ಸಂಚಿಹುಳು ಮತ್ತು ತತ್ತ್ವಜ್ಞಾನ
Team Udayavani, Sep 23, 2018, 6:00 AM IST
ಪ್ರಕೃತಿಯಲ್ಲಿ ಅದೆಷ್ಟೋ ಸಣ್ಣ ಸಣ್ಣ ಸಂಗತಿಗಳಿವೆ. ಪುಟ್ಟ ಜೀವಿಗಳಲ್ಲಿ ಬದುಕಿನ ದೊಡ್ಡ ಫಿಲಾಸಫಿ ಇರುತ್ತವೆ. ಮನುಷ್ಯರಾದ ನಾವು ಅತ್ತಿತ್ತ ನಡೆದಾಡುತ್ತಿರುತ್ತೇವೆ. ನಮ್ಮ ಜೊತೆಗೆ ದೇಹ ಮಾತ್ರ ಸಂಚರಿಸುವುದಿಲ್ಲ , ಅನೇಕ “ಕರ್ಮ’ಗಳು ಕೂಡ ನಮ್ಮೊಂದಿಗೇ ಇರುತ್ತವೆ. “ಕರ್ಮ ಬೆಂಬಿಡದು’ ಎನ್ನುತ್ತಾರಲ್ಲ, ಹಾಗೆ. ಕೀಟಜೀವಿಗಳ ಜೊತೆಗೂ ಕರ್ಮ ಇರುತ್ತದೆಯೆ? ಇರಬಹುದು. ಗೀತೋಪದೇಶದ ಪ್ರಕಾರ ಇರಬಹುದು. ಲೌಕಿಕ ದೃಷ್ಟಿಯಿಂದ ನೋಡೋಣ: ನಾವು ಮನೆಯಿಂದ ಹೊರಗಿದ್ದರೂ ನಾವು ಮನೆಯನ್ನು ಹೊತ್ತುಕೊಂಡಿರುತ್ತೇವೆ, ಅಂದರೆ ಮನೆ ನಮ್ಮ ಮನಸ್ಸಿನಲ್ಲಿರುತ್ತದೆ. ಎಲ್ಲಿ ಹೋದರೂ ಮರಳಿ ಮನೆಗೆ ಬಂದೇ ಬರುತ್ತೇವೆ. ಆ ಮನೆ ನಮ್ಮ ಶಾಶ್ವತ ಆಸ್ತಿ ಎಂದು ಭಾವಿಸುತ್ತೇವೆ. ಒಂದು ವೇಳೆ ಮನೆಯನ್ನೇ ನಮ್ಮ ಜೊತೆಗೆ ಒಯ್ಯುವಂತಾದರೆ… ಡೇರೆಗಳನ್ನು ಜೊತೆಗೆ ಒಯ್ಯುವ ಹಾಗೆ !
ಹೀಗೆ ಹೊಳೆದದ್ದು ಒಂದು ಪುಟ್ಟ ಹುಳುವಿನ ದೆಸೆಯಿಂದಾಗಿ. ಹುಳುವೆಂದರೆ ಸಾಮಾನ್ಯ ಜೀವಿಯೇ? ಅದರ ಜೊತೆಗೊಂದು ಕಾವ್ಯ ಇದೆ, ಕತೆ ಇದೆ, ತತ್ತಜ್ಞಾನ ಇದೆ. ನೋಡುವ ಕಣ್ಣು ಬೇಕು, ಭಾವಿಸುವ ಮನಸ್ಸು ಬೇಕು ಅಷ್ಟೆ. ಈ ಕೀಟಲೋಕವೇ ಅದ್ಭುತ. ಕಣ್ಣಿಗೆ ಮ್ಯಾಕ್ರೊ ಲೆನ್ಸ್ ರೀತಿಯಲ್ಲಿ ಚಿಕ್ಕವೆಲ್ಲ ದೊಡ್ಡವಾಗಿ ಕಾಣುವ ಶಕ್ತಿಯಿದ್ದರೆ, ಇನ್ನೂ ಎಂತೆಂಥ ಅದ್ಭುತಗಳು ಕಣ್ಣಿಗೆ ಕಾಣಿಸುತ್ತಿದ್ದವೋ ಏನೋ ? ಆದರೆ, ಕೆಮರಾ ತಂತ್ರಜ್ಞಾನ ಅಂತಹ ಅವಕಾಶವನ್ನೂ ಒದಗಿಸಿದೆ ಆ ಮಾತು ಬೇರೆ. ನಾನು ಹೇಳುತ್ತಿರುವುದು ಪುಟ್ಟ ಕೀಟಗಳ ಲೋಕದಲ್ಲಿ ಎಂಥ ಜೀವನ ತಣ್ತೀ ಅಡಗಿದೆ ಎಂಬ ಬಗ್ಗೆ.
ಇಷ್ಟೆಲ್ಲ ಪೀಠಿಕೆ ಕೊಡಲು ಕಾರಣವಿದೆ. ನಮ್ಮ ಮನೆಯ ಸುತ್ತಲೂ ಅಲ್ಪಜಾಗದಲ್ಲಿಯೇ ನಮ್ಮ ಮನೆಯಾಕೆ ಕೈತೋಟವನ್ನು ಮಾಡಿ¨ªಾಳೆ. ಕೈತೋಟ ಪುಟ್ಟದಾದರೂ ನನ್ನ ಕುತೂಹಲ, ಆಸಕ್ತಿಗಳಿಗೆ ಅದು ದೊಡ್ಡ ತೋಟವೇ. ಒಮ್ಮೊಮ್ಮೆ ನಾನೂ ಎರೆಹುಳುವಾಗಿ, ಪುಟ್ಟ ಚಿಟ್ಟೆಯಾಗಿ, ಪ್ಯೂಪಾ ಆಗಿ ಹೊರಜಗತ್ತನ್ನು ನೋಡಿದಾಗ ಹೇಗೆ ಕಾಣಬಹುದು ಎಂದು ಕಲ್ಪಿಸಿಕೊಳ್ಳುತ್ತೇನೆ, ಮರುಕ್ಷಣವೇ, ಹಾಗಾದಾಗ ಶತ್ರುಗಳು ನನ್ನನ್ನು ಬೇಟೆಯಾಡಿದರೆ- ಎಂಬ ವಿಚಾರ ಬಂದು ಬೆಚ್ಚಿಬಿದ್ದು, ಮತ್ತೆ ಮರಳಿ ವಾಸ್ತವ ಲೋಕಕ್ಕೆ ಕಾಲಿಡುತ್ತೇನೆ. ಹಾಗೆಂದು, ಮನುಷ್ಯರಿಗೆ ಶತ್ರುಗಳಿಲ್ಲ ಎಂದು ಅರ್ಥವೆ? ಇರಲಿ.
ಹೀಗೇ ಒಮ್ಮೆ ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಕಡ್ಡಿಗಳ ಕಂತೆಯೊಂದು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಉದ್ದನೆಯ ಕಡ್ಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದಂತಿರುವ ಇದೇಕೆ ಹೀಗೆ ಮೆತ್ತಿಕೊಂಡಿವೆ ಎಂದು ಕುತೂಹಲದಿಂದ ಅದನ್ನು ಮನೆಯ ಕಂಪೌಂಡ್ ಗೋಡೆಯ ಮೇಲಿಟ್ಟು ನೋಡಿದೆ. ಅದೊಂದು ಪುಟ್ಟ ಗೂಡು!
ನೀರಿನ ಪೈಪನ್ನಲ್ಲೆ ಬಿಸಾಡಿ ಅದನ್ನು ಸೂಕ್ಷ್ಮವಾಗಿ ನೋಡಿದೆ. ಪುಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು, ಹಾಗೇ ಮೆಲ್ಲನೆ ಗೂಡು ಮುಂದೆ ಸರಿಯತೊಡಗಿದಾಗ ಅಚ್ಚರಿಯೆನಿಸಿತು. ನಿಧಾನವಾಗಿ ಅದನ್ನು ಮನೆಯೊಳಗೆ ತಂದು ಪ್ಲಾಸ್ಟಿಕ್ ಹೂಗಳ ಮೇಲೆ ಇರಿಸಿದೆ. ತನ್ನ ಮೈಮೇಲೆ ಉದ್ದನೆಯ ಕಡ್ಡಿಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೇತವೇ ತೆವಳತೊಡಗಿತು. ಬೇಗನೇ ಕೆಮರಾ ತಂದು ಕ್ಲಿಕ್ಕಿಸತೊಡಗಿದೆ. ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಹೂವಿನ ಮೇಲಿಂದ ಜಾರಿತು. ಹೂವಿನ ಅಂಚಿಗೆ ಅಂಟಿಕೊಂಡು ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಹೂವಿನ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. ಕೆಮರಾದ ಕಣ್ಣು ಮಿನುಗುತ್ತಲೇ ಇತ್ತು. ಹರಸಾಹಸ ಮಾಡಿದ ಪುಟ್ಟಹುಳು ತನ್ನೆಲ್ಲ ಬಲವನ್ನು ಹಾಕಿ ತನ್ನೊಂದಿಗೆ ಪುಟ್ಟ ಗೂಡನ್ನೂ ಮೇಲೆಳೆದುಕೊಂಡಿತು. ಅಬ್ಟಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತೊಡಗಿದಾಗ, “ಇದು ಏನು, ಯಾಕೆ ಹೀಗೆ?’ ಎಂ¸ ಪ್ರಶ್ನೆ ತಲೆತಿನ್ನತೊಡಗಿತು.
ಈ ಕುರಿತು ಮಾಹಿತಿ ಕಲೆ ಹಾಕಿದಾಗ, ಇದನ್ನು ಬ್ಯಾಗ್ ವರ್ಮ್ (ಸಂಚಿ ಹುಳು ಎಂದು ನಾನಿಟ್ಟ ಹೆಸರು) ಎಂದು ಕೀಟಲೋಕದ ತಜ್ಞರು ಗುರುತಿಸುತ್ತಾರೆ. ಪ್ಸೆ„ಕಿಡಾ ಗುಂಪಿನ ಇದನ್ನು ಚಿಟ್ಟೆ,- ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾರ್ವಾ ಹಂತದಲ್ಲಿದ್ದಾಗ ತಮ್ಮ ಮೈಯ ಸುತ್ತ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಭೇದದ ಹುಳುಗಳು ತಮ್ಮ ಪುಟ್ಟ ಚೀಲವನ್ನು ನೇಯ್ದುಕೊಳ್ಳುತ್ತವೆ. ಇದಕ್ಕೆ ಇಂಥದೇ ಸಾಮಗ್ರಿ ಬೇಕೆಂದಿಲ್ಲ. ಕಡ್ಡಿ, ಮಣ್ಣು, ಉಸುಕು, ಒಣಗಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು. ತಮ್ಮ ರೇಷ್ಮೆಯಂತಹ ನಯವಾದ ಜೊಲ್ಲಿನಿಂದ ಗೂಡನ್ನು ಹೆಣೆದುಕೊಂಡು ಜೀವನಪೂರ್ತಿ ಅದರಲ್ಲೇ ಜೀವಿಸುತ್ತವೆ. ಇವುಗಳ ಗೂಡುಗಳು 1 ಸೆಂ.ಮೀ.ನಿಂದ 15 ಸೆಂ.ಮೀ ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದಂತೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ. ಇವುಗಳ ಆಹಾರ ಗಿಡದ ಎಲೆಗಳೇ. ಹೀಗಾಗಿ ಗಿಡದ ಕಾಂಡಕ್ಕೋ, ಎಲೆಗೋ ಜೋತುಬಿದ್ದಿರುತ್ತವೆ. ಅಥವಾ ಗೋಡೆ, ಬಂಡೆಗಳಿಗೂ ಜೋತುಬಿದ್ದಿರುವುದನ್ನು ಕಾಣಬಹುದು. ಥಟ್ಟನೆ ನೋಡಿದಾಗ ಏನೋ ಅಸಂಬದ್ಧ ಎನಿಸಬಹುದಾದರೂ, ಪಕ್ಷಿಗಳಿಂದ ರಕ್ಷಣೆ ಪಡೆಯಲೂ ಇದು ಸುಲಭ ಉಪಾಯವಾಗಿದೆ. ಹೆಣ್ಣು ಹುಳು ಅದೇ ಚೀಲದಲ್ಲಿಯೇ ಒಂದು ಸಲಕ್ಕೆ 500ರಿಂದ 1,600ರವರೆಗೂ ಮೊಟ್ಟೆಗಳನ್ನಿಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನೊಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟರೆೆ, ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡದೆಯೂ ಮೊಟ್ಟೆಗಳನ್ನಿಡಬಹುದಂತೆ! ಬ್ಯಾಗ್ ವಮ್ಸ್ì ಅಥವಾ ಕನ್ನಡದ ಸಂಚಿಹುಳುಗಳಲ್ಲಿ ಇಂಥದೇ ರೀತಿಯವಾಗಿರಬೇಕೆಂದಿಲ್ಲ, ಒಣಗಿದ ಎಲೆಗಳಿಂದಲೂ ಗೂಡನ್ನು ನಿರ್ಮಿಸಿಕೊಳ್ಳಬಹುದು. ಏನೆಂದರೂ ಹುಳುಗಳ ಲೋಕವೇ ಅದ್ಭುತ. ಅಲ್ಲವೆ?
ನಾನೂ ಒಂದು ಸಂಚಿಹುಳುವಾಗಿ ನನ್ನ ಮನೆಯ ಭಾರವನ್ನೆಲ್ಲ ಹೊತ್ತು ಸಾಗುವ ಕಲ್ಪನೆ ಮಾಡಿಕೊಂಡಾಗ “ಅಬ್ಟಾ ‘ಎನ್ನಿಸಿತು. ಮನುಷ್ಯರು ಮನೆ ಕಟ್ಟಲು ಸಾಲದ ಭಾರವನ್ನು ಹೊತ್ತರೆ, ಈ ಪುಟ್ಟ ಹುಳುಗಳು ತಾವು ಕಟ್ಟಿದ ಮನೆಯನ್ನು ತಾವೇ ಹೊತ್ತು ಓಡಾಡುವುದು ವಿಚಿತ್ರವಾದರೂ ಸತ್ಯ !
ಹುಳುಗಳಿಗೂ ಕರ್ಮಬಾಧೆ ಬಿಡಲಿಲ್ಲ !
ಸಿದ್ಧರಾಮ ಹಿರೇಮಠ ಕೂಡ್ಲಿಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ