಭಯಗೊಂಡಿರುವುದನ್ನು ಮನಗಂಡ ಭಗವಂತನು ಭೂಮಿಯನ್ನು ಹೊರತಂದು ಅದರ ಕಕ್ಷೆಯಲ್ಲಿಟ್ಟು ಅದರಲ್ಲಿ ತನ್ನ ಆಧಾರಶಕ್ತಿಯನ್ನು ಸ್ಥಾಪಿಸಿದನು. ಆಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಹಿರಣ್ಯಾಕ್ಷನು ನೋಡುತ್ತಿರುವಂತೆಯೇ ಬ್ರಹ್ಮದೇವನು ಮತ್ತು ದೇವತೆಗಳು ಪ್ರಕಟಗೊಂಡು ಭಗವಂತನನ್ನು ಸ್ತುತಿಸಿ ಪುಷ್ಪವೃಷ್ಟಿಗೈದರು. ಇದರಿಂದ ಸಂತುಷ್ಟನಾದ ವರಾಹರೂಪಿ ಭಗವಂತನು ಶಂಖಚಕ್ರಗದಾಧಾರಿಯಾಗಿ ಶೋಭಿಸುತ್ತಾ, ತನ್ನನ್ನು ಕಟುವಾಕ್ಯಗಳಿಂದ ನಿಂದಿಸುತ್ತಿರುವ ಹಿರಣ್ಯಾಕ್ಷನನ್ನು ಕಂಡು ನಗುತ್ತಾ ” ಎಲವೋ ದೈತ್ಯನೇ, ರಸಾತಳ ನಿವಾಸಿಗಳ ನಿಕ್ಷೇಪದ ಸಂಪತ್ತನ್ನು ಕಸಿದುಕೊಂಡು ನಾಚಿಗೆಗೆಟ್ಟು ನಿನ್ನ ಗದೆಯ ಭಯದಿಂದ ಇಲ್ಲಿಗೆ ಬಂದಿದ್ದೇನೆ ಎಂದು ನೀನು ಹೇಳಿರುವುದು ನಿಜವೇ ! ನಿನ್ನಂತಹ ಅದ್ವಿತೀಯನಾದ ವೀರನ ಮುಂದೆ ಯುದ್ಧದಲ್ಲಿ ಸೆಣಸುವ ಸಾಮರ್ಥ್ಯವು ನನಗೆಲ್ಲಿದೆ ? ಆದರೂ ನಿನ್ನಮುಂದೆ ನಿಂತಿರುವೆನು. ನಿನ್ನಂತಹ ಬಲಶಾಲಿಗಳೊಂದಿಗೆ ವೈರವನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ ? ನೀನು ಮಹಾನಾಯಕನಾಗಿರುವೆ…. ಆದ್ದರಿಂದ ಈಗ ಯಾವ ಶಂಕೆಯೂ ಇಲ್ಲದೆ ನನಗೆ ಅನಿಷ್ಟವನ್ನು ಮಾಡಿ ನಿನ್ನ ಪ್ರತಿಜ್ಞೆಯನ್ನು ನೆರವೇರಿಸು ಎಂದು ಯುದ್ಧಕ್ಕೆ ಪರೋಕ್ಷವಾಗಿ ಆಹ್ವಾನಿಸಿದನು.
ಇದನ್ನು ಕೇಳಿದ ಹಿರಣ್ಯಾಕ್ಷನು ಕ್ರೋಧದಿಂದ ವರಾಹರೂಪಿ ಭಗವಂತನಮೇಲೆ ಗದಾಪ್ರಹಾರವನ್ನು ಮಾಡಲು, ಭಗವಂತನು ಅದನ್ನು ತಡೆದು ಹಿರಣ್ಯಾಕ್ಷನಿಗೆ ಪ್ರತಿ ಪ್ರಹಾರವನ್ನು ಮಾಡಿದನು. ಈ ರೀತಿಯಾಗಿ ಇಬ್ಬರ ನಡುವೆ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ಇಬ್ಬರು ಬಗೆ ಬಗೆಯ ವರಸೆಗಳನ್ನು ತೋರಿಸತೊಡಗಿದರು. ಅಲ್ಲಿಯೇ ಇದ್ದ ಬ್ರಹ್ಮ ದೇವರು ತಾನು ಹಿರಣ್ಯಾಕ್ಷನಿಗೆ ಕೊಟ್ಟ ವರದ ವಿಚಾರವನ್ನು ತಿಳಿಸುತ್ತಾ, “ಪ್ರಭುವೇ ಲೋಕಕಂಟಕನನ್ನು ಸಂಹಾರಮಾಡುವ ಭಯಂಕರವಾದ ಸಂಧ್ಯಾಕಾಲವು ಬರುವುದರಲ್ಲಿದೆ. ಆ ಸಂಧ್ಯಾಕಾಲದಲ್ಲಿ ಈತನನ್ನು ಸಂಹರಿಸಿ ದೇವತೆಗಳಿಗೆ ಹಾಗೂ ಋಷಿಗಳಿಗೆ ನೆಮ್ಮದಿಯನ್ನು ಕರುಣಿಸು ” ಎಂದು ಬೇಡಿದನು.
ಅದೇ ಸಮಯಕ್ಕೆ ಮಹಾ ಮಾಯಾವಿಯಾದ ಹಿರಣ್ಯಾಕ್ಷನು ಮಾಯೆಗೆ ಅಧಿಪತಿಯಾದ ಶ್ರೀಹರಿಯಮೇಲೆ ಅನೇಕರೀತಿಯ ಮಾಯೆಯನ್ನು ಪ್ರಯೋಗಿಸತೊಡಗಿದನು. ಅದಕ್ಕೆ ಪ್ರತಿಯಾಗಿ ಶ್ರೀಹರಿಯು ತನ್ನದೇ ಪ್ರತಿರೂಪವಾದ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆಸುರೀ ಮಾಯೆಯನ್ನು ಅಂತ್ಯಗೊಳಿಸಿದನು. ತನ್ನ ಮಾಯೆಯು ನಾಶವಾದಾಗ ದೈತ್ಯನು ಪುನಃ ಭಗವಂತನ ಬಳಿಗೆ ಬಂದನು. ಇದನ್ನು ಕಂಡು ಕೋಪದಿಂದ ಕೆರಳಿದ ಭಗವಂತನು, ದೇವೇಂದ್ರನು ವೃತ್ರಾಸುರನನ್ನು ಬಡಿದಂತೆ ಹಿರಣ್ಯಾಕ್ಷನ ಕೆನ್ನೆಗೆ ಒಂದು ಪೆಟ್ಟುಕೊಟ್ಟನು. ಸರ್ವಶಕ್ತನಾದ ಭಗವಂತನೇನೋ ಉಪೇಕ್ಷೆಯಿಂದ ಹೊಡೆದಿದ್ದರೂ ಹಿರಣ್ಯಾಕ್ಷನು ಗಿರಗಿರನೆ ಬುಗುರಿಯಂತೆ ತಿರುಗಿ, ಕಣ್ಣಾಲಿಗಳು ಹೊರಬಂದು, ಕೈ ಕಾಲು ಕೂದಲುಗಳು ಛಿನ್ನ ಭಿನ್ನವಾಗಿ ಗತಪ್ರಾಣನಾಗಿ, ಬಿರುಗಾಳಿಯಿಂದ ಬುಡಸಮೇತವಾಗಿ ಉರುಳಿದ ಮಹಾವೃಕ್ಷದಂತೆ ನೆಲಕ್ಕುರುಳಿದನು.
ಇದನ್ನು ಕಂಡ ಬ್ರಹ್ಮಾದಿ ದೇವತೆಗಳು ಪ್ರಭುವೇ , ಜಗತ್ತಿಗೆ ಕಷ್ಟಕೊಡುತ್ತಿದ್ದ ಈ ದೈತ್ಯನ ಸಂಹಾರದಿಂದ ಯಜ್ಞ ಯಾಗಾದಿಗಳನ್ನು ನಿಶ್ಚಿಂತೆಯಿಂದ ಮಾಡಲು ಅನುಕೂಲವಾಯಿತು ಎಂದು ಮತ್ತೊಮ್ಮೆ ಭಗವಂತನ ಲೀಲೆಗಳನ್ನು ಕೊಂಡಾಡಿದರು.
ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ