ಕಡೆಗಣಿಸದಿರಿ ಕುಷ್ಠರೋಗಿಗಳನು
Team Udayavani, Aug 7, 2018, 3:57 PM IST
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ವಾಸಿಸುವ ಕುಷ್ಠರೋಗ ಸಂತ್ರಸ್ತರು ಅನಿವಾರ್ಯವಾಗಿ ಇಲ್ಲಗಳ ಮಧ್ಯೆಯೇ ವಾಸಿಸುತ್ತಿದ್ದಾರೆ. ಒಂದೆಡೆ ಸಮಾಜದ ಇತರೆ ಜನ ಇವರನ್ನು ಕಂಡರೇ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು, ಸಮರ್ಪಕ ಸೌಕರ್ಯ ನೀಡಬೇಕಿರುವ ಸರ್ಕಾರ ಕರ್ತವ್ಯ ಪ್ರಜ್ಞೆ ಮರೆತಿರುವುದರಿಂದ ಇವರ ಸ್ಥಿತಿ ಅಧೋಗತಿಯಾಗಿದೆ.
ಯಾದಗಿರಿ ಹೊರ ವಲಯದಲ್ಲಿ ಇರುವ ಕುಷ್ಠರೋಗಿಗಳ ಬಡಾವಣೆ ಅಕ್ಷರಶಃ ಹಾಳು ಕೊಂಪೆಯಾಗಿ ಮಾರ್ಪಟ್ಟಿದ್ದು, ಇಲ್ಲಿಗೆ ಭೇಟಿ ನೀಡಿದರೇ ಇದೇನಪ್ಪ ಇದು ಯಾವ ಗ್ರಹ ಎನ್ನುವಂತೆ ಕಾಣುತ್ತಿದೆ.
ಸುಮಾರು 30 ವರ್ಷಗಳ ಹಿಂದೆ 52 ವಸತಿ ಗೃಹ ನಿರ್ಮಿಸಿ ಪ್ರತ್ಯೇಕ ಬಡಾವಣೆ ನಿರ್ಮಿಸಲಾಗಿತ್ತು. ಆ ಮನೆಗಳೆಲ್ಲ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದರೂ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಸಂತ್ರಸ್ತರಾದ ರಾಯಪ್ಪ, ಭೀಮಶಪ್ಪ, ಮಾರುತಿ, ಬಾಬುಸಾಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಬಡಾವಣೆಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭ ಹಂತದಲ್ಲಿದೆ. ಮಳೆ ಬಂದಾಗಲೊಮ್ಮೆ ಮನೆ
ಎದುರು ನೀರು ಸಂಗ್ರಹವಾಗಿ ಬಡಾವಣೆ ರೆಯಂತಾಗುತ್ತಿದೆ.
ಇಲ್ಲಿನ ಕೆಲವರಿಗೆ ಮಾತ್ರ ಪಿಂಚಣಿ ಸೌಲಭ್ಯವಿದ್ದು, ಇನ್ನು ಕೆಲವರು ಈ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಉಚಿತ ಅಕ್ಕಿ ಹೊರತುಪಡಿಸಿ ಸರ್ಕಾರದ ಮತ್ಯಾವುದೇ ಸೌಕರ್ಯವೂ ತಮಗೆ ದೊರೆಯುತ್ತಿಲ್ಲ ಎನ್ನುತ್ತಾರೆ ಸಂತ್ರಸ್ತರು. ವಾಸಿಸಲು ಸೂಕ್ತ ಸೌಕರ್ಯಗಳಿಲ್ಲದೇ ಬಡಾವಣೆಯಲ್ಲಿ ವಾಸಿಸದೆ ಕೆಲವರು ಬೇಡಿಕೊಳ್ಳುವ ವೃತ್ತಿಯಲ್ಲಿ ತೊಡಗಿ ಬೇರೆ ನಗರ ಪ್ರದೇಶಗಳಿಗೆ ತೆರಳಿ ಕೊಳಚೆ ಪ್ರದೇಶಗಳಲ್ಲಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಕುಷ್ಠ ರೋಗಿಗಳ ಬಡಾವಣೆಗೆ 30 ವರ್ಷದಿಂದ ವಿದ್ಯುತ್ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಕತ್ತಲಲ್ಲೇ ಕಾಲ ಕಳೆಯುವಂತಾಗಿದ್ದು, ನಮ್ಮನ್ನು ಮಾನವರಂತೆ ಕಾಣಲಾಗುತ್ತಿಲ್ಲ, ಅಡವಿಯಲ್ಲಿ ಇದ್ದಂತೆ ಭಾಸವಾಗುತ್ತಿದೆ ಎಂದು ಇಲ್ಲಿನ ಜನ ಗೋಳು ತೋಡಿಕೊಂಡಿದ್ದಾರೆ.
ಹಲವು ಕೊರತೆಗಳ ಮಧ್ಯೆ ವಾಸವಾಗಿರುವ ಇವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ವಾರಕ್ಕೊಮ್ಮೆ ಆಗಮಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವುದೇ ಖುಷಿ ಪಡುವ ವಿಷಯ. ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ಕುಷ್ಠರೋಗಿಗಳ ಬಗ್ಗೆ ಜಿಲ್ಲಾಡಳಿತ ಕಾಳಜಿ ವಹಿಸಿ ಅಗತ್ಯ ಸೌಕರ್ಯ ಒದಗಿಸಲು ಮುಂದಾಗಬೇಕಿದೆ.
ಕುಷ್ಠರೋಗ ಮೈಕೋ ಬ್ಯಾಕ್ಟಿರಿಯಾ, ಲೆಪ್ರೋಮತೊಸಿಸ್ ಎನ್ನುವ ರೋಗಾಣುವಿನಿಂದ ಹರಡುವ ಕಾಯಿಲೆಯಾಗಿದ್ದು, ನಿಧಾನವಾಗಿ ಹರಡುವತ್ತದೆ. ಇದಕ್ಕೆ ಗುರಿಯಾದವರು ನಿರ್ಲಕ್ಷ್ಯ ತೋರಿದರೆ ದೇಹದ ಅಂಗಾಂಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ಆರು ತಿಂಗಳು ಮತ್ತು ಒಂದು ವರ್ಷದ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಬಹುದು.
ಪ್ರಸ್ತುತ ಬಡಾವಣೆಯಲ್ಲಿ ನೆಲೆಸಿರುವ ಎಲ್ಲಾ ಸಂತ್ರಸ್ತರ ರೋಗ ವಾಸಿಯಾಗಿದ್ದು, ಚರ್ಮದ ಸ್ಪರ್ಶ ಪ್ರಜ್ಞೆಯಿಲ್ಲದಿರುವುದು ಸಾಮಾನ್ಯವಾಗಿದೆ. ಕಾಲಕ್ಕೆ ತಕ್ಕಂತೆ ಅವರಿಗೆ ಉಪಚಾರ ಅಗತ್ಯವಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.
ಕುಷ್ಠರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚರ್ಮ ಸ್ಪರ್ಶ ಕಳೆದುಕೊಂಡಿದ್ದರಿಂದ ಗಾಯಗಳಾಗಿದ್ದು ಗಮನಕ್ಕೆ ಬರೋದಿಲ್ಲ. ಸುಟ್ಟು ಗಾಯವಾದ ಮೇಲೆಯೇ ಅವರಿಗೆ ಕಾಣಿಸುತ್ತದೆ. ಇದಕ್ಕೆ ಆರು ತಿಂಗಳಿಂದ ಒಂದು ವರ್ಷದವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಯಾದಗಿರಿಯಲ್ಲಿ ಬಹುತೇಕರು ಕುಷ್ಠರೋಗದಿಂದ ಗುಣಮುಖವಾಗಿದ್ದಾರೆ. ಅಂಗಾಂಗ ವೈಕಲ್ಯರಿಗೆ ಸೂಕ್ತ ಸಲಕರಣೆ ವಿತರಿಸಲಾಗಿದೆ.
ಡಾ| ಭಗವಂತ ಅನವಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ
ಕುಷ್ಠರೋಗಿಗಳಿಗೆ ಜಿಲ್ಲಾಡಳಿತ ಸೂಕ್ತ ಸೌಕರ್ಯಗಳನ್ನು ಕಲ್ಪಿಸದೇ ಇರುವುದು ನೋವಿನ ಸಂಗತಿ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಜನರನ್ನು ಸರ್ಕಾರ ಕಡೆಗಣಿಸಬಾರದು. ಮಾನವೀಯ ದೃಷ್ಟಿಯಿಂದ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಕುಮಾರ ಬಳಿಚಕ್ರ,
ರಾಷ್ಟ್ರೀಯ ಮಾನವ ಹಕ್ಕುಗಳ ಉ.ಕ ಅಧ್ಯಕ್ಷ
ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮಳೆ ಬಂದರೆ ಸೋರುತ್ತಿವೆ. ಸರಿಯಾಗಿ ನೀರು ಸಿಗಲ್ಲ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕೋ ಗೊತ್ತಾಗ್ತಿಲ್ಲ. ಆದಷ್ಟು ಬೇಗ ನಮಗೆ ಮನೆ ನಿರ್ಮಿಸಿ ಕೊಡಿ.
ಜಗದೇವಿ, ಸ್ಥಳೀಯ ನಿವಾಸಿ
ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ