ಕುರಿ ಕಾಯುವ ಹುಡುಗಿ
Team Udayavani, Dec 9, 2018, 6:00 AM IST
ಅನ್ನಾ ಎಂಬ ಹುಡುಗಿ ಇದ್ದಳು. ಬಲು ಚಂದವಾಗಿದ್ದ ಅವಳು ಬುದ್ಧಿವಂತೆಯೂ ಹೌದು. ಅವಳ ಜೊತೆಗೆ ತುಂಬ ಮಂದಿ ಹುಡುಗಿಯರು ಬಯಲಿನಲ್ಲಿ ತಮ್ಮ ಕುರಿಗಳನ್ನು ಮೇಯಿಸಿಕೊಂಡು ಹಾಡುತ್ತ ಕುಣಿಯುತ್ತ ಸಂತೋಷವಾಗಿದ್ದರು. ಆದರೆ, ದಿನ ಕಳೆದ ಹಾಗೆ ಅವರ ಸಂತೋಷಕ್ಕೆ ಕುಂದು ಬರತೊಡಗಿತು.
ಒಬ್ಬೊಬ್ಬರಿಗೆ ಸೇರಿದ ಕುರಿಗಳು ಒಂದೊಂದಾಗಿ ನಾಪತ್ತೆಯಾಗತೊಡಗಿದವು. ತಾವು ಇಷ್ಟು ಜೋಪಾನವಾಗಿ ಕುರಿಗಳನ್ನು ನೋಡಿಕೊಳ್ಳುತ್ತಿದ್ದರೂ ಅವು ಹೇಗೆ ಕಾಣೆಯಾಗುತ್ತಿವೆ ಎಂಬುದು ಗೊತ್ತಾಗದೆ ಅವರೆಲ್ಲ ಕಳವಳಪಡತೊಡಗಿದರು. ತಮಗೆಲ್ಲ ಜೀವನಾಧಾರವಾಗಿರುವ ಕುರಿಗಳನ್ನು ಕಳೆದುಕೊಂಡರೆ ಮುಂದೆ ಬದುಕಲು ಏನು ದಾರಿಯಿದೆ ಎಂದು ಚಿಂತಿಸುತ್ತ ಅವರು ಅಳಲಾರಂಭಿಸಿದರು. ಅವರ ದುಃಖವನ್ನು ಕಂಡು ಅನ್ನಾ ಬಿದ್ದು ಬಿದ್ದು ನಗುವುದಕ್ಕೆ ಆರಂಭಿಸಿದಳು.
“”ಏನೇ, ನಮ್ಮ ಅಳು ಕಂಡು ನಗುತ್ತಿದ್ದೀಯಾ? ನಾವು ಕೇವಲ ಕುರಿ ಹೋಯಿತೆಂದು ಅಳುತ್ತಿಲ್ಲ ಕಣೇ. ಕುರಿಗಳನ್ನು ಹುಡುಕಿಕೊಂಡು ಹೋದ ನಮ್ಮವರು ತುಂಬ ಮಂದಿ ಇನ್ನೂ ಮರಳಿ ಬಂದಿಲ್ಲ. ಅವರು ಎಲ್ಲಿ ಹೋದರೆಂದು ಗೊತ್ತಿಲ್ಲ. ನಾಳೆ ನಿನ್ನ ಕುರಿಗಳಿಗೂ ಇಂತಹ ಗತಿ ಬರಬಹುದು. ಕುರಿ ಹುಡುಕಲು ಹೋಗಿ ನೀನೂ ಮಾಯವಾಗಬಹುದು. ಆಗ ನೀನು ಅಳುತ್ತೀಯಾ ಅಲ್ಲ, ನಗುತ್ತೀಯಾ?” ಎಂದು ಕುರಿ ಕಳೆದುಕೊಂಡ ಕೆಲವರು ಅನ್ನಾಳ ಬಳಿ ಕೇಳಿದರು. ಅದಕ್ಕೆ ಅವಳು, “”ನೋಡಿ, ನಾನು ನನ್ನ ಎಲ್ಲ ಕುರಿಗಳ ಕೊರಳಿಗೂ ಒಂದೊಂದು ಗಂಟೆ ತಂದು ಕಟ್ಟಿದ್ದೇನೆ. ಅವು ಸ್ವಲ್ಪ ಮಿಸುಕಾಡಿದರೂ ಘಣಘಣ ಧ್ವನಿ ಕೇಳಿಸುತ್ತದೆ. ಕುರಿ ಎಲ್ಲಿದ್ದರೂ ಕಂಡು ಹಿಡಿಯಬಲ್ಲೆ. ಹಾಗೆಯೇ ಕಳ್ಳ ಯಾರೆಂಬುದನ್ನೂ ಪತ್ತೆ ಮಾಡಬಲ್ಲೆ” ಎಂದು ಅನ್ನಾ ಧೈರ್ಯದಿಂದಲೇ ಹೇಳಿದಳು.
ಕೆಲವು ದಿನ ಕಳೆಯಿತು. ಒಂದು ದಿನ ಮಧ್ಯಾಹ್ನ ಹುಲ್ಲುಗಾವಲಿನಲ್ಲಿ ಕುರಿಗಳನ್ನು ಮೇಯಿಸುತ್ತ ಅನ್ನಾ ಹಾಗೆಯೇ ನಿದ್ರೆ ಹೋಗಿದ್ದಳು. ಆಗ ಜೋರಾಗಿ ಕೇಳಿಬಂದ ಗಂಟೆಯ ನಾದ ಅವಳನ್ನು ಎಬ್ಬಿಸಿಬಿಟ್ಟಿತು. ಕಣ್ತೆರೆದು ನೋಡಿದಾಗ ಒಂದೂ ಕುರಿ ಕಾಣಿಸಲಿಲ್ಲ. ಅದರ ಕೊರಳಿನ ಗಂಟೆಯ ಸದ್ದು ದೂರ ದೂರದಲ್ಲಿ ಕೇಳಿಸುತ್ತ ಇತ್ತು. ಅನ್ನಾ ತಡ ಮಾಡಲಿಲ್ಲ. ಕುರಿಯ ಜಾಡು ಹಿಡಿದು ಮುಂದೆ ಹೋದಳು. ಸಂಜೆ ಕಳೆಯುತ್ತ ಬಂದಾಗ ಅವಳು ಒಂದು ಗುಹೆಯ ಬಳಿಗೆ ಬಂದಳು. ಗುಹೆಯ ಸುತ್ತಲೂ ಗಿಣಿಗಳು, ಬಾವಲಿಗಳು, ಕಾಗೆಗಳು ಮೊದಲಾಗಿ ತುಂಬ ಹಕ್ಕಿಗಳು ಹಾರಾಡುತ್ತ ಇದ್ದವು. ಕುರಿಯನ್ನು ಮರೆತು ಅವಳು ಹಕ್ಕಿಗಳನ್ನು ನೋಡುತ್ತ ನಿಂತಾಗ ಕತ್ತಲು ಆವರಿಸಿ ಮುಂದೆ ದಾರಿ ಕಾಣದ ಹಾಗಾಯಿತು.
ಅನ್ನಾ ಗುಹೆಯ ಪಕ್ಕವೇ ಬೆಳಗಾಗುವ ತನಕ ಕುಳಿತುಕೊಳ್ಳಲು ನಿರ್ಧರಿಸಿದಳು. ಅವಳಿಗೆ ನಿದ್ರೆ ಬಂದಿರಲಿಲ್ಲ. ಮಧ್ಯರಾತ್ರೆಯ ಹೊತ್ತಿನಲ್ಲಿ ಗುಹೆಯ ಒಳಗಿನಿಂದ ಕುರೂಪಿಯಾದ ಒಬ್ಬ ಮುದುಕಿ ಹೊರಗೆ ಬಂದಳು. ಬೆಳಕಿಗಾಗಿ ಅವಳು ದೀವಟಿಗೆ ಹಿಡಿದಿದ್ದಳು. ಅವಳ ಕೈಯಲ್ಲಿ ಮಂತ್ರದಂಡವಿತ್ತು. ಜೊತೆಗೆ ಕಡು ಕಪ್ಪು ಬಣ್ಣದ ಒಬ್ಬ ಹುಡುಗನಿದ್ದ. ಅವನಿಗೆ ಮೆಳ್ಳೆಗಣ್ಣು, ಉಬ್ಬುಹಲ್ಲು. ನೋಡಲು ಸ್ವಲ್ಪವೂ ಚಂದವಿರಲಿಲ್ಲ. ಮುದುಕಿಯು ಸಲೀಸಾಗಿ ಒಂದು ಗಿಣಿಯನ್ನು ಕೈಯಲ್ಲಿ ಹಿಡಿದಳು. ತನ್ನಲ್ಲಿರುವ ಮಂತ್ರದಂಡವನ್ನು ಅದರ ತಲೆಗೆ ಸೋಕಿಸಿದಳು. ಆಗ ಗಿಣಿಯು ಮಾಯವಾಗಿ ಒಬ್ಬ ಸುಂದರವಾದ ಹುಡುಗಿ ಅಲ್ಲಿ ನಿಂತಿದ್ದಳು. ಮರೆಯಲ್ಲಿ ಕುಳಿತಿದ್ದ ಅನ್ನಾ ಆ ಕಡೆಗೆ ನೋಡಿದಾಗ ಆ ಹುಡುಗಿ ಕಾಣೆಯಾಗಿದ್ದ ತನ್ನ ಗೆಳತಿ ಎಂದು ಗುರುತು ಸಿಕ್ಕಿತು.
ಮುದುಕಿಯು ಹುಡುಗಿಯೊಂದಿಗೆ, “”ನಿನ್ನ ನಿರ್ಧಾರವನ್ನು ಬದಲಾಯಿಸುವೆಯಾ, ಅಲ್ಲ ಗಿಣಿಯಾಗಿಯೇ ಬದುಕನ್ನು ಕಳೆಯುವೆಯಾ?” ಎಂದು ಕೋಪದಿಂದ ಕೇಳಿದಳು. ಹುಡುಗಿಯು ದಿಟ್ಟತನದಿಂದ, “”ಗಿಣಿಯಾಗಿ ಸತ್ತರೂ ಸರಿ, ಕುರೂಪಿಯಾಗಿರುವ ನಿನ್ನ ಮಗನನ್ನು ಮದುವೆಯಾಗಲು ಖಂಡಿತ ಸಮ್ಮತಿಸುವುದಿಲ್ಲ” ಎಂದು ಹೇಳಿದಳು.
ಮುದುಕಿಯು,””ನನ್ನ ಮಗನಿಗೆ ಏನು ಕಡಮೆಯಾಗಿದೆಯೆಂದು ಹೀಗೆ ಹೇಳುತ್ತಿರುವೆ? ಅವನನ್ನು ಮದುವೆಯಾದರೆ ಮುಂದೆ ಮಂತ್ರಗಾತಿಯರ ಲೋಕದ ರಾಣಿಯಾಗುವೆ. ವಿರೋಧಿಸಿದರೆ ಗಿಣಿಯಾಗಿದ್ದು ಗಿಡುಗನಿಗೋ ಹದ್ದಿಗೋ ಆಹಾರವಾಗುವೆ” ಎಂದು ಹೆದರಿಸಿದಳು. ಆದರೆ ಅವಳು ಕುರೂಪಿಯ ಕೈ ಹಿಡಿಯಲು ಒಪ್ಪಲಿಲ್ಲ. ಮುದುಕಿ ತನ್ನ ಮಂತ್ರದಂಡದ ಶಕ್ತಿಯಿಂದ ಮರಳಿ ಅವಳನ್ನು ಗಿಣಿಯಾಗಿ ಬದಲಾಯಿಸಿದಳು.
ಮುದುಕಿ ಅಲ್ಲಿರುವ ಎಲ್ಲ ಹಕ್ಕಿಗಳನ್ನೂ ಒಂದೊಂದಾಗಿ ಸನಿಹ ಕರೆದು ಮನುಷ್ಯಳಾಗಿ ಮಾಡಿದಳು. ತನ್ನ ಮಗನನ್ನು ಮದುವೆಯಾಗಲು ಹೇಳಿದಳು. ಅವರು ಯಾರೂ ಒಪ್ಪದೆ ಹೋದಾಗ ಮತ್ತೆ ಹಕ್ಕಿಗಳಾಗುವಂತೆ ಮಾಡಿ ಗುಹೆಯ ಒಳಗೆ ಹೊರಟುಹೋದಳು. ನೋಡುತ್ತ ಕುಳಿತಿದ್ದ ಅನ್ನಾಳಿಗೆ ಅವಳು ಒಬ್ಬ ಮಂತ್ರವಾದಿನಿಯೆಂದು ಗೊತ್ತಾಯಿತು. ಕುರಿಗಳನ್ನು ಅಪಹರಿಸಿ ತಂದು ಕೂಡಿಡುತ್ತಾಳೆ. ಹುಡುಕಿಕೊಂಡು ಬರುವ ಹುಡುಗಿಯರನ್ನು ಹಕ್ಕಿಗಳಾಗಿ ಬದಲಾಯಿಸಿ ಕುರೂಪಿ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ ಎಂಬುದು ಅರಿವಾಯಿತು. ಇದಕ್ಕೆ ಏನಾದರೂ ಮದ್ದು ಅರೆಯಬೇಕೆಂದು ಯೋಚಿಸುತ್ತ ಕುಳಿತಳು.
ಆಗ ಒಂದು ಗೂಬೆಯು ಅನ್ನಾಳ ಬಳಿಗೆ ಬಂದಿತು. ಮನುಷ್ಯ ಭಾಷೆಯಲ್ಲಿ ಮಾತನಾಡಿಸಿತು. ಅನ್ನಾ, “”ನೀನು ಯಾರು, ಆ ಮುದುಕಿಯ ಮಂತ್ರದಿಂದ ಇಂತಹ ರೂಪ ಪಡೆದಿರುವೆಯಾ?” ಎಂದು ಕೇಳಿದಳು. “”ಹೌದು, ನಾನು ಈ ದೇಶದ ರಾಜನ ಮಗ. ಈ ಮಂತ್ರವಾದಿನಿಯ ರಹಸ್ಯ ಭೇದಿಸಬೇಕೆಂದು ನಿರ್ಧರಿಸಿ ಬಂದು ಅವಳ ಮಂತ್ರಶಕ್ತಿಯಿಂದ ಗೂಬೆಯಾಗಿ ಹೋದೆ. ಅವಳ ಮಗನಿಗೆ ಯಾವ ಹುಡುಗಿಯ ಜೊತೆಯಾದರೂ ಮದುವೆಯಾದರೆ ಸಾಕು ಅವಳು ಮಾಂತ್ರಿಕ ಲೋಕದ ರಾಣಿಯಾಗುತ್ತಾಳೆ. ಅವಳನ್ನು ಸೋಲಿಸಲು ಯಾರಿಗೂ ಆಗುವುದಿಲ್ಲ” ಎಂದು ಗೂಬೆ ಹೇಳಿತು.
“”ಹಾಗಿದ್ದರೆ ಹೇಗಾದರೂ ಮಾಡಿ ಅವಳಿಗೆ ಪಾಠ ಕಲಿಸಬೇಕು. ಇದಕ್ಕೆ ಏನಾದರೂ ದಾರಿ ಇದ್ದರೆ ಹೇಳು” ಎಂದು ಅನ್ನಾ ಕೇಳಿದಳು.
“”ಅದಕ್ಕೆ ಒಂದು ದಾರಿ ಇದೆ. ಒಳಗಿರುವ ಎಲ್ಲ ಕುರಿಗಳ ಬಾಲ ಕತ್ತರಿಸಿದ್ದಾಳೆ, ಆದರೆ ಕೊರಳಿನಲ್ಲಿ ಗಂಟೆ ಕಟ್ಟಿರುವ ಒಂದು ಕುರಿಗೆ ಮಾತ್ರ ಬಾಲವಿದೆ. ಕುರಿಯ ಬಾಲದಲ್ಲಿ ಮುದುಕಿಯ ಮಂತ್ರಶಕ್ತಿಯೆಲ್ಲ ಇರುವ ಉಂಗುರವಿದೆ. ಕುರಿಯನ್ನು ಹೊರಗೆ ತರಲು ಸಾಧ್ಯವಾದರೆ ಅದರ ಬಾಲವನ್ನು ಕತ್ತರಿಸಿದಾಗ ಒಳಗೆ ಅಡಗಿಸಿಟ್ಟಿರುವ ಉಂಗುರ ಸಿಗುತ್ತದೆ. ಈ ಬಾಲವನ್ನು ಮೂರು ಸಲ ಇಲ್ಲಿರುವ ಎಲ್ಲ ಹಕ್ಕಿಗಳ ತಲೆಯ ಮೇಲೆ ತಿರುಗಿಸಿದರೆ ಮತ್ತೆ ಮನುಷ್ಯ ಜನ್ಮ ಬರುತ್ತದೆ. ಎಲ್ಲರೂ ಒಂದಾಗಿ ಮಂತ್ರಶಕ್ತಿ ಕಳೆದುಕೊಂಡಿರುವ ಮುದುಕಿಯನ್ನೂ ಅವಳ ಮಗನನ್ನೂ ಕೊಲ್ಲುವುದು ಕಷ್ಟವಿಲ್ಲ” ಎಂದು ಹೇಳಿತು ಗೂಬೆ.
“”ಕೊರಳಿಗೆ ಗಂಟೆ ಕಟ್ಟಿರುವ ಕುರಿಯನ್ನು ಹೊರಗೆ ತರುವುದು ಅಸಾಧ್ಯವಲ್ಲ. ಅದು ನಾನು ಸಾಕಿದ ಕುರಿ ಎಂಬುದರಲ್ಲಿ ಅನುಮಾನವಿಲ್ಲ. ಅದನ್ನು ಎಷ್ಟು ಬಿಗಿಯಾಗಿ ಕಟ್ಟಿ ಹಾಕಿದ್ದರೂ ಬಂಧನವನ್ನು ಹರಿದು ಕೊಂಡು ಹೇಗೆ ಹೊರಗೆ ಬರುತ್ತದೆಂದು ನೀನೇ ನೋಡು” ಎನ್ನುತ್ತ ಅನ್ನಾ ಬಾಯೊಳಗೆ ಎರಡು ಬೆರಳುಗಳನ್ನು ಹಾಕಿ ಜೋರಾಗಿ ಸಿಳ್ಳೆ ಹಾಕಿದಳು. ಸಿಳ್ಳೆಯ ಧ್ವನಿ ಕಿವಿಗೆ ಬಿದ್ದ ಕೂಡಲೇ ಒಳಗಿದ್ದ ಕುರಿ ನೆಟ್ಟಗಾಯಿತು.
“ಬ್ಯಾ ಬ್ಯಾ” ಎಂದು ಕೂಗುತ್ತ ಕಟ್ಟಿದ್ದ ಹಗ್ಗ ಹರಿದುಕೊಂಡು ಓಡೋಡಿ ಹೊರಗೆ ಬಂದಿತು. ಅನ್ನಾ ತಡಮಾಡದೆ ಅದರ ಬಾಲವನ್ನು ಚಿವುಟಿ ತೆಗೆದು ಒಳಗಿರುವ ಉಂಗುರವನ್ನು ಪಡೆದುಕೊಂಡಳು. ಗೂಬೆಯ ತಲೆಯ ಸುತ್ತಲೂ ಬಾಲವನ್ನು ತಿರುಗಿಸಿದಳು. ಮರಕ್ಷಣವೇ ಗೂಬೆ ಮಾಯವಾಗಿ ರಾಜಕುಮಾರ ಕಾಣಿಸಿಕೊಂಡ. ಕುರಿಯ ಬಾಲವನ್ನು ಹಿಡಿದು ಹಕ್ಕಿಗಳೆಲ್ಲವನ್ನೂ ಮೊದಲಿನ ಹಾಗೆ ಆಗುವಂತೆ ಮಾಡಿಬಿಟ್ಟ. ಅದರಲ್ಲಿ ಅನ್ನಾಳ ಕಾಣೆಯಾದ ಎಲ್ಲ ಗೆಳತಿಯರು ಕೂಡ ಇದ್ದರು.ಆಗ ಮಂತ್ರವಾದಿನಿ ಮಗನ ಜೊತೆಗೆ ಹೊರಗೆ ಬಂದಳು. ಅವಳ ಮಂತ್ರಶಕ್ತಿಯ ಉಂಗುರ ರಾಜಕುಮಾರನ ಕೈಯಲ್ಲಿದ್ದ ಕಾರಣ ಅವಳ ಆಟ ನಡೆಯಲಿಲ್ಲ. ರಾಜಕುಮಾರ ಅವಳನ್ನು ಕೊಂದು ಹಾಕಿದ. ಎಲ್ಲ ಹುಡುಗಿಯರನ್ನೂ ಅವರವರ ಮನೆಗಳಿಗೆ ಕರೆದುಕೊಂಡು ಹೋದ. ಮಂತ್ರವಾದಿನಿಯ ಬಂಧನದಿಂದ ಎಲ್ಲರನ್ನೂ ಪಾರು ಮಾಡಿದ ಅನ್ನಾಳನ್ನು ತನ್ನ ಅರಮನೆಗೆ ಕರೆತಂದು ಮದುವೆ ಮಾಡಿಕೊಂಡ.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ