ನಿನ್ನೆಯ ಅನ್ನವೇ ಇಂದಿನ ಚಿತ್ರಾನ್ನ
Team Udayavani, Mar 1, 2019, 12:30 AM IST
ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ, ಚಿಂತೆ ಏತಕೆ… ಈ ಹಾಡನ್ನು ನೀವೆಲ್ಲರೂ ಕೇಳಿರುತ್ತೀರಿ. ಇದನ್ನು ಸ್ವಲ್ಪ ರೂಪಾಂತರಿಸಿ ನಾವು, “ನಿನ್ನೆದ್ದು ಇವತ್ತಿಗೆ, ಇವತ್ತಿದ್ದು ನಾಳೆಗೆ…’ ಎಂದು ಆಗಾಗ ಹಾಡುತ್ತಿರುತ್ತೇವೆ. ಯಾಕೆ, ಏನು ಎಂದು ಅರ್ಥವಾಗಲಿಲ್ಲವೇ? ಬನ್ನಿ, ಯಾಕೆಂದು ಕೇಳುವವರಾಗಿ.
ಸರಳವಾಗಿ ಹೇಳುವುದಾದರೆ ನಿನ್ನೆಯ ಅಡುಗೆಯನ್ನು ಅದು ಇದ್ದಂತೆಯೇ ಅಥವಾ ಅದಕ್ಕೆ ಒಂದು ಹೊಸರೂಪವನ್ನು ಕೊಟ್ಟು ಮರುದಿನ ತಿನ್ನುವುದನ್ನೇ ನಾವು “ನಿನ್ನೆದ್ದು ಇವತ್ತಿಗೆ…’ ಎಂದು ಹೇಳುವುದು.
ಉದಾಹರಣೆಗೆ, ಕೆಲವು ಮನೆಗಳಲ್ಲಿ “ದಾಳಿತೋವೆ’ ಎಂಬ ಹೆಸರಿನಿಂದ ಕರೆಯಲ್ಪಡುವ ತೊಗರಿಬೇಳೆಯ ದಪ್ಪಸಾರು ಹೆಚ್ಚಾಗಿ ಮಾಡಲ್ಪಡುತ್ತದೆ. ಮನೆಗೆ ಯಾರಾದರೂ ನೆಂಟರು ಬರುತ್ತಾರೋ ಆ ದಿನ ದಾಳಿತೋವೆ, ಯಾರೂ ಬರುತ್ತಿಲ್ಲವೋ ಆ ದಿನವೂ ದಾಳಿತೋವೆ,
ದಿನಾ ಫಂಕ್ಷನ್ಗಳಲ್ಲಿ ಉಂಡು ಬೇಜಾರಾಗಿದೆಯೋ ಆ ದಿನ ರಾತ್ರಿ ಊಟಕ್ಕೆ ಸಿಂಪಲ… ಆಗಿ ದಾಳಿತೋವೆ. ಹೀಗಿರುವಾಗ ಎಲ್ಲರ ಅಚ್ಚು ಮೆಚ್ಚಿನ ಈ ಖಾದ್ಯವನ್ನು ಅಲ್ಲಿಂದಲ್ಲಿಗೆ ಮಾಡಲಾಗುತ್ತದೆಯೇ? ಎಷ್ಟೆಂದರೂ ಮರುದಿನಕ್ಕೆ ಸ್ವಲ್ಪ ಉಳಿದೇ ಉಳಿಯುತ್ತದೆ. ಏನಂದಿರಿ? ಬಿಸಾಡುವುದೇ? ಯೋಚಿಸಲೂ ಸಾಧ್ಯವಿಲ್ಲ! ಹೀಗಿರುವಾಗ ಮರುದಿನ ಅದು ತಾಳುವ ವಿವಿಧ ರೂಪಗಳನ್ನು ನೋಡಿಯೇ ಈ ಪದ್ಯ ಸೃಷ್ಟಿಯಾ ಯಿತು. ಮನೆಯಲ್ಲಿ ತಂದಿಟ್ಟ ತರಕಾರಿಗಳು ತುಂಬಾ ಇವೆಯೇ, ಸರಿ ಅದರಿಂದ ಮರುದಿನಕ್ಕೆ ಸಾಂಬಾರ್ ತಯಾರಾಗುತ್ತದೆ. ತರಕಾರಿ ಏನೂ ಇಲ್ಲ, ಬರೀ ಟೊಮ್ಯಾಟೋ ಮಾತ್ರ ಇದೆಯೇ, ಅದಕ್ಕೂ ನಾವು ಸಿದ್ಧ, ಮರುದಿನಕ್ಕೆ ಅದೇ ತೋವೆಯಿಂದ ಟೊಮ್ಯಾಟೋ ಸಾರು ತಯಾರು! ಫ್ರಿvj…ನಲ್ಲಿ ತರಕಾರಿ ಏನೂ ಇಲ್ಲವೇ, ಅದೇ ದಾಳಿತೋವೆಗೆ ಮರುದಿನ ಸಾಸಿವೆ ಕರಿಬೇವು-ತುಪ್ಪದ ಒಗ್ಗರಣೆ ಕೊಟ್ಟರಾಯಿತು, ಫ್ರೆಶ್ ಮಾಡಿದಷ್ಟೇ ರುಚಿಯಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ನಿನ್ನೆಯದ್ದು ಇವತ್ತಿಗೆ. ಇದರ ಪ್ರತಾಪ ಎಲ್ಲಿಯವರೆಗೆ ಎಂದರೆ ಒಂದೊಮ್ಮೆ ಮನೆಯ ಗಂಡಸರು ತರಕಾರಿ ತಂದು, “ಸಾಂಬಾರ್ ಮಾಡು’ ಎಂದರೆ ಆ ದಿನ ದಾಳಿತೋವೆ ಮಾಡಿ ಉಳಿದ ತೋವೆಯಿಂದ ಮರುದಿನವೇ ಸಾಂಬಾರ್ ಮಾಡುವುದು ಎನ್ನುವುದರವರೆಗೆ.
ಇದು ಕೇವಲ ಅಡುಗೆ ಮನೆಯ ವಿಷಯವಾಯಿತು. ನಮ್ಮ ತಂದೆಯ ಅಜ್ಜನ ಮನೆಯಲ್ಲಿ ದೊಡ್ಡ ಮಾವಿನ ತೋಟವಿದ್ದಿತ್ತು. ಒಮ್ಮೆಗೆ ಬಲಿತ ಹಣ್ಣುಗಳನ್ನೆಲ್ಲ ಕಿತ್ತು ರಾಶಿ ಹಾಕುತ್ತಿದ್ದರು. ಅದು ಹಣ್ಣಾದ ಹಾಗೇ ದಿನಾ ತಿನ್ನುವುದು ಎಂದು. ಇದರ ಮೇಲುಸ್ತುವಾರಿ ಅವರ ಅಜ್ಜನದ್ದು. ಸರಿ, ಅವರು ಒಂದು ದಿನ ಪರಿಮಳ ಬರಲಿಕ್ಕೂ ಹಣ್ಣುಗಳ ರಾಶಿಯಲ್ಲಿ ಕೈಯಾಡಿಸಿ ಒಳ್ಳೆಯ ಹಣ್ಣುಗಳನ್ನು ಮರುದಿನಕ್ಕಾಯಿತು ಎಂದು ಪಕ್ಕಕ್ಕಿಟ್ಟು, ಸ್ಪಲ್ಪ ಸ್ಪಲ್ಪ ಹಾಳಾದ ಹಣ್ಣುಗಳನ್ನು ಆ ದಿನಕ್ಕೆಂದು ತೆಗೆದಿಡುತ್ತಿದ್ದರು. ಮಕ್ಕಳು ಗಲಾಟೆ ಮಾಡದೆ ಅವುಗಳನ್ನೇ ತಿನ್ನಬೇಕು. ಮರುದಿನ ಆ ಎತ್ತಿಟ್ಟ ಹಣ್ಣುಗಳು ಕೊಳೆಯಲು ಶುರುವಾಗುತ್ತಿದ್ದವು. ಆ ದಿನ ಆ ಹಣ್ಣುಗಳನ್ನು ತಿನ್ನಲು ಕೊಟ್ಟು ಪುನಃ ಚೆನ್ನಾಗಿರುವ ಹಣ್ಣುಗಳನ್ನು ಮರುದಿನಕ್ಕೆಂದು ಎತ್ತಿಡಲಾಗುತ್ತಿತ್ತು. ಒಂದು ದಿನ ಕೊಳೆತ ಹಣ್ಣುಗಳನ್ನು ಬಿಸಾಡಿ ಚೆನ್ನಾಗಿರುವುದನ್ನೇ ತಿಂದರೆ ಮರುದಿನ ಅದು ಹಾಳಾಗುವುದನ್ನು ತಪ್ಪಿಸುವ ಯೋಚನೆ ಎಲ್ಲರಲ್ಲೂ ಇದ್ದಿತಾದರೂ ಅದನ್ನು ಅಜ್ಜನ ಬಳಿ ಹೇಳುವಷ್ಟು ಧೈರ್ಯ ಯಾರಲ್ಲೂ ಇರಲಿಲ್ಲ. ಹೀಗೆ ಪ್ರತಿವರ್ಷ ಮಾವಿನ ಸೀಸನ್ ಪೆಟ್ಟಾದ ಹಣ್ಣುಗಳೊಂದಿಗೇ ಪ್ರಾರಂಭವಾಗಿ ಅವುಗಳೊಂದಿಗೇ ಮುಗಿಯುತ್ತಿತ್ತು.
ಇನ್ನು ಕೆಲವು ವಿಚಾರಗಳಲ್ಲಿ ನಿನ್ನೆಗಿಂತ ನಿನ್ನೆದ್ದು ಇವತ್ತಿಗೆ ಹೆಚ್ಚು ರುಚಿಯಾಗಿರುತ್ತವೆ. ಉದಾಹರಣೆಗೆ ಹೇಳುವುದಾದರೆ ಬೆಲ್ಲ ಹಾಕಿ ಮಾಡುವ ಯಾವುದೇ ಪಾಯಸ. ಮಾಡಿದ ದಿನಕ್ಕಿಂತ ಮರುದಿನ ಅದರ ರುಚಿ ದುಪ್ಪಟ್ಟಾಗಿರುತ್ತದೆ. ನಾನಂತೂ ನಮ್ಮ ಮನೆಯಲ್ಲಿ ಯಾರದ್ದೇ ಬರ್ತ್ಡೇ ಇರಲಿ, ಹಿಂದಿನ ದಿನ ಸಂಜೆಯೇ ಎಲ್ಲರ ಇಷ್ಟದ ಗುಲಾಬ್ ಜಾಮೂನ್ ಮಾಡಿಡುತ್ತೇನೆ. ಜಾಮೂನಿನ ಪ್ಯಾಕೆಟ…ನಲ್ಲೇನೋ ಕರಿದ ಜಾಮೂನನ್ನು ಬಿಸಿಯಾದ ಸಕ್ಕರೆ ಪಾಕದಲ್ಲಿ ಮುಳುಗಿಸಿ ಅರ್ಧ ಗಂಟೆ ಬಿಟ್ಟು ತಿನ್ನಿ ಎಂದಿರುತ್ತದೆ. ಆದರೆ, ನಮಗೆಲ್ಲರಿಗೋ ಅದನ್ನು ರಾತ್ರಿಯಿಡೀ ಪಾಕದಲ್ಲಿ ತೇಲಿಸಿ ಮುಳುಗಿಸಿ ಮರುದಿನ ನಿನ್ನೆದ್ದು ಇವತ್ತಿಗೆ ಮಾಡಿ ತಿಂದರೇ ಖುಷಿ !
ಇನ್ನು ನಮ್ಮಲ್ಲೆಲ್ಲ ಬಳಕೆಯಲ್ಲಿರುವ ಕ್ರಮವೆಂದರೆ ಹಿಂದಿನ ದಿನದ ಅನ್ನ ಉಳಿದಿದ್ದರೆ ಮರುದಿನ ಬೆಳಿಗ್ಗೆ ತಿಂಡಿಗೆ ಚಿತ್ರಾನ್ನ ಮಾಡುವುದು. ಹೀಗೆ ಒಮ್ಮೆ ಗೆಳತಿಯೊಡನೆ ಮಾತನಾಡುವಾಗ ತಾನು ಆ ದಿನ ತಿಂಡಿಗೆ “”ಲೆಮನ್ ರೈಸ್ ಮಾಡಿದ್ದೇನೆ” ಎಂದಳು. ಲೆಮನ್ ರೈಸ್ ಎಂದರೆ ನಮ್ಮ ಚಿತ್ರಾನ್ನ ಎಂದು ನನಗೆ ಗೊತ್ತಿಲ್ಲವೇ? “”ಓ, ನಿನ್ನೇದು ಅನ್ನ ತುಂಬಾ ಉಳಿದಿತ್ತೆಂದು ಕಾಣುತ್ತದೆ ಅಲ್ಲವಾ?” ಎಂದು ಸಹಜವಾಗೇ ಕೇಳಿದೆ. ಅದಕ್ಕೆ ಆಕೆ, ನಾವೆಲ್ಲ ಹಿಂದಿನ ದಿನದ್ದು ಉಳಿದಿದ್ದು ಏನೂ ತಿನ್ನುವುದೇ ಇಲ್ಲವೆಂದೂ, ಹಿಂದಿನ ದಿನದ್ದೇಕೆ ಮಧ್ಯಾಹ್ನ ಮಾಡಿದ್ದು ರಾತ್ರಿ ತಿನ್ನಲ್ಲವೆಂದೂ, ಚಿತ್ರಾನ್ನಕ್ಕೆ ಎಂದೇ ಬೆಳಿಗ್ಗೆ ಫ್ರೆಶ್ ಆಗೇ ಅನ್ನ ಮಾಡಿ¨ªೆಂದೂ ದುರುಗುಟ್ಟಿ ಹೇಳಿದಳು. ಅಯ್ಯಬ್ಟಾ! ನನಗೋ ಫ್ರೆಶ್ ಅನ್ನದಲ್ಲಿ ಚಿತ್ರಾನ್ನ ಏಕೋ ಊಹಿಸಿಕೊಳ್ಳಲಾಗಲಿಲ್ಲ.
ನನ್ನ ಅಜ್ಜಿಯೋ ಈಗಲೂ ಹಿಂದಿನ ದಿನದ ಅನ್ನವಿದ್ದರೆ ಅದಕ್ಕೆ ತೆಂಗಿನೆಣ್ಣೆ ಉಪ್ಪು ಹಾಕಿ ತಿನ್ನುತ್ತಾರೆ. “”ಬೇಡ ಅಜ್ಜಿ, ಆ ಅನ್ನ ನಿನಗೆ ಗ್ಯಾಸ್ಟ್ರಿಕ್ ಆಗುತ್ತದೆ, ಬೇಕಿದ್ದರೆ ಇವತ್ತಿನ ಬಿಸಿ ಅನ್ನಕ್ಕೆ ಎಣ್ಣೆ, ಉಪ್ಪು ಹಾಕಿ ಊಟಮಾಡು” ಎಂದರೆ, “”ಹೋಗಿರೋ, ತಂಗಳನ್ನದ ರುಚಿ ಬಿಸಿ ಅನ್ನಕ್ಕೆ ಬರಲ್ಲ” ಎಂದು ನಮ್ಮ ನಿನ್ನೆದ್ದು ಇವತ್ತಿಗೆ ಗುಂಪಿಗೆ ಸೇರಿ ಬಿಡುತ್ತಾರೆ.
ನಮ್ಮಲ್ಲಿ ಇಡ್ಲಿ ಅಥವಾ ದೋಸೆಗೆ ಚಟ್ನಿ ತಯಾರಿಸಿದ್ದು ತುಂಬ ಉಳಿದಿದ್ದಲ್ಲಿ ನಾನು ಅದಕ್ಕೆ ಮರುದಿನ ಅಕ್ಕಿಹಿಟ್ಟು, ನೀರುಳ್ಳಿ ಸೇರಿಸಿ “ಸಾನ್ನಾ ಪೊಳ್ಳೋ’ ಎಂಬ ಸಣ್ಣ ಸಣ್ಣ ದೋಸೆಯನ್ನು ಊಟಕ್ಕೆ ಸೈಡ್ ಡಿಶ್ ಆಗಿ ತಯಾರಿಸುವುದಿದೆ. ಇದು ನನ್ನ ಮಗನಿಗೆ ತುಂಬಾ ಇಷ್ಟ. ಅದಕ್ಕೆ ಅವನು ಇಡ್ಲಿ , ದೋಸೆ ಮಾಡುವಾಗ “”ಅಮ್ಮಾ, ಚಟ್ನಿ ತುಂಬಾ ಮಾಡಮ್ಮ, ನಾಳೆ ಸಾನ್ನಾ ಪೊಳ್ಳೋ ಮಾಡಬಹುದು” ಎನ್ನುತ್ತಾನೆ, ಅದನ್ನು ಹಿಂದಿನ ದಿನದ ಚಟ್ನಿ ಇಲ್ಲದೇ ಫ್ರೆಶ್ ಆಗೇ ಮಾಡಬಹುದು ಎಂಬ ಕಲ್ಪನೆಯೇ ಇಲ್ಲದೆ!
ಹಿಂದೆಲ್ಲ ಮನೆ ತುಂಬಾ ಜನ, ಅನ್ನ, ತಿಂಡಿ ಏನಾದರೂ ಹೆಚ್ಚಾಗಿ ಉಳಿದರೆ ಮನೆಯ ದನಕ್ಕೋ, ನಾಯಿಗೋ ಹಾಕುತ್ತಿದ್ದರು. ಆದರೆ, ಈಗಿನ ಕಾಲದಲ್ಲಿ ನಾಯಿ, ದನ ಹುಡುಕಿಕೊಂಡು ಹೋಗಬೇಕು. ಪರಿಸ್ಥಿತಿ ಹೀಗಿರುವಾಗ ಎಲ್ಲರೂ ನಿನ್ನೆದ್ದು ಇವತ್ತಿಗೆ ಎನ್ನದೇ ಬೇರೆ ಉಪಾಯ ವಿಲ್ಲವಾಗಿದೆ. ಆದರೆ, ವೈದ್ಯರು ಹೇಳುವ ಪ್ರಕಾರ ಆದಷ್ಟು ತಾಜಾ ಆಹಾರ ಸೇವಿಸುವುದು ದೇಹಾರೋಗ್ಯಕ್ಕೆ ಉತ್ತಮ. ಹಾಗಾಗಿ ನಾವು ಕೂಡ ಈಗ ನಮ್ಮ “ನಿನ್ನೆದ್ದು ಇವತ್ತಿಗೆ’ ಹಾಡನ್ನು “ಇವತ್ತಿದ್ದು ಇವತ್ತಿಗೆ’ ಎಂದು ಬದಲಾಯಿಸಿದ್ದೇವೆ. ನೀವು ಕೂಡ ತಾಜಾ ತಿನ್ನಿ ತಾಜಾ ಆಗಿರಿ!
ಶಾಂತಲಾ ಎನ್. ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA