ಹೊಸ ಕಾದಂಬರಿ: ಉಮ್ಮಾ
Team Udayavani, Aug 26, 2018, 6:00 AM IST
ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ ಓದಿರಿಯನ್ನು ಈ ಹಿಂದೆ ಓದಿಸಿದ್ದ ಬೊಳುವಾರು, ಇದೀಗ ಪ್ರವಾದಿಪತ್ನಿ ಆಯಿಷಾ ಜೀವನಪ್ರೇರಿತ ಉಮ್ಮಾ ಕಾದಂಬರಿಯನ್ನು ನಾಳೆ ಬಿಡುಗಡೆ ಮಾಡುತ್ತಿ¨ªಾರೆ. ವಿಶಿಷ್ಟವೆನ್ನಿಸುವ ತಂತ್ರದಲ್ಲಿ ಹೆಣೆಯಲಾಗಿರುವ ಈ ಕಾದಂಬರಿಯಲ್ಲಿ “ಮುತ್ತುಪ್ಪಾಡಿಯ ಬೊಳುವಾರು’ ಕೂಡ ಒಂದು ಪಾತ್ರ. ಅಲ್ಲಾಹುವಿನ ಆದೇಶದಂತೆ ದೇವದೂತನೊಬ್ಬ ಕಾದಂಬರಿಯ ನಿರೂಪಕನನ್ನು ಎತ್ತಿಕೊಂಡು ಏಳನೆಯ ಶತನದ ಅರೇಬಿಯಾಕ್ಕೆ ಹೋಗುತ್ತಾನೆ. ಅಲ್ಲಿ ನಿರೂಪಕನನ್ನು ಭೇಟಿಯಾಗುವ ಎಲ್ಲ “ಪ್ರವಾದಿಪತ್ನಿ’ಯರು ಹಾಗೂ “ಪ್ರವಾದಿಪುತ್ರಿ’ಯರು ಹೇಳುವ ಮಾತುಗಳಿಂದಲೇ ಕಾದಂಬರಿಯ ಶಿಲ್ಪವನ್ನು ಕಡೆಯಲಾಗಿದೆ. “ಉಮ್ಮಾ’ ಕಾದಂಬರಿಯ ಸಂಗ್ರಹಿತ ಭಾಗವೊಂದು ಸಾಪ್ತಾಹಿಕ ಸಂಪದದ ಓದುಗರಿಗಾಗಿ…
ಮದುವೆಯಾಗಿ ಆರು ವರ್ಷ ಕಳೆದರೂ, ಗಂಡನ ಮುಖವನ್ನು ಒಮ್ಮೆಯೂ ಕಾಣದ ಜಗತ್ತಿನ ಮೊತ್ತಮೊದಲ ಮದುವಣಗಿತ್ತಿ ನಾನಾಗಿದ್ದಿರಬಹುದು. ಅದಕ್ಕೆ ಕಾರಣ, ನನ್ನಬ್ಬ ಅಬೂಸುಫ್ಯಾನರು. ಮಕ್ಕಾದ ಕುರೈಶ್ ಸರದಾರರೆಲ್ಲರ ನಾಯಕ ಅವರು. ಮದುವೆಯಾಗುತ್ತಲೇ ಅಬ್ಬನ ಕಣ್ಣಿಗೆ ನಾನು ಮುಳ್ಳಾಗಿದ್ದೆ. ಇದಕ್ಕೆ ಕಾರಣ; ಪ್ರವಾದಿಯವರ ಮೂಲಕ ಅಲ್ಲಾಹು ಪ್ರಕಟಿಸಿದ್ದ “ಅಂತಿಮಸತ್ಯ’ದಲ್ಲಿ ಗಂಡನ ಜೊತೆಗೆ ನಾನೂ ವಿಶ್ವಾಸವಿರಿಸಿದ್ದು. ಇದನ್ನರಿತ ಪ್ರವಾದಿಯವರು ನಮ್ಮಿಬ್ಬರನ್ನೂ ಆಫ್ರಿಕಾ ಖಂಡದ ಅಬಿಸೀನಿಯಾಕ್ಕೆ ವಲಸೆ ಹೋಗಲು ಸಲಹೆ ನೀಡಿದ್ದರು. ಪ್ರವಾದಿಯವರ ಮೇಲೆ ಅಭಿಮಾನವಿರಿಸಿದ್ದ ಅಬಿಸೀನಿಯಾದ ಮಹಾರಾಜ ನಜ್ಜಾಶೀಯವರು ನಮ್ಮನ್ನು ಪ್ರೀತಿಯಿಂದಲೇ ಸ್ವಾಗತಿಸಿ, ಹನ್ನೆರಡು ವರ್ಷಗಳಿಂದಲೂ ಕಣ್ಣುರೆಪ್ಪೆಗಳಂತೆ ಕಾಪಾಡಿದ್ದರು.
.
“ನಾಳೆ ಸಂಜೆಯ ಹೊತ್ತಿಗೆ ಅರಮನೆಗೆ ಬಂದು ಕಾಣುವಂತೆ ಮಹಾರಾಜರು ಹೇಳಿಕೆ ಕಳುಹಿಸಿದ್ದಾರೆ’ ಎಂದು ದಾಸಿ ತಿಳಿಸಿದಾಗ ಗಾಬರಿಯೇ ಆಗಿತ್ತು. ಈ ರೀತಿಯಲ್ಲಿ ಎಂದೂ ಮಹಾರಾಜರು ಹೇಳಿಕೆ ಕಳುಹಿಸಿದವರಲ್ಲ. ಗಂಡ ಉಬೈದುಲ್ಲಾ ತೀರಿಕೊಂಡು ಆರೇಳು ತಿಂಗಳಾಗಿದ್ದಿರಬಹುದು. ಆರಂಭದ ದಿನಗಳಲ್ಲಿ ನಾಲ್ಕೈದು ಸಲ ಅರಮನೆಗೆ ಹೋಗಿ ಬಂದಿರುವುದನ್ನು ಮರೆತರೆ, ಮಹಾರಾಜರನ್ನು ವರ್ಷದಲ್ಲಿ ಒಂದು ಬಾರಿ ದೂರದಿಂದ ಕಂಡಿದ್ದರೆ ಅದೇ ಹೆಚ್ಚು. ಅವರನ್ನು ಆಗಾಗ್ಗೆ ಕಂಡು ಸಹಾಯ ಬೇಡುವ ಅಗತ್ಯವೂ ಬೀಳದಂತೆ, ನಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದ ಬಲುದೊಡ್ಡ ಔದಾರ್ಯ ನಜ್ಜಾಶೀ ಮಹಾರಾಜರದ್ದು.
ನಜ್ಜಾಶೀಯವರ ಅರಮನೆಗೆ ಕಾಲಿರಿಸದೆ ಏನಿಲ್ಲವೆಂದರೂ ಹತ್ತಿರ ಹತ್ತಿರ ವರ್ಷವೇ ಆಗಿತ್ತು. ಅದರಲ್ಲಿ, ನಾಲ್ಕು ತಿಂಗಳ ನನ್ನ ಇದ್ದತ್ ಅವಧಿಯೂ ಸೇರಿತ್ತು. ನನ್ನ ಗಂಡನನ್ನು ಕೊಂದದ್ದು ಮನುಷ್ಯರೆಲ್ಲರ ಶತ್ರುವಾಗಿದ್ದ ಕುಡಿತ. ಮದ್ಯ ಕುಡಿಯಬೇಕು ಎಂಬೊಂದೇ ಉದ್ದೇಶದಿಂದ ಕ್ರೈಸ್ತರಾಗಿ ಮತಾಂತರವಾಗಿದ್ದರು ಉಬೈದುಲ್ಲಾ. ಸತ್ಯವಿಶ್ವಾಸಿನಿಯಾಗಿರುವ ನಾನು ಅವರೊಂದಿಗೆ ಸಂಸಾರ ಮುಂದುವರಿಸುವಂತೆಯೂ ಇರಲಿಲ್ಲ. ಎರಡು ವರ್ಷದ ಮಗಳು ಹಬೀಬಾಳನ್ನು ಎತ್ತಿಕೊಂಡು ಗಂಡನಿಂದ ದೂರವಾಗಿದ್ದೆ. ಅದೇ ಕೊರಗಿನಿಂದ ಉಬೈದುಲ್ಲಾ ಕುಡಿದೂ ಕುಡಿದೂ ತೀರಿಕೊಂಡಿದ್ದರು.
ಸಂಜೆಯಾಗುತ್ತಿದ್ದಂತೆಯೇ ಇದ್ದುದರಲ್ಲಿ ಒಳ್ಳೆಯ ಉಡುಪು ಧರಿಸಿಕೊಂಡು ಅರಮನೆಗೆ ಹೋದೆ. ಹೆಬ್ಟಾಗಿಲಲ್ಲೇ ಗುರುತಿಸಿದ ಕಾವಲುಭಟರು, ನನ್ನನ್ನು ನೇರವಾಗಿ ನಜ್ಜಾಶೀ ಮಹಾರಾಜರ ಖಾಸಗಿ ಕೋಣೆಗೆ ಕರೆದುಕೊಂಡು ಹೋದಾಗ ಗಲಿಬಿಲಿಯಾಗಿತ್ತು. ಮಹಾರಾಜರಿಗೆ ವಂದಿಸಿದ ನಾನು, “ನನ್ನನ್ನು ಬರಹೇಳಿದರಂತೆ?’ ಎಂದಿದ್ದೆ.
“ಹೌದು. ಹೇಗಿದ್ದೀಯಾ ರಮ್ಲ?’ ಪ್ರೀತಿಯಿಂದಲೇ ಸ್ವಾಗತಿಸಿದ್ದ ಮಹಾರಾಜರು, “ನಿನ್ನ ಗಂಡ ತೀರಿಹೋದದ್ದು ತಿಳಿದು ಬಹಳ ನೋವಾಯಿತು. ಎಲ್ಲವೂ ದೇವನ ಇಚ್ಛೆ. ನಾವೆಲ್ಲ ಅವನ ಆಟದ ಗೊಂಬೆಗಳು’ ಎಂದ ಮಹಾರಾಜರು ನನ್ನ ಮುಖವನ್ನು ಸ್ವಲ್ಪ ಹೊತ್ತು ಹೊಸದಾಗಿ ಅಳೆಯುವವರಂತೆ ದಿಟ್ಟಿಸಿದ್ದರು. ಮುಜುಗರದಿಂದ ನಾನು ತಲೆ ಬಾಗಿಸಿದ್ದೆ. “ಮುಂದೇನು ಮಾಡಬೇಕೆಂದು ಯೋಚಿಸಿರುವೆ?’ ಇದ್ದಕ್ಕಿದ್ದಂತೆ ಪ್ರಶ್ನಿಸಿದ್ದರು. ಮುಂದೇನು ಮಾಡಬೇಕೆಂಬುದನ್ನು ನಾನು ಯೋಚಿಸಿದ್ದಿರಲೇ ಇಲ್ಲ. ಸರಕಾರದ ವತಿಯಿಂದ ಸಿಗುತ್ತಿದ್ದ ಸಣ್ಣ ಮೊತ್ತವೇ ನನಗೆ ಆಧಾರ. ಆದರೆ, ಅದೊಂದನ್ನೇ ನಂಬಿಕೊಂಡು, ಹೆಚ್ಚು ಕಾಲ ಬದುಕು ಮುಂದುವರಿಸಲಾಗುವುದಿಲ್ಲವೆಂಬ ಅಳುಕೂ ಇತ್ತು. ಮೊಣಕಾಲು ದಾಟಿ ಬೆಳೆದಿರುವ ಮಗಳು, ಕೆಲವೇ ವರ್ಷಗಳಲ್ಲಿ ಕುತ್ತಿಗೆಗೆ ಬರುವವಳಿದ್ದಳು.
“ನನ್ನ ದೇಶದಲ್ಲೇ ಉಳಿಯಬಯಸುತ್ತೀಯಾದರೆ ನಿನ್ನನ್ನು ಪಾಲಿಸುವ ಹೊಣೆಯನ್ನು ನಾವು ವಹಿಸಿಕೊಳ್ಳುವೆವು. ಅಥವಾ ಮಕ್ಕಾಕ್ಕೆ ಮರಳುವುದಾದರೂ ಬೇಕಾದ ಏರ್ಪಾಡು ಮಾಡಲಾಗುವುದು. ನಿನ್ನ ನಿರ್ಧಾರ ಏನು?’ ಅವರ ನೇರ ಪ್ರಶ್ನೆಗೆ ನಾನು ಗಲಿಬಿಲಿಗೊಂಡಿದ್ದೆ. ಮಾತು ಮರೆತವರಂತೆ ಸುಮ್ಮನೆ ನಿಂತುಬಿಟ್ಟೆ.
“ಇನ್ನೊಂದು ಮದುವೆಯಾಗುವ ಯೋಚನೆಯೇನಾದರೂ ಇದೆಯೆ?’ ಇದ್ದಕ್ಕಿದ್ದಂತೆ ಪ್ರಶ್ನಿಸಿದಾಗ ನಾನು ಬೆಚ್ಚಿಬಿದ್ದಿದ್ದೆ ! ನನಗೆ ಇನ್ನೊಂದು ಮದುವೆಯೆ! ಬದುಕಿನಲ್ಲಿ ಎದುರಾದ ಸುಖ-ದುಃಖಗಳನ್ನು, ಅದು ಇದ್ದ ಹಾಗಿನ ಸ್ಥಿತಿಯಲ್ಲಿಯೇ ಎದುರಿಸುತ್ತ ಜೀವನದ ಅರ್ಧಭಾಗವನ್ನು ಕಳೆದುಕೊಂಡದ್ದಾಗಿದೆ. ಇನ್ನೆಷ್ಟು ದಿನಗಳ ಬದುಕನ್ನು ಅಲ್ಲಾಹು ಬರೆದಿರುತ್ತಾನೆ? “ಯಾರಾದರೂ ನಿನ್ನನ್ನು ಮದುವೆಯಾಗಬಯಸಿದರೆ, ಸಮ್ಮತಿಸುವೆಯಾ?’ ಮಹಾರಾಜರು ಮತ್ತೂಂದು ಪ್ರಶ್ನೆ ಎಸೆದಿದ್ದರು.
“ಇಲ್ಲ; ಖಂಡಿತವಾಗಿಯೂ ಇಲ್ಲ’ ಅಗತ್ಯಕ್ಕಿಂತ ಹೆಚ್ಚು ಎತ್ತರದ ಧ್ವನಿಯಲ್ಲೇ ಹೇಳಿದ್ದೆ. ತಕ್ಷಣ ಮಹಾರಾಜರ ಎದುರು ನಿಂತಿರುವೆನೆಂಬುದು ನೆನಪಾಗಿ, ದನಿ ತಗ್ಗಿಸಿ ಹೇಳಿದೆ, “ಮಹಾರಾಜರು ದಯವಿಟ್ಟು ಮನ್ನಿಸಬೇಕು. ಮದುವೆಯ ವಯಸ್ಸನ್ನು ಬಲು ಹಿಂದೆಯೇ ದಾಟಿರುವೆ. ಸಂಸಾರದ ಕಷ್ಟಸುಖಗಳನ್ನು ಸಾಕಷ್ಟು ಅನುಭವಿಸಿರುವೆ. ಇನ್ನೊಂದು ಮದುವೆಯ ಬಗ್ಗೆ ನಾನು ಯೋಚಿಸಲಾರೆ’.
“ತಮ್ಮಲ್ಲಿ ಇನ್ನೊಂದು ಮಾತನ್ನು ಅರಿಕೆ ಮಾಡಿಕೊಳ್ಳಬಯಸುವೆ. ತೀರಿಹೋದ ನನ್ನ ಗಂಡ ಮತಾಂತರವಾಗಿದ್ದಿರಬಹುದು. ಕುಡಿತಕ್ಕೆ ದಾಸನಾಗಿದ್ದಿರಬಹುದು. ಅದರೂ ಹೇಳುವೆ. ಅವರು ನನ್ನನ್ನು ಮನಸಾರೆ ಪ್ರೀತಿಸುತ್ತಿದ್ದರು. ಬೇರೆ ಹೆಣ್ಣುಗಳತ್ತ ಒಮ್ಮೆಯೂ ಕಣ್ಣೆತ್ತಿ ನೋಡಿದವರಲ್ಲ. ಹೆಂಡತಿಯೊಬ್ಬಳು ಹೆಮ್ಮೆಪಡುವಷ್ಟು ಒಳ್ಳೆಯ ಗಂಡನಾಗಿದ್ದರು ಉಬೈದುಲ್ಲಾ. ತೀರಿಹೋಗಿರುವ ಅವರಷ್ಟು ಒಳ್ಳೆಯ ಗಂಡಸು ಇನ್ನೊಬ್ಬನಿರಲಾರ ಎಂಬುದು ನನ್ನ ಗಟ್ಟಿ ನಂಬಿಕೆ. ಅವರ ನೆನಪಿನಲ್ಲೇ ಉಳಿದ ದಿನಗಳನ್ನು ಬದುಕುವ ನಿರ್ಧಾರ ಮಾಡಿರುವೆ.’ ನನ್ನ ನೇರ ಮಾತುಗಳಿಂದ ಮಹಾರಾಜರೇನೂ ಸಿಟ್ಟಿಗೆದ್ದಿರಲಿಲ್ಲ. ನನ್ನನ್ನು ಅಭಿನಂದಿಸುವಂತೆಯೇ ಕಣ್ಣರಳಿಸಿ ನೋಡಿದ್ದರು.
“ನಿನ್ನಂತಹ ಪತ್ನಿಯನ್ನು ಪಡೆದಿದ್ದ ಉಬೈದುಲ್ಲಾ ನಿಜವಾಗಿಯೂ ಅದೃಷ್ಟವಂತನು. ಅಷ್ಟೇ ಬೇಗ ನಿನ್ನನ್ನು ಕಳೆದುಕೊಂಡ ಅವನು ದುರದೃಷ್ಟವಂತನೂ ಹೌದು’ ಎಂದವರು, ಮಾತು ನಿಲ್ಲಿಸಿ ನನ್ನ ಕಣ್ಣುಗಳಲ್ಲಿ ಕಣ್ಣು ತೂರಿಸಿ, ಉಬೈದುಲ್ಲಾನಿಗಿಂತಲೂ ಒಳ್ಳೆಯ ಗಂಡಸೊಬ್ಬ ನಿನ್ನ ಜೊತೆಯಾಗಲು ಬಯಸಿದರೆ ಸಮ್ಮತಿಸುವೆಯಾ?’ “ಅಂ…!’ ನಾಡಿನ ದೊರೆಯ ಪ್ರಶ್ನೆಯಲ್ಲಿ ದುರುದ್ದೇಶವೇನಾದರೂ ಅವಿತಿರಬಹುದೆ? ನೇರವಾಗಿ ಅವರನ್ನು ದಿಟ್ಟಿಸಲೂ ಅಸಹ್ಯವೆನ್ನಿಸಿತ್ತು.
ನೀನು ನನ್ನ ಮಾತಿಗೆ ಉತ್ತರಿಸಲಿಲ್ಲ. “ಅವರಿಗೆ ಸಿಟ್ಟು ಬಂದಿರಬಹುದೆ?’ “ಇಲ್ಲ…, ಖಂಡಿತವಾಗಿಯೂ ಇಲ್ಲ. ಉಬೈದುಲ್ಲಾರಿಗಿಂತ ಒಳ್ಳೆಯ ಗಂಡನನ್ನು, ಈ ಭೂಮಿಯ ಮೇಲೆ ಅಲ್ಲಾಹು ಸೃಷ್ಟಿಸಿರುತ್ತಾನೆಂಬುದನ್ನು ನಂಬಲಾರೆ…’ ಸ್ವಲ್ಪ ಒರಟಾಗಿಯೇ ಹೇಳಿದ್ದೆ. “ನಿನ್ನ ನಂಬಿಕೆ ಸುಳ್ಳು ರಮ್ಲ …’ ನಜ್ಜಾಶೀಯವರು ಜೋರಾಗಿ ನಕ್ಕಿದ್ದರು. ನಾನು ನಗಲಿಲ್ಲ. ನನ್ನ ನಂಬಿಕೆಗಳ ಬಗ್ಗೆಯೇ ನಂಬಿಕೆ ಕಳೆದುಹೋಗಿತ್ತು. ಇದುವರೆಗೂ ಮಹಾರಾಜರನ್ನು ನನ್ನಬ್ಬ ಅಬೂಸುಫ್ಯಾನರಂತೆಯೇ ಗೌರವಿಸುತ್ತ ಬರುತ್ತಿದ್ದವಳು ನಾನು. ನನ್ನ ಬಗ್ಗೆ ಇಷ್ಟೊಂದು ಕೀಳಾಗಿ ಅವರು ಯೋಚಿಸಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಮಹಾರಾಜರ ಮುಖ ನೋಡಲೂ ಇಷ್ಟವಾಗಲಿಲ್ಲ. “ನಾನು ಮಕ್ಕಾಕ್ಕೆ ಮರಳಲು ನಿರ್ಧರಿಸಿರುವೆ’ ಹೆಚ್ಚು ಯೋಚಿಸದೆಯೇ ಹೇಳಿದ್ದೆ.
ಆ ಕ್ಷಣದಲ್ಲಿ ನನಗೆ ಹೊಳೆದ ನಿರ್ಧಾರ ಅದು. ಅಲ್ಲಿ ಹೋಗಿ ಏನು ಮಾಡುವುದೆಂಬುದು ಗೊತ್ತಿರಲಿಲ್ಲ. ನನ್ನಬ್ಬ ಅಬೂಸುಫ್ಯಾನರ ಆಶ್ರಯಕ್ಕೆ ಮರಳುವುದಂತೂ ಆಗದ ಮಾತು. ಆದರೆ, ಈ ದೊರೆಯ ಕಣ್ಣೆದುರು ಮರ್ಯಾದೆಯಿಂದ ಬದುಕುವುದು, ಇನ್ನು ಮುಂದೆ ಸಾಧ್ಯವಾಗದೆಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೆ.
“ನೀನು ಮರಳಿ ಮಕ್ಕಾಕ್ಕೆ ಹೋಗುವುದನ್ನು ನಾನೂ ಬಯಸುತ್ತಿರುವೆ’ ಮಹಾರಾಜರು ಇನ್ನೂ ಜೋರಾಗಿ ನಕ್ಕಿದ್ದರು. ನನಗವರ ಮಾತೇ ಅರ್ಥವಾಗಲಿಲ್ಲ. ಒಮ್ಮೆ, ಬೇರೊಬ್ಬ ಗಂಡಿಗೆ ಜೊತೆಯಾಗುವೆಯಾ ಎಂದು ಪಶ್ನಿಸುತ್ತಾರೆ. ಮತ್ತೂಮ್ಮೆ ಮಕ್ಕಾಕ್ಕೆ ಮರಳಿ ಹೋಗುವೆಯಾ ಎನ್ನುತ್ತಿ¨ªಾರೆ. ಅವರ ಉದ್ದೇಶವಾದರೂ ಏನಿದ್ದಿರಬಹುದು? ಅವರು ನನ್ನನ್ನು ಪರೀಕ್ಷಿಸುವವರಂತೆ ದಿಟ್ಟಿಸಿ ನೋಡುತ್ತಿದ್ದರು. ಅವರ ತುಟಿಗಳ ಸಂದಿಯಲ್ಲಿ ಇಣುಕುತ್ತಿದ್ದ ತೆಳುವಾದ ನಗು ನನ್ನನ್ನು ಅಣಕಿಸುತ್ತಿತ್ತು.
“ತೀರಿಹೋಗಿರುವ ನಿನ್ನ ಗಂಡ ಉಬೈದುಲ್ಲಾ ಮತ್ತು ಪ್ರವಾದಿಯವರನ್ನು ನಿನ್ನೆದುರು ತಂದು ನಿಲ್ಲಿಸಿದರೆ, ಅವರಿಬ್ಬರಲ್ಲಿ ಯಾರನ್ನು ಹೆಚ್ಚು ಒಳ್ಳೆಯವರೆನ್ನುವೆ?’ ಒಗಟಿನಂತೆ ಪ್ರಶ್ನಿಸಿದ್ದರು.
“ಏನು ನಿಮ್ಮ ಮಾತಿಗೆ ಅರ್ಥ? ಯಾರಿಗೆ ಯಾರನ್ನು ಹೋಲಿಸುತ್ತಿದ್ದೀರಾ ತಾವು?’ ಮೊದಲಬಾರಿಗೆ ತಲೆಯೆತ್ತಿ ಅವರನ್ನು ನೇರವಾಗಿ ದಿಟ್ಟಿಸುತ್ತಾ ಪ್ರಶ್ನಿಸಿ¨ªೆ. ಮಹಾರಾಜನಾದರೇನಾಯಿತು? ಒಂಟಿ ಹೆಣ್ಣೊಬ್ಬಳನ್ನು ಈ ಬಗೆಯಲ್ಲಿ ಹಿಂಸಿಸುವುದೆ? ಸಿಟ್ಟಿನಿಂದ ಕುದಿಯತೊಡಗಿದ್ದೆ.
“ನಿನ್ನ ಅಸಹಾಯಕತೆಯನ್ನು ಅರಿತ ಪ್ರವಾದಿಯವರು ನಿನ್ನನ್ನು ಮದುವೆಯಾಗಬಯಸಿ ಮದೀನಾದಿಂದ ಪ್ರಸ್ತಾಪ ಕಳುಹಿಸಿದ್ದಾರೆ’. “ಏನು ! ಪ್ರವಾದಿಯವರೂ… ನನ್ನನ್ನೂ…? ನಾನು ಪ್ರವಾದಿಪತ್ನಿಯವರಲ್ಲೊಬ್ಬಳಾಗಲಿರುವೆನೆ?’ ಕನಸು ಕಾಣುತ್ತಿದ್ದೇನೆಯೆ?
ಬೊಳುವಾರು ಮಹಮದ್ ಕುಂಞಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ