ಚಿರತೆಗಳ ಬಗ್ಗೆ ಹೊಸ ವಿಚಾರ ತಿಳಿಸಿದ “ಬೆಂಕಿ’


Team Udayavani, Apr 29, 2018, 6:00 AM IST

14.jpg

ಬೆಂಕಿಯ ಹೊಟ್ಟೆಯ ಕೆಳಭಾಗದ ತೊಗಲು ಸ್ವಲ್ಪ ಜೋತುಬಿದ್ದಿದ್ದು ಅದಕ್ಕೆ ವಯಸ್ಸಾಗುತ್ತಿದೆಯೆಂದು ತಿಳಿಸಿತು. ಈ ಚಿತ್ರ ಸಿಕ್ಕಿದ ಒಂದೇ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಸಹೋದ್ಯೋಗಿಗಳೆಲ್ಲ ಸೇರಿ ಬೆಂಕಿಯ ಮೈಮೇಲಿದ್ದ ಚುಕ್ಕೆಗಳನ್ನು ಕೇಕ್‌ ಮೇಲೆ ಛಾಪಿಸಿ ನನಗೂ ವಯಸ್ಸಾಗುತ್ತಿದೆಯೆಂದು ಜ್ಞಾಪಿಸಿದರು. 

ಬೆಳಗ್ಗೆ ಬೇಗ ಎದ್ದವರೇ ಹತ್ತಿರದ ಬೆಟ್ಟವೇರಿದೆವು. ಚಳಿಗಾಲದ ಸಮಯವಾದುದರಿಂದ ಕಾಡಿಗೆ ಮಂಜು ಆವರಿಸಿತ್ತು, ಕಣಿವೆಯಲ್ಲಿ ಹರಿಯುತ್ತಿದ್ದ ಕಾವೇರಿಯಿಂದ ಹಬೆ ಮೇಲೇಳುತಿತ್ತು. ಸುತ್ತಲೂ ಸುಂದರ ದೃಶ್ಯ, ಅದರ ಮಧ್ಯೆ ಬೆಳವಗಳ ಗುಟುರ್‌ ಗುಟುರ್‌ ಶಬ್ದ ಅದರೊಡನೆ ಎಲ್ಲೊ ದೂರದಲ್ಲಿ ಕೋಗಿಲೆಚಾಣ ಉದ್ದದ ಹಾಡು ಹಾಡುತಿತ್ತು. ಆಂಟೆನಾ ಜೋಡಿಸಿ ರಿಸೀವರ್‌ಗೆ ಕೇಬಲ್‌ ಸೇರಿಸಿದೆ, ಇಯರ್‌ ಫೋನ್‌ ಹಾಕಿಕೊಂಡು ನಾವು 

ಚಿರತೆಯನ್ನು ಬಿಟ್ಟ ದಿಕ್ಕಿನಲ್ಲಿ ಆಂಟೆನಾ ಹಿಡಿದು ಸೂಕ್ಷ್ಮವಾಗಿ ಫ್ರೀಕ್ವೆನ್ಸಿ ಹೊಂದಿಸಿಕೊಂಡೆ. ಆಂಟೆನಾ ಸ್ವಲ್ಪ ಅತ್ತಿತ್ತ ತಿರುಗಿಸುತ್ತಿದ್ದಂತೆ ಸಣ್ಣದಾಗಿ ಬೀಪ್‌, ಬೀಪ್‌, ಬೀಪ್‌ ಶ ಬ್ದ ಕೇಳಿಸಲು ಪ್ರಾರಂಭ ಆಯಿತು. ಫ್ರೀಕ್ವೆನ್ಸಿ ಇನ್ನೂ ಸೂಕ್ಷ್ಮವಾಗಿ ಹೊಂದಿಸಿದೆ. ಶಬ್ದ ಸ್ಪಷ್ಟವಾಯಿತು. ರೇಡಿಯೋ ಕಾಲರ್‌ ಕೆಲಸ ಮಾಡುತ್ತಿರುವುದು ಖಾತ್ರಿಯಾಯಿತು. ಆದರೆ ಪ್ರಾಣಿ ಒಂದೇ ಸ್ಥಳದಲ್ಲಿ ಇದ್ದಂತಿತ್ತು. ಪ್ರಾಣಿ ಚಲನೆಯಲ್ಲಿದ್ದರೆ ಕಾಲರ್‌ನಿಂದ ಬರುವ ಶಬ್ದವೇ ಬೇರೆಯಾಗಿರುತ್ತದೆ. ಅದರ ಬಿಪ್‌, ಬಿಪ್‌, ಬಿಪ್‌ ಸದ್ದಿನ ಮಧ್ಯೆ ಕಡಿಮೆ ಅಂತರವಿರುತ್ತದೆ. ಒಂದು ಗಂಟೆ ಪ್ರಯತ್ನಿಸಿದರೂ ರೇಡಿಯೋ ಕಾಲರ್‌ನ ಶಬ್ದದಲ್ಲಿ ಬದಲಾವಣೆಯಿರಲಿಲ್ಲ. 

ಹಿಂದಿರುಗಿ ಬಂದು ಹಲಗೂರಿನ ಕಡೆ ಗಾಡಿ ತಿರುಗಿಸಿದೆವು. ವಾಹನದ ತುಂಬೆ ಲ್ಲ ಚಿರತೆಯ ದ್ದೇ ವಾಸನೆ. ನನ್ನ ಅನುಭವದ ಪ್ರಕಾರ ಚಿರತೆ ಆರೋಗ್ಯವಾಗಿದ್ದರೆ ಅದರ ವಾಸನೆಯು ಕಡಿಮೆ. ಚಿರತೆಯ ಆರೋಗ್ಯ ಸರಿಯಿಲ್ಲದಿದ್ದರೆ ವಾಹನ, ರೇಡಿಯೋ ಕಾಲರಿಂಗ್‌ಗೆ ಉಪಯೋಗಿಸಿದ ಉಪಕರಣಗಳೆಲ್ಲವೂ ಸಹಿಸ ಲಾರದಷ್ಟು ವಾಸನೆ ಬರು ತ್ತ ವೆ.  ಅಲ್ಲದೆ ವಾಸನೆ ದಿನಗಟ್ಟಲೆ ಇರುತ್ತದೆ. ಸಲಕರಣೆಗಳನ್ನು ಆಸ್ಪತ್ರೆಯಲ್ಲಿ ಉಪಯೋಗಿಸುವ ಸ್ಪಿರಿಟ್‌ ಹಾಕಿ ಸ್ವತ್ಛಗೊಳಿಸಿದರೂ ಹತ್ತಾರು ದಿನ ಉಳಿದಿರುತ್ತದೆ.  

ಮುತ್ತತ್ತಿ ಕಡೆಯಿಂದ ಬಂದರೆ ಹಲಗೂರಿನ ಪ್ರಾರಂಭದಲ್ಲಿ ಸಿಗುವ ಚಿಕ್ಕ ಹೋಟೆಲಿನಲ್ಲಿ ಕುಳಿತು ಬಿಸಿ ಬಿಸಿ ಖಾಲಿ ದೋಸೆ ತಿನ್ನುತ್ತಾ ಉಪಗ್ರಹದಿಂದ ರೇಡಿಯೋ ಕಾಲರ್‌ ಮಾಹಿತಿಯನ್ನು ಇಮೇ ಲ್‌ ಮೂಲಕ ತೆಗೆದುಕೊಳ್ಳವ ಪ್ರಯತ್ನ ಪ್ರಾರಂಭಿಸಿದೆ. ದತ್ತಾಂಶವೇನೋ ಸಿಕ್ಕಿತು. ಆದರೆ ಚಿರತೆ ನಾವು ಹಿಂದಿನ ದಿನ ಬಿಟ್ಟ ಸ್ಥಳದಿಂದ ಸ್ವಲ್ಪ ವೇದೂರದಲ್ಲಿ ಇತ್ತು. ಹೊಸ ಜಾಗವಾದ್ದರಿಂದ ದೂರ ಕ್ರಮಿಸಿಲ್ಲವೆಂದು ತಿಳಿದು ಹಿಂದಿರುಗಿದೆ. ಆದರೆ ಮಧ್ಯಾಹ್ನವಾದರೂ ಪ್ರಾಣಿ ಸ್ಥಳ ಬದಲಿಸಿರಲಿಲ್ಲ! ಬಿಟ್ಟ ಸ್ವಲ್ಪ ದೂರದ ಹಳ್ಳದಲ್ಲಿ ಪ್ರಾಣಿ ಇದ್ದಂತೆ ಕಂಡಿತು. ನನಗೆ ಸ್ವಲ್ಪ ಕಸಿವಿಸಿ. ಹಿಂದಿನ ಸಂಜೆ ಅಷ್ಟು ಸಕ್ರಿಯವಾಗಿ ಕುದುರೆಯಂತೆ ಓಡಿದ ಪ್ರಾಣಿ ಯಾಕೆ ದೂರ ಕ್ರಮಿಸಿಲ್ಲವೆಂದು ಅನುಮಾನವಾಯಿತು. 

ಸುಮಾರು ನಾಲ್ಕು ಗಂಟೆಯ ತನಕ ಕಾದು ನನ್ನ ಸಹೋದ್ಯೋಗಿ ಹರೀಶನನ್ನು ಒಮ್ಮೆ ಚಿರತೆಯನ್ನು ಬಿಟ್ಟ ಕಿರುಮಾಡದ ಹಿಂದಿದ್ದ ಬೆಟ್ಟವನ್ನೇರಿ ಆಂಟೆನಾ ಮತ್ತು ರಿಸೀವರ್‌ ಮೂಲಕ ಮತ್ತೂಮ್ಮೆ ಪ್ರಯತ್ನಿ ಸಲು ಕೋರಿದೆ. ಅವರಿಗೂ ಅದೇ ಸ್ಥಳದಲ್ಲಿ ಚಿರತೆಯಿರುವ ಸಂಕೇತ ಸಿಕ್ಕಿತು. ನನಗೆ ಸ್ವಲ್ಪ ಗಾಬರಿಯಾಯಿತು. ಚಿರತೆಯನ್ನು ಬಿಟ್ಟು ಹೆಚ್ಚು ಕಡಿಮೆ ಇಪ್ಪತ್ತು ನಾಲ್ಕು ಗಂಟೆಯಾಗಿದೆ, ಪ್ರಾಣಿ ಹೆಚ್ಚು ದೂರ ಕ್ರಮಿಸಿಲ್ಲ. ಏನಾಯಿತು ಅದಕ್ಕೆ ಎಂಬ ಯೋಚನೆಯಲ್ಲಿ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆದೆ. 

ಮುಂಜಾನೆ ಎದ್ದು ಮೊದಲು ಉಪಗ್ರಹದ ಮೂಲಕ ಮಾಹಿತಿ ಅವಲೋಕಿಸಿದರೆ ಸಂತಸದ ಸುದ್ದಿ. ಅಂದು ಬೆಳಿಗ್ಗೆ ಸುಮಾರು ಆರೂವರೆಗೆ ಚಿರತೆಯು ಹಳ್ಳದಿಂದ ಸ್ಥಳ ಬದಲಾಯಿಸಿ ಈಶಾನ್ಯ ದಿಕ್ಕಿನತ್ತ ಹೊರಟು ಎಂಟೂವರೆ ಹೊತ್ತಿಗೆ ಹೈರಾ ಪ್ರದೇಶದ ಬೆಟ್ಟವನ್ನೇರಲು ಪ್ರಾರಂಭಿಸಿತ್ತು. ನಿಟ್ಟುಸಿರುಬಿಟ್ಟೆ. ಇನ್ನು ಪ್ರಾಣಿಯ ಚಲನವಲನ ಗಮನಿಸಬೇಕಾಗಿತ್ತು. ಪ್ರತಿ ಎರಡು ತಾಸಿಗೊಮ್ಮೆ ಉಪಗ್ರಹದಿಂದ ಅದರ ನಿರ್ದಿಷ್ಟ ಸ್ಥಳದ ಮಾಹಿತಿ ತೆಗೆದುಕೊಳ್ಳಲು ರೇಡಿಯೋ ಕಾಲರ್‌ನ್ನು ಪ್ರೋಗ್ರಾಮ್‌ ಮಾಡಲಾಗಿತ್ತು. ಹಾಗಾಗಿ ಪ್ರತಿ ಎರಡು  ಗಂಟೆಗೊಮ್ಮೆ ಪ್ರಾಣಿಯ ಸ್ಥಳದ ಮಾಹಿತಿಯನ್ನು ಕಾಲರ್‌ನಿಂದ ಉಪಗ್ರಹಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ಅಂದು ರಾತ್ರಿ ಸುಮಾರು 10.30ಕ್ಕೆ ಚಿರತೆಯು ಗಾಳಿಬೋರೆಯ ಹತ್ತಿರ ಕಾವೇರಿ ನದಿಗಿಳಿದಿತ್ತು. ಬಹುಶಃ ನದಿಯಲ್ಲಿ ಕಾವೇರಿಯ ಸಿಹಿ ನೀರು ಕುಡಿದು ಹೋಗಿರಬೇಕು. ಆಮೇಲೆ ಅದು ಸಂಪೂರ್ಣ ಸಕ್ರಿಯವಾಗಿತ್ತು.  

ನಿರಾಳವಾಗಿ ಮನೆಗೆ ಹಿಂದಿರುಗಿದೆ. ಮನೆಯಲ್ಲಿ ಪುಟ್ಟ, ಐದು ವರ್ಷದ ಮಗ ನಿನಾದನಿಗೆ ಚಿರತೆಯ ಚಿತ್ರಗಳನ್ನು ತೋರಿಸಿ ನಡೆದ ಘಟನೆಗಳನ್ನು ವಿವರವಾಗಿ ತಿಳಿಸಿದೆ. ನಿನಾದನಿಗೆ ಏನನಿಸಿತೋ ಏನೋ, ಚಿರತೆಗೆ “ಬೆಂಕಿ’ ಎಂದು ನಾಮಕರಣ ಮಾಡಿಬಿಟ್ಟ. ಅಂದಿನಿಂದ ನಾನು ಊರಿನಲ್ಲಿದ್ದ ಪ್ರತಿದಿನವೂ ಅವನಿಗೆ ಬೆಂಕಿಯ ಬಗ್ಗೆ ಮಾಹಿತಿ ನೀಡಬೇಕಾಗಿತ್ತು. ಹೆಸರಿಗೆ ತಕ್ಕಂತೆ ಬೆಂಕಿ ಚೈತನ್ಯದ ಚಿಲುಮೆಯಾಗಿತ್ತು. ಕಾವೇರಿ ವನ್ಯಜೀವಿ ಧಾಮದ ಸಂಗಮ ಮತ್ತು ಹಲಗೂರು ವಲಯಗಳಲೆಲ್ಲ ಓಡಾಡುತ್ತಿತ್ತು. ಕಡಿದಾದ ಬೆಟ್ಟ ಪ್ರದೇಶವೇ ಅದರ ನೆಲಹರುವಾಗಿತ್ತು. ದಿನಂಪ್ರತಿ ಸರಾಸರಿ ಎಂಟು ಕಿಲೋಮೀಟರ್‌ದೂರ ಕ್ರಮಿಸು ತ್ತಿತ್ತು. ಏಪ್ರಿಲ್‌ ತಿಂಗಳ ಒಂದು ದಿನವಂತೂ ಇಪ್ಪತ್ತುನಾಲ್ಕು ಗಂಟೆಯೊಳಗೆ ಸುಮಾರು ಹದಿನಾರು ಕಿಲೋಮೀಟರು ಕ್ರಮಿಸಿ ತನ್ನದೇ ದಾಖಲೆ ಬರೆದಿತ್ತು. 

ಒಮ್ಮೆ ಆಂಟೆನಾ ಹಿಡಿದು ಚಿಲ್ಲಿಂದವಾಡಿ ಪ್ರದೇಶದಲ್ಲಿ ಚಿರತೆಯನ್ನು ಹಿಂಬಾಲಿಸಿ ನಡೆಯುತ್ತಿದ್ದರೆ ಹತ್ತಿರದಲ್ಲಿದ್ದ ಮಠದ ಸ್ವಾಮೀಜಿಯವರು ಬಂದರು. ನಾನು ಏನು ಮಾಡುತ್ತಿ ದ್ದೀನೆಂದು ಅವರಿಗೆ ಕುತೂಹಲ. ಅವರಿಗೆ ಇಯರ್‌ ಫೋನ್‌ ಹಾಕಿಸಿ ರೇಡಿಯೋ ಕಾಲರ್‌, ಚಿರತೆಗಳನ್ನು ಅಧ್ಯಯನ ಮಾಡುವ ಎಲ್ಲಾ ವಿಚಾರಗಳನ್ನು ತಿಳಿಸಿದೆ. ಸ್ವಾಮೀಜಿಯವರು ಬಹು ಆಸಕ್ತಿಯಿಂದ ಎಲ್ಲವನ್ನೂ ತಿಳಿದುಕೊಂಡರು. ಆದಿಚುಂಚನಗಿರಿ ಮಠದ ಸ್ಥಳೀಯ ಶಾಖೆಯನ್ನು ಚಿಲ್ಲಿಂದವಾಡಿಯಲ್ಲಿ ಅನ್ನದಾನಿ ಸ್ವಾಮೀಜಿ ನಡೆಸುತ್ತಿದ್ದರು. ಇಂದಿಗೂ ಅವರಿಗೆ ನಮ್ಮ ಕೆಲಸದ ಬಗ್ಗೆ ಬಹು ಆಸಕ್ತಿ ಹಾಗೂ “ನಮ್ಮಿಂದ ಏನಾದರೂ ಬೆಂಬಲ ಬೇಕಾದರೆ ತಿಳಿಸಿಕೊಡಿ’ ಎಂದು ಹೇಳುತ್ತಾರೆ. ವನ್ಯಜೀವಿ ಸಂರಕ್ಷಣೆಗೆ ನಮಗೆ ಇನ್ನೊಬ್ಬರು ಹಿರಿಯ ಬೆಂಬಲಿಗರು ಬೆಂಕಿಯ ದೆಸೆಯಿಂದ ಸಿಕ್ಕಂತಾಯಿತು.         

ಬೆಂಕಿ, ನಮಗೆ ಚಿರತೆ ಮತ್ತು ಅವುಗಳ ಸ್ಥಳಾಂತರದ ಬಗ್ಗೆ ಸಾಕಷ್ಟು ಹೊಸ ವಿಚಾರಗಳನ್ನು ತಿಳಿಸಿ ಹೇಳಿತು. ಪ್ರಾಣಿಗಳಿಗೆ ಹಾಕುವ ರೇಡಿಯೋ ಕಾಲರ್‌ ಅವುಗಳ ಮೇಲೆ ಶಾಶ್ವತವಾಗಿ ಉಳಿಯದ ಹಾಗೆ ಮತ್ತು ಅವು ಸ್ವಲ್ಪ ಸಮಯದ ನಂತರ ಬಿದ್ದು ಹೋಗುವ ಹಾಗೆ ನಾವದನ್ನು  ಪ್ರೋಗ್ರಾಮ್‌ ಮಾಡಬಹುದು. ಬೆಂಕಿಯ ರೇಡಿಯೋ ಕಾಲರ್‌ ನ ಬ್ಯಾಟರಿ ಆರು ತಿಂಗಳ ನಂತರ ಮುನಿಸಿಕೊಂಡಿತು. ಅದು ನಮಗೆ ತನ್ನ ಬಗ್ಗೆ ವೈಜ್ಞಾನಿಕ ಕಥೆಯನ್ನು ಹೇಳುವುದನ್ನು ನಿಲ್ಲಿಸಿತು. ಮೊದಮೊದಲು ಪ್ರಾಣಿಯೆಲ್ಲೋ ಬಂಡೆಯಡಿ ಅಥವಾ ಉಪಗ್ರಹಕ್ಕೆ ಸಂಪರ್ಕ ಸಿಗದ ಸ್ಥಳದಲ್ಲಿ ಇರಬಹುದು ಅದಕ್ಕೆ ಮಾಹಿತಿ ಸಿಗುತ್ತಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ. ಆದರೆ ವಾರವಾದರೂ ಮಾಹಿತಿ ಬಾರದ ಮೇಲೆ ಕಾಲರ್‌ ಕೆಲಸ ಮಾಡುವುದು ನಿಂತಿದೆಯೆಂದು ಖಾತ್ರಿಯಾಯಿತು. ನನಗೆ ಏನೋ ಕಳೆದುಕೊಂಡ‌ ಅನುಭವ. ಪ್ರತಿ ದಿನವೂ ಬೆಂಕಿ ಇಂದು  ತಾನು ಎಲ್ಲಿದೆ, ಏನು ಮಾಡುತ್ತಿ ದೆ, ಹಿಂದಿನ ದಿನಕ್ಕೂ ಇಂದಿಗೂ ಎಷ್ಟು ದೂರ ಕ್ರಮಿಸಿದೆ, ದಿನದ ಯಾವ ಸಮಯದಲ್ಲಿ ಹೆಚ್ಚಾಗಿ ಓಡಾಡುತ್ತಿದೆ, ತ ನ್ನ ಅಚ್ಚುಮೆಚ್ಚಿನ ಸ್ಥಳಗಳು, ಹೀಗೆ ತನ್ನ‌ ಬಗ್ಗೆ ಅದು ದೊಡ್ಡ, ಕೌತುಕವಾದ ಪುಸ್ತಕವನ್ನೇ ನಮ್ಮ ಮುಂದೆ ತೆರೆದಿಟ್ಟಿತು. ಅದರ ಮಾಹಿತಿಯನ್ನು ವಿಶ್ಲೇಷಿಸಿದಾಗ ಅದು ಸುಮಾರು 35,000 ಎಕರೆಯಷ್ಟು (141 ಚದರ ಕಿಲೋಮೀಟರ್‌)  ಪ್ರದೇಶದಲ್ಲಿ ತನ್ನ ನೆಲಹರುವನ್ನು ಸ್ಥಾಪಿಸಿಕೊಂಡಿರುವುದುತಿಳಿಯಿತು. ಅಂದರೆ ಮೈಸೂರು ಮಹಾನಗರದ ಸಂಪೂರ್ಣ ವಿಸ್ತೀರ್ಣದಷ್ಟು ಪ್ರದೇಶದಲ್ಲಿ ಓಡಾಡಿಕೊಂಡು ತನ್ನ ವಿಶಾಲವಾದ ಮನೆಯನ್ನು ಸ್ಥಾಪಿಸಿಕೊಂಡಿತ್ತು. ಒಂದೆರೆಡು ಬಾರಿ ಕಾಡಿನಿಂದಾಚೆ ಹೋದರೂ ಅದರ ಮನೆಯೆಲ್ಲ ಕಾಡಿನೊಳಗೆಯೇ.  

ಫೆಬ್ರವರಿ 2015ರಲ್ಲಿ ಬೆಂಕಿಯಿದ್ದ ಪ್ರದೇಶದ ವಲಯದ ಅರಣ್ಯಾಧಿಕಾರಿ ಮನ್ಸೂರ್‌ ಪಾಶ ದೂರವಾಣಿಯಲ್ಲಿ “”ಸರ್‌ ನಮ್ಮ ಕ್ಯಾ ಮೆರಾ ಟ್ರಾಪ್‌ನಲ್ಲಿ ಒಂದು ಚಿರತೆಯ ಚಿತ್ರ ಸಿಕ್ಕಿದೆ, ಅದರ ಕತ್ತಿನಲ್ಲಿ ಏನೋ ಇದ್ದಹಾಗಿದೆ, ಸ್ವಲ್ಪ ನೋಡಿ ಹೇಳಿ” ಎಂದರು. ಚಿತ್ರ ಇಮೇಲ್‌ ಮೂಲಕ ಬಂದಕೂಡಲೇ ಪರೀಕ್ಷಿಸಿದರೆ ಅದು ಬೆಂಕಿಯಾಗಿತ್ತು. ಅದರ ಕತ್ತಿನಲ್ಲಿ ರೇಡಿಯೋ ಕಾಲರ್‌ ಹಾಗೆಯೇ ಇತ್ತು, ಆದರೆ ಕೆಲಸ ಮಾಡುತ್ತಿರಲಿಲ್ಲ. ಸಂಗಮ ಪ್ರದೇಶದ ಕೋಲುಕೊಟೆ ಕೆರೆಯ ಬಳಿ ಇದರ ಚಿತ್ರ ಸಿಕ್ಕಿತ್ತು. ಅದಿನ್ನು ಅಲ್ಲಿಯೇ ಇದೆಯೆಂದು ಸಮಾಧಾನವಾಯಿತು. 

ಸ್ವಲ್ಪ ತಿಂಗಳುಗಳಾದ ಮೇಲೆ, ಅಂದ ರೆ 2015ರ ಜುಲೈ ತಿಂಗಳಿನಲ್ಲಿ ಕಾವೇರಿ ವನ್ಯಜೀವಿಧಾಮದ ಮುಖ್ಯಸ್ಥರಾದ ವಸಂತ ರೆಡ್ಡಿಯವರು ಮೊಬೈ  ಲ್‌ಗೆ ಫೋನ್‌ ಮಾಡಿ “”ಗುಬ್ಬಿಯವರೇ ನೀವು ಚಿರತೆಗೆ ಹಾಕಿದ್ದ ರೇಡಿಯೋ ಕಾಲರ್‌ ಸಿಕ್ಕಿದೆ. ನಮ್ಮ ಸಿಬ್ಬಂದಿ ಕಾಡಳ್ಳಿ ಎಂಬ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಅದನ್ನು ಹೆಕ್ಕಿ ತಂದಿದ್ದಾರೆ” ಎಂದು ಹೇಳಿ ಇಲಾಖಾ ಪ್ರಕ್ರಿಯೆಗಳನ್ನು ಮುಗಿಸಿ ನಮಗೆ ಕಾಲರ್‌ ಹಿಂದಿರುಗಿಸಿದರು. 

ಆ ಹೊಚ್ಚ ಹೊಸ ಕಾಲರ್‌ ಈಗ ಜರ್ಜರಿತವಾಗಿತ್ತು. ಯಾವುದೋ ಯುದ್ಧಕ್ಕೆ ಹೋಗಿ ಬಂದಂತಿತ್ತು ಅದರ ಪರಿಸ್ಥಿತಿ. ಬೆಂಕಿ ಅದನ್ನು ನೀರು, ಕೆಸರು, ಮಳೆ ಗಾಳಿ ಹೀಗೆ ನಿಸರ್ಗದ ಎಲ್ಲಾ ತರಹದ ಪರೀಕ್ಷೆಗಳಿಗೆ ಒಡ್ಡಿತ್ತು. ಎರಡೂವರೆ ಲಕ್ಷ  ರೂ ಪಾ ಯಿ ಬೆಲೆಬಾಳುವ  ದುಬಾರಿಯ ರೇಡಿಯೋ ಕಾಲರ್‌ ಎಂಬ ಬೆಲೆಯೂ ಕೊಡದೆ ಹಾಳು ಮಾಡಿತ್ತು. ನನಗೆ ಕಾಲರ್‌ ಸಿಕ್ಕಿದ್ದು ಬೆಂಕಿ ಸಿಕ್ಕಷ್ಟೇ ಸಂತೋಷ ಕೊಟ್ಟಿತು! 

2016ರ ಜನವರಿ ತಿಂಗಳು ಕಾವೇರಿ ವನ್ಯಜೀವಿಧಾಮದಲ್ಲಿ ನಮ್ಮ ಅಧ್ಯಯನದ ಇನ್ನೊಂದು ಭಾಗವಾದ ಕ್ಯಾಮೆರಾ ಟ್ರಾಪ್‌ ಮಾಡಲು ಹಿಂದಿರುಗಿದೆವು. ಸಂಗಮ ಮತ್ತು ಹಲಗೂರು ಪ್ರದೇಶದಲ್ಲಿ ಕೆಲಸ ಮಾಡುವಾಗ ನಮ್ಮ ಆಶ್ಚರ್ಯ ಮತ್ತು ಸಂತೋಷಕ್ಕೆ ಬೆಂಕಿ ಕ್ಯಾ ಮೆರಾ  ಟ್ರಾಪಿನಲ್ಲಿ ಕಾಣಿಸಿಕೊಂಡಿತು. ಒಂದಲ್ಲ, ಎರಡಲ್ಲ, ಬೇರೆ ಬೇರೆ ದಿನಗಳಲ್ಲಿ ಇಪ್ಪತ್ತು ಬಾರಿ ನಮ್ಮ ಕ್ಯಾಮೆರಾಗಳ ಮುಂದೆ ಕ್ಯಾ ಟ್‌ ವಾಕ್‌ ಮಾಡಿ ತನ್ನ ಜೀವನದ ಮತ್ತೂಂದು ಚಿಕ್ಕ ಭಾಗವನ್ನು ನಮಗೆ ಹೇಳಿ ಮತ್ತೆ ಮರೆಯಾಯಿತು. ಈಗ ಬೆಂಕಿ ಇನ್ನೂ ಹೆಚ್ಚು ದಷ್ಟಪುಷ್ಠವಾಗಿತ್ತು. ಹೊಟ್ಟೆಯ ಕೆಳಬಾಗದ ತೊಗಲು ಸ್ವಲ್ಪ ಜೋತುಬಿದ್ದಿದ್ದು ಅದಕ್ಕೆ ವಯಸ್ಸಾಗುತ್ತಿದೆಯೆಂದು ತಿಳಿಸಿತು. ಈ ಚಿತ್ರ ಸಿಕ್ಕಿದ ಒಂದೇ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ನನ್ನ ಸಹೋದ್ಯೋಗಿಗಳೆಲ್ಲ ಸೇರಿ ಬೆಂಕಿಯ ಮೈಮೇಲಿದ್ದ ಚುಕ್ಕೆಗಳನ್ನು ಕೇಕ್‌ ಮೇಲೆ ಛಾಪಿಸಿ ನನಗೂ ವಯಸ್ಸಾಗುತ್ತಿದೆಯೆಂದು ಜ್ಞಾಪಿಸಿದರು. 

ನಾವು ರೇಡಿಯೋ ಕಾಲರ್‌ ಹಾಕಿದ ಎರಡು ವರ್ಷದ ನಂತರ, ಅದನ್ನು ಬಿಟ್ಟ ಕೇವಲ ನಾಲ್ಕು ಕಿಲೋಮೀಟರು ದೂರದಲ್ಲಿ ಕಾಣಿಸಿಕೊಂಡು ಬೆಂಕಿ ತನ್ನ ಜೀವನದ ಯಶೋಗಾಥೆಯನ್ನು ಮುಂದುವರಿಸಿತ್ತು. ಬೆಂಕಿಯ ಎಡ ಭುಜದ ಮೇಲೆ ಕನ್ನಡ ವರ್ಣಮಾಲೆಯ “ಅ’ ಆಕಾರದ ಚುಕ್ಕೆಯಿರುವುದನ್ನು ನಾನೆಂದೂ ಮರೆಯಲಾರೆ.    

ಲೇಖನ ಕುರಿತ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ: bit.ly/2JKldtX

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.