ದೇವರು ನಕ್ಕರೆ, ನಿಮ್ಮ ಬಾಳು ಸಕ್ಕರೆ
Team Udayavani, May 10, 2017, 3:45 AM IST
ಮಗನನ್ನು ಪಡೆಯಲು ತಾಯಿ ಅದೆಷ್ಟೇ ಕಷ್ಟಪಟ್ಟರೂ, ಮಗುವಿನ ಒಂದು ನಗುವಿನ ಮುಂದೆ ತನ್ನ ನೋವನ್ನೆಲ್ಲ ಕರಗಿಸಿಕೊಳ್ಳುವಳು. ತಂದೆ- ತಾಯಿ ಕೊನೆಗಾಲದಲ್ಲಿ ಬಯಸೋದು, ಮಕ್ಕಳು ನಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಲಿ ಎಂದು. ಅವರು ಯಾವ ಸಂದರ್ಭದಲ್ಲೂ ಮಕ್ಕಳ ಆಸ್ತಿ- ಅಂತಸ್ತು ಯಾವುದನ್ನೂ ಕೇಳ್ಳೋದಿಲ್ಲ. ಅವನ್ನು ಹೊತ್ತುಕೊಂಡೂ ಹೋಗುವುದಿಲ್ಲ. ಕೊನೆಗಾಲದಲ್ಲಿ ಕುಟುಂಬದೊಂದಿಗೇ ಉಳಿಯಲು ಸ್ವಲ್ಪ ಜಾಗ ಕೊಟ್ಟರೆ, ನೆಮ್ಮದಿಯ ರಾತ್ರಿ ಕಾಣುತ್ತಾರೆ. ಆದರೆ, ಇವೆಲ್ಲವೂ ಇಂದು ಕನಸು.
ಪ್ರತಿ ಮಕ್ಕಳ ಕಣ್ತೆರೆಸುವ ಈ ಕತೆ ನಿಮ್ಮ ಮನಸ್ಸನ್ನು ತಟ್ಟಲಿದೆ…
ಸಂಸಾರದ ಗಡಿಯಾರ ಓಡುತ್ತಲೇ ಇತ್ತು. ಹತ್ತು ವರುಷ ಕಳೆದರೂ ಆ ದಂಪತಿಗೆ ಮಕ್ಕಳಾಗಿರಲಿಲ್ಲ. “ನಪುತ್ರ ಗತಿನಾಸ್ತಿ ಎಂಬಂತೆ ಮಕ್ಕಳಾಗದೆ ಅದರಲ್ಲೂ ಗಂಡು ಮಕ್ಕಳಾಗದೇ, ಮೋಕ್ಷ ಹೊಂದಲು ಸಾಧ್ಯವೇ?’, ಯಾರೋ ಶಾಸ್ತ್ರದ ಪುಟ ತೆಗೆದು ಹೀಗೆ ಚಿವುಟಿದರು. ತಡೆದುಕೊಂಡಳು ಅವಳು. ಹೆಣ್ಣಾದವಳಿಗೆ ತಾಯ್ತನ ಅನ್ನೋದು ವರ. ಹೆಣ್ಣಾದ ಮೇಲೆ ತಾಯಿ ಆಗ್ಲೆàಬೇಕು. ಇಲ್ಲದಿದ್ರೆ ಆ ಹೆಣ್ಣು ಸಮಾಜದ ಕಣ್ಣಿನಲ್ಲಿ ತುಂಬಾ ಕೀಳಾಗಿ ಬಿಡುತ್ತಾಳೆ. ಸಮಾಜ ನಿತ್ಯವೂ ಅವರನ್ನು ಕಂಡಿದ್ದೂ ಹೀಗೆಯೇ!
ಯಾವುದೇ ಸಂಬಂಧಿಗಳ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಎದುರಾಗುತ್ತಿದ್ದ ಪ್ರಶ್ನೆ ಎರಡೇ. “ಹತ್ತು ವರ್ಷ ಆಯ್ತು, ಇನ್ನೂ ಮಕಾಗಿಲ್ವೇ?’, “ದೇವರ ಶಾಪ ಏನಾದ್ರೂ ಇದ್ದಿರಬೇಕು?’. ಇದನ್ನು ಕೇಳಿ ಕೇಳಿ ಕಿವಿ ಕಾದು ಬಿಸಿ ಆಗಿದೆ. ವಂಶೋದ್ಧಾರಕನ ಅನುಗ್ರಹ ಆಗ್ಲಿಲ್ವಲ್ಲ ಎಂಬ ಕೊರಗು ದಿನೇ ದಿನೇ ದಂಪತಿಗೆ ಕಾಡತೊಡಗಿತು. ನಾನಾ ವೈದ್ಯರನ್ನು ಸಂಪರ್ಕಿಸಿದರು. ಕಂಡ ಕಂಡ ದೇವರಿಗೆಲ್ಲ ಹರಕೆ ರವಾನೆ ಆಯಿತು. ವಾರದಲ್ಲಿ ಎರಡೂರು ಪೂಜೆ. ನಾಲ್ಕಾರು ಜನಕ್ಕೆ ಅನ್ನದಾನ. ಎಂಜಲು ಎಲೆ ಎತ್ತಿ, ದೇವರಲ್ಲಿ ಪ್ರಾರ್ಥಿಸುವುದೇ ಆಗಿಹೋಯಿತು.
ಕಡೆಗೂ ದೇವರು ಕಣ್ತೆರೆದ. ಅವರ ಮಡಿಲಲ್ಲಿ ಗಂಡು ಮಗುವಿತ್ತು. ಜೋಳಿಗೆಯಲ್ಲಿ ಆಗಸದ ನಕ್ಷತ್ರವೇ ಬೆಳಕು ಬೀರುತ್ತಿದೆಯೇನೋ ಅಂತನ್ನಿಸಿ, ಸಂಭ್ರಮಿಸಿದರು ದಂಪತಿ. ಮನೆಮಂದಿಗೆಲ್ಲ ಸ್ವೀಟು. ಬಹಳ ವರ್ಷಗಳ ಬಳಿಕ ಜನಿಸಿದ ಮಗನಾಗಿದ್ದರಿಂದ, ದುಃಖದ ಛಾಯೆ ಅವನ ಮೇಲೆ ಬೀಳದಂತೆ ಬೆಳೆಸಿದರು. ದೊಡ್ಡ ಸ್ಕೂಲ್ನಲ್ಲೇ ಓದಿಸಿದರು. ಮನೆಯಲ್ಲಿ ಸಾಕಷ್ಟು ತೊಂದರೆಗಳಿದ್ದರೂ ಮಗನಿಗೆ ತಿಳಿಸುತ್ತಿರಲಿಲ್ಲ. ಕಾರಣವಿಷ್ಟೇ… ಅವನು ಚೆನ್ನಾಗಿ ಓದಲಿ ಎಂದು. ಕಷ್ಟದ ಮಧ್ಯೆಯೂ ಮಗನನ್ನು ಎಂಜಿನಿಯರಿಂಗ್ ಓದಿಸಿದರು. ಮಗ, ಮುಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಕಂಡುಕೊಂಡ. ಕೈತುಂಬಾ ಸಂಬಳ ಎಣಿಸಿದ.
ಈಗ ಮಗನಿಗೊಂದು ಮದುವೆ ಮಾಡಬೇಕೆಂಬ ಆಸೆ ಅಪ್ಪ- ಅಮ್ಮನಿಗೆ. ಮದ್ವೆ ಆಗುವ ಹುಡುಗಿಯೂ ಟೆಕ್ಕಿಯೇ ಆಗಲಿಯೆನ್ನುವುದು ಮಗನ ಹುಕುಂ. ಯಾವ ಕಂಪ್ಯೂಟರಿನ ಆಶೀರ್ವಾದವೋ, ಎಂಜಿನಿಯರ್ ಹುಡುಗಿಯೇ ಸಿಕ್ಕಳು! ಮುಂದೆ ಕೆಲ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಸೊಸೆಯೂ ಆಫೀಸ್ಗೆ ಹೊರಟಳು. ಈ ಮಧ್ಯೆ ಅತ್ತೆ- ಮಾವನಿಗೆ ವಯಸ್ಸಾದ ಕಾರಣ ವಯೋಸಹಜ ಕಾಯಿಲೆಗಳು ಕಾಡತೊಡಗಿದವು. ದಿಢೀರಂತ ಮಾವ ತೀರಿಕೊಂಡರು. ಇದೇ ಚಿಂತೆಯಲ್ಲಿ ಅತ್ತೆ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ಯಾರಾದರೊಬ್ಬರು ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಯ್ತು. ಸ್ವಲ್ಪ ದಿನ ಸೊಸೆ ನೋಡಿಕೊಂಡಳು. ಅತ್ತೆ ಕೊಂಚ ಸುಧಾರಿಸಿದಳು.
ಇಬ್ಬರೂ ಎಂಜಿನಿಯರ್ ಆಗಿದ್ದರಿಂದ, ತುಂಬಾ ದಿನ ಕೆಲಸದಿಂದ ದೂರವಿರುವಂತಿರಲಿಲ್ಲ. ಈಗಿನ ಬಹುತೇಕ ದಂಪತಿಗಳಂತೆ ಅವರೂ ಮಹಾನಗರದಲ್ಲಿ ಬದುಕಬೇಕೆಂದರೆ ದುಡ್ಡು ತುಂಬಾ ಮುಖ್ಯ ಎಂಬುದನ್ನು ಕಂಡುಕೊಂಡರು. ಹಣ ಬೇಡವೆಂದು ಮನೆಯಲ್ಲೇ ಕುಳಿತರೆ ಸಂಸಾರ ತೂಗಿಸುವುದು ಹೇಗೆ? ಹಾಗೆಂದು ಇಬ್ಬರೂ ಕೆಲಸಕ್ಕೆ ಹೊರಟರೆ ಮನೆಯಲ್ಲಿರುವ ವಯಸ್ಸಾದ ತಾಯಿಯನ್ನು ನೋಡಿಕೊಳ್ಳೋರ್ಯಾರು? ಅದೊಂದು ಸಮಸ್ಯೆಯಾಗಿ ಬೆಳೆಯಿತು. ಆ ವಿಷಯವಾಗಿಯೇ ಅವರಿಬ್ಬರ ಮಧ್ಯೆ ಜಗಳವಾಗತೊಡಗಿತು.
ಕೊನೆಗೆ ಅವರಿಬ್ಬರೂ ಸೇರಿ ಒಂದು ತೀರ್ಮಾನಕ್ಕೆ ಬಂದರು!
ಒಂದು ಬೆಳಗ್ಗೆ ಮಗ “ಅಮ್ಮ, ಬೇಗ ತಯಾರಾಗು. ನಿನ್ನ ಬಟ್ಟೇನೂ ತಗೋ’ ಎಂದ. ಮಗ ಎಲ್ಲೋ ದೂರದ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದಾನೆ ಅಂದುಕೊಂಡ ತಾಯಿ ಏನನ್ನೂ ಕೇಳದೆ, ಮಗನೊಂದಿಗೆ ಕಾರಿನಲ್ಲಿ ಹೊರಟಳು. ತುಂಬಾ ದೂರ ಹೋದ ಮೇಲೆ ಕಾರು ನಿಂತಿತು. ಮಗ “ಅಮ್ಮ ಕೆಳಗಿಳಿಯಮ್ಮ. ಜೊತೆಗೆ ನಿನ್ನ ಬ್ಯಾಗ್ ತಗೋ’ ಎಂದ. ಮುಗ್ಧಮನಸ್ಸಿನ ತಾಯಿ ಸುಮ್ಮನೆ ಕುಳಿತಿದ್ದಳು. ಒಂದೂ ಮಾತಾಡದೇ ತಾಯಿ, ಮಗನ ಹಿಂದೆ ಕಂಪಿಸುವ ಕಾಲುಗಳನ್ನು ಊರುತ್ತಾ ಸಾಗಿದಳು. ಸುತ್ತಲಿನ ವಾತಾವರಣವನ್ನು, ತಾಯಿಯ ಗರ್ಭದಿಂದ ಮಗು ಹೊರಬಂದಾಕ್ಷಣ ಪಿಳಿಪಿಳಿ ನೋಡುವಂತೆ ವೀಕ್ಷಿಸುತ್ತಿದ್ದಳು.
“ಒಳಗೆ ಬಾ ಅಮ್ಮಾ, ಇನ್ಮುಂದೆ ನೀನು ಇಲ್ಲೇ ಇರೀ¤ಯಾ. ಇದು ವೃದ್ಧಾಶ್ರಮ. ಇಲ್ಲಿ ನಿನ್ನ ವಯಸ್ಸಿನವರೇ ಇರ್ತಾರೆ. ಮನೆಯಲ್ಲಿ ನಿನೊಬ್ಳೆ ಹೇಗ್ ಇರ್ತಿಯಾ? ಅಪ್ಪಾನೂ ತೀರಿಹೋದ್ರು, ನೀನು ಒಂಟಿಯಾಗಿಟ್ಟೆ. ಅವಳು ಮತ್ತೆ ಕೆಲಸಕ್ಕೆ ಹೋಗ್ತಾಳಂತೆ. ನಿನ್ನ ನೋಡ್ಕೊಳ್ಳೋಕೆ ಆಗಲ್ವಂತೆ ಅಮ್ಮಾ. ಅದಕ್ಕೇ ನಿನ್ನನ್ನು ಇಲ್ಲಿ ಸೇರಿಸ್ತಿದ್ದೀನಿ. ಎಲ್ಲ ವ್ಯವಸ್ಥೆನೂ ಮಾಡಿದ್ದೀನಿ. ನಿನ್ನನ್ನು ಇಲ್ಲಿ ಚೆನ್ನಾಗಿ ನೋಡ್ಕೊಳ್ತಾರೆ. ನಾನಿನ್ನು ಹೋಗ್ತಿàನಿ’ ಅಂದ ಮಗ. ತಾಯಿಗೆ ಏನ್ ಹೇಳ್ಬೇಕು ಅಂತ ತಿಳೀಲಿಲ್ಲ. ದುಃಖ ಉಕ್ಕಿಬಂತು. ಆದರೂ, ಆ ದುಃಖವನ್ನು ತೋರಿಸದೆ, “ಸರಿ ಮಗಾ… ಸೊಸೆಯನ್ನ, ಮಕ್ಕಳನ್ನ ಸಂದಾಗ್ ನೋಡ್ಕೊà, ನಾನ್ ಹೆಂಗಿದ್ರೂ ಉದುರಿ¤ರೋ ಎಲೆ, ಎಲ್ಲಿದ್ರೇನು… ನೀನ್ ಸಂದಾಗಿರು. ಈಗ ನಿಂಗ್ ಖುಸಿನಾ ಮಗಾ? ನೂರಾಲ ಸುಖವಾಗ್ ಬಾಳು, ಸಂದಾಗಿರಪ್ಪ, ಸಂದಾಗಿರು’ ಅನ್ನುತ್ತಾ ಕಣ್ಣು ಒರೆಸಿಕೊಳ್ಳುತ್ತಾ ಬಾಗಿದ ಬೆನ್ನನ್ನು ತಿರುಗಿಸಿ ಹೊರಟಳು.
ಮಗನೂ ಹಿಂತಿರುಗಿ ನೋಡಲಿಲ್ಲ. ಅವನು ತುಸು ಮುಂದೆ ಹೋದ ಮೇಲೆ ತಾಯಿ ದುರ್ಬಲ ಗೋಣಿನಿಂದ ಹಿಂದೆ ಹಿಂದೆ ನೋಡುತ್ತಾ ಮೆಲ್ಲನೆ ಹೆಜ್ಜೆ ಇಟ್ಟಳು. ಒಂದೊಂದು ಹೆಜ್ಜೆಯನ್ನು ಊರುವಾಗಲೂ ಮಗನ ಕಡೆ ತಿರುಗಿ ನೋಡುತ್ತಾ, ಕಣ್ಣೊರೆಸಿಕೊಳ್ಳುತ್ತಾ ಸಾಗಿದಳು. ಈ ಮಗನನ್ನ ಪಡೆಯಲು ಅವರು ಮಾಡಿದ ಹರಕೆ, ಪೂಜೆ, ವ್ರತ, ನೆಲದ ಮೇಲೆ ಊಟ ಮಾಡಿದ್ದು, ಎಲ್ಲವೂ ನೆನಪಾಗಿ ಸದ್ದಿಲ್ಲದೆ ಕಣ್ಣಲ್ಲಿ ಗಂಗೆ ಹರಿಯುತ್ತಿದ್ದಳು.
ಕೊನೆಗಾಲದಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬಹುದು, ಮಗ ಚಿಕ್ಕವನಿದ್ದಾಗ ತಾನು ಲಾಲಿಹಾಡು ಹಾಡುತ್ತಾ ತೋಳ ತೆಕ್ಕೆಯಲ್ಲಿ ಮುದ್ದಾಡಿ, ಮಮತೆಯ ಮಾತುಗಳಲ್ಲಿ ಮಲಗಿಸುತ್ತಿದ್ದಳು. ಇಳಿವಯಸ್ಸಿನಲ್ಲಿ ಅದೇ ಮಗು ತನ್ನ ಮಡಿಲಲ್ಲಿ ತನ್ನ ಮಲಗಿಸ್ತಾನೆ ಅಂದುಕೊಂಡಿದ್ದಳು. ಆದರೆ, ಅವನು ಇರಲು ಸೂರು, ಕೊನೆಗಾಲದಲ್ಲಿ ಕನಿಷ್ಠ ನೀರನ್ನೂ ಕೊಡ್ಲಿಲ್ವಲ್ಲ ಎಂಬ ಚಿಂತೆ ಆಕೆಯ ಭುಜವನ್ನೇರಿ, ಬದುಕನ್ನು ಭಾರವಾಗಿಸಿತ್ತು.
ಬಹುಶಃ ಇಂಥ ಘಟನೆಗಳು ಇಂದು ಬೀದಿಗೊಂದು ಇಂಥ ಘಟನೆಗಳು ಸಿಗುತ್ತವೆ. ಮಗನನ್ನು ಪಡೆಯಲು ತಾಯಿ ಅದೆಷ್ಟೇ ಕಷ್ಟಪಟ್ಟರೂ, ಮಗುವಿನ ಒಂದು ನಗುವಿನ ಮುಂದೆ ತನ್ನ ನೋವನ್ನೆಲ್ಲ ಕರಗಿಸಿಕೊಳ್ಳುವಳು. ತಂದೆ- ತಾಯಿ ಕೊನೆಗಾಲದಲ್ಲಿ ಬಯಸೋದು ಕೇವಲ ಇಷ್ಟನ್ನೇ… ಮಕ್ಕಳ ಜೊತೆಗಿರಬೇಕು, ಮೊಮ್ಮಕ್ಕಳ ಜೊತೆ ನಾವೂ ಮಕ್ಕಳಾಗಿ ಆಡಬೇಕು, ಮಗ- ಸೊಸೆಯಿಂದ ಪ್ರೀತಿಯ ಮಾತನ್ನು ಕೇಳಬೇಕು, ಅವರ ಕಣ್ಣಲ್ಲಿ ಕಾಳಜಿ ಕಾಣಬೇಕು, ಎಲ್ರೂ ಜೊತೆಯಾಗಿ ಬೆಳದಿಂಗಳ ಬೆಳಕಲ್ಲಿ ಖುಷಿಯಾಗಿ ತುತ್ತು ಸವಿಯಬೇಕು- ಇಷ್ಟನ್ನೇ ಅವರು ಬಯಸುವುದು! ಮಕ್ಕಳ ಆಸ್ತಿ- ಅಂತಸ್ತು ಯಾವುದನ್ನೂ ಅವರು ಕೇಳ್ಳೋದಿಲ್ಲ. ಅವನ್ನು ಹೊತ್ತುಕೊಂಡೂ ಹೋಗುವುದಿಲ್ಲ. ನೀವಿರುವಲ್ಲಿಯೇ ಸ್ವಲ್ಪ ಜಾಗ ಕೊಟ್ಟರೆ, ನೆಮ್ಮದಿಯ ರಾತ್ರಿ ಕಾಣುತ್ತಾರೆ.
ಆದ್ರೆ ಎಷ್ಟು ಮಕ್ಕಳು ಈ ಥರ ನಡೆದುಕೊಳ್ತಾರೆ? ತಂದೆ- ತಾಯಿ ಅಂದ್ರೆ ಕಣ್ಣಿಗೆ ಕಾಣುವ ದೇವರಿದ್ದಂತೆ. ಕಣ್ಣಿಗೆ ಕಾಣುವ ದೇವರನ್ನು ಕಾಣದ ಯಾವುದೋ ದೂರದ ಊರಲ್ಲಿಟ್ಟು, ಕಾಣದ ದೇವರಿಗಾಗಿ ಹುಡುಕಾಡುವ ಮೂರ್ಖರ ಸಂತೆ ಈ ಲೋಕದಲ್ಲಿ ಹುಟ್ಟಿಕೊಳ್ಳುತ್ತಿದೆ. ಹೆತ್ತವರ ಋಣ ತೀರಿಸಲು ಎಷ್ಟೇ ಜನ್ಮ ತಳೆದರೂ ಸಾಲದು. ಹಾಗಾಗಿ, ಸಿಗುವ ಅತ್ಯಮೂಲ್ಯ ಅವಕಾಶವನ್ನು ಕಳೆದುಕೊಳ್ಳಬೇಡಿ. ಅವರನ್ನು ಕೊನೆಯವರೆಗೂ ನಿಮ್ಮೊಟ್ಟಿಗೇ ಇಟ್ಟುಕೊಳ್ಳಿ. ಪ್ರೀತಿಯಿಂದ ಅಪ್ಪಿಕೊಳ್ಳಿ. ಅವರ ಕಡೆಯ ಕ್ಷಣಗಳಲ್ಲಿ ನೀವು ಹುಟ್ಟಿದಾಗ ಕಂಡ ನಗುವೇ ಅವರ ಮೊಗದಲ್ಲಿ ಮೂಡಿದರೆ, ಮಾನವನ ಜನುಮ ಸಾರ್ಥಕ.
ಸೆಹ್ವಾಗ್ ಹೇಳಿದ ಮಾತು ನಿಮ್ಮೊಳಗೆ ರೆಕಾರ್ಡ್ ಆಗಿರಲಿ…
ಅವತ್ತು ವಿಶ್ವ ಅಮ್ಮಂದಿರ ದಿನ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡೋವಾಗ ಒಂದು ಮಾತನ್ನು ಹೇಳಿದ್ರು; “ನ್ಯೂಟನ್ ಒಟ್ಟು ಮೂರು ನಿಯಮಗಳನ್ನು ಭೌತಶಾಸ್ತ್ರಕ್ಕೆ ನೀಡಿದ್ದಾರೆ. ಆದರೆ, ಅವರು ಪರಿಚಯಿಸಿದ ನಾಲ್ಕನೇ ನಿಯಮವೂ ಇದೆ. ಅದೇನು ಗೊತ್ತೇ? “ಯಾರು ಹೆತ್ತ ತಂದೆ- ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೋ, ಮುಂದೆ ಅವನ ಮಗ ತನ್ನ ಅಪ್ಪನನ್ನು ಹೊರಗೆ ಹಾಕುತ್ತಾನೆ!’. ಈ ಮಾತನ್ನು ನ್ಯೂಟನ್ ಪಕ್ಕದ ಮನೆಯ ಸ್ನೇಹಿತನೊಬ್ಬನಿಗೆ ಹೇಳಿದ್ದರಂತೆ.
ಗೌರಿ. ಭೀ. ಕಟ್ಟಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು