ಗ್ಲ್ಯಾಮರ್‌ ಮಿಸ್ಟೇಕ್‌


Team Udayavani, May 16, 2018, 12:28 PM IST

glumour.jpg

ಹೆಣ್ಣಿಗೆ ಮೇಕಪ್‌ ಎನ್ನುವುದು ದೈನಂದಿನ ಧ್ಯಾನ. ಬಹಳ ನಾಜೂಕಿನಿಂದ ತನ್ನನ್ನು ತಾನು ಅಲಂಕರಿಸಿಕೊಳ್ಳುವ ಆ ಧ್ಯಾನದಲ್ಲಿ ಒಬ್ಬ ಕಲಾವಿದನೂ ಇದ್ದಾನೆ. ಕನ್ನಡಿ ಮುಂದೆ ನಿಂತು ಹೊರಬರುವಾಗ ತನ್ನನ್ನು ಅದ್ಭುತ ಕಲಾಕೃತಿಯಾಗಿ ರೂಪಿಸಿಕೊಳ್ಳಬೇಕು ಎಂಬ ಹಠ ಎಲ್ಲ ಹೆಣ್ಣಿಗೂ ಇದ್ದಿದ್ದೇ. ಆದರೆ, ಎಷ್ಟೇ ಪರಿಪೂರ್ಣವಾಗಿ ಸಿಂಗಾರ ಮಾಡಿಕೊಂಡರೂ, ಒಂದಲ್ಲಾ ಒಂದು ತಪ್ಪು ಆಗಿಯೇ ಆಗಿರುತ್ತೆ. ಅದೇ “ಗ್ಲ್ಯಾಮರ್‌ ಮಿಸ್ಟೇಕ್‌’. ಹಾಗಾದರೆ, ಪರ್ಫೆಕ್ಟಾಗಿ ಮೇಕಪ್‌ ಮಾಡಿಕೊಳ್ಳುವುದು ಹೇಗೆ?

ಹುಡುಗಿಯರ ಮೇಕಪ್‌ ಬಗ್ಗೆ ಜೋಕುಗಳನ್ನು ಕೇಳಿರುತ್ತೀರಿ. ಆದರೆ, ಜೋಕು ಮಾಡಿದಷ್ಟು ಸುಲಭವಲ್ಲ ಮೇಕಪ್‌ ಮಾಡಿಕೊಳ್ಳೋದು ಮತ್ತು ಅದನ್ನು ದಿನವಿಡೀ ಉಳಿಸಿಕೊಳ್ಳೋದು. ಅದು ನಿತ್ಯ ತಾಲೀಮಿನ ಧ್ಯಾನದ ರೀತಿ. ನಟಿ ಶ್ರೀದೇವಿ, ಸಿನಿಮಾ ಸೆಟ್‌ನಲ್ಲಿ ಮೇಕಪ್‌ ಮಾಡಿಕೊಂಡ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಬಿಡುತ್ತಿದ್ದರಂತೆ. ಜೋರಾಗಿ ರೆಪ್ಪೆ ಬಡಿದರೆ ಕಣ್ಣಿನ ಮಸ್ಕಾರ ಎಲ್ಲಿ ಆಚೀಚೆ ಆಗಿಬಿಡುತ್ತದೋ ಎಂಬಷ್ಟು ನಾಜೂಕು,

ಬಾಯ್ಬಿಟ್ಟು ಮಾತಾಡಿದರೆ ತುಟಿಯ ರಂಗು ಮಾಸಬಹುದು ಅನ್ನೋ ದಿಗಿಲು. ಮಾತುಕತೆಯೆಲ್ಲ ಸಂಜ್ಞೆ, ಕಣ್ಸನ್ನೆಗಳ ಮೂಲಕವೇ ನಡೆಯುತ್ತಿತ್ತಂತೆ ಸೆಟ್‌ನಲ್ಲಿ. ಪ್ರತಿ ಅರ್ಧ ಗಂಟೆಗೊಮ್ಮೆ ಮೇಕಪ್‌ಮ್ಯಾನ್‌ ಆಕೆಯ ಚೆಲುವಿನ ಪರೀಕ್ಷೆ ನಡೆಸುತ್ತಿದ್ದನಂತೆ. ಕೈಗನ್ನಡಿಗಂತೂ ಇಡೀ ದಿನ ಕೆಲಸ. ಕೊನೆಯ ದಿನದವರೆಗೂ ಶ್ರೀದೇವಿ ಅದೇ ಚೆಲುವು, ಮಾದಕತೆಯನ್ನು ಉಳಿಸಿಕೊಂಡರು.

ಸೌಂದರ್ಯ ಎಲ್ಲಿ ತನ್ನನ್ನು ತೊರೆದು ಹೋಗುತ್ತದೋ, ಕ್ಯಾಮೆರಾದಲ್ಲಿ ಮುಪ್ಪಿನ ಗೆರೆಗಳು ಎಲ್ಲಿ ಕಾಣಿಸಿಬಿಡುತ್ತವೋ ಎಂಬ ಬಗ್ಗೆ ಆಕೆಗೆ ಕಳವಳವಿತ್ತು. ಸಾಯುವ ಕೊನೆಯ ಕ್ಷಣದಲ್ಲೂ ಕಣ್ಣಮೇಲೆ ಕಾಡಿಗೆ, ಕೆನ್ನೆಯ, ತುಟಿಯ ರಂಗು ಮಾಸದಂತೆ ನೋಡಿಕೊಂಡರು. ಆದರೆ, ಶ್ರೀದೇವಿಯಂತೆ ಎಲ್ಲರೂ ಅಲ್ಲವಲ್ಲ; ಅನೇಕ ಸಲ ನಾವು ಪರ್ಫೆಕ್ಟಾಗಿ ಮೇಕಪ್‌ ಮಾಡಿಕೊಂಡಿದ್ದೇವೆ ಅಂತನ್ನಿಸಿದರೂ, ಒಂದಲ್ಲಾ ಒಂದು ಯಡವಟ್ಟು ಆಗಿರುತ್ತದೆ. ನಮಗೆ ಗೊತ್ತಿಲ್ಲದಂತೆ ಅಲಂಕಾರದಲ್ಲಿ ದೋಷವೊಂದು ಕಾಣಿಸಿಕೊಂಡಿರುತ್ತದೆ.
***
ನಾನು ಓದುತ್ತಿದ್ದ ಕಾಲೇಜಿನಲ್ಲಿ ಒಬ್ಬಳಿದ್ದಳು. ಆ ಕಾರಿಡಾರಿಗೇ ಬಹಳ ಫೇಮಸ್ಸು. ಸುಂದರಿಯೇನೋ ಹೌದು. ಆದರೆ, ಅವಳು ಫೇಮಸ್‌ ಆಗಿದ್ದು ಮಾತ್ರ ತನ್ನ ಗಾಢ ಮೇಕಪ್‌ನಿಂದಾಗಿ. ಗೋಧಿ ಬಣ್ಣದ ಆ ಚೆಲುವೆ, ಬಿಳಿ ಕಾಣಿಸಬೇಕಂತ ಮುಖಕ್ಕೆ ತುಸು ಹೆಚ್ಚೆನಿಸುವಷ್ಟು ಮೇಕಪ್‌ ಮಾಡಿಕೊಳ್ತಾ ಇದ್ದಳು. ಮೇಕಪ್‌ ಮಾಡುವಾಗ ಕುತ್ತಿಗೆಯ ಬಣ್ಣಕ್ಕೆ ಗಮನ ಕೊಡ್ತಾ ಇರಲಿಲ್ಲ. ಮುಖವೇನೋ ಬಿಳಿ, ಕುತ್ತಿಗೆ ಮಾತ್ರ ಕಪ್ಪು. ಅವಳ ನಿಜಬಣ್ಣ ಕುತ್ತಿಗೆಯಿಂದಾಗಿ ಬಯಲಾಗಿತ್ತು. ಬೆವರಿಗೆ ಗಾಢ ಮೇಕಪ್‌ ಕರಗಿ, ಕುತ್ತಿಗೆ ಮೇಲೆ ಇಳಿದು, ವಿಗ್ರಹಕ್ಕೆ ಮಾಡೋ ಕ್ಷೀರಾಭಿಷೇಕವನ್ನು ನೆನಪಿಸುತ್ತಿತ್ತು.    
***
ಗೆಳತಿಯ ರಿಸೆಪ್ಷನ್‌ಗೆ ಹೊರಟಿದ್ದೆ. ಮುಖದ ಮೇಕಪ್‌ ಎಲ್ಲಾ ಮುಗಿಸಿದ ಮೇಲೆ, ಗಾಢವಾಗಿ ಮಸ್ಕಾರ ಹಚ್ಚಿ ಕಣ್ಣು ಮುಚ್ಚಿಕೊಂಡು ಕುಳಿತೆ. ಮಸ್ಕಾರವಿನ್ನೂ ಒಣಗಿರಲಿಲ್ಲ, ಯಾರೋ ಕರೆದರು ಅಂತ ಕಣ್ಣು ತೆರೆದರೆ, ರೆಪ್ಪೆಯ ಮೇಲಿರಬೇಕಿದ್ದ ಕಾಡಿಗೆ, ಹುಬ್ಬಿಗೆ, ಹಣೆಗೆಲ್ಲಾ ತಾಗಿಬಿಟ್ಟಿತು. ಅದನ್ನು ಉಜ್ಜಿ ತೆಗೆಯುವಷ್ಟರಲ್ಲಿ ಕಣ್ಣಿನ ಸುತ್ತ ಒಂದು ರೌಂಡ್‌ ಕಪ್ಪು ಕಲೆ. ಮುಖದ ಮೇಕಪ್‌ ಕೂಡ ಹಾಳಾಯ್ತು.
***
ಹೀಗೆ ಅಂದವನ್ನು ಹೆಚ್ಚಿಸಬೇಕಾದ ಮೇಕಪ್ಪೇ ಕೆಲವೊಮ್ಮೆ ನಮಗೆ ಮುಳುವಾಗಿಬಿಡುತ್ತೆ. ಮದುವೆಯಲ್ಲಿ ನಾನೇ ಮಿಂಚಬೇಕು ಅಂತ ಒಂದು ತಿಂಗಳಿಂದ ಪಟ್ಟ ಶ್ರಮ, ಸೆಲ್ಫಿಯಲ್ಲಿ ನಾನೇ ಸುಂದರಿಯಾಗಿ ಬೀಗಬೇಕು ಅಂತ ಕನ್ನಡಿ ಮುಂದೆ ಕಳೆದ ಗಂಟೆಗಳನ್ನು ಒಂದೇ ಒಂದು ಸಣ್ಣ ಮೇಕಪ್‌ ಮಿಸ್ಟೇಕ್‌ ತಿಂದು ಹಾಕಿಬಿಡುತ್ತೆ. ಅಂಥ ತಪ್ಪು ಆಗದೇ ಇರಲು, ಮೇಕಪ್‌ನಲ್ಲೂ ಹಂಡ್ರೆಡ್‌ ಪರ್ಸೆಂಟ್‌ ಪರ್ಫೆಕ್ಟಾಗಲು ಒಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ. ಈ ಕೆಳಗಿನ 16 ಸೂತ್ರ ಪಾಲಿಸಿಬಿಟ್ಟರೆ, ಈ ಸಲ ಪರ್ಫೆಕ್ಟ್ ಮೇಕಪ್‌ ನಿಮ್ದೆ!

1. ಕಣ್ಣಿಗೆ ದಪ್ಪ ಮಸ್ಕಾರ ಹಚ್ಚುವವರು ಹೊರಗೆ ಹೊರಡುವುದಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಮಸ್ಕಾರ ಹಚ್ಚಿ, ಅದನ್ನು ಚೆನ್ನಾಗಿ ಒಣಗಲು ಬಿಡಿ. ಇಲ್ಲವಾದರೆ, ಮಸ್ಕಾರ ಒಣಗುವ ಮುನ್ನ ಗಡಿಬಿಡಿಯಲ್ಲಿ ಕಣ್ಣು ತೆರೆದರೆ  ಮಸ್ಕಾರ ರೆಪ್ಪೆ, ಹುಬ್ಬು, ಹಣೆಗೆ ಅಂಟಿ ರಾದ್ಧಾಂತವಾಗುತ್ತದೆ. 

2. ಕೆಳಗಿನ ರೆಪ್ಪೆಗಳಿಗೆ ಗಾಢ ಮಸ್ಕಾರ ಲೇಪನ ಬೇಡವೇ ಬೇಡ. ವಿಕಾರರೂಪ ನೆನಪಿಸಿಬಿಟ್ಟರೆ, ನೋಡುಗರಿಗೂ ಕಷ್ಟ ಅಲ್ವಾ?

3. ಮುಖದ ಅಂದಕೆ ಹೊಳೆಯುವ ಕಣ್ಣುಗಳೇ ಭೂಷಣ ಅಂತಾರೆ. ಹಾಗಿದ್ದ ಮೇಲೆ ಕಣ್ಣಿನ ಮೇಲೆ ಗ್ಲಿಟರ್‌ ಯಾಕೆ ಬೇಕು? ಗ್ಲಿಟರಿಂಗ್‌ ಐ ಶ್ಯಾಡೋಗಳನ್ನು ಕಣ್ಣಿನ ಮೇಲೆ ಹಚ್ಚುವುದಕ್ಕಿಂತ ಕೆಳ ರೆಪ್ಪೆಗೆ ತೆಳುವಾಗಿ ಲೇಪಿಸಿದರೆ ಚಂದ. 

4. ಹುಬ್ಬಿನ ಬಣ್ಣಕ್ಕಿಂತ ಎರಡು ಶೇಡ್‌ ಹೆಚ್ಚು ಗಾಢವಾಗಿ ಕಣ್ಣಿಗೆ ಮಸ್ಕಾರ ಲೇಪಿಸಿ.

5. ಒಣ ತ್ವಚೆಗೆ ಫೌಂಡೇಶನ್‌ ಇಲ್ಲದೆ ಮೇಕಪ್‌ ಹಚ್ಚಬಾರದು. ಹಾಗೆ ಮಾಡುವುದರಿಂದ ಮೇಕಪ್‌ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಚರ್ಮ ಬಿರುಕು ಬಿಟ್ಟ ಗದ್ದೆಯಂತೆ ಕಾಣಿಸುತ್ತದೆ.

6. ಕೆಲವರು ಮೇಕಪ್‌ ಅಂದ್ರೆ ಗಾಢವಾಗಿ ಪೌಡರ್‌ ಹಚ್ಚುವುದು ಅಂತಲೇ ಭಾವಿಸುತ್ತಾರೆ. ಅದು ಕೂಡ ತಪ್ಪು. ಚರ್ಮದ ನಿಜ ಬಣ್ಣವನ್ನು ಕಂಡೂ ಕಾಣದಂತೆ ಮರೆಮಾಚುವಷ್ಟು ಮಾತ್ರ ಪೌಡರ್‌ ಬಳಸಬೇಕು. ಇಲ್ಲದಿದ್ದರೆ ಮುಖಕ್ಕೆ ಬೂದಿ ಬಳಿದ ಹಾಗನಿಸುತ್ತದೆ. 

7. ನಿಮ್ಮ ತುಟಿ, ಮುಖದ ಬಣ್ಣ ಹಾಗೂ ಧರಿಸುವ ಬಟ್ಟೆಗೆ ಒಪ್ಪುವ ಲಿಪ್‌ಸ್ಟಿಕ್‌ ಬಣ್ಣವನ್ನು ಮೊದಲೇ ಆಯ್ಕೆ ಮಾಡಿಕೊಂಡು, ಒಮ್ಮೆ ಅದನ್ನು ಅಪ್ಲೆ„ ಮಾಡಿ ನೋಡಿ. ಕೆಲವರಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಒಪ್ಪಿದರೆ, ಇನ್ನು ಕೆಲವರು ತಿಳಿಬಣ್ಣದಲ್ಲೇ ಚೆನ್ನಾಗಿ ಕಾಣಿಸುತ್ತಾರೆ. ನಿಮ್ಮ ಆಯ್ಕೆಯ ಬಣ್ಣ ಯಾವುದು ಅಂತ ಗುರುತಿಸಿ. 

8. ಕಿರುಬೆರಳಿಗಿಂತ ಕಡಿಮೆ ಇರುವ ತುಟಿಗೆ ಬಣ್ಣ ಹಚ್ಚುವುದೇನು ಸುಲಭದ ಕೆಲಸವೇ? ಕೆಲವರು ತುಟಿಗೆ ಹೇಗೆ ಲಿಪ್‌ಸ್ಟಿಕ್‌ ಬಳಸುತ್ತಾರೆಂದರೆ, ಅವರು ಬಣ್ಣ ಹಚ್ಚಿದ್ದಾರೋ, ಲಿಪ್‌ಸ್ಟಿಕ್‌ ತಿಂದು ಬಂದಿದ್ದಾರೋ ಅಂತ ಗೊಂದಲವಾಗುತ್ತದೆ. ಬಣ್ಣ ತುಟಿಯನ್ನು ದಾಟಿ ಬಾಯಿಯ ಆಚೀಚೆ ತಾಗದಂತೆ ಲಿಪ್‌ಲೈನರ್‌ನಿಂದ ತುಟಿಗೆ ಔಟ್‌ಲೆçನ್‌ ಹಾಕಿಕೊಳ್ಳುವುದು ಅಗತ್ಯ.

9. ಕೆಲವರ ಹುಬ್ಬು ಸಹಜವಾಗಿಯೇ ದಪ್ಪಗೆ ಇರುತ್ತವೆ. ಇನ್ನು ಕೆಲವರು ತಮ್ಮ ತೆಳುವಾದ ಹುಬ್ಬಿಗೆ ಪೆನ್ಸಿಲ್‌ನ ಸ್ಪರ್ಶ ಕೊಡುತ್ತಾರೆ. ಆಗ ಗಾಢವಾದ ಪೆನ್ಸಿಲ್‌ ಬಳಸುವುದೂ ಒಳ್ಳೆಯ ಐಡಿಯಾ ಅಲ್ಲ. ಅದು ನಿಮ್ಮ ಸಹಜ ಸೌಂದರ್ಯವನ್ನು ಹಾಳು ಮಾಡಿಬಿಡುತ್ತೆ.

10. ಮೇಕಪ್‌ ಮಾಡಿಕೊಳ್ಳುವ ಸ್ಥಳದಲ್ಲಿ ಸ್ವಾಭಾವಿಕ ಬೆಳಕಿರಲಿ. ಇಲ್ಲದಿದ್ದರೆ ಮುಖದ ಮೇಕಪ್‌ ಹೊರಗೆ ಹೋದಾಗ ಬೇರೆಯದೇ ರೀತಿ ಕಾಣಿಸಿ, ಅಭಾಸವಾಗಬಹುದು. 

11. ಮೇಕಪ್‌ ಮಾಡುವಾಗ ಕುತ್ತಿಗೆ ಹಾಗೂ ಕಿವಿಯನ್ನು ಮರೆಯಲೇಬೇಡಿ. ಮುಖ, ಕುತ್ತಿಗೆ, ಕಿವಿಯ ಬಣ್ಣ ಒಂದೇ ಇದ್ದರೆ ಮೇಕಪ್‌ ಎದ್ದು ಕಾಣಿಸುವುದಿಲ್ಲ. ಸ್ಲಿವ್‌ಲೆಸ್‌ ಧರಿಸುವುದಾದರೆ ಕೈ, ತೋಳಿನ ಬಣ್ಣದ ಬಗ್ಗೆಯೂ ಗಮನವಿರಲಿ. 

12. ಗ್ರ್ಯಾಂಡ್‌ ಫ‌ಂಕ್ಷನ್‌ಗಳಿಗೆ ಹೋಗುವಾಗ ಗ್ರ್ಯಾಂಡ್‌ ಮೇಕಪ್‌ ಓಕೆ. ಆದ್ರೆ, ಸೆಂಟ್‌ ಸುರಿದುಕೊಳ್ಳೋದು ಯಾಕೆ? ನಿಮ್ಮ ಸೆಂಟ್‌ನ ಸುವಾಸನೆ ನಿಮಗೆ ಬಂದರೆ ಸಾಕು, ಸುತ್ತ ನೂರು ಮೀಟರ್‌ಗೆಲ್ಲ ವಾಸನೆ ಹಬ್ಬಿಸುವ ಅಗತ್ಯವಿಲ್ಲ. 

13. ಮೇಕಪ್‌ ಕಿಟ್‌ ಅನ್ನು ಪ್ರತಿ ಆರು ತಿಂಗಳಿಗಾದರೂ ಒಮ್ಮೆ ಬದಲಿಸಿ. ಹಳೆಯ ಬ್ರಶ್‌ ಅನ್ನು ಪದೇಪದೆ ಮೇಕಪ್‌ಗೆ ಬಳಸುವುದರಿಂದ ಬಣ್ಣವೆಲ್ಲ ಬ್ರಶ್‌ಗೇ ಅಂಟಿಕೊಂಡು ಮೇಕಪ್‌ ಹಾಳಾಗಬಹುದು.  

14.  ಹೊಸ ಬಟ್ಟೆ ಖರೀದಿಸುವಾಗ ಅದನ್ನು ಹಾಕಿ ನೋಡುತ್ತೇವೆ. ನಮ್ಮ ಮೈ ಅಳತೆಗೆ ಆ ಡ್ರೆಸ್‌ ಸರಿಯಾಗಿ ಹೊಂದುವಂತಿರಬೇಕು ಎಂದು ನೋಡಿ, ಆನಂತರವೇ ಖರೀದಿಸುತ್ತೇವೆ. ಹಾಗೆಯೇ ಮೇಕಪ್‌ ಕೂಡ ಮೈ ಬಣ್ಣಕ್ಕೆ ಹೊಂದುವಂತಿರಬೇಕು. ಹೊಸ ಲಿಪ್‌ಸ್ಟಿಕ್‌, ಫೌಂಡೇಶನ್‌ ಕ್ರೀಂ, ಮಸ್ಕಾರ ಖರೀದಿಸಿದಾಗ ಅದನ್ನು ಕೂಡ ಒಮ್ಮೆ ಅಪ್ಲೆ„ ಮಾಡಿ ನೋಡಿ. ನೀವು ಅಂದುಕೊಂಡದ್ದಕ್ಕಿಂತ ಮಸ್ಕಾರ ಹೆಚ್ಚೇ ಲಿಕ್ವಿಡ್‌ ಇರಬಹುದು, ಲಿಪ್‌ಸ್ಟಿಕ್‌ ಸ್ವಲ್ಪ ಜಾಸ್ತಿ ಗಾಢವಾಗಿರಬಹುದು. ಇವನ್ನೆಲ್ಲ ಮೊದಲೇ ಒಂದು ಬಾರಿ ಚೆಕ್‌ ಮಾಡಿ. 

15. ಲಿಪ್‌ಸ್ಟಿಕ್‌ ಅನ್ನು ಸಾಮಾನ್ಯವಾಗಿ ಕೈ ಮೇಲೆ ಹಚ್ಚಿ ಬಣ್ಣ ಪರೀಕ್ಷೆ ಮಾಡುತ್ತಾರೆ. ತುಟಿಗಿಂತ ಕೈ ಚರ್ಮದ ಬಣ್ಣ ಗಾಢವಾಗಿರುವುದರಿಂದ, ಬಣ್ಣ ತುಟಿಗೆ ಒಪ್ಪುತ್ತದೋ ಇಲ್ಲವೋ ಎಂದು ಗೊತ್ತಾಗುವುದಿಲ್ಲ.  

16. ಚಳಿಗಾಲ, ಮಳೆಗಾಲ, ಬೇಸಿಗೆಗಾಲಕ್ಕೆ ತಕ್ಕಂತೆ ಹೇಗೆ ವಾರ್ಡ್‌ರೋಬ್‌ನ ಬಟ್ಟೆಗಳಲ್ಲಿ ಬದಲಾವಣೆಗಳಾಗುತ್ತವೆಯೋ, ಅಂಥ ಬದಲಾವಣೆ ಮೇಕಪ್‌ ಕಿಟ್‌ನಲ್ಲಿಯೂ ಆಗಲಿ. ಚಳಿಗಾಲದ ಕೆಲವು ಕ್ರೀಂಗಳನ್ನು ಬೇಸಿಗೆಯಲ್ಲಿ ಬಳಸಿದರೆ, ಅದು ಬಿಸಿಲಿಗೆ ಕರಗಿ ನೀರಾಗುವ ಅಪಾಯವಿರುತ್ತದೆ.

* ಪ್ರಿಯಾಂಕಾ ಎನ್‌.

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.