ಚೆಂದಮಾರುತ


Team Udayavani, Jan 5, 2018, 1:03 PM IST

05-32.jpg

ಇತ್ತೀಚೆಗೆ “ಒಖಿ’ ಚಂಡಮಾರುತ ಅಪ್ಪಳಿಸಿ, ಅದೆಷ್ಟೋ ಜನರ ಬದುಕಿನ ನೆಮ್ಮದಿಯನ್ನು ಕಸಿದಿತ್ತು. ರಾಕ್ಷಸೀ ಸ್ವರೂಪದ ಚಂಡಮಾರುತಕ್ಕೆ “ಒಖೀ’ಯಂಥ (ನೇತ್ರ) ಚಂದದ, ಹೆಣ್ಣಿನ ಹೆಸರು! ಹೆಣ್ಣು ಸುಕೋಮಲೆ, ಸಹನಾಮೂರ್ತಿ, ತ್ಯಾಗಮಯಿ. ಆಕೆಯನ್ನು ಹೂವಿಗೆ, ಬಳ್ಳಿಗೆ, ನದಿಗೆ ಹೋಲಿಸಿದ್ದಾರೆ. ಪ್ರಕೃತಿಯನ್ನೂ “ಮಾತೆ’ ಎಂದೇ ಪೂಜಿಸುತ್ತೇವೆ. ಹಾಗಿದ್ದ ಮೇಲೆ ಜನರ ಬದುಕನ್ನು ಬುಡಮೇಲು ಮಾಡುವ ಪ್ರಾಕೃತಿಕ ವಿಕೋಪಗಳಿಗೂ ಹೆಣ್ಣಿನ ಹೆಸರೇ? ಯಾಕೆ ಈ ವೈರುಧ್ಯ? ಕೆರೋಲ್‌, ಬೆಟ್ಸೆ, ಕತ್ರಿನಾ, ಮರಿಯಾ, ರೀಟಾ… ಹೀಗೆ ಕರೆಯುವುದು ಮಹಿಳಾ ಶೋಷಣೆಯಲ್ಲವೆ? ಹೀಗೊಂದು ಕೂಗು ಎದ್ದು, ಆ ಕುರಿತು ದಶಕಗಳ ಕಾಲ ಹೋರಾಟ ನಡೆದ ಮೇಲಷ್ಟೇ, ಪುರುಷ ಚಂಡಮಾರುತಗಳು ಎದ್ದಿದ್ದು! 

2000. ಮಿಯಾಮಿ, ಫ್ಲೋರಿಡಾ- “ಹರಿಕೇನ್‌ ಡೆಬ್ಬಿ ಯಾವುದೇ ಸಮಯಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆ ವಹಿಸಿ, ಎಲ್ಲಾ ಸಿದ್ಧತೆ ಮಾಡಿಟ್ಟುಕೊಳ್ಳಿ’- ಹೀಗೆಂದು ಪದೇಪದೆ ಟಿವಿ, ಪೇಪರ್‌, ರೇಡಿಯೋಗಳಲ್ಲಿ ಸುದ್ದಿ ಬರುತ್ತಿದ್ದರೆ, ಅಮೆರಿಕದ ಫ್ಲೋರಿಡಾದಲ್ಲಿ ವಾಸವಾಗಿದ್ದ ನಮಗೆ ಎದೆ ನಡುಗಿತ್ತು. ಮರಗಳನ್ನೇ ಉರುಳಿಸುವ ಪ್ರಬಲ ಗಾಳಿ, ಮನೆ ಮುಳುಗಿಸುವ ನೀರು, ಎಲ್ಲೆಂದರಲ್ಲಿ ಧೂಳು-ಮರಳು, ಕವಿದ ಕತ್ತಲು… ಹೀಗೆ ಅದೊಂದು ದುಃಸ್ವಪ್ನ! ಎಲ್ಲರೂ ಡೆಬ್ಬಿಗೆ ಮನಸೋ ಇಚ್ಛೆ ಬಯ್ಯುವವರೇ. ಪಾಪ, ನಮ್ಮ ನೆರೆಯ ಹುಡುಗಿ ಡೆಬ್ಬಿ , “ಛೆ, ನನಗೆ ಒಂಥರಾ ಆಗುತ್ತೆ, ಇದಕ್ಕೇಕೆ ನನ್ನ ಹೆಸರು?’ ಎಂದು ಬೇಸರ ಮಾಡಿಕೊಂಡಿದ್ದಳು. “ಹೆಸರಿನಲ್ಲಿ ಏನಿದೆ?’ ಎಂದು ಅವಳನ್ನು ಸಮಾಧಾನಪಡಿಸಿದರೂ ಈ ಚಂಡಮಾರುತಗಳ ಹೆಸರಿನ ಹಿಂದಿನ ಕತೆ ದೊಡ್ಡದೇ!

ಹೆಸರೇಕೆ ಬೇಕು?
ಹರಿಕೇನ್‌, ಸೈಕ್ಲೋನ್‌, ತೂಫಾನು ಎಲ್ಲವೂ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಕಡಿಮೆ ಒತ್ತಡದ ಪ್ರದೇಶದತ್ತ ರಭಸವಾಗಿ ಮುನ್ನುಗ್ಗುವ ಗಾಳಿ. ಜಗತ್ತಿನ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಅನಾದಿ ಕಾಲದಿಂದಲೂ ಚಂಡಮಾರುತಗಳು ಅಪಾರ ಹಾನಿ ಮಾಡುತ್ತಲೇ ಬಂದಿವೆ. ಅವುಗಳಿಗೆ ಹೆಸರಿಟ್ಟು ಗುರುತಿಸುವ ಕೆಲಸ ಕಳೆದೊಂದು ಶತಮಾನದಿಂದ ನಡೆದುಬಂದಿದೆ.

ಆರಂಭದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಈ ವಿದ್ಯಮಾನ ಗುರುತಿಸಲು ತಜ್ಞರು ಭೂಮಿಯ ಅಕ್ಷಾಂಶ ಮತ್ತು ರೇಖಾಂಶವನ್ನು ಬಳಸುತ್ತಿದ್ದರು. ವಿಶ್ವ ಹವಾಮಾನ ಸಂಸ್ಥೆ ಪ್ರಕಾರ, ಇದು ಗುರುತಿಸಲು ಕಠಿಣ. ಹೆಸರಿಟ್ಟಾಗ ಜನರಿಗೆ ನೆನಪಿಟ್ಟುಕೊಳ್ಳಲು ಸುಲಭ. ಮಾಧ್ಯಮಗಳಲ್ಲಿ ಸುದ್ದಿ ಕೊಡುವಾಗ ಬರೀ ಸಂಖ್ಯೆ ಅಥವಾ ವೈಜ್ಞಾನಿಕ ಹೆಸರು ನೀಡಿ ಜನರನ್ನು ಎಚ್ಚರಿಸುವುದು ಸುಲಭವಲ್ಲ. ಹೆಸರಿದ್ದಾಗ ಬೇಗನೆ ಮನಸ್ಸಿನಲ್ಲಿ ಉಳಿದು, ಬಾಯಿಂದ ಬಾಯಿಗೆ ಸುದ್ದಿ ಹರಡಿ ಜನರು ಪೂರ್ವ ಸಿದ್ಧತೆ ಕೈಗೊಳ್ಳಲು ಸಹಾಯಕ. ಹಾಗೆಯೇ ಯಾವ ಪ್ರದೇಶದಿಂದ ಎಲ್ಲಿಗೆ ಚಂಡಮಾರುತ ಧಾವಿಸುತ್ತಿದೆ ಎಂದು ಜನರ ಮೂಲಕ ಪತ್ತೆ ಸುಲಭಸಾಧ್ಯ.

ಹೀಗೆ ಅನುಕೂಲ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೊದಮೊದಲು ಚಂಡಮಾರುತ ಅಪ್ಪಳಿಸಿದ ಸ್ಥಳ, ಅದಕ್ಕೆ ಬಲಿಯಾದ ಹಡಗು, ಸಂತರು, ಕುಖ್ಯಾತ ವ್ಯಕ್ತಿಗಳು, ಗ್ರೀಕ್‌ ಅಕ್ಷರಗಳು… ಹೀಗೆ ಅನುಕೂಲವೆನಿಸಿದ ಹೆಸರುಗಳನ್ನು ಇಡಲಾಯಿತು. ಆದರೆ, 1953ರಲ್ಲಿ ಮಹಿಳೆಯರ ಹೆಸರನ್ನು ಚಂಡಮಾರುತಗಳಿಗೆ ಇಡುವ ಪದ್ಧತಿ ಶುರುವಾಯಿತು. ಆಲಿಸ್‌ ಎಂಬುದು ಮಹಿಳೆಯ ಹೆಸರು ಹೊತ್ತ ಮೊದಲ ಚಂಡಮಾರುತ. ಈ ಪದ್ಧತಿ ಅನೇಕ ವಿರೋಧ ಮತ್ತು ಹೋರಾಟದ ನಡುವೆಯೂ 1978ರವರೆಗೆ ಅಂದರೆ ಎರಡೂವರೆ ದಶಕಗಳ ಕಾಲ ಮುಂದುವರಿಯಿತು.

ಮಹಿಳೆಯರ ಹೆಸರೇ ಏಕೆ?
ನಿಖರವಾಗಿ ಇಂಥದ್ದೇ ಕಾರಣ ಎಂದು ತಿಳಿದಿಲ್ಲವಾದರೂ ಇತಿಹಾಸ ಮತ್ತು ಹಳೆಯ ಕೃತಿಗಳ ಪ್ರಕಾರ ಹೆಸರಿನ ಹಿಂದಿನ ಉದ್ದೇಶ ಹೀಗಿರಬಹುದು.

.ನಾವಿಕರಲ್ಲಿ ಸಮುದ್ರ ಮತ್ತು ನೌಕೆಯನ್ನು ಸ್ತ್ರೀಲಿಂಗವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಮುದ್ರದಲ್ಲಿ ಹುಟ್ಟುವ ಚಂಡಮಾರುತಕ್ಕೆ ಮಹಿಳೆಯರ ಹೆಸರಿಟ್ಟಿರಬಹುದು.

.ದೀರ್ಘ‌ಕಾಲ ಸಮುದ್ರಯಾನ ಕೈಗೊಳ್ಳುತ್ತಿದ್ದ ನಾವಿಕರು ತಮ್ಮ ಪ್ರೇಯಸಿಯರಿಂದ ದೂರ ಇರುತ್ತಿದ್ದರು. ವಿರಹದಿಂದ ಬಳಲುತ್ತಿದ್ದ ನಾವಿಕರು ಅದೇ ನೆನಪಿನಲ್ಲಿ ಚಂಡಮಾರುತಕ್ಕೆ ತಮಗಿಷ್ಟವಾದ ಹೆಸರಿಟ್ಟಿರಬಹುದು.

.ಕೆಲವೊಮ್ಮೆ ತೀರಕ್ಕೆ ಹತ್ತಿರ ಬಂದು ಕೆಣಕಿ, ಮತ್ತೆ ಹಲವು ಬಾರಿ ಅಪ್ಪಳಿಸುತ್ತಿದ್ದ ಚಂಡಮಾರುತಗಳು ಮಹಿಳೆಯರ ಸ್ವಭಾವದಂತೆ ಹೇಳಲಸಾಧ್ಯ. ಪ್ರಕ್ಷುಬ್ಧ ಎಂಬ ಅಭಿಪ್ರಾಯ. ಹಾಗಾಗಿ ಅಂಥ ಹೆಸರುಗಳು! ಮಾಧ್ಯಮಗಳಲ್ಲೂ ಚಂಡಮಾರುತಗಳಿಗೆ ಸ್ತ್ರೀಲಿಂಗವನ್ನೇ ಬಳಸಲಾಗುತ್ತಿತ್ತು.

.ಮಹಿಳೆ ಎಂದರೆ ಹೇಗೋ ಜೀವನದಲ್ಲಿ ಪ್ರವೇಶಿಸಿ ನಂತರ ಆಸ್ತಿ, ದುಡ್ಡು ಎಲ್ಲಾ ಕೊಂಡೊಯ್ಯುವವಳು ಎಂಬ ತಮಾಷೆ, ವ್ಯಂಗ್ಯ ಮತ್ತು ತಿರಸ್ಕಾರ.

ಮೇಲಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲವು ಹಿರಿಯ ನಾವಿಕರು, “ಚಂಡಮಾರುತ ಎಂದೊಡನೆ ಜನರು ಹೆದರಿ ಕಂಗಾಲಾಗುತ್ತಾರೆ. ಮಹಿಳೆಯರ ಹೆಸರಿಟ್ಟರೆ ತಾಯಿಯ ನೆನಪಾಗುತ್ತದೆ. ತಾಯಿ ಎಂದರೆ ಕರುಣಾಮಯಿ, ಅಂಥ ತೊಂದರೆ ಇಲ್ಲ. ಜನ ಹೆದರದಿರಲಿ ಎನ್ನುವ ಕಾರಣಕ್ಕೆ ಹೀಗೆ ಇಡಲಾಗುತ್ತಿತ್ತು’ ಎನ್ನುತ್ತಾರೆ. ಅರವತ್ತರ ದಶಕದಲ್ಲಿ ಮಹಿಳಾ ಸಮಾನತೆಯ ಕೂಗು ಬಲವಾದಾಗ ಚಂಡಮಾರುತಗಳ ಹೆಸರೂ ಚರ್ಚೆಗೆ ಬಂತು. ಸಾಕಷ್ಟು ಜನ ಪತ್ರ ಬರೆದು, ಮನವಿ ಸಲ್ಲಿಸಿದರೂ ಹವಾವಾನ ತಜ್ಞರು ಮಹಿಳೆಯರ ಹೆಸರನ್ನೇ ಇಡಲು ಬಯಸುತ್ತಾರೆ. ಪುರುಷರ ಹೆಸರು ಇಡಬೇಕೆಂಬುದು ಕೆಲವರ ವೈಯಕ್ತಿಕ ಅಭಿಪ್ರಾಯ. ಹಾಗೆ ನೋಡಿದರೆ, ತುಂಬಾ ಮಹಿಳೆಯರು ತಮ್ಮ ಹೆಸರನ್ನು ಚಂಡಮಾರುತಗಳಿಗೆ ಇಡಬೇಕು ಎಂದು ಕೋರುತ್ತಾರೆ ಎಂದು ರಾಷ್ಟ್ರೀಯ ಚಂಡಮಾರುತ ಸಮಿತಿಯ ಅರ್ನಾಲ್ಡ್‌ ವಾದಿಸಿದ್ದರು. ಈ ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ಸತತ ಪ್ರಯತ್ನದ ಫ‌ಲವಾಗಿ 1978ರಲ್ಲಿ ಮೊದಲ ಬಾರಿಗೆ ಪುರುಷರ ಹೆಸರನ್ನು ಚಂಡಮಾರುತಕ್ಕೆ ಇಡಲು ಆರಂಭಿಸಿದರು. “ಬಾಬ್‌’ ಎನ್ನುವುದು ಮೊದಲ ಪುರುಷ ಹೆಸರಿನ ಚಂಡಮಾರುತ. ಕಡೆಗೂ ಹೆಸರಿನಲ್ಲಾದರೂ ಸಮಾನತೆ ದೊರೆಯಿತು!

ಕೊನೆಯಾದ ಕತ್ರಿನಾ
ಚಂಡಮಾರುತಗಳ ಹೆಸರಿಗೂ ನಿವೃತ್ತಿ ಎಂಬುದಿದೆ. ಅಪಾರ ನಷ್ಟ ಉಂಟುಮಾಡಿದ, ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದ ಚಂಡಮಾರುತಗಳ ಹೆಸರನ್ನು ಮತ್ತೆ ಬಳಸಲಾಗುವುದಿಲ್ಲ. ಆ ಹೆಸರನ್ನು ಮತ್ತೆ ಇಟ್ಟರೆ ಅದೇ ರೀತಿ ಮರುಕಳಿಸಬಹುದು ಎಂಬ ಶಂಕೆ, ಚರಿತ್ರೆಯಲ್ಲಿ ಅಪಾಯಕಾರಿ ಎಂದು ದಾಖಲಾಗಿದ್ದು ಮತ್ತೆ ಬೇಡ ಎಂಬ ಉದ್ದೇಶ ಹಾಗೂ ಮಡಿದವರಿಗೆ ಗೌರವ ಸಲ್ಲಿಸುವ ಉದ್ದೇಶ ಇದರ ಹಿಂದಿದೆ. ಉದಾಹರಣೆಗೆ 2005ರಲ್ಲಿ ಬಂದಿದ್ದ “ಕತ್ರಿನಾ’ ಹೆಸರನ್ನು ನಿವೃತ್ತಗೊಳಿಸಲಾಗಿದೆ. ಹಾಗೆಯೇ ಕತ್ರಿನಾ ಜನಪ್ರಿಯ ಹೆಸರಾಗಿದ್ದರೂ ಆ ವರ್ಷ ಜನಿಸಿದ ಮಕ್ಕಳಿಗೆ ಈ ಹೆಸರಿಟ್ಟವರು ತೀರಾ ಕಡಿಮೆ ಜನ!

ರಾಕ್ಸಿ ಬೋಲ್ಟನ್‌
“ಕೆರೋಲ್‌, ಬೆಟ್ಸೆ , ಕತ್ರಿನಾ ಹೀಗೆ ಸುಮ್ಮನೇ ತಮ್ಮ ಹೆಸರನ್ನು ದುರಂತ-ಹಾನಿ ಉಂಟುಮಾಡುವ ಚಂಡಮಾರುತದೊಂದಿಗೆ ಬೆಸೆಯುವುದಕ್ಕೆ ಮಹಿಳೆಯರ ವಿರೋಧವಿದೆ’ ಎಂದು ಹವಾಮಾನ ತಜ್ಞರ ಏಕಪಕ್ಷೀಯ ಧೋರಣೆ ವಿರುದ್ಧ ಬಹಿರಂಗವಾಗಿ ಅರವತ್ತರ ದಶಕದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿಟ್ಟ ಮಹಿಳೆ ಅಮೆರಿಕೆಯ ಫ್ಲೋರಿಡಾದ ರಾಕ್ಸಿ ಬೋಲ್ಟನ್‌. ಈ ರೀತಿಯ ಹೆಸರುಗಳು ಮಹಿಳೆಯರ ಕುರಿತ ಅವಹೇಳನಕಾರಿ ಧೋರಣೆಯ ಪ್ರತಿಫ‌ಲನ. ಹಾಗಾಗಿ, ಇದು ಬದಲಾಗಬೇಕು. ಮಾತ್ರವಲ್ಲ ಹರಿಕೇನ್‌ ಶಬ್ದದಲ್ಲಿ ಇರುವ ಹರ್‌ (“ಹರ್‌’ ಅಂದರೆ “ಅವಳ’) ತೆಗೆದು ಹಿಮಿಕೇನ್‌ (ಹಿಮ್‌-ಅವನು) ಎಂದು ಹೆಸರಿಸಬೇಕೆಂದು ಆಕೆ ಒತ್ತಾಯಿಸಿದ್ದರು. “ಇಲ್ಲದಿದ್ದರೆ ಬೀದಿ, ಸೇತುವೆ ಮತ್ತು ಕಟ್ಟಡಗಳಿಗೆ ತಮ್ಮ ಹೆಸರಿಟ್ಟರೆ ಖುಷಿ ಪಡುವ ರಾಜಕಾರಣಿಗಳ ಹೆಸರನ್ನು ಈ ಚಂಡಮಾರುತಗಳಿಗೆ ಇಡಿ!’ ಎಂದೂ ಅವರು ಆಗ್ರಹಿಸಿದ್ದರು. ಆದರೆ, ಅದನ್ನು “ಬಾಲಿಶ’ ಎಂದು ಹವಾಮಾನ ಸಂಸ್ಥೆ ತಿರಸ್ಕರಿಸಿತ್ತು. ರಾಕ್ಸಿ ಹೋರಾಟ ಒಂದೂವರೆ ದಶಕದ ತನಕವೂ ಮುಂದುವರಿದಿತ್ತು.

ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.