ಹಾಸ್ಯ: ಧಾರಾವಾಹಿ ನಿರ್ದೇಶಕರ ಸಂದರ್ಶನ
Team Udayavani, Nov 25, 2018, 6:00 AM IST
ಪ್ರಶ್ನೆ : ನಮಸ್ಕಾರ, ಪತ್ರಿಕೆಯ ಪರವಾಗಿ ತಮಗೆ ಸುಸ್ವಾಗತ.
ಉತ್ತರ: ಧಾರಾವಾಹಿ ಟೀಂ ವತಿಯಿಂದ ನಿಮಗೂ ಧನ್ಯವಾದಗಳು.
ಪ್ರಶ್ನೆ : ಸಾರ್, ತಮ್ಮ ಎಲ್ಲಾ ಧಾರಾವಾಹಿಗಳು ಈ ಪಾಟಿ 500, 1000 ಎಪಿಸೋಡ್ ದಾಟಿ ಯಶಸ್ವಿಯಾಗಲು ಕಾರಣವೇನು?
ಉತ್ತರ: ಕಣ್ಣೀರು ಕಣ್ರೀ ಕಣ್ಣೀರು! ನನ್ನ ಧಾರಾವಾಹಿಗಳಲ್ಲಿ ಗ್ಲಾಮರ್ಗಿಂತ ಕಣ್ಣೀರೇ ಜಾಸ್ತಿ, ಹೆಣ್ಣುಮಕ್ಕಳು ಜಾಸ್ತಿ ಅತ್ತಷ್ಟೂ ಜನಪ್ರಿಯತೆ ಜಾಸ್ತಿ, ಅದರಿಂದ ಟಿಆರ್ಪಿ ಕೂಡ ಜಾಸ್ತಿ ಸಿಗುತ್ತದೆ, ಅದಕ್ಕೇ ಅವರನ್ನು ಹೆಚ್ಚು ಹೆಚ್ಚು ಅಳಿಸ್ತೀವಿ.
ಪ್ರಶ್ನೆ : ಸಾರ್, ನೀವು ಅಡಿಷನ್ನಲ್ಲಿ ಕಲಾವಿದರನ್ನು ಆರಿಸುವಾಗ ಯಾವ ಮಾನದಂಡ ಅನುಸರಿಸುತ್ತೀರಿ?
ಉತ್ತರ: ನಾವು ಕಲಾವಿದೆಯರ ಕಣ್ಣುಗಳನ್ನು ಚೆಕ್ ಮಾಡುತ್ತೇವೆ, ಅದಕ್ಕಾಗಿ ಇಬ್ಬರು ನೇತ್ರತಜ್ಞರ ಸಹಾಯ ಪಡೆಯುತ್ತೇವೆ. ಬಳ ಬಳ ಕಣ್ಣೀರು ಸುರಿಸುವವರನ್ನೇ ನಾವು ಆಯ್ಕೆ ಮಾಡುವುದು.
ಪ್ರಶ್ನೆ :ಒಂದು ವೇಳೆ ಅಷ್ಟೊಂದು ಕಣ್ಣೀರು ಸುರಿಸುವುದರಲ್ಲಿ ವಿಫಲರಾದರೆ?
ಉತ್ತರ: ಇದ್ದೇ ಇದೆಯಲ್ಲ, ಗ್ಲಿಸರೀನ್! ಕಣ್ಣಿಗೆ ಸುರಿಯುತ್ತೇವೆ. ಆಗ ಅಳಲೇಬೇಕು, ಹಾಗಾಗಿಯೇ ನಮ್ಮ ಒಟ್ಟು ಬಜೆಟ್ನಲ್ಲಿ ಶೇ. 10ರಷ್ಟು ಗ್ಲಿಸರಿನ್ಗೆ ಖರ್ಚಾಗುತ್ತದೆ.
ಪ್ರಶ್ನೆ: ನಿಮ್ಮ ಎಲ್ಲಾ ಧಾರಾವಾಹಿಗಳಲ್ಲಿ ಬರೀ ಲೇಡಿ ವಿಲನ್ಗಳೇ ಇದ್ದಾರಲ್ಲ? ಜಗತ್ತಿನ ಗಂಡಸರೆಲ್ಲ ಸಂತರಾಗಿಬಿಟ್ಟರೇ?
ಉತ್ತರ: ರೀ, ಸ್ವಾಮಿ, ಹೆಣ್ಣು ಮಾಯೆ, ಅವಳಿಂದಲೇ ಒಳಿತು, ಕೆಡುಕು, ಹೆಣ್ಣು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲಳು ಅಂತೆಲ್ಲ ನೀವೇ ಬರೀತೀರಾ! ಇಲ್ಲಿ ಹೀಗೆ ಕೇಳ್ತೀರಾ!
ಪ್ರಶ್ನೆ: ಧಾರಾವಾಹಿ ಮಧ್ಯದಲ್ಲಿ ಕಲಾವಿದರಾರಾದರೂ ಹೇಳದೇ ಕೇಳದೇ ನಾಪತ್ತೆಯಾದರೆ ಏನ್ಮಾಡ್ತೀರಾ?
ಉತ್ತರ: ಹೋದರೆ ಕತ್ತೆಬಾಲ, ಕುದುರೆಜುಟ್ಟು! ಅವರಿಗೆ ಬೆಣ್ಣೆ ಹಚ್ಚಲ್ಲ, ಅವರ ಒಂದು ಫೋಟೋ ತೋರಿಸಿ ಅದಕ್ಕೊಂದು ಹಾರ ಹಾಕಿ ಅವರು ಸತ್ತರು ಅಂತ ಹೇಳಿ ಕಥೆ ಬದಲಾಯಿಸಿಬಿಡ್ತೀವಿ. ಅಥವಾ ಹಳಬ ಹಾಗೂ ಹೊಸಬರಿಬ್ಬರ ಫೋಟೋ ಅಕ್ಕಪಕ್ಕ ತೋರಿಸಿಬಿಡ್ತೀವಿ. ನಮ್ಮ ಹೆಣ್ಣು ಮಕ್ಕಳು ಬುದ್ಧಿವಂತರು ಅರ್ಥ ಮಾಡ್ಕೊàತಾರೆ.
ಪ್ರಶ್ನೆ: ಪ್ರೇಕ್ಷಕರು ತಲೆ ಕೆಟ್ಟು ಬೋರ್ ಆಗುತ್ತಿದೆ, ಹುಚ್ಚು ಹಿಡಿಯುವ ಮುನ್ನ ಧಾರಾವಾಹಿ ನಿಲ್ಲಿಸಿ ಎಂದು ಜಾಣರ ಪೆಟ್ಟಿಗೆಗೆ ಬರೆದರೆ?
ಉತ್ತರ: ಇದ್ದೇ ಇದೆ, ರೇಪ್, ಕಿಡ್ನಾಪ್, ಮರ್ಡರ್, ವಿಷಪ್ರಾಷನ, ಜೈಲು, ಅಂತೆಲ್ಲ ಸೇರಿಸ್ತೀವಿ. ಎಲ್ಲಕ್ಕೂ ಬೆಸ್ಟ್ ಅಂದರೆ ಒಂದು ಪಾತ್ರವನ್ನು ಕೊಲೆ ಮಾಡಿಸಿ ಮರುದಿನ ಅವನ ಭೂತವನ್ನು ತೋರಿಸ್ತೀವಿ. ಬೋರ್ ಅಂದೋರೆಲ್ಲ ಊಟ-ತಿಂಡಿ ಬಿಟ್ಟು ಟಿ.ವಿ. ಮುಂದೆ ಕೂರ್ತಾರೆ! ಮತ್ತೆ 6 ತಿಂಗಳು ಮಾತಾಡೋಲ್ಲ!
ಪ್ರಶ್ನೆ: ಒಂದು ಧಾರಾವಾಹಿಯ ಯಶಸ್ಸಿಗೆ ಯಾರು ಕಾರಣ ಅಂತೀರಾ? ನಿರ್ದೇಶಕನೋ? ನಾಯಕನೋ?
ಉತ್ತರ: ತಡೀರಿ, ತಡೀರಿ, ಇಲ್ಲಿ ಬೇರೆ ಮಾತಿಲ್ಲ, ನೂರಕ್ಕೆ ನೂರು ಸಂಭಾಷಣೆಕಾರನೇ ಕಾರಣ. ಯಾಕೆ ಅಂತೀರಾ? ಸನ್ನಿವೇಶ, ಕಥೆ, ಒಂದಿನಿತೂ ಮುಂದೆ ಹೋಗದೇ ಪಾತ್ರಧಾರಿಗಳು ಗಂಟೆಗಟ್ಟಲೆ ಹೇಳಿದ್ದನ್ನೇ ಹೇಳುವಂತೆ ಸಂಭಾಷಣೆ ಬರೆಯಬೇಕಲ್ಲ, ನಿಜಕ್ಕೂ ಅವನೇ ಯಶಸ್ಸಿನ ರೂವಾರಿ.
ಪ್ರಶ್ನೆ: ಕೊನೆಯ ಪ್ರಶ್ನೆ ನಿಮ್ಮ ಧಾರಾವಾಹಿಗೆ ಸಿಗುತ್ತಿರುವ ಟಿ.ಆರ್.ಪಿ. ಕುರಿತು.
ಉತ್ತರ: ಸಿಟೀಲಿ ಈ ಟಿ.ಆರ್.ಪಿ. ಮೀಟರ್ನ್ನು ಯಾರ್ಯಾರ ಮನೇಲಿ ಸೆಟ್ಮಾಡಿ ಇಟ್ಟಿದ್ದಾರೆ ಅಂತ ಮೊದಲೇ ತಿಳ್ಕೊàತೀವಿ. ಆ ಮನೆಯವರು ಆ ವಾರವಿಡೀ ನಮ್ಮ ಧಾರಾವಾಹಿ ಮಾತ್ರ ನೋಡುವಂತೆ ಅವರಿಗೆ ಕಮಿಷನ್ ಕೊಟ್ಟು ಬುಕ್ ಮಾಡ್ಕೊàತೀವಿ, ಆಗ ನೋಡಿ ನಾವೇ ನಂಬರ್ ವನ್!
ಕೆ. ಶ್ರೀನಿವಾಸ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ