ಪಾಪ ಕವಿತಾ: ಆಭರಣಕೆ ರೂಪ ಕೊಡುವ ರೂಪಸಿ “ಕವಿತಾ’


Team Udayavani, Dec 12, 2018, 6:00 AM IST

d-145.jpg

 “ಪಾ.ಪ. ಪಾಂಡು’ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರೆಲ್ಲರೂ ನಕ್ಕುಬಿಡುತ್ತಾರೆ. ಆ ಪಾತ್ರದಿಂದಲೇ ಕರ್ನಾಟಕದಲ್ಲಿ ಮನೆಮಾತಾದವರು ಹಾಸ್ಯನಟ ಚಿದಾನಂದ್‌. ತೆರೆಮೇಲೆ ನಕ್ಕುನಗಿಸುವ ಚಿದಾನಂದ್‌ ನಿಜ ಜೀವನದಲ್ಲಿ ಗಂಭೀರ ಸ್ವಭಾವದವರಂತೆ. ಇದನ್ನು ಹೇಳಿದವರು ಅವರ ಪತ್ನಿ ಕವಿತಾ. ಇವರಿಬ್ಬರದ್ದೂ 20 ವರ್ಷಗಳ ಸೊಗಸಾದ ದಾಂಪತ್ಯಗೀತೆ. ಸಂಸಾರದ ಏಳು ಬೀಳುಗಳಲ್ಲಿ ಪತಿಗೆ ಸಾಥ್‌ ನೀಡಿರುವ ಕವಿತಾ ಟೆರ್ರಾಕೋಟ ಆಭರಣ ತಯಾರಕಿ, ವಿನ್ಯಾಸಕಿ ಕೂಡ ಹೌದು. ಈ ದಂಪತಿಗೆ ಚಿನ್ಮಯ್‌, ಖುಷಿ ಎಂಬ ಇಬ್ಬರು ಮಕ್ಕಳಿದ್ದಾರೆ. ತಮ್ಮ  ತುಂಬು ಸಂಸಾರದ ಬಗ್ಗೆ ಕವಿತಾ ಅವರಿಲ್ಲಿ ಹೃದಯತುಂಬಿ ಮಾತನಾಡಿದ್ದಾರೆ. 

– ನಿಮ್ಮ ಬಾಲ್ಯ ಹೇಗಿತ್ತು?
ಚಿಕ್ಕಂದಿನಿಂದಲೂ ನನಗೆ ಕಲೆಯಲ್ಲಿ ವಿಪರೀತ ಆಸಕ್ತಿ. ಅಪ್ಪ, ಚಿಕ್ಕಪ್ಪಂದಿರು ಹಳ್ಳಿಯಲ್ಲಿ ನಾಟಕ, ಬಯಲಾಟಗಳನ್ನು ಆಡುತ್ತಿದ್ದರು. ನನಗೂ ನಾಟಕದಲ್ಲಿ ಅಭಿನಯಿಸುವ ಆಸೆ ಇತ್ತು. ಆದರೆ, ಮನೆಯಲ್ಲಿ ಹಿರಿಯರು ಬಿಡುತ್ತಿರಲಿಲ್ಲ. ನಾನು ಬಹಳ ಚೆನ್ನಾಗಿ ಹಾಡುತ್ತಿದ್ದೆ. ಶಾಲೆಯಲ್ಲಿ ಮತ್ತು ಊರಿನಲ್ಲಿ ಯಾವುದೇ ಕಾರ್ಯಕ್ರಮವಾದರೂ ಪ್ರಾರ್ಥನೆ ಗೀತೆ ನನ್ನದೇ ಆಗಿರುತ್ತಿತ್ತು. ನನ್ನನ್ನು ಶಾಲೆಯಲ್ಲಿ “ಕನ್ನಡ ಗಾನ ಕೋಗಿಲೆ’ ಎನ್ನುತ್ತಿದ್ದರು. ರಂಗೋಲಿ, ಚಿತ್ರ ಬಿಡಿಸುವುದರಲ್ಲೂ ನಾನು ಎತ್ತಿದ ಕೈ. ಕಲಾವಿದೆಯಾಗಲಾಗಲು ಆಗದಿದ್ದರೂ ನನ್ನ ಗಂಡ ಕಲಾವಿದನಾಗಿರಲಿ ಎಂಬ ಆಸೆಯಿತ್ತು. ಚಿದಾನಂದ್‌ ಸಿಕ್ಕು ನನ್ನಾಸೆ ನಿಜವಾಯಿತು. 

-ನಿಮ್ಮದು ಲವ್‌ ಮ್ಯಾರೇಜಾ?
ಇಲ್ಲ. ನಮ್ಮದು ಪಕ್ಕಾ ಅರೇಂಜ್ಡ್ ಮ್ಯಾರೇಜ್‌. ನಾನು ಚಿತ್ರದುರ್ಗದ ಕೋಡಿಹಳ್ಳಿಯವಳು. ಅವರದು ದಾವಣಗೆರೆ. ನನ್ನ ಚಿಕ್ಕಪ್ಪನಿಗೆ ಚಿದಾನಂದ ಅವರು ನೆಂಟರಾಗಬೇಕು. ಅವರೇ ಈ ಸಂಬಂಧವನ್ನು ನಮ್ಮ ಕುಟುಂಬಕ್ಕೆ ತೋರಿಸಿದ್ದು. ಮನೆಯವರೆಲ್ಲರೂ ಒಪ್ಪಿಕೊಂಡರು. ಎಲ್ಲರೂ ಇಷ್ಟಪಟ್ಟ ಮೇಲೆ ನನಗೆ ಹೇಳುವುದಕ್ಕೆ ಬಾಕಿ ಏನಿರುತ್ತದೆ. ನಾನೂ ಖುಷಿಯಂದಲೇ ಒಪ್ಪಿ ಮದುವೆಯಾದೆ. 1998ರಲ್ಲಿ ನಾವು ಮದುವೆಯಾಗಿದ್ದು. ಆಗಿನ್ನೂ ಅವರಿಗೆ ನಟನೆ ಅವಕಾಶಗಳು ಅಷ್ಟು ಸಿಗುತ್ತಿರಲಿಲ್ಲ. ಆರಂಭದಲ್ಲಿ ತುಂಬಾ ಕಷ್ಟ ಪಡುತ್ತಿದ್ದರು. ಅವರ ಶ್ರಮ ನೋಡಿ, ಅವರು ಮುಂದೊಂದಿನ ಕಲೆಯಲ್ಲಿ ದೊಡ್ಡ ಹೆಸರು ಮಾಡುತ್ತಾರೆ ಎಂಬ ನಂಬಿಕೆ ಆಗಲೇ ಮೂಡಿತ್ತು.

-ಮದುವೆಯಾದ ಹೊಸತರಲ್ಲಿ ಮನೆ ಪರಿಸ್ಥಿತಿ ಹೇಗಿತ್ತು?
ಮದುವೆಯಾದಾಗ ಅವರಿನ್ನೂ ಪೂರ್ಣಪ್ರಮಾಣದ ಕಿರುತೆರೆ ನಟರಾಗಿರಲಿಲ್ಲ. ಮನೆಯಲ್ಲಿ ಸ್ಕ್ರೀನ್‌ ಪ್ರಿಂಟಿಂಗ್‌ ನಡೆಸುತ್ತಿದ್ದರು. ಅದರ ಜೊತೆಯೇ ಅಭಿನಯ ತರಂಗದಲ್ಲಿ ನಟನೆ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದರು. ಕಲೆಯಲ್ಲಿ ಅತೀವ ಅಸಕ್ತಿ ಇತ್ತು ಅವರಿಗೆ. ಸ್ಕ್ರೀನ್‌ ಪ್ರಿಂಟಿಂಗ್‌ ಮಧ್ಯ ಬಿಡುವು ಮಾಡಿಕೊಂಡು ನಟನೆ, ಬೀದಿ ನಾಟಕ, ಬ್ಯಾಕ್‌ಸ್ಟೇಜ್‌ ಕೆಲಸ, ಕಿರುಚಿತ್ರಗಳಿಗೆ ಸಹ ನಿರ್ದೇಶನ ಹೀಗೆ ಚಿಕ್ಕಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕಷ್ಟ ಪಡುತ್ತಿದ್ದರೂ, ಆಗ ಅವರ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತಿರಲಿಲ್ಲ. ಆ ಸಂದರ್ಭಗಳಲ್ಲಿ ನಾನು ಅವರಿಗೆ ಒಂದು ಮಾತು ಹೇಳುತ್ತಿದ್ದೆ. “ನೀವು ಪಟ್ಟ ಶ್ರಮ ವ್ಯರ್ಥವಾಗುವುದಿಲ್ಲ. ಒಳ್ಳೆ ದಿನಗಳು ಹತ್ತಿರದಲ್ಲೇ ಇವೆ’ ಎಂದು. ಅದು ನಿಜವಾಗಿದೆ. 

– “ಪಾಪ ಪಾಂಡು’ ಧಾರಾವಾಹಿಯ ಯಶಸ್ಸಿನ ಬಗ್ಗೆ ನಿಮಗೆ ಏನ್ನಿಸುತ್ತದೆ.
“ಪಾ.ಪ ಪಾಂಡು’ ಧಾರಾವಾಹಿಗೂ ಮೊದಲು ಅವರು ಸಿನಿಮಾ ಮತ್ತು ಕೆಲ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. “ಪಾ.ಪ ಪಾಂಡು’ವಿನಲ್ಲಿ ಅವರಿಗೆ ಮುಖ್ಯ ಪಾತ್ರವೇ ಸಿಕ್ಕಿದ್ದರೂ ಧಾರಾವಾಹಿ ಜನರಿಗೆ ಮೆಚ್ಚುಗೆಯಾಗುತ್ತದೆ, ಭಾರಿ ಹಿಟ್‌ ಆಗುತ್ತದೆ ಎಂಬ ನಂಬಿಕೆ ನನಗಂತೂ ಇರಲಿಲ್ಲ. ಧಾರಾವಾಹಿ ಬಾಯಿಂದ ಬಾಯಿಗೆ ಪ್ರಚಾರವಾಗಿ ನೋಡನೋಡುತ್ತಿದ್ದಂತೆ ದೊಡ್ಡ ವೀಕ್ಷಕ ಪಡೆಯನ್ನು ಪಡೆದುಕೊಂಡಿತು. ಚಿದಾನಂದ ಎಲ್ಲಿಗೆ ಹೋದರೂ ಅವರನ್ನು ಜನರು “ಪಾಪ ಪಾಂಡು’ ಎಂದೇ ಕರೆಯುತ್ತಿದ್ದರು. ಅನ್ಯ ಭಾಷಿಕರೂ ಧಾರಾವಾಹಿ ನೋಡುತ್ತಿದ್ದದ್ದು ವಿಶೇಷ. ಒಮ್ಮೆ ಒಂದು ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿ ಒಬ್ಬ ಅನ್ಯಭಾಷಿಕ ಅಜ್ಜಿ ನಮ್ಮವರನ್ನು ನೋಡಿ ಕರೆದರು. ಆ ಅಜ್ಜಿ ನಮ್ಮವರಿಗೆ “ನಿಮ್ಮ ಧಾರಾವಾಹಿ ನೋಡಿ ನಕ್ಕು ಹಗುರಾಗುತ್ತೇನೆ’ ಎಂದರು.

– ನೀವು ಯಾವತ್ತಾದರೂ ಶ್ರೀಮತಿ ಥರ ಜಗಳವಾಡಿದ್ದೀರಾ?
ಇಲ್ಲಪ್ಪಾ… ನಾವಿಬ್ಬರೂ ಮೊದಲಿನಿಂದಲೂ ಜಗಳ ಗಿಗಳ ಎಲ್ಲಾ ಆಡುವುದು ಬಹಳ ಕಡಿಮೆ. ಚಿದಾನಂದ ಸಿಟ್ಟು ತೋರಿಸುವುದಿಲ್ಲ. ಚಿಕ್ಕಪುಟ್ಟ ವಿಷಯಗಳಿಗೆ ಸಿಟ್ಟು ಬಂದರೂ ಬಹಳ ಬೇಗ ಸಮಾಧಾನ ಮಾಡಿಕೊಂಡುಬಿಡುತ್ತಾರೆ. ಇಷ್ಟು ವರ್ಷದ ದಾಂಪತ್ಯದಲ್ಲಿ ನಾವಿಬ್ಬರೂ ಮಾತು ಬಿಟ್ಟ ಪ್ರಸಂಗವೂ ಇಲ್ಲ. ಹೇಳಬೇಕೆಂದರೆ ನನಗೆ ಅವರ ಮೇಲೆ ಮುನಿಸಿಕೊಳ್ಳಲು, ಮೊಟುಕಲು ಕಾರಣವೇ ಇಲ್ಲ. 

– ಚಿದಾನಂದ್‌ ತೆರೆಯ ಹಿಂದೆ ಹೇಗಿರುತ್ತಾರೆ?
ನಿಜಜೀವನಕ್ಕೂ, ಅವರು ತೆರೆ ಮೇಲೆ ಕಾಣುವುದಕ್ಕೂ ಅಜಗಜಾಂತರ. ಅವರು ಮಿತಭಾಷಿ, ಸೀರಿಯಸ್‌ ವ್ಯಕ್ತಿತ್ವದವರು. ಆದರೆ ಒಮ್ಮೆ ಮೇಕಪ್‌ ಹಾಕಿದರು ಎಂದರೆ ಆ ಪಾತ್ರವೇ ಅವರಾಗಿಬಿಡುತ್ತಾರೆ. ಅಂಥ ತಲ್ಲೀನತೆ ಅವರಲ್ಲಿದೆ. ಹಿಂದಿನ ಪಾ.ಪ. ಪಾಂಡು ಶೂಟಿಂಗ್‌ ವೇಳೆ ಕುತೂಹಲದಿಂದ ನಾನೂ ಸೆಟ್‌ಗೆ ಹೋಗುತ್ತಿದ್ದೆ. ನನ್ನ ಮುಂದೆ ಅಭಿನಯಿಸಲು ಅವರಿಗೆ ಮುಜುಗರವಾಗುತ್ತದೆ ಎಂದು ತಿಳಿದು ನಾನು ದೂರ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲಾ ಅವರು “ಆ್ಯಕ್ಷನ್‌ ಎಂದು ಹೇಳಿದಾಕ್ಷಣ ಸುತ್ತ ಯಾರಿದ್ದಾರೆ ಅನ್ನೋದು ನನ್ನ ಗಮನಕ್ಕೇ ಬರೋದಿಲ್ಲ. ಹತ್ತಿರದಿಂದಾನೇ ಶೂಟಿಂಗ್‌ ನೋಡು’ ಅಂತ ಹೇಳ್ಳೋರು. 

– ನಿಮ್ಮ ಅಡುಗೆ ಮನೆ ಕತೆ ಹೇಳ್ತೀರಾ?
ನಾವಿಬ್ಬರೂ ಒಂದೇ ಪ್ರಾಂತ್ಯದವರಾದ್ದರಿಂದ ಅಡುಗೆಯಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಹೀಗಾಗಿ ಮದುವೆಯಾಗಿ ಬಂದ ಬಳಿಕ ಅಡುಗೆ ಮಾಡಲು ಕಷ್ಟವಾಗಲಿಲ್ಲ. ದಾವಣಗೆರೆಯ ಮೆಣಸಿನಕಾಯಿ ಬಜ್ಜಿ, ನರ್ಗೀಸ್‌ ಮಂಡಕ್ಕಿಯನ್ನು ವಾರಕ್ಕೊಮ್ಮೆಯಾದರೂ ಮಾಡುತ್ತೇವೆ. ನಾವು ಅನ್ನ ತಿನ್ನುವುದು ಕಡಿಮೆ. ಚಪಾತಿ ಪಲ್ಯ, ಪಡ್ಡು, ದೋಸೆ ಹೆಚ್ಚು ಮಾಡುತ್ತೇವೆ. ಮನೆಯಲ್ಲಿ ನನಗಿಂತ ಹೆಚ್ಚು ಅಡುಗೆ ಮಾಡುವುದು ನನ್ನ ಅತ್ತೆ. ಅವರಿಗೆ ಈಗ 87 ವರ್ಷ ವಯಸ್ಸು. ಈಗಲೂ ಬಹಳ ಚುರುಕಿನಿಂದ ಇರುತ್ತಾರೆ. ಶ್ರಮಜೀವಿ. ಅಡುಗೆಮನೆ ಕೆಲಸಗಳನ್ನು ಸಾಮಾನ್ಯವಾಗಿ ಅವರೇ ನೋಡಿಕೊಳ್ಳೋದು.

– ಮಕ್ಕಳು ಏನು ಮಾಡುತ್ತಿದ್ದಾರೆ? ಅವರಿಗೂ ನಟನೆಯಲ್ಲಿ ಆಸಕ್ತಿ ಇದೆಯಾ? 
ಮಗ ಚಿನ್ಮಯ್‌ 10ನೇ ತರಗತಿಯಲ್ಲಿದ್ದಾನೆ. ಮಗಳು 8ನೇ ತರಗತಿ ಓದುತ್ತಿದ್ದಾಳೆ. ಇಬ್ಬರೂ ಅಪ್ಪನ ಅತ್ಯುತ್ತಮ ಕ್ರಿಟಿಕ್‌ಗಳು. “ಅಪ್ಪ ನೀನು ಹೀಗೆ ಆ್ಯಕ್ಟ್ ಮಾಡಿದರೆ ಚೆನ್ನ. ಹಾಗೆ ಡೈಲಾಗ್‌ ಹೇಳಿದರೆ ಚೆನ್ನ’ ಎಂದು ಟಿಪ್ಸ್‌ ಕೊಡುತ್ತಿರುತ್ತಾರೆ. ಸದ್ಯಕ್ಕಂತೂ ಇಬ್ಬರಿಗೂ ನಟನೆಯಲ್ಲಿ ಆಸಕ್ತಿ ಇದ್ದ ಹಾಗಿಲ್ಲ. ಚಿನ್ಮಯ್‌ಗೆ ಕ್ರಿಕೆಟ್‌ ಎಂದರೆ ಪ್ರಾಣ. ಖುಷಿ ಸಂಗೀತ ಕಲಿಯುತ್ತಿದ್ದಾಳೆ. ಖುಷಿ ಅಪ್ಪನ ಮಗಳು. ಮಗಳೆಂದರೆ ಅವರಿಗೆ ಪ್ರಾಣ. 

– ನೀವು ಟೆರ್ರಾಕೋಟ ಆಭರಣ ತಯಾರಕಿ ಎಂದು ಕೇಳಿದ್ದೇವೆ…
ನನ್ನ ಸ್ನೇಹಿತರೊಬ್ಬರು ಟೆರ್ರಾಕೋಟ ಆಭರಣ ತಯಾರಿಕಾ ಸಂಸ್ಥೆ ಆರಂಭಿಸಿದರು. ನಾನು ಚೆನ್ನಾಗಿ ರಂಗೋಲಿ ಹಾಕುತ್ತಿದ್ದದ್ದನ್ನು ನೋಡಿ ಆಭರಣ ವಿನ್ಯಾಸ ಮಾಡಲು ನನ್ನನ್ನೂ ಸೇರಿಸಿಕೊಂಡರು. ಈಗ ನಮ್ಮದೇ ಒಂದು ತಂಡವಿದೆ. ಪ್ರತಿದಿನ ನಮ್ಮ ಮನೆಯಲ್ಲಿ ಟೆರ್ರಾಕೋಟ ಆಭರಣ ತಯಾರಿಸುತ್ತೇವೆ. ಟೆರ್ರಾಕೋಟ ಆಭರಣಕ್ಕೆ ಬೇಡಿಕೆ ಏನೋ ಇದೆ, ಆದರೆ ಅಷ್ಟೇ ಸ್ಪರ್ಧೆಯೂ ಇದೆ. ಹೀಗಾಗಿ ವಿನ್ಯಾಸದಲ್ಲಿ ಹೊಸತನ್ನು ಪ್ರಯೋಗ ಮಾಡುತ್ತಿರಬೇಕು. ನಮ್ಮ ತಂಡದ ಸದಸ್ಯರೆಲ್ಲರೂ ಗೃಹಿಣಿಯರೇ. ಮನೆ, ಮಕ್ಕಳ ಜವಾಬ್ದಾರಿ ನಡುವೆ ಯಶಸ್ವಿಯಾಗಿ ನಮ್ಮ ಸ್ವಂತ ಉದ್ದಿಮೆ ಮಾಡಿಕೊಂಡು ಸ್ವಾವಲಂಬಿಗಳಾಗಿದ್ದೇವೆ. ಮಹಿಳೆಯರು ಮನಸ್ಸು ಮಾಡಿದರೆ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬಹುದು. ಈಗ ಅದಕ್ಕೆ ಸಾಕಷ್ಟು ಅವಕಾಶಗಳೂ ಇವೆ. 

– ಚಿದಾನಂದ್‌ ಅವರಲ್ಲಿ ನಿಮಗೆ ಬಹಳ ಮೆಚ್ಚುಗೆಯಾಗುವ ಗುಣ ಯಾವುದು?
ಅವರ ಎಲ್ಲಾ ಗುಣಗಳೂ ಇಷ್ಟ. ಅವರದು ತುಂಬಾ ಶಾಂತ ಸ್ವಭಾವ. ಜೊತೆಗೆ ಅವರಿಗೆ ಆದ್ಯಾತ್ಮದಲ್ಲಿ ಒಲವು ಹೆಚ್ಚು. ದೇವಸ್ಥಾನಗಳಿಗೆ ಹೆಚ್ಚು ಹೋಗುತ್ತಾರೆ. ಬೇರೆಬೇರೆ ಊರುಗಳ ದೇವಸ್ಥಾನಗಳಿಗೆ ನಮ್ಮನ್ನೂ ಕರೆದುಕೊಂಡು ಹೋಗುತ್ತಾರೆ. ಹಿಂದೆ ಕಷ್ಟಪಡುತ್ತಿದ್ದಾಗ ಹೇಗಿದ್ದರೋ, ಈಗಲೂ ಅವರ ಸ್ವಭಾವ ಹಾಗೆಯೇ ಇದೆ. ತುಂಬಾ ಬದಲಾಗಿಲ್ಲ. ಅವರು ಬೆಳೆದುಬಂದ ಹಾದಿಯನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಅವರು ಅಷ್ಟೆಲ್ಲಾ ಕಷ್ಟಪಟ್ಟಿದ್ದು ಇವತ್ತಿಗೆ ಸಾರ್ಥಕವಾಗಿದೆ. 

ಶ್ರೀಮತಿ ಮೊಟಕುವುದನ್ನು ನೋಡಿ ಸಿಟ್ಟು ಬರುತ್ತಿತ್ತು…
ಶುರುವಿನಲ್ಲಿ ಶ್ರೀಮತಿ ಪಾಂಡುಗೆ ಮೊಟಕುವುದು, ಮೂದಲಿಸುವುದು ಮಾಡುವುದನ್ನು ನೋಡಿದಾಗಲೆಲ್ಲ ತುಂಬಾ ಬೇಜಾರಾಗುತ್ತಿತ್ತು. ನನ್ನ ಗಂಡನ ಜೊತೆ ಒಂದೇ ಒಂದು ದಿನ ನಾನೇ ಹೀಗೆ ನಡೆದುಕೊಳ್ಳುವುದಿಲ್ಲ. ಶ್ರೀಮತಿ ಯಾರು ಹೀಗೆಲ್ಲಾ ಮೊಟಕಲು ಅನ್ಕೋತಿದ್ದೆ. ಕ್ರಮೇಣ ಅದು ಧಾರಾವಾಹಿ, ಪಾಪ ಪಾಂಡು ಒಂದು ಕಾಲ್ಪನಿಕ ಪಾತ್ರ ಎಂದು ನೋಡಲು ಆರಂಭಿಸಿದೆ. ಆಮೇಲೆ ಎಷ್ಟೋ ಹಾಸ್ಯ ಸನ್ನಿವೇಶಗಳಲ್ಲಿ ಪಾಂಡು ಪೇಚಿಗೆ ಸಿಲುಕುವುದನ್ನು ನೋಡಿ ನಾನು ಮನಸಾರೆ ನಕ್ಕಿದ್ದೀನಿ.

ದಿನಕ್ಕೆ 5 ಬಾರಿ ಲ್ಯಾಂಡ್‌ಲೈನ್‌ ಕರೆ
ಅವರು ಮದುವೆಯಾದ ಹೊಸತರಲ್ಲಿ ನನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಈಗಲೂ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹಿಂದಿನ “ಪಾ.ಪ. ಪಾಂಡು’ ಶೂಟಿಂಗ್‌ ಮಾಡುತ್ತಿದ್ದ ಕಾಲದಲ್ಲಿ ಮೊಬೈಲ್‌ ಫೋನ್‌ ಇನ್ನೂ ಎಲ್ಲರ ಕೈಗಳಿಗೂ ಬಂದಿರಲಿಲ್ಲ. ಆಗ ದಿನಕ್ಕೆ 5 ಬಾರಿ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ನನ್ನ ಜೊತೆ ಮಾತನಾಡುತ್ತಿದ್ದರು. ಈಗಲೂ ಅಷ್ಟೇ. ಶೂಟಿಂಗ್‌ನಲ್ಲಿದ್ದರೂ ಪುರುಸೊತ್ತಾದಾಗಲೆಲ್ಲಾ ಫೋನ್‌ ಮಾಡಿ ನಮ್ಮೆಲ್ಲರ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಕುಟುಂಬದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಗಂಡ ಸಿಕ್ಕಿದ್ದು ನನ್ನ ಪುಣ್ಯ. 

ನಮ್ಮೆಜಮಾನ್ರು ನಳ ಮಹಾರಾಜರು…
ನಮ್ಮವರು ತುಂಬಾ ಒಳ್ಳೆಯ ಬಾಣಸಿಗ. ಭಾನುವಾರ ನಮ್ಮ ಮಕ್ಕಳಿಗೆ ಅವರ ಕೈರುಚಿಯೇ ಆಗಬೇಕು. ಗೋಬಿ ಮಂಚೂರಿ, ನೂಡಲ್ಸ್‌, ಗೋಲ್ಗಪ್ಪಾ, ಚುರುಮುರಿ ತಯಾರಿಸುತ್ತಾರೆ. ಹದವಾಗಿ ದಾವಣಗೆರೆ ಬೆಣ್ಣೆ ದೋಸೆ ಮಾಡಿಕೊಡುತ್ತಾರೆ. ಭಾನುವಾರ ಮಕ್ಕಳಿಗೆ ಅಪ್ಪನೇ ದೋಸೆ ಮಾಡಿಕೊಡುವುದು.

-ಚೇತನ ಜೆ.ಕೆ. 

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.