ಇಂಡೋನೇಷ್ಯಾದ ಕತೆ: ಹಂದಿಯಾದ ಹೆಂಗಸು


Team Udayavani, Feb 10, 2019, 12:30 AM IST

q-4.jpg

ಸಮುದ್ರ ತೀರದಲ್ಲಿ ಒಬ್ಬ ಮೀನುಗಾರ ವಾಸವಾಗಿದ್ದ. ಅವನ ಹೆಸರು ಅಪಾಯಿ ಗುಮೋಕೆ. ಅವನ ಹೆಂಡತಿ ದೇಹಾಕೃತಿಯಲ್ಲಿ ಪರ್ವತದ ಹಾಗೆ ಕೊಬ್ಬಿದ್ದಳು. ದೇಹಕ್ಕೆ ತಕ್ಕಂತೆ ಅವಳಿಗೆ ಬೆಟ್ಟದಷ್ಟು ಹಸಿವು. ಗುಮೋಕೆ ದಿನವಿಡೀ ದೋಣಿಯಲ್ಲಿ ಕುಳಿತು ಬಲೆಯೊಂದಿಗೆ ಸಮುದ್ರದಲ್ಲಿ ಸಂಚರಿಸಿ ಮೀನುಗಳನ್ನು ಹಿಡಿದು ತರುತ್ತಿದ್ದ. ಅವನು ಮೀನು ತರುವುದನ್ನೇ ಹೆಂಡತಿ ಕಾದಿರುತ್ತಿದ್ದಳು. ಬುಟ್ಟಿ ತುಂಬ ಮೀನುಗಳನ್ನು ಬೇಯಿಸಿ ಗಬಗಬನೆ ತಿನ್ನುತ್ತಿದ್ದಳು. ಆದರೂ ಅವಳ ಹಸಿವೆ ಇಂಗುತ್ತಿರಲಿಲ್ಲ. “”ಏನು, ದಿನವಿಡೀ ದುಡಿದು ಇಷ್ಟು ಕಡಿಮೆ ಆಹಾರ ತಂದಿದ್ದೀಯಾ! ಇದರಿಂದ ನನಗೆ ಅರೆಹೊಟ್ಟೆಯೂ ತುಂಬುವುದಿಲ್ಲ. ನಿನ್ನಂತಹ ಸೋಮಾರಿಯೊಂದಿಗೆ ಸಂಸಾರ ಮಾಡುವುದು ಹೇಗೆ?” ಎಂದು ಕೂಗಾಡಿ ಜಗಳ ಮಾಡುತ್ತಿದ್ದಳು.

ಹೆಂಡತಿಯನ್ನು ಸಮಾಧಾನಪಡಿಸಲು ಗುಮೋಕೆ ಮತ್ತೆ ಹೊರಗೆ ಹೋಗಿ ಹಕ್ಕಿಗಳನ್ನು ಹಿಡಿದು ತರುತ್ತಿದ್ದ. ಆದರೂ ಅವಳಿಗೆ ಸಾಲುತ್ತಿರಲಿಲ್ಲ. ತಿಂದ ಕೂಡಲೇ ಜಗಳ ಮಾಡುವಳು. ದಿನವೂ ಈ ಪರಿಸ್ಥಿತಿಯನ್ನೆದುರಿಸಿ ಅವನಿಗೆ ಬೇಸರ ಬಂದಿತು. ಗೆಳೆಯರೊಂದಿಗೆ, “”ಎಂಥ ಹೆಂಡತಿಯನ್ನು ಕಟ್ಟಿಕೊಂಡೆ ನೋಡಿ. ದುಡಿದು ತಂದ ಎಲ್ಲವನ್ನೂ ಅವಳೊಬ್ಬಳೇ ತಿಂದು ನಾನು ಕೈಲಾಗದವನೆಂದು ಜರೆಯುತ್ತಾಳೆ. ಅವಳ ಜೊತೆಗೆ ಬದುಕುವ ಬದಲು ಸಾಯುವುದೇ ಮೇಲು ಅನಿಸುತ್ತದೆ” ಎಂದು ತನ್ನ ದುಃಖವನ್ನು ತೋಡಿಕೊಂಡ. ಗೆಳೆಯರ ಪೈಕಿ ವಯಸ್ಸಿನಲ್ಲಿ ಹಿರಿಯವನೂ ಅನುಭವಿಯೂ ಆದ ಒಬ್ಬನಿದ್ದ. ಅವನು, “”ಅವಳ ದೇಹದ ಆಕೃತಿ ನೋಡಿದರೆ ಸಹಜವಾದುದಲ್ಲ ಅನಿಸುತ್ತದೆ. ಯಾವುದೋ ಪಿಶಾಚಿ ದೇಹವನ್ನು ಪ್ರವೇಶಿಸಿ ಹೀಗೆ ಆಹಾರದ ರಾಶಿಯನ್ನೇ ನುಂಗುತ್ತಿರಬಹುದು. ನೀನು ಪಕ್ಕದ ಕಾಡಿಗೆ ಹೋಗು. ಅಲ್ಲಿ ಮಾಟಗಾತಿಯರು ಅಲೆದಾಡುತ್ತ ಇರುತ್ತಾರೆ. ನಿನ್ನ ಸಮಸ್ಯೆಯನ್ನು ನಿವಾರಿಸಿ ಹೆಂಡತಿಯನ್ನು ಸಾಮಾನ್ಯಳಂತೆ ಮಾಡುವ ಶಕ್ತಿ ಅವರಿಗೆ ಇರುತ್ತದೆ, ಅವರಲ್ಲಿ ಕೇಳಿಕೋ” ಎಂದು ಸಲಹೆ ನೀಡಿದ.

ಗುಮೋಕೆ ಮಾಟಗಾತಿಯರನ್ನು ಹುಡುಕಿಕೊಂಡು ಕಾಡಿಗೆ ಬಂದ. ಆಗ ಜಡೆಗಟ್ಟಿದ ಕೂದಲಿನ ಕಪ್ಪು$ಮೈವರ್ಣದ ಕುರೂಪಿಯಾದ ಒಬ್ಬ ಮಾಟಗಾತಿ ಅವನೆದುರಿಗೆ ಬಂದಳು. ಅವನು ಅವಳ ಬಳಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು ತನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದ. ಮಾಟಗಾತಿಯು ಅವನಿಗೆ ನೆರವಾಗುವ ಬದಲು, “”ಹೆಂಡತಿ ನಿನಗೆ ಅನುಕೂಲಳಲ್ಲ ಎಂಬುದು ನಿಜ ತಾನೆ? ಅವಳೊಂದಿಗೆ ಸಂಸಾರ ಮಾಡಬೇಡ. ನನ್ನನ್ನು ಮದುವೆಯಾಗಿ ಇಲ್ಲಿಯೇ ಸುಖವಾಗಿರು” ಎಂದು ಹೇಳಿದಳು.

ಈ ಮಾತು ಕೇಳಿ ಗುಮೋಕೆ ಹೌಹಾರಿದ. “”ಏನಿದು ಮಾತು? ನನಗೆ ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದಾಳೆ. ಹೀಗಿರುವಾಗ ನಿನ್ನನ್ನು ಮದುವೆಯಾಗುವುದು ಹೇಗೆ ಸಾಧ್ಯ?” ಎಂದು ಕೋಪದಿಂದ ಕೇಳಿದ. ಮಾಟಗಾತಿ ಜೋರಾಗಿ ನಕ್ಕಳು. “”ಅದರ ಬಗೆಗೆ ಚಿಂತಿಸಬೇಡ. ನಮ್ಮ ದಾರಿಗೆ ನಿನ್ನ ಹೆಂಡತಿ ಮುಳ್ಳಾಗುವುದಿಲ್ಲ. ಯಾಕೆಂದರೆ, ನನ್ನ ಮಂತ್ರದ ಶಕ್ತಿಯಿಂದ ನೀನು ಮನೆಗೆ ಹೋಗಿ ನೋಡಿದಾಗ ಅವಳು ಮನೆಯೊಳಗಿರುವುದಿಲ್ಲ. ಬದಲಾಗಿ ಮೈತುಂಬ ಕಪ್ಪು$ ಚುಕ್ಕೆಗಳಿರುವ ಗುಲಾಬಿ ಬಣ್ಣದ ಒಂದು ಹಂದಿಯಾಗಿ ಅಂಗಳದಲ್ಲಿರುತ್ತಾಳೆ. ಮುಂದೆ ನೀನು ಅವಳಿಗೆ ಆಹಾರ ತರುವ ಅಗತ್ಯವಿರುವುದಿಲ್ಲ. ಅವಳೇ ಹೊಲಸು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ನೀನು ಈಗಲೇ ಮನೆಗೆ ತೆರಳಿ ಪರೀಕ್ಷಿಸು. ನನ್ನ ಮಾತು ನಿಜವಾಗಿರುವುದು ಗೊತ್ತಾಗುತ್ತದೆ. ಆಗ ನೀನಾಗಿಯೇ ನನ್ನ ಬಳಿಗೆ ಬಂದು ನನ್ನೊಂದಿಗೆ ಮದುವೆಯಾಗುತ್ತೀಯಾ. ತಪ್ಪಿದರೆ ನನ್ನ ಮಂತ್ರದಿಂದ ನೀನು ಎಲ್ಲಿದ್ದರೂ ಕರೆದು ತರಲು ನನಗೆ ಸಾಧ್ಯವಿದೆ” ಎಂದು ಮಂತ್ರದಂಡವನ್ನು ಒಂದು ಸಲ ಝಳಪಿಸಿದಳು.

ಗುಮೋಕೆ ಮನೆಗೆ ಬಂದ. ಮಾಟಗಾತಿಯ ಮಾತು ಸುಳ್ಳಾಗಿರಲಿಲ್ಲ. ಹೆಂಡತಿ ಮನೆಯೊಳಗಿರಲಿಲ್ಲ. ಅಂಗಳದಲ್ಲಿ ಮೈಯಲ್ಲಿ ಚುಕ್ಕೆಗಳಿದ್ದ ಹಂದಿ ಕಾಣಿಸಿತು. ಮನಸ್ಸು ಮಾಡಿದರೆ ಮಾಟಗಾತಿ ತನಗೂ ಕೇಡು ಮಾಡಬಹುದು ಎಂಬುದು ಅವನಿಗೆ ಮನದಟ್ಟಾಯಿತು. ಕಾಡಿಗೆ ಓಡಿದ. ಮಾಟಗಾತಿಯನ್ನು ಭೇಟಿ ಮಾಡಿದ. “”ನೀನು ಹೇಳಿದ ಮಾತು ನಿಜವೇ ಆಗಿದೆ. ನಿನಗಿರುವ ಶಕ್ತಿ ಕಂಡು ಅಚ್ಚರಿಯೂ ಆಗಿದೆ. ಆದರೆ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿದ್ದೇನೆ. ಆದ ಕಾರಣ ಈ ಶೋಕದಿಂದ ಹೊರಬಂದ ಬಳಿಕ ನಾವಿಬ್ಬರೂ ಮದುವೆಯಾಗಬಹುದು. ಆ ವರೆಗೂ ನನಗೆ ಕೆಲವು ದಿನಗಳ ಅವಕಾಶ ಕೊಡಬೇಕು” ಎಂದು ಕೇಳಿಕೊಂಡ.

ಮಾಟಗಾತಿಯು, “”ಒಂದು ವಾರದ ಅವಕಾಶ ಕೊಡುತ್ತೇನೆ. ಸಮುದ್ರ ತೀರದಲ್ಲಿ ನಮಗಿಬ್ಬರಿಗೂ ಮದುವೆಯಾಗುತ್ತದೆ. ಅಲ್ಲಿಗೆ ಹಂದಿಯಾಗಿರುವ ನಿನ್ನ ಹೆಂಡತಿಯನ್ನೂ ಕರೆತರಬೇಕು. ನಾನು ನಿನಗೆ ಮಂತ್ರಜಲ ತುಂಬಿದ ಒಂದು ಪಾತ್ರೆಯನ್ನು ಕೊಡುತ್ತೇನೆ. ನಾನು ಸಮುದ್ರದಲ್ಲಿ ಸ್ನಾನ ಮಾಡಿ ಮೇಲೆ ಬಂದ ಕೂಡಲೇ ನೀನು ಅದರಲ್ಲಿರುವ ಮಂತ್ರಿಸಿದ ನೀರನ್ನು ನನ್ನ ಮೈಗೆ ಹಾಕಬೇಕು. ಅದರಿಂದ ನಾನು ಪರಮ ಸುಂದರಿಯಾಗಿ ಬದಲಾಗುತ್ತೇನೆ. ಎರಡನೆಯ ಸಲದ ನೀರನ್ನು ನಿನ್ನ ಹೆಂಡತಿಯ ಮೇಲೆ ಸುರುವಿಬಿಡು. ಅದರಿಂದ ಅವಳು ಶಿಲೆಯಾಗಿ ಬಿಡುತ್ತಾಳೆ. ತಪ್ಪಿ ಕೂಡ ಎರಡನೆಯ ಸಲದ ನೀರನ್ನು ನನ್ನ ಮೈಗೆ ಹಾಕಬೇಡ. ನಿನ್ನೊಂದಿಗೆ ಒಂದು ವಾರ ಸಂಸಾರ ಮಾಡಿದ ಮೇಲೆ ನಾನು ನಿನ್ನನ್ನು ತಿಂದು ಮರಳಿ ಕಾಡಿಗೆ ಹೋಗುತ್ತೇನೆ. ಹೀಗೆ ನಾನು ಅನೇಕ ಸಲ ಮದುವೆಯಾಗಿ ಅವರನ್ನೆಲ್ಲ ತಿಂದು ಜೀರ್ಣಿಸಿಕೊಂಡಿದ್ದೇನೆ” ಎಂದು ಹೇಳಿದಳು.

ಗುಮೋಕೆ ಮಾಟಗಾತಿಯ ಮಾತಿನಂತೆಯೇ ನಡೆಯುವುದಾಗಿ ಮಾತು ಕೊಟ್ಟು ಮನೆಗೆ ಬಂದ. ಮದುವೆಯಾಗಿ ಒಂದು ವಾರದಲ್ಲಿ ತಾನು ಮಾಟಗಾತಿಗೆ ಆಹಾರವಾಗಲಿರುವುದನ್ನು ಕೇಳಿ ಅವನಿಗೆ ಅನ್ನಾಹಾರಗಳು ಸೇರಲಿಲ್ಲ. ನಿದ್ರೆ ಬರಲಿಲ್ಲ. ಸೊರಗಿ ಕಡ್ಡಿಯಾದ. ಗೆಳೆಯರೆಲ್ಲ ಅವನನ್ನು ನೋಡಲು ಬಂದರು. “”ಅಯ್ಯೋ ಏನಾಯಿತೋ ನಿನಗೆ? ಎಷ್ಟೊಂದು ಚಂದವಾಗಿ ಜೀವನ ಮಾಡಿಕೊಂಡಿದ್ದೆಯಲ್ಲ! ಈಗ ನೋಡಿದರೆ ನೀನು ಬತ್ತಿ ಹೋಗಿದ್ದೀ. ನಿನ್ನ ಹೆಂಡತಿಯೂ ಕಾಣುವುದಿಲ್ಲ. ಏನು ನಡೆಯಿತು ಹೇಳು” ಎಂದು ಕೇಳಿದರು.

ಗುಮೋಕೆ ಕಣ್ಣೀರು ತುಂಬಿಕೊಂಡು, “”ಇರುವ ಪರಿಸ್ಥಿತಿಯಲ್ಲೇ ಮನುಷ್ಯ ತೃಪ್ತಿ ಪಟ್ಟುಕೊಂಡು ಬದುಕಲು ಕಲಿತರೆ ಏನೂ ಆಗುವುದಿಲ್ಲ. ನಾನು ಹೆಂಡತಿಯನ್ನು ಬದಲಾಯಿಸಲು ಹೋಗಿ ಮಾಟಗಾತಿಯ ಬಲೆಗೆ ಸಿಲುಕಿಬಿಟ್ಟಿದ್ದೇನೆ. ಈಗ ಕೈ ಹಿಡಿದ ಹೆಂಡತಿ ಶಿಲೆಯಾಗುತ್ತಾಳೆ. ಮಾಟಗಾತಿಯ ಗಂಡನಾಗಿ ಒಂದು ವಾರದಲ್ಲಿ ಅವಳಿಗೆ ಆಹಾರವಾಗುತ್ತೇನೆ. ಇದರಿಂದ ಪಾರಾಗುವ ದಾರಿಯಾದರೂ ಏನಿದೆ ಎಂದು ತಿಳಿಯದೆ ಕಂಗಾಲಾಗಿದ್ದೇನೆ” ಎಂದು ನಡೆದ ವಿಷಯವನ್ನು ಗೆಳೆಯರಿಗೆ ಹೇಳಿದ.

ಗೆಳೆಯರಲ್ಲಿ ಅನುಭವಿಯಾದ ಹಿರಿಯ, “”ಅಪಾಯವನ್ನು ಉಪಾಯದಿಂದ ನಿವಾರಿಸಿಕೊಳ್ಳಬೇಕು. ನಾನು ಹೇಳಿದಂತೆ ಮಾಡಿದರೆ ನಿನಗೆ ಒಳ್ಳೆಯದೇ ಆಗುತ್ತದೆ” ಎಂದು ಮಾಡಬೇಕಾದ ಕೆಲಸವನ್ನು ಅವನಿಗೆ ಕಿವಿಯಲ್ಲಿ ಹೇಳಿದ. ಇದರಿಂದ ಗುಮೋಕೆಯ ಮುಖ ಅರಳಿತು. ಕಷ್ಟದಿಂದ ಪಾರಾಗುವ ಧೈರ್ಯ ಮೂಡಿತು. ಮಾಟಗಾತಿ ಹೇಳಿದ ದಿನ ಸಮುದ್ರ ತೀರಕ್ಕೆ ಹೋದ. ಜೊತೆಗೆ ಹಂದಿಯಾಗಿರುವ ಹೆಂಡತಿಯನ್ನೂ ಕರೆದುಕೊಂಡಿದ್ದ. ಮಾಟಗಾತಿ ಮಂತ್ರಜಲ ತುಂಬಿದ ಪಾತ್ರೆಯೊಂದಿಗೆ ಅಲ್ಲಿಗೆ ಬಂದು ಅವನ ಕೈಗೆ ಅದನ್ನು ಕೊಟ್ಟಳು. “”ನೆನಪಿದೆ ತಾನೆ? ನಾನು ಸಮುದ್ರದಲ್ಲಿ ಮುಳುಗಿ ಸ್ನಾನ ಮುಗಿಸಿ ಬಂದ ಕೂಡಲೇ ಮೇಲ್ಭಾಗದ ಮಂತ್ರದ ನೀರನ್ನು ನನ್ನ ಮೈಗೇ ಚಿಮುಕಿಸಬೇಕು. ನಾನು ಅಪ್ಸರೆಯಂತಹ ಸುಂದರಿಯಾಗುತ್ತೇನೆ. ಉಳಿದ ನೀರು ಹಂದಿಯಾದ ಹೆಂಡತಿಗೆ. ಅವಳು ಶಾಶ್ವತವಾಗಿ ಇಲ್ಲೇ ಶಿಲೆಯಾಗಿ ಬಿದ್ದಿರಲಿ” ಎಂದು ಹೇಳಿದಳು.

“”ನನಗೆ ಎಲ್ಲ ಮಾತುಗಳೂ ನೆನಪಿವೆ. ನೀನು ಸ್ನಾನ ಮುಗಿಸಿ ಬಾ” ಎಂದು ಗುಮೋಕೆ ಹೇಳಿದ. ಮಾಟಗಾತಿ ಸಮುದ್ರದಲ್ಲಿ ಸ್ನಾನ ಮುಗಿಸಿ ಬರುತ್ತಿದ್ದಂತೆ ಪಾತ್ರೆಯಲ್ಲಿರುವ ಮೇಲ್ಭಾಗದ ನೀರನ್ನು ತನ್ನ ಹೆಂಡತಿಯ ಮೈಗೆ ಸುರುವಿದ. ಕೋಪದಿಂದ ಮಾಟಗಾತಿ ಹಲ್ಲು ಕಡಿಯುತ್ತ, “”ಅವಿವೇಕಿ, ಏನು ಅವಾಂತರ ಮಾಡಿದೆ? ನನ್ನ ಮಂತ್ರದಿಂದ ನಿನ್ನನ್ನು ಸರ್ವನಾಶ ಮಾಡುತ್ತೇನೆ” ಎಂದು ಗರ್ಜಿಸಿದಳು. ಗುಮೋಕೆ ಬೆದರದೆ ಪಾತ್ರೆಯಲ್ಲಿರುವ ತಳಭಾಗದ ನೀರನ್ನು ಮಾಟಗಾತಿಯ ಮೈಮೇಲೆ ಎರಚಿದ. ಅವಳ ಕೂಗು ನಿಂತೇಹೋಯಿತು. ಅವಳು ದೊಡ್ಡ ಶಿಲೆಯಾಗಿ ಮಾರ್ಪಟ್ಟಳು. ಮಂತ್ರಜಲದ ಮಹಿಮೆಯಿಂದ ಗುಮೋಕೆಯ ಹೆಂಡತಿ ಮರಳಿ ಮನುಷ್ಯಳಾದಳು. ಆದರೆ ತೆಳ್ಳಗೆ, ಬೆಳ್ಳಗೆ ಸುಂದರಿಯಾಗಿ ಬದಲಾಗಿದ್ದ ಅವಳಿಗೆ ಮೊದಲಿನಂತೆ ಹಸಿವೆಯೂ ಇರಲಿಲ್ಲ. ಗಂಡನೊಂದಿಗೆ ಸುಖವಾಗಿದ್ದಳು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.