ಕಡಲತಡಿಗೆ ಬಂದರೂ ಕಾಶ್ಮೀರ ಕಣಿವೆ ಮರೆಯುವುದಿಲ್ಲ
Team Udayavani, Oct 28, 2018, 6:00 AM IST
ಕಾಶ್ಮೀರವನ್ನು ಕಣಿವೆ (Kashmir Valley) ಎಂದೇಕೆ ಕರೆಯುತ್ತಾರೆ, ಈ ಪ್ರಕೃತಿಯ ಸುಂದರ ತಾಣ ಹೇಗಿರುತ್ತದೆ ಎಂದೆಲ್ಲಾ ಮೆಲುಕು ಹಾಕುತ್ತಿದಂತೆಯೇ, ನಮ್ಮ ವಾಹನ ಶ್ರೀನಗರ ತಲಪಿತು. ದೇಶದ ಇತರ ಹತ್ತು ಹಲವು ನಗರಗಳನ್ನು ಸಂದರ್ಶಿಸಿದ ನನಗೆ ಏಕೋ ಇದು ಒಂದು ಥರಾ ಬಿಕೋ ಅನ್ನಿಸುತ್ತಿತ್ತು. ಶ್ರೀ ಅರ್ಥಾತ್ ಲಕ್ಷ್ಮಿಯ ನಗರದಂತೆ ಅನಿಸಲಿಲ್ಲ ಸಾಕಷ್ಟು ಹೋಮ್ವರ್ಕ್ ಮಾಡಿ ಪಯಣಿಸಿದ್ದ ನನ್ನನ್ನು ಆತ್ಮೀಯವಾಗಿ ಸ್ವಾಗತಿಸಲು ಮುಸ್ಲಿಂ ದಂಪತಿ ಆಗಲೇ ಬಸ್ ನಿಲ್ದಾಣದಲ್ಲಿದ್ದರು. ಅವರ ಕಾರು ಏರಿ ಕುಳಿತವನೇ ಉಸುರಿದೆ, “ನನಗೆ ಕೇವಲ ಮೂರು ದಿನಗಳ ವಾಸ್ತವ್ಯಕ್ಕೇ ಉತ್ತಮ ಹೋಟೆಲ್ ದೊರಕಿದರೆ ಆಯಿತು. ಕೇವಲ ಅಷ್ಟು ಸಹಕಾರ ನೀಡಿದರೆ ಸಾಕು’
“ಸರ್, ಅವೆಲ್ಲ ಆ ಬಳಿಕ ನೋಡೋಣ, ನೀವೀಗ ನಮ್ಮ ಗೆಸ್ಟ್, ನಮ್ಮ ಹುಡುಗಿ ನಿಮ್ಮ ಮಂಗಳೂರಿನ ಕಾಲೇಜಿನಲ್ಲಿ ಫಿಜಿಯೋಥೆರಪಿ ಓದುತ್ತಿದ್ದಾಳೆ. ಹಾಗಾಗಿ, ನಿಮ್ಮ ದೇಖ್ಬಾಲ್ ನಮ್ಮ ಜವಾಬ್ದಾರಿ ತಾನೇ?’ ಹೀಗೆ ಹಿಂದಿ, ಉರ್ದು ಮಿಶ್ರಿತ ಇಂಗ್ಲೀಷಿನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದರು. ನನಗೇಕೋ, ತುಟಿಯಲ್ಲಿ ಕೃತಜ್ಞತೆಯ ನಗು ಬಲಾತ್ಕಾರವಾಗಿ ತಂದುಕೊಂಡರೂ, ಎದೆಬಡಿತ ಜೋರಾಗತೊಡಗಿತು. ತೀರಾ ಅಪರಿಚಿತ ಸ್ಥಳ, ಪ್ರಥಮಬಾರಿಗೆ ಭೇಟಿ ಆಗುವ ಜನ ! ನಾನೋ ಖಟ್ಟರ್ ಸಸ್ಯಾಹಾರಿ, ನನ್ನ ಆತಿಥ್ಯಕ್ಕೆ ಮುಂದಾಗುತ್ತಿರುವವರು ಕಾಶ್ಮೀರೀ ಮುಸ್ಲಿಂ ಅಬ್ಟಾ, ಇವರ ಆತ್ಮೀಯತೆಯ ಕಟ್ಟು ಸಡಿಲಿಸಿ, ಹೋಟೆಲ್ ಹುಡುಕೋಣ ಎಂಬುದೂ ಸಾಧ್ಯವಿಲ್ಲ. ಎದೆಬಡಿತ ಜೋರಾಗುತ್ತಿದ್ದಂತೆಯೇ ಗೇಟ್ ಒಳಗೆ ಕಾರು ಬಂದು ನಿಂತಿತು. ನನ್ನ ಸಿಂಗಲ್ ಸೂಟ್ಕೇಸ್ ನನ್ನಿಂದ ಮುಂದೆಯೇ ಅವರ ಗೃಹಪ್ರವೇಶದ ಸೌಭಾಗ್ಯ ಪಡೆದೇ ಬಿಟ್ಟಿತು.
ಮಹಡಿ ಹೊಂದಿದ ವಿಶಾಲಮನೆ; ನೆಲಕ್ಕೆ ಮರದ ಹಲಿಗೆ ಹಾಸಿvರೆ. ತೀರಾ ಚೊಕ್ಕವಾಗಿ, ವಸ್ತುಗಳನ್ನು ಒಪ್ಪವಾಗಿ ಜೋಡಿಸಿಟ್ಟ ಕಾಶ್ಮೀರೀ ಕಲಾತ್ಮಕತೆಯನ್ನು ಬಿಂಬಿಸುತ್ತಿದೆ. ಒಂದೈದು ನಿಮಿಷ ಸಾವರಿಸಿ, ನನ್ನ ಹೋಟೆಲ್ ರೂಮಿನ ಅಗತ್ಯದ ಪಿಟೀಲು ಬಾರಿಸಿದೆ; ಕಡೆಗೆ ಪರಸ್ಪರ ಒಪ್ಪಂದದ ಮೇರೆಗೆ ಒಂದು ದಿನ ಇಲ್ಲಿ, ಎರಡು ದಿನ ಬೇರೆ ಎಲ್ಲೋ ಲಾಡ್ಜ್ ಓ.ಕೆ. ಎಂದಿತು ಮನಸ್ಸು. ಅಷ್ಟರೊಳಗೆ ನನ್ನ ಸೂಟ್ಕೇಸ್ ಮೇಲ್ ಮಹಡಿಯ ಕೊಠಡಿಯೊಂದನ್ನು ಬೆಚ್ಚಗೆ ಸೇರಿ ನನ್ನನ್ನೂ ಕರೆಯುತ್ತಿತ್ತು. ಚಳಿಯ ಹೊರಮೈ ಬಿಸಿ ಟೀ ಒಳಸೇರಿ ಒಂದಿಷ್ಟು ಅಬ್ಟಾ ಎನಿಸಿತು. ನೋಡಿ ಸಾರ್, ಇಲ್ಲಿನ ಲಾಡ್ಜ್ಗಳು ಸೇಫ್ ಅಲ್ಲ; ಯಾವ ಹೊತ್ತಿನಲ್ಲಿ ಯಾವ ಲಾಡ್ಜ್ಗೆ ಉಗ್ರಗಾಮಿಗಳು ಎಂಟರ್ ಆಗ್ತಾರೋ ಗೊತ್ತಿಲ್ಲ; ಯಾವ ಹೊತ್ತಿಗೆ ಪೊಲೀಸ್ ರೈಡ್, ಬಿಎಸ್ಎಫ್ರೈಡ್ ಆಗ್ತದೋ ಗೊತ್ತಿಲ್ಲ. ಇಲ್ಲಿ, ನಿಮಗೆ pure veg food ಇರುವ ಹೋಟೆಲ್ ಅಂತೂ ಇಲ್ಲವೇ ಇಲ್ಲ, ಅದೂ ಅಲ್ಲದೆ, ಈಗ ರಮ್ಜಾನ್ ಉಪವಾಸ ಬೇರೆ. ಎಲ್ಲಾ ಬಂದ್. ಹಾಗಾಗಿ ನಿಮಗೆಂದೇ ಸ್ಪೆಷಲ್ ಸಸ್ಯಾಹಾರ, ಬ್ರೇಡ್, ಸೇಬು, ಹಾಲು ಎಲ್ಲಾ 3 ದಿನವೂ ಇಲ್ಲೇ ನೀಡುತ್ತೇವೆ- ಎನ್ನುವಲ್ಲಿಗೆ ನನ್ನ ಸ್ಟಾರ್ ಹೋಟೆಲ್ನ ಕನಸು ಗಗನಕ್ಕೆಲ್ಲೋ ಹಾರಿಹೋಯಿತು.
ಎಲ್ಲವೂ ಕಾಲದ ಮಹಿಮೆ !
ಮತ್ತೆ ಶುರು, ನನ್ನ ಅನುಭವದ ಕಥಾನಕ. ಶ್ರೀನಗರ ವಿಶ್ವವಿದ್ಯಾನಿಲಯದೆಡೆಗೆ ಮರುದಿನ ಪ್ರಯಾಣ ಬೆಳೆಸಿದೆ. ಕಾಶ್ಮೀರಿಗಳು- ಯುವಕರೂ ಯುವತಿಯರೂ – ಪ್ರಾಯಶಃ ಆ ತಂಪು ಹವೆಯಿಂದಲೋ ಏನೋ, ಏಪಲ್ನಂತೆಯೇ, ಕೆಂಪು ಮಿಶ್ರಿತ ಬಿಳಿಯಿಂದ ಸೌಂದರ್ಯ ಮೈತುಂಬಿಕೊಂಡವರು. ತಲೆಗೊಂದು ಸ್ಕಾಫìನಲ್ಲಷ್ಟೇ ಮಹಿಳೆಯರ ಧರ್ಮೀಯ ದಿರಿಸು ಕಂಗೊಳಿಸುತ್ತಿತ್ತು. ತುಂಬು ನಗೆಯ, ಆತ್ಮೀಯತೆ, ಸರಳ ಸಂಭಾಷಣೆ ಇವೆಲ್ಲಾ, ನಾನು ತಲೆತುಂಬಿಸಿಕೊಂಡಿದ್ದ ಉಗ್ರ ಕಾಶ್ಮೀರಿಗಳು ಎಂಬ definition ಅನ್ನು ಒಂದೇ ದಿನದಲ್ಲಿ ಅಳಿಸಿ ಬಿಟ್ಟಿತು! ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಒಂದೆರಡು ಕೊಠಡಿ ಪ್ರವೇಶಿಸಿ, ಸಂಭಾಷಿಸಿ, ವಿಷಯಗಳನ್ನು ಗುರುತು ಹಾಕಿಕೊಂಡು, ವಿಚಾರ ವಿನಿಮಯ ಮಾಡಿಕೊಂಡೆ. “ಕ್ಷಮಿಸಿ, ನಿಮಗೆ ಟೀ ಕೊಡುವ ಹಾಗಿಲ್ಲ, ಏಕೆಂದರೆ ರಮ್ಜಾನ್ ಉಪವಾಸದ ಮಾಸ, ಕ್ಯಾಂಟೀನ್ ಬಂದ್ ಸರ್’ ಎಂದುಬಿಟ್ಟರು, ನನ್ನನ್ನು ಸ್ವಾಗತಿಸಿದ ಪ್ರಾಧ್ಯಾಪಕರು. ನನ್ನ ಆತಿಥೇಯ ಮನೆಯೊಡತಿ ನೀಡಿದ್ದ ಹಾಲು, ಹೊಟ್ಟೆ ತಂಪು ನೀಡಲಿದ್ದೇನೆ ಎಂಬ ಭರವಸೆಯನ್ನೂ ನೀಡಿತು. ಮಧ್ಯಾಹ್ನದ ಸೈರನ್ ಮೊಳಗಿದ ತತ್ಕ್ಷಣ ಕುಲಪತಿಯವರಿಂದ ಹಿಡಿದು, ನಾನು ಕುಳಿತಿದ್ದ ಕೊಠಡಿಯ ಪೊ›ಫೆಸರ್ ಆದಿಯಾಗಿ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ಗಡಣ ಎಲ್ಲಾ ಎದುರಿನ ವಿಶಾಲ ಹಸಿರು ಹುಲ್ಲಿನಲ್ಲಿ ನಮಾಜ ಆರಂಭಿಸಿದರು. ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದಂತೆಯೇ, ಕಾಶ್ಯಪ ಋಷಿಗಳು ಪ್ರಪ್ರಥಮವಾಗಿ ಶಿಷ್ಯರೊಂದಿಗೆ ಪದಾರ್ಪಣೆಗೈದ ಅಂದಿನ ಕಾಶ್ಯಪಮಾರ್, ಇಂದಿನ ಕಾಶ್ಮೀರ ಈ ಎಲ್ಲಾ ಕಾಲದ ಚಿತ್ರಣವೂ ಮನದಂಚಿನಲ್ಲಿ ಹಾದುಹೋಯಿತು, ಈ ಎಲ್ಲಾ ಏರುಪೇರುಗಳಿಗೆ ದಾಲ್, ಊಲಾರ್ ಸರೋವರದೊಳು ಮೌನಸಾಕ್ಷಿ ನುಡಿಯುತ್ತಿವೆ ಎಂದೆನಿಸಿತು. ಕಾಲದ ಮಹಿಮೆಗೆ ಮೌನಿಯಾದೆ.
ಮರುದಿನ ಸೂರ್ಯ ಕಣಿವೆಯೊಳಗೆ ತಿಳಿಬಿಸಿಲು ತೂರಿ ಬಂದಾಗ, ಇನ್ನೂಬ್ಬರು ರೋಟರಿ ಲಿಂಕ್ನಿಂದ ಪಡೆದ ಪಂಡಿತ ಸಮುದಾಯದ ಯುವ ಡಾಕ್ಟರ್ ನನ್ನನ್ನು ಬರಮಾಡಿಕೊಂಡರು. ತಮ್ಮ ಕಾರಿನಲ್ಲಿ ನಗರ ಪ್ರದಕ್ಷಿಣೆ ನಡೆಸಿದರು. ಅಲ್ಲಿ ನೋಡಿ “”ಸರ್, 1987 ರ ವರೆಗೆ ಈ ಬೀದಿಗಳಲ್ಲೆಲ್ಲಾ ನಮ್ಮ ಪಂಡಿತ್ ಸಮುದಾಯದ ಬಹಳಷ್ಟು ಅಂಗಡಿ, ಬಂಡಸಾಲೆಗಳಿದ್ದವು, ಸಮೀಪದ ಗಿರಿಗಳಲ್ಲಿ ಸುಂದರ ಮನೆಗಳಲ್ಲಿ ನಮ್ಮವರು ಹಾಯಾಗಿ ಇದ್ದರು, ಬಹಳಷ್ಟು ಸೇಬುತೋಟಗಳು ನಮ್ಮವರಲ್ಲಿದ್ದವು. ಇಲ್ಲಿನ ದೋಣಿ ಮನೆಗಳು ಶಾಂತ ಜೀವನದ ಮೆರುಗು ತುಂಬಿಕೊಂಡಿದ್ದವು, ಪುಟ್ಟ ಪುಟ್ಟ ಗುಡಿಯಾಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಈಗ ಇವೆಲ್ಲ ಕಳೆದು ಹೋದ ನಿನ್ನೆಗಳ ಕಥೆ, ವ್ಯಥೆ, ಆದರೂ ವಾಸ್ತವಿಕತೆ, ಎಲ್ಲರೂ ಹೊರಟು ಹೋದರು. ಇನ್ನೇನಿದ್ದರೂ ನಾವು 0.1 ಶೇಕಡಾ, ಅದೂ ಸೆಕೆಂಡ್ ರೇಟ್ ಸಿಟಿಜನ್ಸ್ ಆಗಿ ಹೆದರಿ, ಮುದುಡಿ ಬದುಕಬೇಕಾಗಿದೆ” ಕೈಯ ಸ್ಟೇರಿಂಗ್ ತಿರುಗುತ್ತಿದ್ದಂತೆಯೇ, ಅವರ ಕಣ್ಣಾಲಿಗಳು ತೇವಗೊಂಡವು. ಏನೋ ಅವ್ಯಕ್ತ ನೋವಿನಿಂದ ನನ್ನ ಕಣ್ಣುಗಳೂ ಒದ್ದೆಯಾಗಿ ಹೊರಗಡೆ ದಿಟ್ಟಿಸಿದುವು.
“”ಸಂಜೆ, ಮನೆಗೆ 5 ಗಂಟೆಯೊಳಗೇ ಬಂದು ಬಿಡಿ” ಎಂಬ ಪ್ರೀತಿಯ ತಾಕೀತು ಆ ಅಕ್ಕನದು. ಕತ್ತಲಾದಾಗ ಮಹಡಿಯ ಮೆಟ್ಟಲು ಏರುವಾಗ ದೂರದ ಶಂಕರ ಬೆಟ್ಟದೆಡೆಗೆ ಬೊಟ್ಟುಮಾಡಿ ಮಹಮ್ಮದ್ ಗುರೂ ಒಂದು ಮಾತು ಉಸುರಿದರು, “”ನಾವು ಸಣ್ಣದಿರುವಾಗ ಯಾವುದೇ ನಿರ್ಬಂಧವಿರಲಿಲ್ಲ. ಉಗ್ರಗಾಮಿತ್ವದ ಹೆಸರೇ ಕೇಳಿರಲ್ಲಿಲ್ಲ. ಪಂಡಿತರ ಮಕ್ಕಳ ಜತೆ ಬೆಟ್ಟ ಏರಿ ಆಡಿದಣಿದು ಇಳಿದು ಬರುತ್ತಿ¨ªೆವು. ಈಗ… ಎಲ್ಲವೂ ಕೇವಲ ನೆನಪು ಅಷ್ಟೆ. ಇಲ್ಲಿನ ಭದ್ರತಾಪಡೆಯವರೇ ನಮ್ಮನ್ನು ತಡೆಯುತ್ತಾರೆ. ನೀವು ಬಂದಿದ್ದೀರಿ, ಹಾಗಾಗಿ ತೋರಿಸುವೆ” ಎಂಬುದಾಗಿ ಸ್ಪೆಶಲ್ ಪರ್ಮಿಶನ್ ತೆಗೆದುಕೊಂಡು, “”ನಿಮಗೆ ಅಲ್ಲಿ ದೊಡ್ಡ ಶಿವಲಿಂಗದ ದರ್ಶನ ನಾಳೆ ಮಾಡಿಸುತ್ತೇನೆ” ಎಂದರು. ನನ್ನ ಮನದ ಒಟ್ಟು ಗಲಿಬಿಲಿಗೊಂದು ಗತಿಕಾಣಿಸಬೇಕೆಂದು ಆಸೆಯಿಂದ ನನ್ನ ವಿಶ್ರಾಂತಿ ಕೊಠಡಿಗೆ ಹರಟೆ ಹೊಡೆಯೋಣವೇ ಎಂದು ಅವರನ್ನು ಕರೆದಾಗ, ಅವರ ಪತ್ನಿಯೂ ಸೇರಿಕೊಂಡರು. “”ನೋಡಿ ಸರ್, ನಿಜಾ ಹೇಳ್ಬೇಕಾ, ನಮಗೆ ಅಂದರೆ ಕಾಶ್ಮೀರಿಗಳಿಗೆ ಸುಮಾರು 8000 ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಪುರೋಹಿತ ವರ್ಗದವರಾಗಿದ್ದು. ಪಂಡಿತ ಸಮುದಾಯದಲ್ಲಿ ಗುರೂ ಎಂದು ಇನ್ನಷ್ಟು ಉನ್ನತ ಸ್ತರದಲ್ಲಿ ಗುರುತಿಸಿಕೊಂಡವರು. ಇನ್ನು ಕೆಲವರ ಹೆಸರ ಜತೆಗೆ ವಾಣಿ ಎಂದೂ ಇದೆ” ಹೀಗೆ ಅವರ ವಿವರಣೆ ಸುರುಳಿ ಬಿಚ್ಚಿಕೊಳ್ಳುತ್ತಲೇ, ಅವರ ಅತಿಥಿ ಸತ್ಕಾರ, ಸ್ವತ್ಛತೆ, ಸಭ್ಯತೆ ಎಲ್ಲದರ ಅಂತರಂಗ ತೆರೆಯುತ್ತ ಸಾಗಿತು.
ಆ ಮನೆಯಲ್ಲೇ 3 ದಿನಗಳ ವಾಸದ ದೆಸೆಯಿಂದ ಅವರ ಮನದಾಳದ ಮಾತುಗಳಿಗೆ ನೇರವಾಗಿ ಕಿವಿಯಾದೆ , “”ನೋಡಿ ಭಟ್, ನಿಮ್ಮನ್ನು ಹಾಗೆ ಸಂಬೋಧಿಸಿದಾಗ ಏನೋ ನೀವು ನಮ್ಮವರೇ ಎಂಬ ಭಾವನೆ. ನಮಗೆ ಉಗ್ರವಾದ ನಿಜಕ್ಕೂ ಮನಸಿಲ್ಲ, ನಮ್ಮ ಯುವಕರ ಮನಸ್ಸು ಹಾಳುಮಾಡಿ, ವಶೀಲಿಯಿಂದ ಪಾಕ್ ಸೈನಿಕರು, ಬೇಹುಗಾರರು ಈ ಗಲಭೆ, ರಕ್ತಪಾತ ಸೃಷ್ಟಿಸುತ್ತಾರೆ. ಪ್ರವಾಸಿಗಳು ಬರಲು ಶುರುಮಾಡಿದರೆನೇ ನಮ್ಮ ದೋಣಿಮನೆ, ಗೊಂಬೆ, ಇತ್ಯಾದಿ ಎಲ್ಲದಕ್ಕೂ ಡಿಮಾಂಡ್”
ಮುಂದೆ ರಕ್ಷಣಾ ಪಡೆಗಳ ಬಗ್ಗೆ ಅಸಹನೆಯ ಕಟ್ಟೆಯೊಡೆಯಿತು. ಅವರೆಲ್ಲ ಅಕ್ರಮ ಆಕ್ರಮಣಕಾರರು ಎನ್ನುವಷ್ಟು ರೋಷಾವೇಶ ಹೊರಹೊಮ್ಮಿತು, ಕಾರಣ ಗಲಭೆಯನ್ನು ಹತ್ತಿಕ್ಕುವಲ್ಲಿ ಅನಿವಾರ್ಯವಾಗಿ ರಕ್ಷಣಾ ಪಡೆಗಳ ಗಸ್ತು ಅಷ್ಟೇ ಬಲವಾಗಿರುವುದನ್ನು ಗಮನಿಸಿದೆ. ಅಲ್ಲಿನ ಪೊಲೀಸ್ ವ್ಯಾನ್ಗಳೂ, ಯುದ್ದೋಪಕರಣ ಸಾಗಿಸುವ ಗಟ್ಟಿಮುಟ್ಟಾದ, ಮುಚ್ಚಿದ ವಾಹನಗಳಂತೆ ಇಲ್ಲವಾದರೆ ಅವರ ಕಲ್ಲಿನ ಪೆಟ್ಟಿಗೆ, ಪೊಲೀಸ್ ವ್ಯಾನ್ ಅಪ್ಪಚ್ಚಿಯಾಗಿ ಬಿಡುತ್ತಿದ್ದವು. ಅದನ್ನೆಲ್ಲಾ ಗಮನಿಸುತ್ತಿದ್ದಾಗ ಕೌಟಿಲ್ಯ, ಮೆಕಿಯವೆಲ್ಲಿ ಇಬ್ಬರ ಸಮಾನಾಂತರದ ಬಲವನ್ನು ಬಲಪ್ರಯೋಗದಿಂದಲೇ ಮರ್ದಿಸಬೇಕು ಎಂಬ ಸೂತ್ರವೂ ನೆನಪಾಯಿತು.
ಅಲ್ಲಿನ ಹಜರತ್ ಬಾಲ್ ಮಸೀದಿಯೊಳಗೆ ಹೋಗಿ ನೋಡೋಣ ಎಂದು ಕುತೂಹಲದಿಂದ ಮುಖ್ಯ ದ್ವಾರಕ್ಕೆ ಬಂದು ನಿಂತಾಗ ನನ್ನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ, ಹೆಗಲೇರಿದ ಚೀಲವನ್ನು ತಡಕಿ ನಸುನಕ್ಕು ದ್ವಾರಪಾಲಕ ಒಳಬಿಟ್ಟ. ಬೃಹತ್ ಗಾತ್ರದ ಮಸೀದಿಯೊಳಗೆ ಪ್ರವೇಶಿಸುವ ಪ್ರಥಮ ಅನುಭವ. ಎಲ್ಲಾ ವೀಕ್ಷಿಸಿ, ಮುಖ್ಯಬಿಂದುವಿನೆಡೆಗೆ ಬಂದು ಕಣ್ಣು ಮುಚ್ಚಿನಿಂತಾಗ ನನಗೆ ಹೊಳೆದುದು, ಏಕಂ ಸತ್ ವಿಪ್ರಾ ಬಹುದಾಃ ವದಂತಿ ಎಂಬ ಸಾರ್ವಕಾಲಿಕ ಸತ್ಯದ ಹೊಳಹು.
ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ