ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಪರಿಶೀಲನೆ
Team Udayavani, May 15, 2018, 2:43 PM IST
ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಮೇ 15ರಂದು ಬೆಳಗ್ಗೆ 8:00 ಗಂಟೆಗೆ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದರು.
ನಗರದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿನ ಸ್ಟ್ರಾಂಗ್ ರೂಮ್ ಹಾಗೂ ಮತ ಎಣಿಕೆ ಕೊಠಡಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಒಂದೇ ಸ್ಥಳದಲ್ಲಿ ನಡೆಯಲಿದೆ. ಸುರಪುರ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಕಾಲೇಜಿನ ಕೆಳ ಮಹಡಿಯಲ್ಲಿ ನಡೆಯಲಿದ್ದು, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮೊದಲನೇ ಮಹಡಿಯಲ್ಲಿ ಜರುಗಲಿದೆ. ಯಾದಗಿರಿ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದರು.
ಒಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 2 ಕೊಠಡಿಗಳಲ್ಲಿ ಕೈಗೊಳ್ಳಲಾಗುವುದು. ಇವುಗಳಲ್ಲಿ ಒಟ್ಟು 14 ಟೇಬಲ್ಗಳು ಮತ್ತು 1 ಮತದಾನ ಖಾತ್ರಿ ಯಂತ್ರದ ಮತ ಚೀಟಿಗಳನ್ನು ಎಣಿಸಲು ಹಾಗೂ ಪೋಸ್ಟಲ್ ಬ್ಯಾಲೆಟ್ಗಳನ್ನು ಎಣಿಕೆ ಮಾಡುವ ಸಲುವಾಗಿ ಒಂದು ಕೌಂಟರ್ ಇರುತ್ತದೆ. ಒಂದು ಟೇಬಲ್ ಚುನಾವಣಾಧಿಕಾರಿ ಉಪ ಚುನಾವಣಾಧಿಕಾರಿಗೆ ಮೀಸಲಾಗಿರುತ್ತದೆ. ಮತ ಎಣಿಕೆಯ 14 ಟೇಬಲ್ಗಳಲ್ಲಿ ಪ್ರತಿಯೊಂದಕ್ಕೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ಇರುತ್ತಾರೆ. ಇವರಿಗೆ ಮೇ 15ರ ಬೆಳಗ್ಗೆ ಆಯಾ ಕ್ಷೇತ್ರಗಳ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ರ್ಯಾಂಡಮ್ ಆಗಿ ಕ್ಷೇತ್ರ ಹಂಚಿಕೆ ಮಾಡಲಾವುದು ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯಕ್ಕೆ ಒಟ್ಟು 320 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದ್ದು, ಭದ್ರತೆಗಾಗಿ 500ಕ್ಕೂ ಹೆಚ್ಚು
ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕರು ಹಾಗೂ ಕೇಂದ್ರ ಭದ್ರತಾ ಪಡೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದ ವಾಹನ ಮತ್ತು ವ್ಯಕ್ತಿಗಳಿಗೆ ಪ್ರವೇಶ ಇಲ್ಲ.
ಆಯಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಬ್ಯಾರಿಕೇಡ್ ಹಾಕಲಾಗಿದ್ದು, ಒಂದು ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ನೇಮಕವಾದ ಸಿಬ್ಬಂದಿ ಅಥವಾ ಪಕ್ಷಗಳ ಏಜೆಂಟರುಗಳು ಮತ್ತೂಂದು ಕ್ಷೇತ್ರದ ಕೇಂದ್ರಕ್ಕೆ ಹೋಗುವಂತಿಲ್ಲ. ಮತ ಎಣಿಕೆಯ 8 ಕೊಠಡಿಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 8:00 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಈ ಸಮಯದೊಳಗೆ ಬರುವ ಎಲ್ಲಾ ಅಂಚೆ ಪತ್ರಗಳನ್ನೂ ಎಣಿಕೆ ಮಾಡಲಾಗುವುದು. ನಂತರ ಬರುವ ಅಂಚೆ ಮತಪತ್ರಗಳನ್ನು ಪರಿಗಣಿಸುವುದಿಲ್ಲ. ತದನಂತರ 8:30ರಿಂದ ಕಂಟ್ರೋಲ್ ಯುನಿಟ್ ಮತ ಎಣಿಕೆ ಆರಂಭವಾಗಲಿದೆ. ಕೊನೆಯಲ್ಲಿ ರ್ಯಾಂಡಮ್ ಆಗಿ ಆಯ್ಕೆ ಮಾಡಲಾದ ಮತಗಟ್ಟೆಯ ಒಂದು ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್)ದ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಧ್ವನಿವರ್ಧಕದಲ್ಲಿ ಫಲಿತಾಂಶ: ಮತ ಎಣಿಕೆಯ ಕೇಂದ್ರದ ಸುತ್ತ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರತಿ ಸುತ್ತಿನ ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.
ಅಭಿನಂದನೆ: ಜಿಲ್ಲೆಯ 1,129 ಮತಗಟ್ಟೆಗಳಲ್ಲಿ ಶಾಂತಿಯುವಾಗಿ ಮತದಾನ ನಡೆದಿದೆ. ಇದಕ್ಕೆ ಕಾರಣಿಕರ್ತರಾದ ಎಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಚುನಾವಣಾಧಿ ಕಾರಿಯಾದ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ| ಬಿ.ಎಸ್. ಮಂಜುನಾಥ ಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ