ಇತ್ತ ದರಿ, ಅತ್ತ ಸುಂದರಿ
Team Udayavani, Oct 3, 2018, 12:26 PM IST
(ಅಂತರಗಂಗೆ) ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ…
ನಲವತ್ತರ ರಾಜೂಗೆ ಕೆಲಸದೊತ್ತಡ ಇರಲಿಲ್ಲ. ಆದರೆ, ಮನೆಯಲ್ಲಿ ನಡೆದ ಘಟನೆ ಅವರ ಮನಸ್ಸಿಗೆ ತುಂಬಾ ನೋವು ತಂದಿದೆ. ತಂದೆ ತೀರಿಕೊಂಡು 20 ದಿನಗಳಾಗಿದ್ದವು. ಸತ್ತ ನಾಲ್ಕನೇ ದಿನ, ರಾಜೂ ಅವರ ಅಕ್ಕಂದಿರು ತಮ್ಮನಿಗೆ ಸಾಂತ್ವನ ಹೇಳುವ ಬದಲು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಯಾದಾಗಿನಿಂದ ರಾಜೂ ಹೆಂಡತಿಗೇ ಪ್ರಾಶಸ್ತ್ಯ ಕೊಟ್ಟು, ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಅವರ ಕಂಪ್ಲೇಂಟು. ಮದುವೆಗೆ ಹುಡುಗಿ ಹುಡುಕಿದ್ದು ಅಕ್ಕಂದಿರೇ. ಆದರೆ, ಸೊಸೆ ಹೊಂದಿಕೊಳ್ಳಲೇ ಇಲ್ಲ. ಈ ಕಾರಣದಿಂದ ಅಪ್ಪ- ಅಮ್ಮ ಬೇರೆ ಮನೆಯಲ್ಲಿ ಇದ್ದರು. ಅಪ್ಪನಿಗೆ ಸಾವು ಬರುವುದಕ್ಕೆ ಮಗನಿಂದ ದೂರ ಇದ್ದದ್ದೇ ಕಾರಣ ಎಂದು ಅಕ್ಕಂದಿರ ವಾದ.
ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ. ರಾಜೂಗೆ ಒಬ್ಬಳು ಸ್ನೇಹಿತೆ ಇರಬಹುದೆಂದು ಗುಮಾನಿ ಮತ್ತು ಮಾವನವರು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಸುಳ್ಳು ಹೇಳಿ, ಅತ್ತೆ-ಮಾವನನ್ನು ದೂರ ಮಾಡಿದ್ದಳು.
ದೊಡ್ಡ ಮಗಳು ತಾಯಿಯನ್ನು ಚೆನ್ನಾಗಿ ನೋಡಿಕೊಂಡರೂ ರಾಜೂ ಬಗ್ಗೆ ಸ್ವಲ್ಪ ಅಸಹನೆ. ಇದ್ದದ್ದಕ್ಕೆ- ಇಲ್ಲದಿದ್ದಕ್ಕೆ ತಾಯಿಯ ಬಳಿ ಅವನನ್ನು ಬಯ್ಯುತ್ತಿದ್ದಳು. ಪಾಪದ ರಾಜೂವನ್ನು ಬಯ್ದರೆ ತಾಯಿಯ ಕರುಳು ಚುರ್ ಎನ್ನುತ್ತಿತ್ತು. ತಾಯಿ ಮಗನಿಗೆ ಫೋನ್ ಮಾಡಿ ಅಕ್ಕ ನಿನ್ನನ್ನು ಬಯ್ಯುತ್ತಾಳೆ ಎಂದು ದುಃಖೀಸುತ್ತಿದ್ದರು.
ಅಂದು ರಾತ್ರಿ ಮನೆಗೆ ಬಂದಾಗ, ಹೆಂಡತಿ ತನ್ನ ತಂದೆಯ ಮೇಲೆ ಪುನಃ ಆಪಾದನೆ ಹೊರಿಸಿದ್ದಾಳೆ. ಸತ್ತೇ ಹೋದ ತಂದೆಯ ಮೇಲೆ ಏನಿದು ಆರೋಪ ಎಂದು ರಾಜೂ ಕಿರುಚಾಡಿದ್ದಾರೆ. ಆಗ ಎದೆ ಬಡಿತ ಜಾಸ್ತಿಯಾಗಿ, ಹೊಟ್ಟೆಯಲ್ಲಿ ಸಂಕಟ, ವಾಂತಿಯಾಯಿತು. ಯಾಕೋ ಎಡಗೈ ಭಾಗ ಊತವಾಗಿ, ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದರು. ತಪಾಸಣೆ ಎಲ್ಲಾ ಮುಗಿದ ಮೇಲೆ ಹೃದ್ರೋಗ ತಜ್ಞರು ಮಾನಸಿಕ ಒತ್ತಡದಿಂದಾಗಿ ಈ ರೀತಿ ಹೃದಯದ ಕಾರ್ಯಚಟುವಟಿಕೆಯಲ್ಲಿ ಏರುಪೇರಾಗುತ್ತದೆಯೆಂದು, ಕೌನ್ಸೆಲಿಂಗ್ಗಾಗಿ ನನ್ನ ಬಳಿ ಕಳಿಸಿದ್ದರು.
ರಾಜೂ ವ್ಯವಹಾರದಲ್ಲಿ ಚಾಣಾಕ್ಷ. ಆದರೆ, ತನ್ನ ಸುತ್ತ ಇರುವ ಹೆಣ್ಣು ಹೃದಯಗಳ ನಡುವೆ ಆತ ಅಸಹಾಯಕ. ತಂದೆಯ ಸಾವು, ತಾಯಿಯ ನೋವು, ಹೆಂಡತಿಯ ನಡವಳಿಕೆ, ಅಕ್ಕಂದಿರ ಅರೋಪ ಮೃದು ಹೃದಯಿ ರಾಜೂರನ್ನು ಪೇಚಿಗೆ ಸಿಲುಕಿಸಿದೆ. ಯಾರು ಸರಿ- ಯಾರು ತಪ್ಪು ಗೊತ್ತಾಗುತ್ತಿಲ್ಲ. ರಾಜೂಗೆ ಮೊದಲು ಧ್ಯಾನ ಮಾಡುವುದನ್ನು ಕಲಿಸಿದೆ. ಹೆಂಡತಿಗೆ “ಬಾರ್ಡರ್ ಲೈನ್ ಪರ್ಸನಾಲಿಟಿ’ ಇರುವುದರಿಂದ ಪರಿಚಯವಿರುವ ಮತ್ತೂಬ್ಬ ಮನೋವೈದ್ಯರ ಬಳಿ ಕಳಿಸಿದ್ದೇನೆ. ಚಿಕಿತ್ಸೆ ಸಕಾರಾತ್ಮಕವಾಗಿ ಪ್ರಗತಿಯಲ್ಲಿದೆ.
– ಶುಭಾ ಮಧುಸೂದನ್