ಭೂತ ಮತ್ತು ಮೀನುಗಾರ
Team Udayavani, Mar 17, 2019, 12:30 AM IST
ಒಂದು ಕಡಲಿನ ತೀರದಲ್ಲಿ ಒಬ್ಬ ಮೀನುಗಾರ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ. ಮೀನು ಹಿಡಿದು ಮಾರಾಟ ಮಾಡಿ ಬದುಕುತ್ತಿದ್ದರೂ ಅವನು ಒಂದು ನಿಯಮವನ್ನು ಪಾಲಿಸುತ್ತಿದ್ದ. ಪ್ರತಿ ದಿನವೂ ತನ್ನ ಪುಟ್ಟ ದೋಣಿಯಲ್ಲಿ ಸಮುದ್ರದಲ್ಲಿ ಹೋಗಿ ನಾಲ್ಕು ಸಲ ಮಾತ್ರ ಬಲೆ ಬೀಸುತ್ತಿದ್ದ. ಅದರಿಂದ ಎಷ್ಟು ಮೀನು ಸಿಕ್ಕಿತೋ ಅಷ್ಟರಲ್ಲಿಯೇ ಸಂಸಾರ ಪೋಷಣೆ ಮಾಡಿಕೊಂಡಿದ್ದ. ಆದರೆ, ನಿಯಮವನ್ನು ಮುರಿದು ಐದನೆಯ ಸಲ ಬಲೆ ಬೀಸುತ್ತಿರಲಿಲ್ಲ.
ಒಂದು ಸಲ ಏನಾಯಿತೋ, ಈ ನಿಯಮದಿಂದ ಮೀನುಗಾರನಿಗೆ ಹಲವು ದಿನಗಳವರೆಗೂ ಒಂದೇ ಒಂದು ಮೀನು ಬಲೆಗೆ ಬೀಳಲಿಲ್ಲ. ಅವನ ಸಂಸಾರ ಉಪವಾಸ ಬೀಳುವ ಸ್ಥಿತಿ ಬಂದಿತು. ಆಗ ಅವನ ಹೆಂಡತಿ, “”ಐದನೆಯ ಸಲ ಬಲೆ ಬೀಸುವುದಿಲ್ಲ ಎಂಬ ನಿಯಮ ಮಾಡಿ ನಮ್ಮನ್ನು ಊಟವಿಲ್ಲದೆ ಕೊಲ್ಲುತ್ತೀಯಾ? ನಿನ್ನ ನಿಯಮಕ್ಕೆ ಮಣ್ಣು ಹಾಕಲಿ. ಹೋಗು, ಮೀನು ಸಿಗುವ ವರೆಗೂ ಬಲೆ ಬೀಸು. ಬರಿಗೈಯಲ್ಲಿ ಮನೆಗೆ ಬರಬೇಡ. ಇಲ್ಲವಾದರೆ ಮಕ್ಕಳೊಂದಿಗೆ ಎಲ್ಲಿಗಾದರೂ ಹೋಗಿಬಿಡುತ್ತೇನೆ” ಎಂದಳು.
ಮೀನುಗಾರ ಸಮುದ್ರಕ್ಕೆ ಹೋಗಿ ನಾಲ್ಕು ಸಲ ಬಲೆ ಬೀಸಿದ. ಬಲೆ ಬರಿದಾಗಿಯೇ ಇತ್ತು. ಹೆಂಡತಿಯ ಮಾತಿಗೆ ಕಟ್ಟುಬಿದ್ದು ಐದನೆಯ ಸಲ ಬಲೆಬೀಸಿ ಮೇಲಕ್ಕೆಳೆದ. ಒಂದು ಸತ್ತ ಕೋಳಿ ಮಾತ್ರ ಬಂದಿತು. ಆರನೆಯ ಸಲ ಬಲೆ ಬೀಸಿದಾಗ ಕಸ ತುಂಬಿದ್ದ ಒಂದು ಬುಟ್ಟಿ ಬಂದಿತು. ಬೇಸರವಾದರೂ ಏಳನೆಯ ಸಲ ಬಲೆ ಬೀಸಿ ಮೇಲೆಳೆದಾಗ ತುಂಬ ಭಾರವಾಗಿತ್ತು. ಹೇರಳ ಮೀನು ಬಂದಿರಬಹುದೆಂದು ಭಾವಿಸಿ ಬಲೆಯನ್ನು ಮೇಲೆಳೆದರೆ ನಿರಾಸೆಯೇ ಆಯಿತು. ಕಲ್ಲುಗಳು ತುಂಬಿದ ಒಂದು ಬುಟ್ಟಿ ಕಾಣಿಸಿತು. ಮೀನುಗಾರ ಬೇಸರಪಟ್ಟರೂ ಸೋಲದೆ ಮತ್ತೆ ಬಲೆ ಬೀಸಿದ. ಈ ಸಲ ಬಲು ಸುಂದರವಾದ ಚಿತ್ರಗಳಿರುವ ಹೂದಾನಿಯೊಂದು ಬಲೆಯಲ್ಲಿತ್ತು.
ಮೀನುಗಾರ ಕುತೂಹಲದಿಂದ ಹೂದಾನಿಯನ್ನು ಕೈಯಲ್ಲೆತ್ತಿಕೊಂಡ. ಬಂಗಾರದಿಂದ ಅದನ್ನು ತಯಾರಿಸಿ, ಅಲ್ಲಲ್ಲಿ ಮುತ್ತು, ಮಾಣಿಕ್ಯಗಳನ್ನು ಕೂಡಿಸಿದ್ದರು. ಸೊಗಸಾಗಿದ ಇದನ್ನು ತೆಗೆದುಕೊಂಡು ಹೋಗಿ ಯಾರಾದರೂ ಧನಿಕರಿಗೆ ನೀಡಿದರೆ ಸಂತೋಷದಿಂದ ತೆಗೆದುಕೊಂಡು ಕೈತುಂಬ ಹಣ ಕೊಡಬಹುದು ಎಂದು ಲೆಕ್ಕ ಹಾಕಿದ. ಆದರೆ, ಹೂದಾನಿಯ ಮೇಲ್ಭಾಗದಲ್ಲಿ ಒಂದು ಬಿರಡೆ ಕಾಣಿಸಿತು. ಬಿರಡೆಯನ್ನು ಸುಲಭವಾಗಿ ತೆಗೆಯಬಾರದೆಂದು ಸುತ್ತಲೂ ಅರಗು ಮೆತ್ತಿ ಬೆಸುಗೆ ಹಾಕಿದ್ದರು. ಇದರಿಂದ ಅವನಿಗೆ ಇನ್ನಷ್ಟುಕುತೂಹಲ ಹೆಚ್ಚಿತು. ಒಳಗೆ ಅಮೂಲ್ಯವಾದ ಏನಾದರೂ ವಸ್ತುವಿರಬಹು ದೆಂದು ಯೋಚಿಸಿ ಶತಪ್ರಯತ್ನ ಮಾಡಿ ಬಿರಡೆಯನ್ನು ತೆಗೆದುಬಿಟ್ಟ.
ಆಗ ಹೂದಾನಿಯೊಳಗಿಂದ ಸುಯ್ಯನೆ ಹೊಗೆಯೊಂದು ಹೊರಟು ಆಕಾಶಕ್ಕೇರಿತು. ಅದೊಂದು ಅಷ್ಟೆತ್ತರದ ಭೀಕರ ಆಕೃತಿಯ ಭೂತವಾಗಿ ಬದಲಾಯಿಸಿ ಗಹಗಹಿಸಿ ನಕ್ಕಿತು. ಆ ನಗೆಯ ದನಿಗೆ ತೊಪತೊಪನೆ ಚಿನ್ನದ ನಾಣ್ಯಗಳು, ಮುತ್ತು, ರತ್ನಾದಿಗಳು ಉದುರಿ ದೋಣಿಯನ್ನು ತುಂಬಿಕೊಂಡವು. ಮೀನುಗಾರ ಆತುರದಿಂದ ಅದನ್ನು ಬೊಗಸೆಯಲ್ಲಿ ಎತ್ತಿಕೊಂಡು ಆಶ್ಚರ್ಯದಿಂದ ನೋಡಿದ. ತಾನು ಕಾಣುತ್ತಿರುವುದು ಕನಸೋ ನನಸೋ ಎಂದು ತಿಳಿಯದೆ ಒದ್ದಾಡಿದ. ಅಷ್ಟರಲ್ಲಿ ಆ ಆಕೃತಿಯು ಅವನನ್ನು ಕುರಿತು, “”ಆತುರಪಡಬೇಡ. ನಿನಗದು ದಕ್ಕುವುದಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಿನ್ನನ್ನು ನಾನು ಕೊಲ್ಲುತ್ತೇನೆ”’ ಎಂದಿತು.
ಮೀನುಗಾರ ಕಂಗಾಲಾದ. “”ಇದೇನು ಮಾತು? ಹೂದಾನಿಯೊಳಗೆ ಬಂಧಿತನಾಗಿದ್ದ ನಿನ್ನನ್ನು ಹೊರಗೆ ತಂದು ಉಪಕಾರ ಮಾಡಿದವನು ನಾನು. ನನಗೆ ನೀನು ಪ್ರತಿಫಲವಾಗಿ ಸಾವನ್ನು ಕೊಡುವುದು ನ್ಯಾಯವೆ?” ಎಂದು ಗಾಬರಿಯಿಂದ ಕೇಳಿದ. ಭೂತವು ನೆಲವೇ ನಡುಗುವ ಹಾಗೆ ಮತ್ತೆ ನಕ್ಕಿತು. “”ಏನಂದೆ, ಉಪಕಾರವೆ? ಮನುಷ್ಯ ಜಾತಿಗೆ ಉಪಕಾರ ಮಾಡಿದರೆ ಅವರು ಅದನ್ನು ನೆನಪಿಟ್ಟುಕೊಳ್ಳುತ್ತಾರೆಯೆ? ಖಂಡಿತ ಇಲ್ಲ. ಇದಕ್ಕೆ ನಾನೇ ಸಾಕ್ಷಿ. ಸ್ವತಂತ್ರವಾಗಿಯೇ ತಿರುಗುತ್ತಿದ್ದೆ. ಕಂಡವರಿಗೆಲ್ಲ ಉಪಕಾರ ಮಾಡುತ್ತಿದ್ದೆ. ಒಬ್ಬ ರಾಜನ ಬಳಿಗೆ ಹೋದೆ. ತುಂಬ ಚೆಲುವನಾಗಿದ್ದ. ಪ್ರಪಂಚದ ಸುಂದರಿಯರನ್ನೆಲ್ಲ ನಿನಗೆ ತಂದುಕೊಡಲೆ? ಎಂದು ಕೇಳಿದೆ. ಒಪ್ಪಿಕೊಂಡ. ನಯವಾಗಿ ನನ್ನನ್ನು ಕರೆದು ಈ ಹೂದಾನಿಯೊಳಗೆ ಕುಳಿತುಕೊಳ್ಳಲು ಹೇಳಿದ. ಮೋಸವೆಂದು ತಿಳಿಯದೆ ಒಳಗೆ ಹೋದೆ. ಮುಚ್ಚಳ ಬಿಗಿದು ಸಮುದ್ರಕ್ಕೆ ಹಾಕಿದ ಪಾಪಿ” ಎಂದು ರೋಷದಿಂದ ಹೇಳಿತು.
“”ಅಯ್ಯೋ ಪಾಪ, ಹಾಗೆ ಮಾಡಬಾರದಿತ್ತು. ನಾನು ಅವನಂತಹ ಕೃತಘ್ನನಲ್ಲ, ಒಳ್ಳೆಯವನು” ಮೀನುಗಾರ ಹೇಳಿದ. ಭೂತ ಮತ್ತೆ ನಕ್ಕಿತು. ಅದು ನಕ್ಕ ಕೂಡಲೇ ವಜ್ರಗಳು, ವೈಢೂರ್ಯಗಳು ಮಳೆಯಂತೆ ಬೀಳುತ್ತಿದ್ದವು. “”ಆಮೇಲೆ ಒಂದು ಶತಮಾನದ ವರೆಗೂ ಯಾರಾದರೂ ನನ್ನನ್ನು ಈ ಬಂಧನದಿಂದ ಬಿಡುಗಡೆ ಮಾಡುತ್ತಾರೋ ಎಂದು ಕಾದೆ. ಅಂಥವರನ್ನು ಇಡೀ ಜಗತ್ತಿಗೆ ರಾಜನಾಗಿ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ ಕಣ್ಣಿಗೆ ಕಂಡರೂ ಒಬ್ಬ ಮೀನುಗಾರ ಕೂಡ ಈ ಕೆಲಸ ಮಾಡದೆ ಅಲಕ್ಷಿಸಿದರು. ಆಮೇಲೆ ಇನ್ನೂ ಒಂದು ಶತಮಾನದ ಕಾಲ ದಾರಿ ನೋಡಿದೆ. ನನಗೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಜಗತ್ತಿನ ಸಂಪತ್ತೆಲ್ಲವನ್ನೂ ಕೊಡುವ ಬಯಕೆ ನನ್ನದಾಗಿತ್ತು. ಆದರೂ ಒಬ್ಬ ಮೀನುಗಾರನಿಗೂ ನನ್ನನ್ನು ಕಾಪಾಡಿ ಸಂಪತ್ತು ಗಳಿಸುವ ಬಯಕೆ ಮೂಡಲಿಲ್ಲ” ಎಂದಿತು ಭೂತ.
“”ಹೋಗಲಿ, ಅವರಿಗೆ ಧನಿಕರಾಗುವ ಯೋಗ ಇಲ್ಲ, ಅದೃಷ್ಟಹೀನ ರೆಂದೇ ತಿಳಿಯಬೇಕು. ಆದರೆ, ಈಗ ನಾನು ನಿನ್ನನ್ನು ಕಾಪಾಡಿದ್ದೇನೆ. ಶತಮಾನಗಳಿಂದ ಹೂದಾನಿಯೊಳಗೆ ಅಡಗಿಕೊಂಡಿದ್ದವನಿಗೆ ವಿಮೋಚನೆ ನೀಡಿದ್ದೇನೆ. ನನಗೇನೂ ಪ್ರತಿಫಲ ಕೊಡುವುದು ಬೇಡ, ಜೀವಸಹಿತ ಉಳಿಸಿ ದರೆ ಸಾಕು. ನಾನಿಲ್ಲವಾದರೆ ನನ್ನ ಹೆಂಡತಿ-ಮಕ್ಕಳು ಅನಾಥರಾಗುತ್ತಾರೆ. ನನಗೆ ಜೀವದಾನ ಮಾಡು” ಎಂದು ಬೇಡಿಕೊಂಡ ಮೀನುಗಾರ.
ಭೂತ ಇನ್ನೂ ಜೋರಾಗಿ ನಕ್ಕಿತು. “”ಇಲ್ಲ, ಆಮೇಲೆ ನಾನು ಯಾರಿಗೂ ಸಹಾಯ ಮಾಡಬಾರದೆಂದು ನಿರ್ಧರಿಸಿದೆ. ನನ್ನನ್ನು ಯಾರು ಹೂದಾನಿಯಿಂದ ಬಿಡಿಸುತ್ತಾರೋ ಅವರನ್ನು ಕೊಂದು ಹಾಕುತ್ತೇನೆ” ಎಂದು ಶಪಥ ಮಾಡಿದೆ. ಈ ಕಾರಣದಿಂದ ನಿನಗೆ ನಾನು ಕೊಡುವ ಪ್ರತಿಫಲವೆಂದರೆ ಸಾವು ಮಾತ್ರ. ಆದರೂ ನನ್ನಲ್ಲಿ ಸ್ವಲ್ಪ ಕರುಣೆಯೂ ಇದೆ. ಕಡೆಯದಾಗಿ ನನ್ನ ಕೈಯಲ್ಲಿ ಸಾಯುವ ಮೊದಲು ನಿನಗೆ ಏನಾದರೊಂದು ಆಶೆಯಿರಬಹುದು. ಪ್ರಾಣದಾನದ ಹೊರತು ಬೇರೆ ಏನು ಬೇಕಿದ್ದರೂ ಕೇಳಿಕೋ. ಕೊಡುತ್ತೇನೆ, ಆಮೇಲೆ ನಿನ್ನ ಜೀವ ತೆಗೆಯುತ್ತೇನೆ” ಎಂದು ಉದಾರವಾಗಿ ಹೇಳಿತು.
ಮೀನುಗಾರ ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸಿಕೊಂಡ. ದೇವರೇ, ಇದರ ಕೈಯಿಂದ ಪಾರಾಗಲು ಏನಾದರೊಂದು ದಾರಿ ತೋರಿಸು ಎಂದು ಎಂದು ನೆನೆದುಕೊಳ್ಳುತ್ತಿದ್ದವನಿಗೆ ಒಂದು ಉಪಾಯ ಹೊಳೆಯಿತು. ಭೂತಕ್ಕೆ ಕೈಜೋಡಿಸಿ ನಮಸ್ಕರಿಸಿದ. “”ಕಡೆಯ ಆಶೆ ಏನಿದ್ದರೂ ನೆರವೇರಿಸುವುದಾಗಿ ಹೇಳಿದೆಯಲ್ಲ, ನಿನ್ನ ಔದಾರ್ಯಕ್ಕೆ ಋಣಿಯಾಗಿದ್ದೇನೆ. ನನಗೆ ಜೀವದಾನ ಬೇಡ. ಆದರೆ ಅಷ್ಟು ಸಣ್ಣ ಹೂದಾನಿಯ ಒಳಗೆ ದೈತ್ಯ ಆಕಾರದ ನೀನು ನೂರಾರು ವರ್ಷ ಕುಳಿತಿದ್ದೆ ಎಂದರೆ ನಂಬುವುದು ಹೇಗೆ? ಇಷ್ಟು ದೊಡ್ಡದಿರುವ ನೀನು ಅಷ್ಟು ಸಣ್ಣದಾಗಿ ಅದರೊಳಗೆ ಹೋಗುವುದು ಹೇಗೆ ಎಂಬ ಚೋದ್ಯವನ್ನು ಕಣ್ಣಾರೆ ಕಾಣಬೇಕೆಂಬ ಆಶೆ ನನಗಿದೆ. ಆಮೇಲೆ ನಿಶ್ಚಿಂತವಾಗಿ ಸಾಯಲು ಸಿದ್ಧವಾಗಿದ್ದೇನೆ” ಎಂದು ಹೇಳಿದ.
ಭೂತವು, “”ಇದೋ ನೋಡು, ನನ್ನ ಸಾಮರ್ಥ್ಯ” ಎಂದು ಹೇಳಿ ನಿಧಾನವಾಗಿ ಕೆಳಗಿಳಿಯುತ್ತ ಹೂದಾನಿಯೊಳಗೆ ಪ್ರವೇಶಿಸಿ ಕಾಣದಾಯಿತು. ಮರುಕ್ಷಣವೇ ಮೀನುಗಾರ, “”ಒಳ್ಳೆಯದಾಯಿತು, ನೀನು ಎಂತಹ ಶಕ್ತಿವಂತ ನೆಂಬುದು ನನಗೆ ಈಗ ಅರ್ಥವಾಯಿತು” ಎನ್ನುತ್ತ ಹೂದಾನಿಗೆ ಬಿರಡೆ ಹಾಕಿ, ಸುತ್ತಲೂ ಮಯಣ ಮೆತ್ತಿ ಭದ್ರಗೊಳಿಸಿದ.
ಭೂತವು ಒಳಗಿನಿಂದ, “”ಮೋಸ ಮಾಡಬೇಡ. ನನ್ನನ್ನು ಹೊರಗೆ ಬಿಡು. ನಿನ್ನನ್ನು ನಾನು ಕೊಲ್ಲಲೇಬೇಕು” ಎಂದು ಕೂಗಿತು. ಮೀನುಗಾರನು, “”ನೀನು ಹೊರಗೆ ಬಂದರೆ ತಾನೆ ನನ್ನನ್ನು ಕೊಲ್ಲುವುದು? ಮತ್ತೆ ನಿನ್ನನ್ನು ಸಮುದ್ರಕ್ಕೆಸೆಯುತ್ತೇನೆ. ನಿನ್ನ ನಗೆಯಿಂದಾಗಿ ಈ ದೋಣಿಯಲ್ಲಿ ತುಂಬಿಕೊಂಡಿರುವ ಅಪಾರ ಸಂಪತ್ತನ್ನು ವೆಚ್ಚ ಮಾಡಿ ಸಮುದ್ರದ ಬಳಿ ಒಂದು ಮಹಲನ್ನು ಕಟ್ಟಿಕೊಂಡು ಅದರಲ್ಲಿ ವಾಸವಾಗುತ್ತೇನೆ” ಎಂದು ಹೇಳಿ ಹೂದಾನಿಯನ್ನು ಎತ್ತಿ ಸಮುದ್ರಕ್ಕೆ ಹಾಕಿದ. ಮೀನುಗಾರನು ದೋಣಿಯಲ್ಲಿದ್ದ ಸಂಪತ್ತನ್ನು ಮನೆಗೆ ಸಾಗಿಸಿದ. ಆಗರ್ಭ ಶ್ರೀಮಂತನಾಗಿ ತನ್ನ ಸಂಸಾರದೊಂದಿಗೆ ಸುಖವಾಗಿ ಬಾಳಿದ.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ