ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ
ಎಲ್ಲ ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಮಹಾದೇವ ಸೂಚನೆ
Team Udayavani, May 14, 2019, 4:47 PM IST
ಎಲ್ಲ ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಮಹಾದೇವ ಸೂಚನೆ
ಬೀದರ: ಎಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತದವೋ ಅಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ಬರ ಎದುರಾದ ಈ ವೇಳೆಯಲ್ಲಿ ಜನರಿಗೆ ನೀರು ಕೊಡುವುದು ನಮ್ಮ ಆದ್ಯ ಕರ್ತವ್ಯ. ಎಲ್ಲ ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಈ ವಿಷಯದಲ್ಲಿ ಬೇಜವಾಬ್ದಾರಿ ವಹಿಸಿದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸೃಜನೆ ಸಮಸ್ಯೆ ಪರಾಮರ್ಶಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಜಂಟಿಯಾಗಿ ಎಲ್ಲ ಹಳ್ಳಿಗಳಲ್ಲಿ ಸುತ್ತಿ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿಯೊಂದು ಕಡೆಗಳಲ್ಲಿ ಬಾಡಿಗೆ ಆಧಾರದ ಮೇಲೆ ಪಡೆಯಲಾದ ಖಾಸಗಿ ಕೊಳವೆಬಾವಿಗಳ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ಬಿಲ್ಗಳ ಪಾವತಿಗೆ ಬೇಗ ಕ್ರಮ ವಹಿಸಬೇಕು ಎಂದು ಹೇಳಿದರು.
ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕಿನ ತಹಶೀಲ್ದಾರ್ಗೆ 50 ಲಕ್ಷ ರೂ. ಗಳಂತೆ ಒಟ್ಟು 250 ಲಕ್ಷ ರೂ. ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಹಕ ಅಭಿಯಂತರರಿಗೆ ಕುಡಿಯುವ ನೀರಿನ 549 ಕಾಮಗಾರಿ ಕೈಗೊಳ್ಳಲು 433.47 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅನಿವಾರ್ಯತೆ ಇರುವ ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಅಂದಾಜು 56 ಗ್ರಾಮಗಳಿಗೆ 64 ಟ್ಯಾಂಕರಗಳ ಮೂಲಕ 198 ಟ್ರಿಪ್ ಪ್ರತಿ ದಿನ ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
•ತಾಲೂಕುವಾರು ಮಾಹಿತಿ: ಔರಾದ ತಾಲೂಕಿನಲ್ಲಿ 123 ಹಳ್ಳಿಗಳಿಗೆ 37 ಖಾಸಗಿ ಕೊಳವೆಬಾವಿ ಖರೀದಿಸಲಾಗಿದೆ. ಬೀದರ ತಾಲೂಕಿನಲ್ಲಿ 7 ಹಳ್ಳಿಗಳಿಗೆ 17 ಖಾಸಗಿ ಕೊಳವೆಬಾವಿ, ಭಾಲ್ಕಿ ತಾಲೂಕಿನಲ್ಲಿ 41 ಹಳ್ಳಿಗಳಿಗೆ 64, ಬಸವಕಲ್ಯಾಣ ತಾಲೂಕಿನಲ್ಲಿ 18 ಹಳ್ಳಿಗಳಿಗೆ 23, ಹುಮನಾಬಾದ ತಾಲೂಕಿನಲ್ಲಿ 5 ಹಳ್ಳಿಗಳಿಗೆ 5 ಖಾಸಗಿ ಕೊಳವೆಬಾವಿ ಖರೀದಿಸಲಾಗಿದೆ ಎಂದು ಆಯಾ ತಾಲೂಕುಗಳ ತಹಶೀಲ್ದಾರರು ಸಭೆಗೆ ಮಾಹಿತಿ ನೀಡಿದರು.
•11 ಮೇವು ಬ್ಯಾಂಕ್: ಜಿಲ್ಲೆಯಲ್ಲಿ ಒಟ್ಟು 11 ಮೇವು ಬ್ಯಾಂಕ್ಗಳನ್ನು ತೆರೆಯಲಾಗಿದೆ. ಇದರಲ್ಲಿ ಒಟ್ಟು 219.70 ಮೆಟ್ರಿಕ್ ಟನ್ ಮೇವು ಸಂಗ್ರಹವಾಗಿದೆ. 199.10 ಮೆಟ್ರಿಕ್ ಟನ್ ಮೇವು ಖರ್ಚಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 107710 ಮೆಟ್ರಿಕ್ ಟನ್ ಮೇವು ಲಭ್ಯ ಇದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಅಗತ್ಯವಿದ್ದರೆ ಗೋಶಾಲೆ ಆರಂಭಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
•ಕಾಡು ಪ್ರಾಣಿಗಳಿಗೆ ನೀರು: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಗೂ ನೀರಿನ ತೊಂದರೆಯಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಗಮನ ಕೊಡಬೇಕು. ಜಿಲ್ಲೆಯಲ್ಲಿ ಎಲ್ಲೆಲ್ಲೆ ಎಷ್ಟು ಕಾಡು ಪ್ರಾಣಿಗಳಿವೆ? ಎಷ್ಟು ಸಿಮೆಂಟ್ ತೊಟ್ಟಿಗಳನ್ನು ಹಾಕಬೇಕಾಗುತ್ತದೆ ಎಂಬುದರ ಬಗ್ಗೆ ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಇದಕ್ಕಾಗಿ 9 ಲಕ್ಷ ರೂ.ಗಳು ಬೇಕಾಗುತ್ತದೆ ಎಂದು ಅರಣ್ಯ ಅಧಿಕಾರಿ ಪ್ರತಿಕ್ರಿಯಿಸಿದರು.
•ರೋಗಬಾರದಂತೆ ನೋಡಿಕೊಳ್ಳಿ: ಬಾವಿ ಮತ್ತು ಟ್ಯಾಂಕರ್ ಮೂಲಕ ಪೂರೈಸುವಾಗ ಆಕಸ್ಮಿಕವಾಗಿ ನೀರು ಕಲುಷಿತಗೊಂಡು ಕೆಲವೊಮ್ಮೆ ಕಾಯಿಲೆ ಬರುವ ಸಾದ್ಯತೆ ಇರುತ್ತದೆ. ಈ ಬಗ್ಗೆ ಎಲ್ಲ ತಾಲೂಕುಗಳಲ್ಲಿ ಆರೋಗ್ಯಾಧಿಕಾರಿಗಳು ಗಮನ ಕೊಡಬೇಕು. ಆಯಾ ಕಡೆಗಳಲ್ಲಿ ಬಾವಿಗಳು, ಟ್ಯಾಂಕುಗಳಲ್ಲಿನ ನೀರನ್ನು ಕಾಲಕಾಲಕ್ಕೆ ಪರೀಕ್ಷಿಸಿ ಕುಡಿಯಲು ಶುದ್ಧವಾಗಿದೆಯೇ ಇಲ್ಲೋ ಎಂಬುದರ ಬಗ್ಗೆ ವರದಿ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
•ಸಮಸ್ಯೆ ಇರುವ ಸ್ಥಳಗಳ ವರದಿ ನೀಡಿ: ಬೀದರ ನಗರಸಭೆ ವ್ಯಾಪ್ತಿಯಲ್ಲಿ ಹೊಸ ಕೊಳವೆಬಾವಿ ಕೊರೆಸಲು ಅನುಮತಿ ನೀಡುತ್ತಿಲ್ಲ. ಇದರಿಂದ ಸಹಜವಾಗಿ ಕೆಲ ಪ್ರದೇಶಗಳಲ್ಲಿ ನೀರಿಗಾಗಿ ಸಮಸ್ಯೆಯಾಗಿರಬಹುದು. ಯಾವ ಯಾವ ಕಡೆಗಳಲ್ಲಿ ನೀರಿಗೆ ಸಮಸ್ಯೆಯಾಗಿದೆ ಎಂದು ಗುರುತಿಸಿ ಆಯಾ ಸ್ಥಳಗಳ ಪಟ್ಟಿ ಸಿದ್ದಪಡಿಸಿ ವರದಿ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
•ಸಹಾಯವಾಣಿ ಕರೆಗೆ ಸ್ಪಂದಿಸಿ: ಬರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ ಸಹಾಯವಾಣಿ ಕೇಂದ್ರಗಳು ದಿನದ 24 ಗಂಟೆಯೂ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಸ್ವೀಕರಿಸುವ ದೂರುಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಅಧಿಕಾರಿಗಳು ಪ್ರ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಹಾಯವಾಣಿ ಕೇಂದ್ರಗಳಿಗೆ ಬರುವ ಎಲ್ಲ ಕರೆಗಳ ಮಾಹಿತಿ ದಾಖಲಿಸಬೇಕು. ಜನರು ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಲು ಅನುಕೂಲವಾಗುವಂತೆ ಸಹಾಯವಾಣಿಗಳಿಗೆ ಹೆಚ್ಚಿನ ಪ್ರಚಾರ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ವಾರ್ತಾಧಿಕಾರಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಡಾ.ಶಂಕರ ವಣಕ್ಯಾಳ, ಗ್ಯಾನೇಂದ್ರಕುಮಾರ ಗಂಗವಾರ, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ