ಕಣ್ಣಿಗೆ ಚೆಂದ ಕಾಡಿಗೆ ಅಂದ
Team Udayavani, Jan 2, 2019, 12:30 AM IST
ಕಣ್ಣಿನ, ಆ ಮೂಲಕ ಹೆಣ್ಣಿನ ಸೌಂದರ್ಯ ಹೆಚ್ಚಿಸುವುದು ಕಾಡಿಗೆಯ ಸ್ಪೆಶಾಲಿಟಿ. ಕಾಡಿಗೆಯ ಬಳಕೆಯಿಂದ ಕಣ್ಣಿನ ಆರೋಗ್ಯವೂ ಸುಧಾರಿಸುತ್ತದೆ ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ. ಅತ್ಯುತ್ತಮ ಗುಣಮಟ್ಟದ ಕಾಡಿಗೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು! ಹೇಗೆಂದು ತಿಳಿಯಬೇಕಾ? ಈ ಲೇಖನ ಓದಿ…
ಕಾಡಿಗೆ, ಕಣ್ಣ ಕಪ್ಪು ಅಥವಾ ಕಾಜಲ್, ಕಣ್ಣಿನ ಸೌಂದರ್ಯಕ್ಕೆ, ಆ ಮೂಲಕ ಮುಖಕ್ಕೆ ವಿಶೇಷ ಮೆರುಗು ನೀಡುವುದು ಖಚಿತ. ಐ ಲೈನರ್, ಐ ಲ್ಯಾಶಸ್ ಎಂದೆಲ್ಲಾ ರೂಪಾಂತರಗೊಂಡ ಈ ಕಾಡಿಗೆಯನ್ನು ಹಿಂದೆ ಮನೆಯಲ್ಲಿಯೇ ತಯಾರಿಸುತ್ತಿದ್ದರು. ಯಾವುದೇ ರಾಸಾಯನಿಕಗಳಿಲ್ಲದ, ಔಷಧೀಯ ಗುಣಗಳಿಂದ ಕೂಡಿದ ಕಾಡಿಗೆಯನ್ನು ತಯಾರಿಸೋದು ಹೇಗೆ ಗೊತ್ತಾ?
ಬೇಕಾಗುವ ಸಾಮಗ್ರಿ: ತಾಮ್ರದ ತಟ್ಟಿ , ಹಿತ್ತಾಳೆಯ ದೀಪ, ಶುದ್ಧ ಹರಳೆಣ್ಣೆ, ಶುದ್ಧ ತುಪ್ಪ , ಹತ್ತಿಯ ದಪ್ಪ ಬತ್ತಿ, ಸಣ್ಣ ಬೆಳ್ಳಿ ಕರಡಿಗೆ, ಶುದ್ಧ ಕರ್ಪೂರ 1 ಚಮಚ, 2 ಲೋಟ.
ಮಾಡುವ ವಿಧಾನ: ಹಿತ್ತಾಳೆಯ ದೀಪದಲ್ಲಿ 100 ಎಂ.ಎಲ್. ಹರಳೆಣ್ಣೆ ಹಾಕಿ. ಅದರಲ್ಲಿ ಅದ್ದಿದ ಹತ್ತಿಯ ಬತ್ತಿಯನ್ನು ಹಾಕಿಡಿ. ದೀಪದ ಎರಡು ಬದಿಗಳಲ್ಲಿ 2 ಲೋಟಗಳನ್ನು ಇಟ್ಟು ದೀಪ ಹಚ್ಚಿ , ಇದರ ಉರಿ ತಾಕುವ ಹಾಗೆ ತಾಮ್ರದ ತಟ್ಟೆಯನ್ನು ಲೋಟಗಳ ಮೇಲೆ ಇರಿಸಿ. ದೀಪ ಉರಿದಂತೆ, ತಾಮ್ರದ ತಟ್ಟೆಯ ಸುತ್ತ ಕಪ್ಪು ಬಣ್ಣದ ಮಸಿ ಸಂಗ್ರಹವಾಗುತ್ತದೆ. ಕೊನೆಯಲ್ಲಿ ಚಮಚದಿಂದ ಕಪ್ಪು ಮಸಿಯನ್ನು ತೆಗೆದು, ಅದಕ್ಕೆ ಸ್ವಲ್ಪ ಶುದ್ಧ ತುಪ್ಪ ಹಾಗೂ ಕರ್ಪೂರವನ್ನು ಬೆರೆಸಬೇಕು. ಹೀಗೆ ತಯಾರಾದ ಕಾಡಿಗೆಯನ್ನು ಬೆಳ್ಳಿಯ ಕರಡಿಗೆಯಲ್ಲಿ ಸಂಗ್ರಹಿಸಬೇಕು. ದಿನನಿತ್ಯ ಈ ಕಾಡಿಗೆ ಲೇಪಿಸಿದರೆ ಕಂಗಳಿಗೂ ತಂಪು, ದೃಷ್ಟಿಗೂ ಒಳ್ಳೆಯದು. ಹತ್ತಿಯ ಬಟ್ಟೆಯನ್ನು ತಯಾರಿಸುವಾಗ, ನಂದಿಬಟ್ಟಲಿನ ಹೂವಿನ ರಸದಲ್ಲಿ ನಿತ್ಯ ಅದ್ದಿ ಒಣಗಿಸಿ, (8-10 ದಿನ ಹೀಗೆ ಹೂವಿನ ರಸದಲ್ಲಿ ಅದ್ದಿ ಒಣಗಿಸಿ) ನಂತರ ಈ ಹತ್ತಿಯ ಬತ್ತಿಯನ್ನು ಉಪಯೋಗಿಸಿದರೆ ಕಣ್ಣಿನ ರೆಪ್ಪೆಯ ಬೆಳವಣಿಗೆಗೂ ಹಿತಕರ. ತೇಯ್ದ ಶ್ರೀಗಂಧದಲ್ಲಿ ಅದ್ದಿ ಒಣಗಿಸಿದ ಹತ್ತಿ ಬತ್ತಿಯನ್ನು ಉಪಯೋಗಿಸಿದರೆ ಕಣ್ಣಿನ ಉರಿ, ತುರಿಕೆ ಶಮನವಾಗುತ್ತದೆ. ಅದೇ ರೀತಿ ಹೊನಗೊನ್ನೆ ಸೊಪ್ಪಿನ ರಸದಲ್ಲಿ ಅದ್ದಿ ತಯಾರಿಸಿದ ಹತ್ತಿಯ ಬತ್ತಿಯನ್ನು ಉಪಯೋಗಿಸುವುದರಿಂದ ಕಣ್ಣಿನ ಆರೋಗ್ಯ ಹಾಗೂ ಸೌಂದರ್ಯ ವರ್ಧಿಸುತ್ತದೆ.
ಕಾಡಿಗೆ ಹಚ್ಚೋದ್ಯಾಕೆ?
ಹರಳೆಣ್ಣೆಯಲ್ಲಿ ವಿಟಮಿನ್ ಇ ಅಂಶ ಅಧಿಕವಾಗಿದ್ದು, ಕಣ್ಣಿನ ರೆಪ್ಪೆ ಬೆಳೆಯುವುದಕ್ಕೆ ಹಾಗೂ ಕಪ್ಪಾಗಲು ಸಹಕಾರಿ. ಅದು ಕಣ್ಣಿನ ಒತ್ತಡ ನಿವಾರಕವೂ ಹೌದು. ಕಾಡಿಗೆ ತಯಾರಿಸುವಾಗ ತಾಮ್ರದ ತಟ್ಟೆ ಬಿಸಿಯಾಗುತ್ತದೆ. ತಾಮ್ರದ ಅಂಶವು ಕಣ್ಣಿನ ಮಸೂರ ಹಾಗೂ ಮಾಂಸಖಂಡಗಳಿಗೆ ಶಕ್ತಿ ನೀಡಿ, ಕಣ್ಣಿಗೆ ಉಂಟಾಗುವ ಸೋಂಕುಗಳನ್ನು ತಡೆಗಟ್ಟುತ್ತದೆ. ಹಿತ್ತಾಳೆಯ ದೀಪ ಹಾಗೂ ಬೆಳ್ಳಿಯ ಕರಡಿಗೆ ಉಪಯೋಗಿಸುವುದರಿಂದ ಕಣ್ಣಿನ ಅಲರ್ಜಿ, ಸೋಂಕು, ಉರಿ ಇತ್ಯಾದಿ ನಿವಾರಣೆಯಾಗುತ್ತದೆ. ಕಣ್ಣಿನಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಕರ್ಪೂರವು ಶೀತಲಗುಣ ಹೊಂದಿದೆ. ದೃಷ್ಟಿಯನ್ನು ಸು#ಟವಾಗಿಸುತ್ತದೆ. ತುಪ್ಪವು ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ನಿವಾರಣೆ ಮಾಡುತ್ತದೆ.
ಬಾದಾಮಿ ಬಳಸಿ ಕಾಡಿಗೆ ತಯಾರಿ
ತಾಮ್ರದ ತಟ್ಟೆಯಲ್ಲಿ ಒಂದೊಂದೇ ಬಾದಾಮಿ ಬೀಜ ಇಡಬೇಕು. ಅದು ಬಿಸಿಯಾಗಿ ಉರಿದ ಬಳಿಕ ಅದರಿಂದ ಉಂಟಾದ ಮಸಿಯನ್ನು, ಚಮಚದಲ್ಲಿ ಸಂಗ್ರಹಿಸಿ ಬಾದಾಮಿ ತೈಲದ ಜೊತೆ ಬೆರೆಸಿ, ಕಾಡಿಗೆ ತಯಾರಿಸಬೇಕು. ಇದನ್ನು ಬೆಳ್ಳಿಯ ಕರಡಿಗೆಯಲ್ಲಿ ಸಂಗ್ರಹಿಸಿ, ನಿತ್ಯ ಲೇಪಿಸಿದರೆ ಕಣ್ಣಿನ ರೆಪ್ಪೆ ಕಪ್ಪಾಗಿ, ದಟ್ಟವಾಗಿ ಬೆಳೆದು ಕಣ್ಣಿನ ಅಂದ ವರ್ಧಿಸುತ್ತದೆ.
ಲೋಳೆಸರದಿಂದಲೂ
ತಾಮ್ರದ ತಟ್ಟೆಗೆ ಲೋಳೆಸರದ ತಿರುಳನ್ನು ಲೇಪಿಸಬೇಕು. ನಂತರ ಮೊದಲು ತಿಳಿಸಿದ ವಿಧಾನದಲ್ಲಿ ಕಾಡಿಗೆ ತಯಾರಿಸಬೇಕು. ಈ ಕಾಡಿಗೆಯಲ್ಲಿ ಇತರ ಔಷಧೀಯ ಅಂಶಗಳೊಂದಿಗೆ ಲೋಳೆಸರದ ಸೌಂದರ್ಯವರ್ಧಕ ಆರೋಗ್ಯರಕ್ಷಕ ಗುಣಗಳೂ ಮೇಳೈಸುವುದರಿಂದ ನಿತ್ಯ ಲೇಪಿಸಲು ಈ ಕಾಡಿಗೆ ಉಪಯುಕ್ತ.
ಸುಂದರ ಕಂಗಳಿಗೆ…
*ನಿತ್ಯ ರಾತ್ರಿ ಮಲಗುವ ಮುನ್ನ ರೆಪ್ಪೆಗಳಿಗೆ ಶುದ್ಧ ಹರಳೆಣ್ಣೆ ಲೇಪಿಸಿದರೆ, ರೆಪ್ಪೆಯೂ ಆಕರ್ಷಕವಾಗುತ್ತದೆ ಹಾಗೂ ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳು ನಿವಾರಣೆಯಾಗುತ್ತವೆ. ಹರಳೆಣ್ಣೆಯ ಹಾಗೆ ಶುದ್ಧ ಆಲಿವ್ ತೈಲ ಲೇಪಿಸಿದರೂ ಪರಿಣಾಮಕಾರಿ.
*ಲೋಳೆಸರದ ತಿರುಳಿಗೆ ಕೊಬ್ಬರಿ ಎಣ್ಣೆ ಮಿಶ್ರಮಾಡಿ ಲೇಪಿಸಿದರೆ ಕಣ್ಣ ರೆಪ್ಪೆ ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.
*ತುದಿ ಬೆರಳುಗಳಿಂದ ಮೃದುವಾಗಿ ಕಣ್ಣುಗಳನ್ನು ವರ್ತುಲಾಕಾರವಾಗಿ ಮಾಲೀಶ್ ಮಾಡುವುದರಿಂದ ರಕ್ತಸಂಚಾರ ಹೆಚ್ಚಾಗಿ ಕಂಗಳ ಆರೋಗ್ಯ ವರ್ಧಿಸುತ್ತದೆ.
*ಕಣ್ಣಿಗೆ ಶುದ್ಧ ಗುಲಾಬಿ ಜಲವನ್ನು ದಿನಕ್ಕೆ 2 ಬಾರಿ, 3 ಹನಿಗಳಂತೆ ಹಾಕಿದರೆ ಕಣ್ಣಿನ ಹೊಳಪು ಹೆಚ್ಚುತ್ತದೆ.
*ಹತ್ತಿಯ ಉಂಡೆಗಳನ್ನು ತಣ್ಣಗಿನ ಸೌತೆಕಾಯಿ ರಸದಲ್ಲಿ ಅದ್ದಿ ಕಂಗಳಿಗೆ ಲೇಪಿಸಿ.
*ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ನಿವಾರಣೆಗೆ ಟೊಮ್ಯಾಟೊ ರಸ 2 ಚಮಚ, 2 ಹನಿ ಲಿಂಬೆರಸ, 2 ಚಿಟಿಕೆ ಅರಶಿನ ಹುಡಿ ಬೆರೆಸಿ ಲೇಪಿಸಿದರೆ ಹಿತಕರ.
*ಕಣ್ಣಿನ ಸುತ್ತಲೂ ರೆಪ್ಪೆ ಊದಿದ್ದರೆ ಸೌತೆಕಾಯಿ ರಸಕ್ಕೆ ಎರಡು ಹನಿ ತುಳಸೀರಸ ಬೆರೆಸಿ ಲೇಪಿಸಿದರೆ ಊತ ನಿವಾರಣೆಯಾಗಿ, ನೆರಿಗೆಗಳೂ ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
*ಕಣ್ಣಿಗೆ ಬಳಸುವ ಐಕಪ್ಸ್ನಿಂದ ತ್ರಿಫಲಾ ಕಷಾಯ ಬಳಸಿ ಕಣ್ಣುಗಳನ್ನು ತೊಳೆದರೆ ಕಂಗಳ ಆರೋಗ್ಯಕ್ಕೂ ಸೌಂದರ್ಯಕ್ಕೂ ಹಿತಕರ.
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು