ಚೆಂದವಿದ್ರಷ್ಟೇ ಜಗತ್ತು ಲೈಕ್ ಮಾಡುತ್ತಾ?
Team Udayavani, Oct 3, 2018, 2:03 PM IST
ಫೇಸ್ಬುಕ್, ವಾಟ್ಸ್ಯಾಪ್ನಲ್ಲಿ ಈಕೆಯ ಚಿತ್ರವನ್ನು ನೋಡದವರಿಲ್ಲ. ಅದೇ ಮುಖ; ಲಕ್ಷ್ಮಿ ಅಗರ್ವಾಲ್ಳ ಮುಖ; ದುರುಳರ ಆ್ಯಸಿಡ್ ದಾಳಿಗೆ ನಲುಗಿ, ಮತ್ತೆ ನಗು ತುಂಬಿಕೊಂಡಿದ್ದ ಮುಖ. 3 ವರ್ಷದ ಮಗುವಿನೊಂದಿಗೆ ದೆಹಲಿಯಲ್ಲಿ ವಾಸವಿರುವ ಲಕ್ಷ್ಮಿ, ಈಗ ಪತಿಯೊಂದಿಗೂ ಇಲ್ವಂತೆ. ಈಕೆಯ ಕಣ್ಣೀರ ಕತೆ ವೈರಲ್ ಆದಾಗ, ಸ್ವತಃ ನಟ ಅಕ್ಷಯ್ ಕುಮಾರ್ 5 ಲಕ್ಷ ರೂ. ನೆರವು ನೀಡಿದ್ದರು. ನೂರಾರು ಮಾನವೀಯ ಮನಸ್ಸುಗಳು ಈಕೆಗೆ ಕೈಲಾದಷ್ಟು ಸಹಾಯ ಮಾಡಿದ್ದೆಲ್ಲವೂ ಇತಿಹಾಸ. ಈಗ ಲಕ್ಷ್ಮಿ ಸುದ್ದಿಯಾಗಿರುವುದು ತನ್ನ ಈ ರೂಪವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ ಎಂಬುದರ ಬಗ್ಗೆ.
“ನಮ್ಮ ಮನೆಯ ಮಾಲೀಕರು, ಮನೆಯಿಂದ ನನ್ನನ್ನು ಬಿಡಿಸಲೆಂದೇ ಬಾಡಿಗೆ ಜಾಸ್ತಿ ಮಾಡಿದ್ದಾರೆ. ದಿಲ್ಲಿಯ ಲಕ್ಷ್ಮಿನಗರದಲ್ಲಿ ಸಾಕಷ್ಟು ಮನೆ ಹುಡುಕಿದೆ. ನನ್ನ ಅಂದಗೆಟ್ಟ ಮುಖ ನೋಡಿ ಯಾರೂ ಮನೆ ಕೊಡುತ್ತಿಲ್ಲ. ನನ್ನ ಮಗಳನ್ನು ಸಾಕಲು ನನಗೆ ಒಂದು ಉದ್ಯೋಗವೂ ಸರಿಯಾಗಿಲ್ಲ. ಅದಕ್ಕಾಗಿ ಹತ್ತಾರು ಕಂಪನಿಗಳಿಗೆ ಹೋಗಿ, ರೆಸ್ಯೂಮ್ ಕೊಟ್ಟೆ. ಆ ಬಾಸ್ಗಳೂ ನನ್ನ ವಿರೂಪ ನೋಡಿ, ಕೆಲಸ ಕೊಡಲು ಹಿಂಜರಿದರು. ಗ್ಲ್ಯಾಮರ್ ಇದ್ದರಷ್ಟೇ ಕೆಲಸ ಕೊಡೋದು ಅಂದ ಒಬ್ಬ ಭೂಪ. ನನ್ನ ಮಟ್ಟಿಗೆ ಒಳ್ಳೆಯ ಸಮಾಜ ಇದೆ ಎನ್ನುವುದಾದರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ. ವಾಸ್ತವದಲ್ಲಿ ಹೋಗಿ ನೋಡಿದರೆ, ಎಲ್ಲರದ್ದೂ ಮುಖವಾಡವಾಗಿಯೇ ಕಾಣಿಸುತ್ತಿದೆ. ತೋರಿಕೆಗಾಗಿ ಜನರು ಬದುಕುತ್ತಿದ್ದಾರೆ. ಆದರೂ ನಾನು ಚಿಂತಿಸುವುದಿಲ್ಲ. ಬೆಂಕಿಯನ್ನೇ ನುಂಗಿದ ನನಗೆ, ಈ ತಾಪಭಾವದ ಜಗತ್ತಿನಲ್ಲಿ ಬಾಳುವುದು ಗೊತ್ತು’ ಎನ್ನುವುದು ಲಕ್ಷ್ಮಿಯ ಆತ್ಮವಿಶ್ವಾಸದ ಮಾತು.