ಕುರುಕಲು ನಿಮ್ಮ ಬಾಯಿ ಫ್ರೆಂಡೇ ?


Team Udayavani, Dec 5, 2018, 6:00 AM IST

d-11.jpg

ಯಾವತ್ತೋ ತಯಾರಿಸಿ, ಪ್ಲಾಸ್ಟಿಕ್‌ನಲ್ಲಿ ತುಂಬಿಸಿದ ಕುರುಕಲು ತಿಂದು ಹೀಗೆ ಹಸಿವೇ ಮುಚ್ಚಿಹೋದರೆ ಮತ್ತೆ ಫ್ರೆಶ್‌ ಆಗಿ ಮನೆಯಲ್ಲಿ ತಯಾರಿಸಿದ ಊಟ, ತಿಂಡಿಗೆ ಬೆಲೆ ಉಂಟಾ? ಅದು ಬೇಡ, ಇದು ಹಿಡಿಸುವುದಿಲ್ಲ, ನನ್ನ ಇಷ್ಟದ್ದು ತಯಾರಿಸಲಿಲ್ಲಾಂತ ಎಲೆ ಮುಂದೆ ಪಿರಿಪಿರಿ ಬೇರೆ…

ಆಪ್ತ ಸ್ನೇಹಿತೆಯ ಮನೆಯಲ್ಲಿ ಸಣ್ಣ ಕಾರ್ಯಕ್ರಮವಿತ್ತು. “ನಿನ್ನ ಹೊರತು ಬೇರೆ ಯಾರನ್ನೂ ಕರೆದಿಲ್ಲ. ತಪ್ಪಿಸಬೇಡ’ ಎಂದಿದ್ದಳು ಆಕೆ. ಅವಳ ಅತ್ತೆ, ಮಾವನೂ ಊರಿಂದ ಬಂದಿದ್ದರು. ಅವಳ ಅತ್ತೆ, ಮಗನಿಗೆ ಅದಿಷ್ಟ, ಇದಿಷ್ಟ ಅಂತ ನಾಲ್ಕಾರು ಐಟಂ ತಯಾರಿಸಿದ್ದರು. ಮಗ ಚಿಕ್ಕವನಿರುವಾಗ ಹಟ ಮಾಡಿ, ಮಾಡಿಸಿಕೊಳ್ತಿದ್ದ ಪಲ್ಯ, ಪದಾರ್ಥ, ಮೊಮ್ಮಕ್ಕಳಿಗೆ ಪ್ರೀತಿ ಅಂತ ಸಿಹಿ, ಖಾರ ಪ್ರತ್ಯೇಕ. ಸೊಸೆಗೆ ಇಂಥದ್ದೇ ಬೇಕು ಅನ್ನುವ ಪ್ರಶ್ನೆ ಇಲ್ಲ. ತಾವೇ ಬಡಿಸಲು ನಿಂತವರು ಮಗ ಚಿಕ್ಕವನಿದ್ದಾಗ ಆಸೆಪಡ್ತಿದ್ದ ಸಾಂಬಾರ್‌, ಆವಿಯಲ್‌ (ಖಾದ್ಯ) ಬಡಿಸಿದಾಗ ಆತ ನಾಜೂಕಾಗಿ ಮುಟ್ಟಿದ ಶಾಸ್ತ್ರ ಮಾಡಿದ್ದ. ಎರಡು ಹೊತ್ತಿಗಿರಲಿ ಅಂತ ಮಾಡಿದ್ದ ಸಾಂಬಾರು ಒಂದೇ ಹೊತ್ತಿಗೆ ಖಾಲಿ ಮಾಡಿ, ತೃಪ್ತಿಯಿಂದ ಉಣ್ಣುತ್ತಿದ್ದ ಮಗ ಹೀಗೆ ಉಂಡ ಶಾಸ್ತ್ರ ಮಾಡಿದ್ದು, ಅವರಿಗೆ ತಡೆಯಲಾಗಲಿಲ್ಲ. ವಿಚಾರಿಸಿದರು. 

“ಅಂದು ಪಾತ್ರೆಯಿಡೀ ನಾನೊಬ್ಬನೇ ಖಾಲಿ ಮಾಡ್ತಿದ್ದಿದ್ದು ನಿಜ. ಆ ಊಟದ ರುಚಿ ಈಗಲೂ ನೆನಪಿದೆ. ಆದರೆ ಅಮ್ಮಾ, ನಿನ್ನ ಕೈರುಚಿ ಈಗ ಬದಲಾಗಿದೆ. ಮಧ್ಯಾಹ್ನದ ಊಟದ ಹೊತ್ತು. ಆದರೆ, ಯಾಕೋ ಹಸಿವಿಲ್ಲ. ನಾಲ್ಕು ತುತ್ತು ಉಣ್ಣುವಾಗಲೇ ಸಾಕು ಅನ್ನಿಸ್ತದೆ’. ಮಗ ಹೀಗೆ ಹೇಳಿದ್ದು ಕೇಳಿದ ಆ ತಾಯಿ ತಿರುಗಿ ಉತ್ತರ ಕೊಟ್ಟಿದ್ದು ವಾಸ್ತವ ಸತ್ಯ. ಆಕೆ ಹೇಳಿದ್ದರು, “ನಿನ್ನ ಎಳವೆಯಲ್ಲಿ ನಮ್ಮ ಮನೆಯಲ್ಲಿನ ಸ್ಥಿತಿ ನೆನಪಿಸಿಕೊ ಒಮ್ಮೆ. ಈಗಿನ ಹಾಗೆ ವಿದ್ಯುತ್‌ ಸೌಲಭ್ಯ ಆಗ ಇರಲಿಲ್ಲ. ಬಾವಿಯಿಂದ ನೀರನ್ನು ಹೊತ್ತು ತರಬೇಕಿತ್ತು. ಈಗಲೂ ಊರಿಗೆ ಬಂದಾಗ ನಮ್ಮ ಬಾವಿಯ ನೀರು ತುಂಬಾ ರುಚಿ ಅಂತ ಕುಡೀತಿ ಅಲ್ವಾ? ತಾಜಾ ಒರತೆಯ ನೀರು ಅದು. ಇಲ್ಲಿನ ನಲ್ಲಿ ನೀರಿಗೆ ಅಂಥ ಸವಿ ಬಾರದು. ಬೆಳಗಿನ ತಿಂಡಿ ಮುಗಿಸಿದ ನಂತರ ನಮಗೆಲ್ಲ ಸಾಕಷ್ಟು ಕೆಲಸ ಇರುತ್ತಿತ್ತು. ದೈಹಿಕ ಶ್ರಮವಾಗುವ ಕೆಲಸ ಮಾಡಿದಾಗ ಹಸಿವು ಸಹಜ. ಮತ್ತೆ ಈಗಿನ ಹಾಗೆ ಮಧ್ಯೆ ಮಧ್ಯೆ ತಿನ್ನಲಾದರೂ ಏನಿತ್ತು ಹೇಳು? ಹಳ್ಳಿಯ ಮನೆ, ಆ ಮನೆ ತುಂಬ ಜನ, ಬೆಳಗಿನ ಆಹಾರ ಸೇವಿಸಿದ ಮೇಲೆ ನಡುವೆ ಹಸಿವೆಂದರೆ ಕೊಡಲಾದರೂ ಏನೂ ಇಲ್ಲ. ಮಧ್ಯಾಹ್ನ ಊಟದ ವೇಳೆಗೆ ಹೊಟ್ಟೆ ಹಸಿದು ಚೀರಿಡುವ ಹೊತ್ತು. ಆಗ ಒಡಲಿಗಿಷ್ಟು ಆಹಾರ ಸಿಕ್ಕಿದರೆ ಸಾಕು; ಅದರ ಸವಿ ಅಮೋಘವಾಗಿ ಇದ್ದೇ ಇರುತ್ತದೆ. ಅದಕ್ಕೇ ಅಷ್ಟು ರುಚಿಯಾಗಿರುವುದು’.

ಈಗ ನಾನೇ ನೋಡಿದೆ. ತಿಂಡಿ ಆದ ಮೇಲೆ ಅರ್ಧ ಗಂಟೆ ಕಳೆಯಬೇಕಾದರೆ ಕುರುಕಲು ತಿಂಡಿ ತಿಂದಾಯ್ತು; ಮತ್ತೆ ತುಸು ಹೊತ್ತಿಗೆ ಅದೇನೋ ಸ್ವೀಟ್‌ ಹಂಚಿದೆ ನೀನು. ನಿನ್ನ ಮಗ ಒಳಗೆ ಡಬ್ಬ ಹುಡುಕಿ ಕಡಲೆ, ಚಿಪ್ಸ್‌ ತಂದು ಎದುರಿಗಿಟ್ಟ. ಬಾಳೆಯ ಹಣ್ಣನ್ನು ಸವಿದು, ಪುನಃ ಅದನ್ನೆಲ್ಲ ತಿಂದು ಊಟಕ್ಕೆ ಕೂತರೆ ಅದೆಂಥ ಉತ್ತಮ ಭೋಜನವಾದರೂ ಸಪ್ಪೆಯೇ. ಹಸಿದರೆ ತಾನೆ ಊಟಕ್ಕೆ ಬೆಲೆ. ಒಮ್ಮೆ ಘನ ಆಹಾರ ತೆಗೆದುಕೊಂಡರೆ ಪುನಃ ಉಣ್ಣಲು ಮಧ್ಯೆ ಮೂರು ಗಂಟೆಯ ಅಂತರವಾದರೂ ಬೇಕು. ಅದು ಬಿಟ್ಟು ಹರಟುತ್ತಾ, ಆಗಾಗ ಮೆಲುಕು ಹಾಕ್ತಾ, ತುಂಬಿದ ಹೊಟ್ಟೆಗೇ ಪುನಃ ಅನ್ನ ಉಣ್ಣಲಾದರೂ ರುಚಿಸುತ್ತದಾ? ನಾನೇ ನೋಡಿದ ಹಾಗೆ, ನಿನಗಾಗಲೀ ಮಕ್ಕಳಿಗಾಗಲೀ ಹಸಿವಾಗಿಲ್ಲ. ಕರೆದಿದ್ದಕ್ಕೆ ಬಂದು ಊಟಕ್ಕೆ ಕೂತದ್ದು ಅಷ್ಟೇ. ನಾನೀಗ ಅದೆಷ್ಟೇ ಐಟಂ ಮಾಡಿ ಬಡಿಸಿದರೂ ಹಸಿವೇ ಇಲ್ಲದವನಿಗೆ ರುಚಿ ಗೊತ್ತಾಗುತ್ತದಾ!?’

“ನೀ ಮಾತ್ರ ಅಲ್ಲ, ಈಗ ಆಹಾರ ಸೇವನೆಗೆ ನಿಗದಿತ ಹೊತ್ತು ಅಂತಲೇ ಇಲ್ಲ. ಮೊದಲಿಗೆ ಮನೆ ಮಕ್ಕಳಿಗೆ ತಿಂಡಿ ಅಂದರೆ ಮನೆಯಲ್ಲಿ ಮಾಡಿದರಷ್ಟೆ ಸಿಕ್ಕುವುದು; ಈಗ ನೋಡು ರಸ್ತೆಗೆ ಕಾಲಿಟ್ಟರೆ ಸಾಲು ಸಾಲು ರೆಡಿಮೇಡ್‌ ತಿಂಡಿಗಳು. ಎಂದು, ಎಲ್ಲಿ, ಯಾವಾಗ ತಯಾರಿಸಿ ಇಟ್ಟದ್ದು ಅಂತಲಾದರೂ ಗೊತ್ತಾ? ಯಾವತ್ತೋ ತಯಾರಿಸಿ, ಪ್ಲಾಸ್ಟಿಕ್‌ನಲ್ಲಿ ತುಂಬಿಸಿದ ಕುರುಕಲು ತಿಂದು ಹೀಗೆ ಹಸಿವೇ ಮುಚ್ಚಿಹೋದರೆ ಮತ್ತೆ ಫ್ರೆಶ್‌ ಆಗಿ ಮನೆಯಲ್ಲಿ ತಯಾರಿಸಿದ ಊಟ, ತಿಂಡಿಗೆ ಬೆಲೆ ಉಂಟಾ? ಅದು ಬೇಡ, ಇದು ಹಿಡಿಸುವುದಿಲ್ಲ, ನನ್ನ ಇಷ್ಟದ್ದು ತಯಾರಿಸಲಿಲ್ಲಾಂತ ಎಲೆ ಮುಂದೆ ಪಿರಿಪಿರಿ ಬೇರೆ. ಆಹಾರದಲ್ಲಿ ಕೊರತೆ ಹುಡುಕುವುದರ ಬದಲು ತಯಾರಿಸಿದ್ದು ಏನಿದ್ದರೂ ಅದು ಎಲ್ಲರಿಗಾಗಿ ಅಂತ ಪ್ರೀತಿಯಿಂದ ಉಣ್ಣಲು ಕಲಿತರೆ ಚೆಂದ. ತಯಾರಿಸಿದವರಿಗೆ ಸಂತೋಷ. ಅದಲ್ವಾ ಸಂಸಾರ?

ಬೆಳಗಿನ ಉಪಾಹಾರದ ನಂತರ ಮಧ್ಯೆ ಬೇರೇನೂ ಆಹಾರ ತಿನ್ನದೆ ಇದ್ದರೆ ಒಳ್ಳೆಯ ಹಸಿವಾಗಿ, ಆಹಾರ ಬಲು ರುಚಿಯಾಗಿರುತ್ತದೆ. ಅದು ಮಾಡಿದ್ದು ನಾನೇ ಇರಬಹುದು; ಅಥವಾ ಸೊಸೆಯೇ ಆಗಿರಬಹುದು. ಹೊಟ್ಟೆ ತುಂಬಿದವ ಎಲೆಯ ಮುಂದೆ ಕೂತರೆ ಅದು ಮೃಷ್ಟಾನ್ನ ಭೋಜನವಾದರೂ ಅಷ್ಟಷ್ಟೆ. ಹಸಿವಿದ್ದವನಿಗೆ ಗಂಜಿ, ಚಟ್ನಿ ಇದ್ದರೂ ಅದೇ ಸುಗ್ರಾಸ ಭೋಜನ. ಈಗ ನಮ್ಮಲ್ಲಿ ಮಾತ್ರ ಹೀಗೆ ಅಂದುಕೋಬೇಡ. ಆಹಾರ ಸೇವನೆಗೆ ನಿಗದಿತ ಸಮಯ ಇಟ್ಟುಕೊಂಡು ಆ ಹೊತ್ತಿಗೆ ಉಂಡರೆ, ತಿಂದರೆ ಅದು ರುಚಿ ಹೊರತು ಇಪ್ಪತ್ತನಾಲ್ಕು ಗಂಟೆಯೂ ಬಾಯಾಡಿಸುತ್ತ ಇರುವ ಅನಿಯಮಿತ ದುರಭ್ಯಾಸ ಅನಾರೋಗ್ಯಕ್ಕೆ ಹಾದಿ ಮಾಡಿಕೊಡಲು ತಡವಿರುವುದಿಲ್ಲ.

“ನಿನ್ನ ಗಂಡನನ್ನ ಬೈತಿದ್ದೇನೆ ಅಂತ ತಪ್ಪು ತಿಳಿದುಕೊಳ್ಳಬೇಡವೇ ತಾಯಿ. ಅವನು ಸರಿಯಾಗಿ ಊಟ ಮಾಡದ ಕಾರಣ ಗದರಿಸಿದ್ದು’ ಅಂದರು ಅಮ್ಮ. ಇನ್ನೂ ಸ್ವಲ್ಪ ಗದರಿಸಿಬಿಡಿ ಅತ್ತೆ. ನಾನು ಹೇಳಿದ್ರೆ ಕಿವಿಗೇ ಹಾಕಿಕೊಳ್ಳುವುದಿಲ್ಲ’ ಅಂದಳು ಸ್ನೇಹಿತೆ. ಆಕೆಗೂ ಬೇಸರ. ಎಲ್ಲರೂ ಒಟ್ಟಿಗೆ ಊಟ ಮಾಡುವ ಅಂತ ಇದ್ದಳು. ಮಧ್ಯೆ ತಿಂದ ಸಿಹಿ, ಕುರುಕಲು  ಹಸಿವನ್ನೇ ತೆಗೆದ ಕಾರಣ ತಯಾರಿಸಿದ್ದರಲ್ಲಿ ಬಹುಪಾಲು ಉಳಿದು ಫ್ರಿಡ್ಜ್ ಸೇರಿತ್ತು. ಮಾರನೇ ದಿನಕ್ಕೆ ಪುನಃ ತಯಾರಿಸಬೇಕಿಲ್ಲ. ಅದೇ ಆಗುತ್ತದೆ ನಿಜ. ಆದರೆ, ಫ್ರೆಶ್‌ ಆಗಿರುವಾಗ ಇದ್ದ ರುಚಿ ಮರುದಿನಕ್ಕೆ ಕಾಣದು. 

ಅಲ್ಲದೇ, ದಿನ ದಿನ ಮುನ್ನಾ ದಿನದ್ದು ಎಳೆಯರಿಗೆ ಸೇರಿ ಮನೆಯವರೆಲ್ಲ ಉಣ್ಣುವುದು ಆರೋಗ್ಯದ ದೃಷ್ಟಿಯಿಂದ ಸಲ್ಲದು ಎಂದು ಆಕೆಯ ಸ್ನೇಹಿತೆ ವೈದ್ಯೆ ಎಚ್ಚರಿಸಿದ್ದರು. ಹಸಿವಾಗುವ ಹೊತ್ತಿನಲ್ಲಿ ನಿಗದಿತ ಸಮಯ ನೋಡಿ ಊಟ, ತಿಂಡಿ ಸೇವಿಸಿದಲ್ಲಿ ಹೇಗೆ ಪೂರಕವೋ; ಹಾಗೇ ಎರಡು ಘನ ಆಹಾರದ ಮಧ್ಯೆ ಕುರುಕಲು, ಸಿಹಿ, ಬೇಕರಿ ಐಟಮ್ಸ ತಿನ್ನುವ ಅಭ್ಯಾಸ ಒಮ್ಮೆಗೆ ಕಾಣಿಸದೆ ಹೋದರೂ ಮುಂದೊಂದು ದಿನಕ್ಕೆ ಅನಾರೋಗ್ಯ ಕಾಡುವ ಎಚ್ಚರಿಕೆಯ ಗಂಟೆ. ವೈದ್ಯೆಯ ಅನುಭವದ ಸಲಹೆ ಎಚ್ಚರಿಸುತ್ತಲೇ ಇತ್ತು ಆಕೆಯನ್ನು. ಯಾರಿಗೆ ಹೇಳುವುದು; ಕಿವಿಗೇ ಹಾಕ್ಕೊಳ್ಳುವುದಿಲ್ಲ; ಮಕ್ಕಳೂ ಅದನ್ನೇ ಫಾಲೋ ಮಾಡ್ತಿರೋದು ಮತ್ತಷ್ಟು ಕಠಿಣದ ಸಮಸ್ಯೆ.

ಪ್ಯಾಕೆಟ್‌ ತಿಂಡಿಪೋತರು…
ಸಣ್ಣಮಕ್ಕಳೂ ಅಂಗಡಿಯ ಬಾಗಿಲಿಗೆ ತೋರಣ ಕಟ್ಟಿದ ಹಾಗಿನ ಪ್ಯಾಕೆಟ್‌ ತಿಂಡಿ ಗುರುತಿಸಿ ಹಟ ಹಿಡಿಯುವ ಬುದ್ಧಿವಂತಿಕೆ ಪಡೆದಿವೆ. ಇದೂ ನಾಗರಿಕತೆ ಅಂತ ಅಮ್ಮಂದಿರು ಕೊಡಿಸ್ತಾರೆ. ತಪ್ಪು ಅವರದಲ್ಲ. ಆ ಪರಿಯಲ್ಲಿ ಕೊಳ್ಳುವ ತಹತಹ ಬೆಳೆದಿದೆ. ಬೇಕಿದ್ದು, ಬೇಡದ್ದು ಎಲ್ಲ ರಾಶಿ ರಾಶಿ. ಅದರ ಪರಿಣಾಮ ಗೊತ್ತಾಗುವುದು ಮುಂದೆ. ನಮ್ಮಲ್ಲಿ ಅಂತಲ್ಲ; ಹೆಚ್ಚಿನ ಮನೆಗಳದು ಇದೇ ಪಾಡು. 

ಪರಿವೆಯೇ ಇಲ್ಲದೆ ತಿನ್ತಾರೆ…
ಮಕ್ಕಳು ಹೊರಗೆ ಸಿಗುವ ಪ್ಯಾಕೆಟ್‌ ಫ‌ುಡ್‌ಗಳನ್ನು ತಂದು ಒಡೆದು ಸಿಕ್ಕಸಿಕ್ಕದ್ದು ತಿಂತಾರೆ. ಚಾಕೊಲೇಟು, ಕೇಕು ಸದಾ ಕೈಗೆಟುಕುವ ಹಾಗೆ ಸಿಗುತ್ತದೆ. ಚೆನ್ನಾಗಿ ಹಸಿವಾಗಿ ಹೊಟ್ಟೆತುಂಬ ಉಣ್ಣಬೇಕಾದ ಹೊತ್ತಿಗೆ ಹಸಿವಿಲ್ಲ. ಸಂಜೆಗೆ ಮತ್ತಿನ್ನೇನು? ಎರಡು ಗಂಟೆ ಆಗಬೇಕಾದರೆ ಮಕ್ಕಳು ಫ್ರಿಡ್ಜ್ ತೆರೆದು ಅದೇನೇನೋ ಬಾಯಿಗೆ ತುಂಬಿಕೊಳ್ತಾರೆ. ಟಿ.ವಿ.ಯಲ್ಲಿ ಬರೋದು ನೋಡ್ತಾ ಏನು ತಿಂತಿದ್ದಾರೆ, ಎಷ್ಟು ತಿಂತಾರೆ, ಅನ್ನೋದು ಅವರಿಗಾದರೂ ಗೊತ್ತಾ? ಸಂಜೆ ಫ್ರೆಶ್‌ ಆಗಿ ತಿಂಡಿ ಮಾಡಿದರೆ ಅದು ಹಾಗೆ ಉಳಿಯುತ್ತದೆ.

ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.