ಕಾಯೆನೋ ಹರಿ ತಾಳೆನೋ…
Team Udayavani, Oct 21, 2018, 6:00 AM IST
ಕಾಯುವ ಕೆಲಸ ಬಹಳ ಬೋರಿಂಗ್. ಆದರೆ, ನಮ್ಮ ಜೀವನದಲ್ಲಿ ಪ್ರತಿಕ್ಷಣವೂ ಒಂದಲ್ಲ ಒಂದು ಕಾಯುವ ಸನ್ನಿವೇಶಗಳು ಎದುರಾಗುವುದರಿಂದ ಕಾಯುವುದು ಅನಿವಾರ್ಯವಾಗಿದೆ.
ನಮ್ಮ ಬೆಳಗು ಆರಂಭವಾಗುವುದೇ ಕಾಯುವುದರಿಂದ. “ಪೇಪರ್ ಬಂತಾ? ಹಾಲು ಬಂತಾ?’ ಎಂದು ಕಾಯುತ್ತಲಿರುತ್ತೇವೆ. ಬಿಸಿಬಿಸಿ ಕಾಫಿ ಕುಡಿಯುತ್ತ, ಪೇಪರ್ ಓದುವುದು ಒಂದು ರೀತಿಯ ಖುಷಿಕೊಡುವುದರಿಂದ ಈ ಕಾಯುವಿಕೆ, ಬೇಸರ ತರದು. ನಂತರ ನಮ್ಮ ಗಮನ ಕೆಲಸದವಳ ಕಡೆ ಹರಿಯುತ್ತದೆ. ಪ್ರತಿದಿನ ಎಂಟುಗಂಟೆಗೆಲ್ಲಾ ಬರುವ ಕೆಲಸದವಳು, ಅಂದು ಬರುವುದು ತಡವಾದರೆ, ಚಡಪಡಿಕೆ ಆರಂಭ. ಮನೆಕೆಲಸ ನಾವೇ ಮಾಡಿಕೊಳ್ಳಬೇಕಲ್ಲಾ ಎನ್ನುವ ಆತಂಕ.
ಹಿಂದೆಲ್ಲಾ ಬೆಳಗಾಗುತ್ತಿದ್ದಂತೆ ನಲ್ಲಿ ತಿರುಗಿಸಿ ನೀರು ಬಂದಿದೆಯೋ ಇಲ್ಲವೋ ಎನ್ನುವುದನ್ನು ನೋಡುವುದೇ ಒಂದು ಕೆಲಸವಾಗುತ್ತಿತ್ತು. ಆದರೆ, ಈಗ ಬಹಳಷ್ಟು ಮನೆಗಳಲ್ಲಿ ಸಂಪು ಅಥವಾ ಬೋರ್ವೆಲ್ ಇರುವುದರಿಂದ ನೀರಿಗಾಗಿ ಕಾಯುವುದು ತಪ್ಪಿದೆ.
ಇತ್ತೀಚಿನ ದಿನಗಳಲ್ಲಿ ಪವರ್ಕಟ್ ಸಾಮಾನ್ಯ. ನೀರು ಕಾಯಿಸುವುದರಿಂದ ಹಿಡಿದು, ಅಡಿಗೆ ಮಾಡಲು, ಕುಟ್ಟಲು, ಉರುವಲು, ಹಿಟ್ಟು ಕಲಿಸಲು ಪವರ್ ಬೇಕೇಬೇಕು. ಶಾಲಾಕಾಲೇಜಿಗೆ ಹೋಗುವ ಮಕ್ಕಳು ಕೆಲಸಕ್ಕೆ ಹೋಗುವವರು ಮನೆಯಲ್ಲಿದ್ದರೆ ಅವರ ಪಾಡು ಬೇಡ.
ಹೊರಗೆ ಹೋಗುವವರು ಬಸ್ಗೆ, ರೈಲಿಗೆ, ಆಟೋಗೆ ಕಾಯುವುದು ಸರ್ವೇಸಾಮಾನ್ಯ ಆದರೆ, ಸ್ವಂತ ವಾಹನವಿದ್ದರೂ ಟ್ರಾಫಿಕ್ ಜಾಮ್ನಿಂದ ಕಂಗೆಟ್ಟು, ಯಾವಾಗ ನಾವು ಮುಂದೆ ಹೋಗುತ್ತೇವೋ ಎಷ್ಟು ಹೊತ್ತಿಗೆ ನಮ್ಮ ಸ್ಥಳ ತಲುಪುತ್ತೇವೋ ಎಂದು ಕುಳಿತಲ್ಲೇ ಒದ್ದಾಡುವವರನ್ನು ಕಂಡಾಗ ‘ಅಯ್ಯೋ ಪಾಪ’ ಎನ್ನಿಸದಿರದು.
ಮನೆಯಲ್ಲಿ ಜನ ಹೆಚ್ಚಾದಾಗ ಸ್ನಾನಕ್ಕೆ ಬಚ್ಚಲ ಮನೆ ಯಾವಾಗ ಖಾಲಿಯಾಗುತ್ತದೋ, ಡ್ರೆಸ್ಸಿಂಗ್ ಟೇಬಲ್ ಮುಂದೆ ಯಾವಾಗ ಜಾಗ ಸಿಗುತ್ತದೋ ಎಂದು ಕಾಯುವ ಅನುಭವ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಆಗಿರುತ್ತದೆ. ಹೊರಗೆ ಹೋದ ಮಕ್ಕಳಿಗಾಗಿ, ಗಂಡನಿಗಾಗಿ ಗೃಹಿಣಿ ಕಾಯುವುದು, ಬೆಳೆದ ಹೆಣ್ಣು ಮಗಳು ರಾತ್ರಿಯಾದರೂ ಮನೆಗೆ ಬಾರದಿದ್ದರೆ ಅವಳ ತಂದೆ-ತಾಯಿ ಆತಂಕದಿಂದ ಕಾಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅತಿಥಿಗಳಿಗೆ ಕಾಯುವ ಕೆಲಸವಿದೆಯಲ್ಲ, ಅದಕ್ಕಿಂತ ಬೇಸರದ ಸಂಗತಿ ಮತ್ತೂಂದಿಲ್ಲ.
ಒಮ್ಮೆ ನನ್ನ ಗೆಳತಿ ಬೆಂಗಳೂರಿನಿಂದ ಫೋನ್ ಮಾಡಿದಳು.
“”ನಾಳೆ ಭಾನುವಾರ ನಾನು ನನ್ನ ಮಕ್ಕಳು ಮೈಸೂರಿಗೆ ಬರಿ¤ದ್ದೇವೆ. ನಿಮ್ಮನೆಗೇ ಮೊದಲು ಬರಿ¤àವಿ”
“”ಎಷ್ಟು ಹೊತ್ತಿಗೆ ಬರಿ¤àರಾ?” ನಾನು ವಿಚಾರಿಸಿದೆ.
“”ಬೆಳಗ್ಗೆ ಆರು ಗಂಟೆಗೆ ಕಾರಲ್ಲಿ ಹೊರಡ್ತೀವಿ. 9-30ಗೆ ನಿಮ್ಮನೇಲಿ ಇರಿ¤àವಿ. ತಿಂಡಿಗೇ ಬರಿ¤àವಿ”
“”ಬೇಗ ಹೊರಡ್ತೀರ ತಾನೆ?”
“”ಹುಂ ಕಣೆ. ಬೇಗ ಹೊರಡ್ತೀವಿ” ಎಂದಳು.
ನಾನು ಭಾನುವಾರ ಬೆಳಗ್ಗೆ ಸಂಭ್ರಮದಿಂದ ಐದು ಜನರಿಗೆ, ನಮ್ಮ ಮನೆಯಲ್ಲಿರುವ ಮೂವರಿಗೆ ಖಾರಾಭಾತ್-ಕೇಸರಿಭಾತ್ ಮಾಡಿದೆ. ಹತ್ತು ಗಂಟೆಯಾಯಿತು, ಹನ್ನೊಂದು ಗಂಟೆಯಾಯಿತು. ನನ್ನ ಗೆಳತಿ ಪತ್ತೆಯೇ ಇಲ್ಲ. ಅವರೆಲ್ಲ ಬಂದಾಗ ಒಂದು ಗಂಟೆ. ಊಟದ ಹೊತ್ತಿನಲ್ಲಿ ತಿಂಡಿಕೊಟ್ಟಿದ್ದಾಯಿತು.
ಮತ್ತೂಂದು ರೀತಿಯ ಅನುಭವ ನಿಮಗೂ ಆಗಿರಬಹುದು. ಕೆಲವರು ಲಗೇಜ್ ಸಮೇತ ಮನೆಗೆ ಬಂದು ಹತ್ತು ನಿಮಿಷ ಮಾತನಾಡಿ, “ಲಗೇಜ್ ಇಲ್ಲೇ ಇಟ್ಟಿರಿ¤àನಿ. ಒಂದು ಗಂಟೆಯ ಒಳಗೆ ಬಂದು ತೆಗೆದುಕೊಂಡು ಹೋಗ್ತಿàವಿ’ ಅಂತಾರೆ. ಅವರು ಬರುವುದೇ ಇಲ್ಲ. ನೀವೇನಾದರೂ ಆ ದಿನ ಹೊರಗೆ ಹೋಗುವ ಪ್ರೋಗ್ರಾಮ್ ಹಾಕಿಕೊಂಡಿದ್ದರೆ ಆ ದೇವರೇ ಗತಿ.
ಹಬ್ಬಗಳಲ್ಲಿ ಪುರೋಹಿತರಿಗಾಗಿ ಕಾಯುವುದು, ಸಭೆ-ಸಮಾರಂಭಗಳಲ್ಲಿ ಅತಿಥಿಗಳಿಗೆ ಕಾಯುವುದು ಸಹಜ. ಆದರೆ, ರಾಜಕಾರಣಿಗಳಿಗೆ, ಸಿನಿಮಾ ನಟರಿಗೆ ಕಾಯುವುದು ಕೊಂಚ ಕಷ್ಟದ ವಿಚಾರ. ಹಿಂದೆ ರಾಜಕಾರಣಿಗಳು ಬರುತ್ತಾರೆಂದರೆ – ಎಂಎಲ್ಎ, ಎಂಪಿ, ಕೆಲವೊಮ್ಮೆ ಸಚಿವರು ಬರುತ್ತಾರೆಂದರೆ (ಈಗಲೂ ಕೆಲವು ಸ್ಥಳಗಳಲ್ಲಿ ಈ ಅಭ್ಯಾಸ ಜಾರಿಯಲ್ಲಿದೆ) ಅವರನ್ನು ಎದುರುಗೊಳ್ಳಲು ಶಾಲಾ ಮಕ್ಕಳನ್ನು ಕರೆತರಲಾಗುತ್ತಿತ್ತು. ಪಾಪ, ಆ ಮಕ್ಕಳು ಶಾಲೆಯಲ್ಲಿ ಬೆಳಗ್ಗೆ ಎಂಟುಗಂಟೆಗೆಲ್ಲ ಇರಬೇಕಾಗುತ್ತಿತ್ತು. ನಂತರ ಅತಿಥಿಗಳು ಬರುವ ಇಕ್ಕೆಲಗಳಲ್ಲಿ ಅವರನ್ನು ನಿಲ್ಲಿಸಲಾಗುತ್ತಿತ್ತು. ಆ ಮಕ್ಕಳು ಬಿಸಿಲಿನಲ್ಲಿ ಬಸವಳಿದು, ಬೆಂಡಾಗಿ, ಹಸಿದುಕೊಂಡು ಅತಿಥಿಗಳಿಗಾಗಿ ಕಾಯುವುದನ್ನು ನೋಡಿದಾಗ ಎಂಥಹವರ ಕರುಳಾದರೂ ಚುರುಕೆನ್ನದೆ ಇರದು.
ಸಿನಿಮಾ ನಟರನ್ನು ನೋಡಲು ಜನರು ಖುಷಿಯಿಂದ ಬರುವುದರಿಂದ ಅವರಿಗಾಗಿ ಕಾಯುವುದು ಜನರಿಗೆ ಪ್ರಿಯವಾದ ಕೆಲಸವೇ! ಅಪ್ಪಿ-ತಪ್ಪಿ ನೀವು ಪಾಪ ಮಾಡಿದ್ದು, ಚಲನಚಿತ್ರನಟರು ಬರುವ ಸಭೆಗೆ ಮುಖ್ಯ ಅತಿಥಿಯಾಗಿ ಹೋದರೆ, ನಿಮಗಿಂತ ದುರದೃಷ್ಟವಂತರು ಯಾರೂ ಇಲ್ಲ ಎನ್ನಬಹುದು.
ನಾನು ನಂಜನಗೂಡಿನಲ್ಲಿದ್ದಾಗ ಒಮ್ಮೆ ಕನ್ನಡ ಸಂಘದ ಸಮಾರಂಭವೊಂದಕ್ಕೆ ಮುಖ್ಯ ಅತಿಥಿಗಳಲ್ಲಿ ಒಬ್ಬಳಾಗಿ ಹೋಗಬೇಕಾಯಿತು. ವಿಶೇಷ ಆಹ್ವಾನಿತರು, “ಚಲನಚಿತ್ರ ನಟ ಅಂಬರೀಷ್’ ಎಂದು ಆಹ್ವಾನಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಸಾಯಂಕಾಲ ಐದು ಗಂಟೆಗೆ ನಾನು ಸಭೆಯಲ್ಲಿದ್ದೆ. ನನ್ನ ಹಾಗೆ ಇನ್ನೂ ಇಬ್ಬರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಐದು ಗಂಟೆಗೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಏಳು ಗಂಟೆಯಾದರೂ ಆರಂಭವಾಗಲಿಲ್ಲ. ಕಾರ್ಯಕ್ರಮ ಪ್ರಾರಂಭವಾಗುವ ಸೂಚನೆಯೂ ಕಾಣಲಿಲ್ಲ. ಮುಖ್ಯ ಅತಿಥಿ (?) ಗಳೆನ್ನಿಸಿಕೊಂಡ ನಾವು ಎದ್ದು ಬರಲು ಅವಕಾಶವಿರಲಿಲ್ಲ.
ವ್ಯವಸ್ಥಾಪಕರರೊಬ್ಬರು ಮೈಕ್ ಹಿಡಿದು ಹೇಳಿದರು. ‘ಅಂಬರೀಷ್ ಹೊರಟಿದ್ದಾರೆ. ರಾಮನಗರದ ಹತ್ತಿರವಿದ್ದಾರೆ. ಕಾರ್ಯಕ್ರಮ ಶುರುಮಾಡಲು ಹೇಳಿದ್ದಾರೆ’ ಎಂದರು. ಜೋರಾಗಿ ಚಪ್ಪಾಳೆ ಬಿತ್ತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಸ್ವಾಗತ ಹೇಳಿದರು. ಸಂಘದ ವರದಿ ಓದಲು ಸುಮಾರು 40 ನಿಮಿಷ ತೆಗೆದುಕೊಂಡರು. ಅತಿಥಿಗಳು ಮಾತನಾಡಲು ಜನ ಬಿಡಲಿಲ್ಲ. ಅಂಬರೀಷ್, ಅಂಬರೀಷ್ ಎಂದು ಕೂಗುತ್ತಿದ್ದರು. ಆಗೆಲ್ಲ ಮೈಕ್ ಹಿಡಿದು ವ್ಯವಸ್ಥಾಪಕರು ‘ಅಂಬರೀಷ್ ಮಂಡ್ಯಕ್ಕೆ ಬಂದಿದ್ದಾರೆ. ಶ್ರೀರಂಗಪಟ್ಟಣಕ್ಕೆ ಬಂದಿದ್ದಾರೆ. ಇನ್ನೇನು ಮೈಸೂರು ತಲುಪ್ತಾರೆ ಎಂದು ಘೋಷಿಸುತ್ತಿದ್ದರು. ಚಪ್ಪಾಳೆ ಬೀಳುತ್ತಿತ್ತು. ಒಂಬತ್ತು ಗಂಟೆಯ ಹೊತ್ತಿಗೆ ಅಂಬರೀಷ್ ಮೈಸೂರು ತಲುಪಿದರು. ಹತ್ತು ಗಂಟೆಯಾದರೂ ಅವರು ನಂಜನಗೂಡಿಗೆ ಬರಲಿಲ್ಲ ! ಗಲಾಟೆ ಶುರುವಾಯಿತು. ನಮಗ್ಯಾರಿಗೂ ಮಾತಾಡಲು ಅವಕಾಶ ಸಿಗಲಿಲ್ಲ. ಕೇಳುವ ತಾಳ್ಮೆ ಜನರಿಗೂ ಇರಲಿಲ್ಲ. ನಾವೆಲ್ಲ ಸಭೆ ಮುಗಿಸಿ ಹೊರಟಾಗ 11 ಗಂಟೆಯಾಗಿತ್ತು.
ಎರಡು ದಿನಗಳ ನಂತರ ಗೊತ್ತಾಯಿತು. ಅಂಬರೀಶ್ ಸಮಾರಂಭಕ್ಕೆ ಬರಲು ಒಪ್ಪಿಯೇ ಇರಲಿಲ್ಲವಂತೆ. ಜನರನ್ನು ಸೇರಿಸಲು ವ್ಯವಸ್ಥಾಪಕರು ಸುಳ್ಳು ಹೇಳಿದ್ದರಂತೆ ! ಈಗಲೂ ನಾನು ರಾಜಕಾರಣಿಗಳು, ಸಿನಿಮಾ ನಟರು ಬರುವ ಸಮಾರಂಭಕ್ಕೆ ಹೋಗುವುದಿಲ್ಲ. ನಾನು ಹೋಗಲ್ಲಾಂತ ಯಾರೂ ಅಳಲ್ಲ ಬಿಡಿ.
ಸಿ. ಎನ್. ಮುಕ್ತಾ