ರಸಋಷಿಯ ಶಿಷ್ಯಾಗ್ರೇಸರ ಪ್ರಭುಶಂಕರ
Team Udayavani, Apr 22, 2018, 6:00 AM IST
ಡಿ. ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ, ಎಂ. ವಿ. ಸೀತಾರಾಮಯ್ಯ, ಕುವೆಂಪು, ಜಿ. ಪಿ. ರಾಜರತ್ನಂ ಮುಂತಾದ ದಿಗ್ಗಜರ ಪಾಠಗಳನ್ನು ಕೇಳುತ್ತ ಬೆಳೆದು, ಮೇಲ್ಪಂಕ್ತಿಯ ಕನ್ನಡ ಲೇಖಕರಾಗಿ ಗುರುತಿಸಿಕೊಂಡಿದ್ದ ಮೈಸೂರಿನ ಡಾ. ಪ್ರಭುಶಂಕರ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಸುಮಾರು 50 ಮಹಣ್ತೀದ ಕೃತಿಗಳನ್ನು ಬರೆದಿದ್ದಾರೆ. ಸಹೃದಯ ವಿಮರ್ಶೆಯ ಮೂಲಕ ಕನ್ನಡ ನುಡಿಲೋಕವನ್ನು ವಿಸ್ತರಿಸಿದ ಪ್ರಭುಶಂಕರರಿಗಿದು ಕಂಬನಿಯ ವಿದಾಯ…
ಪ್ರಭುಶಂಕರ- ಒಂದು ಮರೆಯಲಿಕ್ಕೇ ಆಗದ ವ್ಯಕ್ತಿತ್ವ. ತಮ್ಮ ತಿಳಿ ಹಾಸ್ಯ, ಅದ್ಭುತ ವಾಗ್ಮಿತೆ, ಶುದ್ಧವಾದ ಬರವಣಿಗೆಗಳಿಂದ ಕನ್ನಡಿಗರ ಮನ ಸೂರೆಗೊಂಡವರು ಅವರು. ಭಾವಗೀತೆಗಳ ಬಗ್ಗೆ ಅವರು ಬರೆದ ಕೃತಿ ಈವತ್ತಿಗೂ ಎಲ್ಲರೂ ಅಭ್ಯಾಸ ಮಾಡಬೇಕಾದಂಥ ಕೃತಿ. ಹಾಗೇ ಅವರು ಬಸವಣ್ಣನವರ ಜೀವಿತವನ್ನು ವಚನಗಳನ್ನು ಬಳಸಿಯೇ ಅಪೂರ್ವವಾಗಿ ಕಟ್ಟಿಕೊಟ್ಟ ವಿಶಿಷ್ಟ ಕೃತಿ. ಕಾಶಿಯ ಪರಿಸರ ಮತ್ತು ಅಲ್ಲಿನ ವ್ಯಕ್ತಿಗಳನ್ನು ಕುರಿತು ಅವರು ಬರೆದಿರುವ ಪ್ರಬಂಧಗಳು ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಡಾ| ಜಿ.ಎಸ್.ಎಸ್. ಅವರೊಂದಿಗೆ ಕುವೆಂಪು ಅವರ ಆದ್ಯ ಶಿಷ್ಯರಲ್ಲಿ ಅವರೂ ಒಬ್ಬರು. ಕುವೆಂಪು ಮತ್ತು ಪುತಿನ ಅವರಿಗೆ ಅತ್ಯಾಪ್ತರು. ಪುತಿನ ಅವರನ್ನು ತಮಾಷೆ ಮಾಡಿ ನಗಿಸುವಷ್ಟು ಅವರಿಗೆ ಆಪ್ತರು! ನನಗೆ ಮೊದಲ ಬಾರಿಗೆ ಕುವೆಂಪು ಮತ್ತು ಪುತಿನ ದರ್ಶನ ಮಾಡಿಸಿದವರೂ ಅವರೇ!
1973ರಲ್ಲಿ ಕಾಣುತ್ತೆ, ಡಾ| ಜಿ.ಎಸ್.ಎಸ್. ಯಾವುದೋ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಹೊರಟಿದ್ದರು. “”ಕಾರಿನಲ್ಲಿ ಒಬ್ಬನೇ ಹೋಗುತ್ತಿದ್ದೇನೆ. ನೀವೂ ಬರುವಿರಾ?” ಎಂದು ನನ್ನನ್ನು ಕೇಳಿದರು. ಮೈಸೂರು ಎಂದರೆ ಕುವೆಂಪು ಮತ್ತು ಪುತಿನ ನೆಲೆಸಿದ್ದ ನಗರವಲ್ಲವೆ? “”ಓಹೋ! ಬರುತ್ತೇನೆ” ಎಂದು ನಾನು ಹೊರಟೇ ಬಿಟ್ಟೆ. ಜಿ.ಎಸ್.ಎಸ್. ಅವರ ಕಾರ್ಯಕ್ರಮವಾದ ಮೇಲೆ ಜಿ.ಎಸ್.ಎಸ್. ಮತ್ತು ಪ್ರಭುಶಂಕರ ನನ್ನನ್ನು ಕುವೆಂಪು ಅವರ “ಉದಯರವಿ’ಗೆ ಕರೆದೊಯ್ದರು. ಕುವೆಂಪು ಅವರ ಮಾತನ್ನು ಅದೆಷ್ಟೋ ಹೊತ್ತು ಮಂತ್ರಮುಗ್ಧನಾಗಿ ಅವರನ್ನು ನೋಡುತ್ತ ಕೇಳುವ ಅವಕಾಶ ಕಲ್ಪಿಸಿದವರು ಪ್ರಭುಶಂಕರರು. ಆವತ್ತು ವಿಜಯದಶಮಿ. ಕುವೆಂಪು ಮನೆಯಿಂದ ನಾವು ಪುತಿನ ಅವರ ಮನೆಗೆ ಹೋದೆವು. ನನ್ನನ್ನು ಪುತಿನ ಮನೆಯಲ್ಲಿ ಬಿಟ್ಟು ಜಿ.ಎಸ್.ಎಸ್. ಅವರು ಪ್ರಭುಶಂಕರರ ಮನೆಗೆ ಹೋದರು.
ಮೈಸೂರಿಗೆ ಹೋದಾಗಲೆಲ್ಲ ಪ್ರಭುಶಂಕರ ಅವರನ್ನು ನೋಡುವ ಸಂಪ್ರದಾಯ ಬೆಳೆಯಿತು. ಹಾಗೆಯೇ ಸಭೆಗಳಲ್ಲಿ ಅವರ ಸಹಜ ಹಾಸ್ಯೋತ್ಪಾದಕ ರಸಸ್ಪಂದಿ ಮಾತುಗಳನ್ನು ಅದೆಷ್ಟು ಬಾರಿ ಕೇಳಿರುವೆನೋ! ಅದರಲ್ಲಿ ಒಂದು ಸಭೆಯನ್ನಂತೂ ನಾನು ಮರೆಯುವಂತೆಯೇ ಇಲ್ಲ. ಬೆಂಗಳೂರಿನಲ್ಲಿ ಸಾಹಿತ್ಯಾಸಕ್ತರ ಇಚ್ಛೆಯಂತೆ ಅಭ್ಯಾಸ ಎನ್ನುವ ಸ್ಟಡಿ ಸರ್ಕಲ್ ಪ್ರಾರಂಭಿಸಿ ನಾನು ಮೂರು ವರ್ಷಗಳ ಕಾಲ ನಿರಂತರವಾಗಿ ನಡೆಸಿದೆನಷ್ಟೆ? ಕವಿಗಳ ಅಭ್ಯಾಸ ಅವರವರ ಮನೆಯಲ್ಲೇ ನಡೆಸಬೇಕೆಂದು ನಾವು ನಿಶ್ಚಯಿಸಿದೆವು. ಬೇಂದ್ರೆ ಕಾವ್ಯದ ಬಗ್ಗೆ ಚರ್ಚೆ ಧಾರವಾಡದಲ್ಲಿ “ಸಾಧನಕೇರಿ’ಯಲ್ಲೇ ನಡೆಯಿತು. ಪುತಿನ ಕಾವ್ಯಾಭ್ಯಾಸ ಮೇಲುಕೋಟೆಯಲ್ಲಿ ನಡೆಯಿತು. ಪುತಿನ ಕಾವ್ಯದ ಬಗ್ಗೆ ಎಸ್. ಮಂಜುನಾಥ ಅದ್ಭುತವಾಗಿ ಮಾತಾಡಿದರು. ಮೈಸೂರಿನಲ್ಲಿ ಕುವೆಂಪು ಕಾವ್ಯಾಭ್ಯಾಸ ನಡೆಯಿತು. ಕುವೆಂಪು ಬಗ್ಗೆ ಆವತ್ತು ಪ್ರಭುಶಂಕರ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತಾಡಿದರು. ಕುವೆಂಪು ಅವರ ಅಳಿಯ-ಮಗಳು ಚಿದಾನಂದ ಗೌಡ-ತಾರಿಣಿಯವರೂ ಆವತ್ತು ನಮ್ಮೊಂದಿಗಿದ್ದರು. ಆ ವೇಳೆಗೆ ಪ್ರಭುಶಂಕರರಿಗೆ ನೆನಪು ಕೈಕೊಡುತ್ತ ಇತ್ತು. ಆದರೆ, ಕುವೆಂಪು ಬಗ್ಗೆ ನಿಚ್ಚಳವಾಗಿ ಪ್ರಭುಶಂಕರ ಮಾತಾಡಿದರು. ಕುವೆಂಪು ಅವರ ಮಾನವೀಯ ವ್ಯಕ್ತಿತ್ವದ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟರು.
ಡಾ| ಜಿ.ಎಸ್.ಎಸ್ ಅವರು ತೀರಿಕೊಂಡ ಮೇಲೆ ಪುತಿನ ಟ್ರಸ್ಟಿಗೆ ಅವರಂಥ ಮತ್ತೂಬ್ಬ ಹಿರಿಯರ ಮಾರ್ಗದರ್ಶನ ಬೇಕೆನ್ನಿಸಿ ಪ್ರತಿಷ್ಠಾನದಲ್ಲಿರುವಂತೆ ಪ್ರಭುಶಂಕರ ಅವರನ್ನು ಕೋರಿಕೊಂಡೆವು. ಅವರು ಪುತಿನ ಟ್ರಸ್ಟಿನ ಸದಸ್ಯರಾಗಲು ಸಂತೋಷದಿಂದ ಒಪ್ಪಿದರು.
ಈ ದಿನಗಳಲ್ಲಿ ಪ್ರಭುಶಂಕರರ ಮರೆವಿನ ಸಮಸ್ಯೆ ತೀವ್ರವಾಗತೊಡಗಿತ್ತು. ಅವರ ಶ್ರೀಮತಿಯವರೂ ಅವರೊಂದಿಗಿರದೆ ದೈವವಶರಾಗಿದ್ದ ಸಂದರ್ಭ. ಒಮ್ಮೆ ಪ್ರಭುಶಂಕರ ನನಗೆ ದೂರವಾಣಿಯ ಮೂಲಕ ಸಂಪರ್ಕಿಸಿ, “”ಈವತ್ತು ಟ್ರಸ್ಟಿನ ಸಭೆ ಇದೆಯಲ್ಲವಾ?” ಎಂದು ಕೇಳಿದರು. “”ಹೌದು ಸರ್! ಹನ್ನೊಂದಕ್ಕೆ. ತಾವು ಬರುತ್ತಿರುವಿರಾ?” ಕೇಳಿದೆ. “”ಬಂದಿದ್ದೇನಪ್ಪಾ$! ಆಶ್ರಮದ ತಿರುವಿನಲ್ಲಿ ನಿಂತಿದ್ದೇನೆ. ನಿಮ್ಮ ಮನೆಯ ದಾರಿ ತಿಳಿಯುತ್ತಿಲ್ಲ! ಯಾರನ್ನಾದರೂ ಕಳಿಸುವಿರಾ?” ಎಂದರು. ಆದರೆ ಅವರು ನಿಂತಿದ್ದು ಮೈಸೂರಿನ ರಾಮಕೃಷ್ಣಾಶ್ರಮದ ಬಳಿ! ಅದನ್ನೇ ಅವರು ಬೆಂಗಳೂರಿನ ರಾಮಕೃಷ್ಣಾಶ್ರಮ ಎಂದು ಭ್ರಮಿಸಿದ್ದರು! ಇದು ಅವರ ಸ್ಮರಣೆಯ ಸಮಸ್ಯೆಯಾಗಿತ್ತು. ನಾವೆಲ್ಲ ತುಂಬ ಪೇಚಾಡಿಕೊಂಡೆವು.
ಹೋದವರ್ಷ ನಾನು ಮತ್ತು ಖಾದ್ರಿ ಅಚ್ಯುತ ಮೈಸೂರಿಗೆ ಹೋಗಿ ಪ್ರಭುಶಂಕರರ ಭೆಟ್ಟಿ ಮಾಡಿದೆವು. ಅವರ ಆರೋಗ್ಯ ವಿಚಾರಿಸಿಕೊಂಡು ಬಂದೆವು. ಅವರ ಮಾತು ಕಮ್ಮಿಯಾಗಿತ್ತು. ಆದರೆ, ಮಾತಿನ ತೇಜಸ್ಸು ಮಾಸಿರಲಿಲ್ಲ. ಬಹು ಹೊತ್ತು ಅವರೊಂದಿಗೆ ಮಾತಾಡಿ ಬೆಂಗಳೂರಿಗೆ ಹಿಂದಿರುಗಿದೆವು. ಪ್ರಭುಶಂಕರರು ಕೂಡುವ ಭಂಗಿಯನ್ನು ನಾನು ಯಾವತ್ತೂ ಮರೆಯಲಾರೆ. ಮಂಡಿ ಮಡಚಿ ಆಂಜನೇಯನ ಭಂಗಿಯಲ್ಲಿ ಕುಳಿತು ಆಪ್ತರೊಂದಿಗೆ ಸಾಹಿತ್ಯ ಕುರಿತು ಅವರು ಗಂಟೆಗಟ್ಟಲೆ ಹರಟುತ್ತಿದ್ದರು. ಹರಟೆಯಲ್ಲಿ ಉದ್ದಕ್ಕೂ ಹಾಸ್ಯದ ಹೊಳಹುಗಳು ಇರುತ್ತಿದ್ದವು! ವೈಯಕ್ತಿಕ ಅಸಹನೆಯ ಮಾತು ಯಾವತ್ತೂ ಅವರು ಆಡಿದವರಲ್ಲ. ಅವರ ಮಾತಿನಲ್ಲಿ ಇರುತ್ತಿದ್ದ ಆಳದ ನಿರ್ಲಿಪ್ತಿ ನನಗೆ ಯಾವಾಗಲೂ ಬೆರಗು ಹುಟ್ಟಿಸುತ್ತ ಇತ್ತು! ನೀರಿನ ಮಧ್ಯದಲ್ಲೇ ವಿಹರಿಸಿಯೂ ನೀರನ್ನು ತನ್ನೊಳಗೆ ತೆಗೆದುಕೊಳ್ಳದ ದೋಣಿಯ ಹಾಗೆ ಅವರಿದ್ದರು. ಸಂಸಾರದಲ್ಲಿದ್ದೇ ಅದನ್ನು ದಾಟಿಕೊಂಡ ಸಂತನ ಹಾಗೆ ಇದ್ದರು.
ಪ್ರಭುಶಂಕರ ಈಗ ನಮ್ಮೊಂದಿಗಿಲ್ಲ ಎನ್ನುವುದನ್ನು ನಾನು ನಂಬಲಾರೆ. “ಆಶ್ರಮದ ತಿರುವಿನಲ್ಲಿ ನಿಂತಿದ್ದೇನೆ! ನಿಮ್ಮ ಮನೆಯ ದಾರಿ ತಿಳಿಯುತ್ತಿಲ್ಲ! ಯಾರನ್ನಾದರೂ ಕಳಿಸಿಕೊಡುವಿರಾ?’ ಎಂದು ಅವರು ಫೋನಿನಲ್ಲಿ ಆವತ್ತು ಆಡಿದ್ದು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿದೆ!
– ಎಚ್. ಎಸ್. ವೆಂಕಟೇಶಮೂರ್ತಿ