ಸಲಾಂ, ಪುಟ್ಗೌರಿ!
Team Udayavani, Dec 12, 2018, 6:00 AM IST
ಸಿಂಚು ಮತ್ತು ಫರಾಹನಾಝ್… ಈ ಇಬ್ಬರೂ ಪುಟಾಣಿಗಳು ಒಬ್ಬರನ್ನು ಬಿಟ್ಟು ಮತ್ತೂಬ್ಬರು ಇರೋದಿಲ್ಲ. ಇತ್ತೀಚೆಗೆ ಗೌರಿ ಹುಣ್ಣಿಮೆ ಆದಾಗ ಜಾತಿ- ಧರ್ಮಗಳ ನಡುವಿನ ಗೋಡೆಗಳನ್ನು ಪುಟ್ಟ ಕೈಗಳಿಂದ ಒಡೆದು, ಇಡೀ ಊರಿಗೇ ಸಾಮರಸ್ಯದ ಪಾಠ ಮಾಡಿದರು. ಆ ಕತೆಯೇ ರೋಚಕ…
ಸಿಂಚು ಮತ್ತು ಫರಾಹನಾಝ್ ಇಬ್ಬರೂ ನಾಲ್ಕು ವರ್ಷದ ಪೋರಿಯರು. ಉಣಕಲ್ಲಿನ ವೀರಭದ್ರೇಶ್ವರ ಕಾಲನಿಯ ಅಕ್ಕಪಕ್ಕದ ಮನೆಗಳಲ್ಲಿ ಇವರ ವಾಸ. ಇಬ್ಬರ ನಡುವೆ ಬಿಟ್ಟಿರಲಾಗದಷ್ಟು ಗೆಳೆತನ. ಈಕೆ ಮಲಗಿದಾಗಲೇ ಆಕೆ ಮಲಗುವುದು, ಆಕೆ ಊಟ ಮಾಡಿದರೆ ಮಾತ್ರ ಈಕೆ ತುತ್ತು ಬಾಯಿಗಿಡುವುದು. ಹೀಗೆ ಆ ಮನೆಯಿಂದ ಈ ಮನೆಗೆ ಓಡಾಡಿಕೊಂಡು ಬಾಲ್ಯವನ್ನು ಅನುಭವಿಸುತ್ತಿದ್ದಾರೆ.
ಮೊನ್ನೆ ಸಿಂಚುವಿನ ಮನೆಯಲ್ಲಿ ಗೌರಿ ಹುಣ್ಣಿಮೆಯ ಸಂಭ್ರಮ. ಆ ಹಬ್ಬದ ದಿನ ಹೆಣ್ಣು ಮಕ್ಕಳು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ತಲೆತುಂಬಾ ಹೂವು ಮುಡಿದು, ಕೈಯಲ್ಲಿ ಸಕ್ಕರೆ ಗೊಂಬೆಯ ಆರತಿ ಹಿಡಿದು, ಹಸಿ ಮಣ್ಣಿನಿಂದ ಗೌರಿ ಪ್ರತಿಷ್ಠಾಪನೆ ಮಾಡಿ, ಸಂಜೆ ದೇಗುಲಕ್ಕೆ ಹೋಗಿ ಪೂಜೆ ಮಾಡಿ ಬರುವುದು ಉತ್ತರ ಕರ್ನಾಟಕದಲ್ಲಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯ. ಸಿಂಚುವಿನ ಅಮ್ಮನಿಗೂ, ಮುದ್ದು ಮಗಳನ್ನು ಸಿಂಗರಿಸುವ ತವಕ. ಮಗಳನ್ನು ಪುಟ್ಟ ಗೌರಿಯಂತೆ ಸಜ್ಜುಗೊಳಿಸಿ, ದೇವಸ್ಥಾನಕ್ಕೆ ಕರೆದೊಯ್ಯುವ ಗಡಿಬಿಡಿಯಲ್ಲಿದ್ದಾರೆ. ಆದರೆ, ಸಿಂಚುವಿಗೆ ಇವ್ಯಾವುದರ ಪರಿವೆಯೇ ಇಲ್ಲ. ಎಂದಿನಂತೆ ಫರಾಹನಾಝ್ ಜೊತೆ ಆಟ ಮುಂದುವರಿದಿದೆ.
ಅಮ್ಮ ಬಂದು, ಆಟವಾಡುತ್ತಿರುವ ಸಿಂಚುವನ್ನು ಕರೆದರೂ ಅವಳಿಗೆ ಅತ್ತ ಗಮನವಿಲ್ಲ. ರಮಿಸಿ ಕರೆದರೂ ಬರದಿದ್ದಾಗ, ಗದರಿ, ಕೈ ಹಿಡಿದು ಒಳಗೆ ಎಳೆದುಕೊಂಡು ಹೋದರು. ಫರಹಾನಾಝ್ಳನ್ನು ಅಲ್ಲೇ ಬಿಟ್ಟು ಹೋಗಲು ಮನಸ್ಸಿಲ್ಲದ ಸಿಂಚು ಮತ್ತೆ ವಾಪಸ್ ಹೊರಗೆ ಓಡಿಬಂದಳು. ನಾನು ಎಲ್ಲಿಗೂ ಬರೋದಿಲ್ಲ ಅಂತ ಹಠ ಹಿಡಿದು, ಒಂದೇ ಸ್ವರದಲ್ಲಿ ಅಳತೊಡಗಿದಳು. ಕೊನೆಗೆ, ಅಳುವ ಮಗುವನ್ನೇ ಎತ್ತಿಕೊಂಡು ಹೋಗಿ, ಬೈದು ಸ್ನಾನ ಮಾಡಿಸತೊಡಗಿದರು. ಸ್ನಾನ ಮುಗಿದರೂ ಸಿಂಚು ಅಳು ನಿಲ್ಲಿಸಲಿಲ್ಲ. ನಿನಗೇನು ಬೇಕು ಅಂತೆಲ್ಲಾ ಅಮ್ಮ ರಮಿಸಿ ಕೇಳಿದಾಗ, ತನ್ನ ಅಳು ನಿಲ್ಲಬೇಕಾದರೆ ಫರಾಹನಾಝ್ಳನ್ನು ಕರೆಸಬೇಕು. ಅಷ್ಟೇ ಅಲ್ಲ, ಅವಳನ್ನೂ ನನ್ನಂತೆಯೇ ರೆಡಿ ಮಾಡಿ, ದೇಗುಲಕ್ಕೆ ಕರೆದೊಯ್ಯಬೇಕು ಅಂತ ಫರ್ಮಾನು ಹೊರಡಿಸಿದಳು!
ಕೊನೆಗೆ ಸಿಂಚುವಿನ ತಾಯಿ, ಫರಹಾನಾಝಳನ್ನು ಕರೆಯಲು ಅವರ ಮನೆಗೆ ಹೋದರು. ಗೆಳತಿಯನ್ನು ಎಳೆದುಕೊಂಡು ಹೋದ ಪರಿಯನ್ನು ನೋಡಿಯೇ ಆ ಮಗು ಹೆದರಿ, ಹೊರಗೆ ಬರದೆ ಮನೆಯೊಳಗೆ ಅಡಗಿ ಕೂತಿತ್ತು. ಈ ಕಡೆ ಸಿಂಚುವೂ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಜೀವದ ಗೆಳತಿಯನ್ನು ಕರೆಯಲು, ಸಿಂಚುವನ್ನೇ ಕಳಿಸಿದಳು ಅಮ್ಮ. ಕುಣಿಕುಣಿಯುತ್ತಾ ಗೆಳತಿಯ ಮನೆಗೋಡಿದ ಸಿಂಚು, ಫರಾಹನಾಝ್ಳ ಕೈ ಹಿಡಿದು ಮನೆಗೆ ಕರಕೊಂಡು ಬಂದಳು. ಅಬ್ಟಾ ಸದ್ಯ, ಮಗಳ ಅಳು ನಿಂತಿತಲ್ಲ ಎಂದು, ಪುಟ್ಟಗೌರಿಯರನ್ನು ಅಲಂಕರಿಸಲು ಅಮ್ಮ ಮುಂದಾದರೆ, ಇಬ್ಬರಿಗೂ ಒಂದೇ ರೀತಿಯ, ಒಂದೇ ಬಣ್ಣದ ಬಟ್ಟೆ ಬೇಕು ಅಂತಾಯ್ತು! ಅಲಂಕಾರವೂ ಸೇಮ್ ಟು ಸೇಮ್ ಇರಬೇಕು, ಇಲ್ಲಾಂದ್ರೆ ಗುಡಿಗೆ ಬರಲು ನಾನೊಲ್ಲೆ ಅಂದುಬಿಟ್ಟಳು ಸಿಂಚು.
ತಲೆ ಮೇಲೆ ಹೂವಿನ ದಂಡೆ ಮುಡಿಸಿ, ಕೈಯಲ್ಲಿ ಸಕ್ಕರೆ ಗೊಂಬೆ ಆರತಿ ಕೊಟ್ಟು ಗುಡಿಗೆ ಕಳಿಸಬೇಕು ಅನ್ನುವಷ್ಟರಲ್ಲಿ, “ನನಗೆ ಹೇಗೆ ಹೂ ದಂಡೆ ಹಾಕೀರಿ. ಅವಳಿಗೂ ಅದನ್ನೇ ಹಾಕಿ’ ಅಂತ ಮತ್ತೆ ಸಿಂಚುವಿನ ತಕರಾರು. ದಂಡೆ ಒಂದೇ ಇದೆ, ಅದನ್ನು ಹರಿದು ಎರಡು ಮಾಡಲು ಬರುವುದಿಲ್ಲ ಮಗಳೇ ಅಂತ ಹೇಳಿದರೆ, ಅವಳಿಗೆ ಇಲ್ಲಾ ಅಂದರೆ ತನಗೂ ಬೇಡ ಅಂತ ತಲೆ ಮೇಲಿದ್ದ ಹೂ ದಂಡೆಯನ್ನು ಕಿತ್ತೂಗೆದಾಯ್ತು. ಹೂವಿಲ್ಲದೆ ಅಲಂಕಾರ ಪೂರ್ಣವೇ? ಕೊನೆಗೆ, ಮಗಳ ಮಾತಿಗೆ ತಲೆ ಬಾಗಿ, ತಾವು ಮುಡಿಯಲೆಂದು ತಂದ ಮಲ್ಲಿಗೆ ಮಾಲೆಯನ್ನೇ ಎರಡು ಸಮ ಭಾಗ ಮಾಡಿ, ಇಬ್ಬರಿಗೂ ಒಂದೇ ರೀತಿ ಅಲಂಕಾರ ಮಾಡಿದರು ಅಮ್ಮ. ಗೆಳತಿ ಫರಾಹನಾಝ್ ಕೂಡ ಈಗ ತನ್ನಂತೆಯೇ ಕಾಣಿಸುತ್ತಿದ್ದಾಳೆ, ಅವಳೂ ಈಗ ತನ್ನ ಜೊತೆ ಬರುತ್ತಾಳೆ ಅಂತ ಖಾತ್ರಿಯಾದ ಮೇಲೆ, ಗುಡಿಗೆ ಹೋಗಲು ಒಪ್ಪಿದಳು ಸಿಂಚು.
ಹಬ್ಬದ ಏರ್ಪಾಡಿನಲ್ಲಿ ಚೂರು ಏರುಪಾರಾಗಿದ್ದು ನಿಜವಾದರೂ, ಗೌರಿ ಹುಣ್ಣಿಮೆಗೆ ಈ ಪುಟಾಣಿಗಳು ಹೊಸ ಕಳೆ ಕಟ್ಟಿದ್ದರು. ದೇವತೆಯರಂತೆ ಕಂಗೊಳಿಸುತ್ತಾ, ಸಕ್ಕರೆ ಆರತಿಯನ್ನು ಕೈಯಲ್ಲಿ ಒಟ್ಟಿಗೇ ಹಿಡಿದು, ಪುಟ್ಟ ಹೆಜ್ಜೆಗಳನ್ನಿಟ್ಟು ದೇಗುಲಕ್ಕೆ ಹೊರಟ ಮಕ್ಕಳನ್ನು ಎರಡೂ ಮನೆಯವರು ಕಣ್ತುಂಬಿಕೊಂಡು ನೋಡಿದರು. ಇಂಥ ಸೌಹಾರ್ದ ಭಾವನೆ ದೊಡ್ಡವರಲ್ಲಿಯೂ ಮೂಡಿದರೆ, ಎಲ್ಲ ಧರ್ಮಗಳ ಮೂಲ ಒಂದೇ ಎಂಬ ಅರಿವಾದರೆ ಭಾರತ ಮಾತೆ ನೆಮ್ಮದಿಯ ನಗು ಚೆಲ್ಲುವವಳಲ್ಲವೆ?
ನದಾಫ ಎಚ್. ಹತ್ತಿಮತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್