ಬೋಟ್ನಲ್ಲಿ ಗರ್ಭಿಣಿ ದಾಟಿಸಿದ ಅಧಿಕಾರಿಗಳ ತಂಡ
Team Udayavani, Aug 17, 2018, 10:53 AM IST
ಕಕ್ಕೇರಾ: ಆಕೆ ತುಂಬು ಗರ್ಭಿಣಿ – ಎರಡು – ಮೂರು ದಿನಗಳಲ್ಲಿಯೇ ಹೆರಿಗೆಯಾಗುವ ಲಕ್ಷಣ ಕಾಣಿಸಿತು. ಆದರೆ ಕೃಷ್ಣಾನದಿ ದಾಟಬೇಕು ಎಂದರೆ ಪ್ರವಾಹ. ಹೀಗಾಗಿ ಗ್ರಾಮಸ್ಥರು ಬೇರೆ ದಾರಿ ತೋಚದೆ ದೂರವಾಣಿ ಕರೆ ಮಾಡಿದಾಗ ಸ್ಪಂದಿಸಿದ ಅಧಿಕಾರಿಗಳ ತಂಡ ಗುರುವಾರ ಕೃಷ್ಣಾನದಿಗೆ ಬೋಟ್ ಇಳಿಸಿ ನೀಲಕಂಠರಾಯನ ಗಡ್ಡಿಯ ಪೂಜಮ್ಮ ಪೂಜಪ್ಪ ಎಂಬಾಕೆಯನ್ನು ಕರೆತಂದು ಸಾಹಸ ಮೆರೆದರು. ಈಗಷ್ಟೇ ಪ್ರವಾಹ ಇಳಿಮುಖವಾಗಿತ್ತು.
ಇದರಿಂದ ಖುಷಿಯಲ್ಲಿದ್ದ ಅಲ್ಲಿನ ಜನರಿಗೆ ಮತ್ತೆ ಪ್ರವಾಹ ಎದುರಾಗಿ ಸಂಪರ್ಕ ಕಡಿತವಾಗಿ ಸಮಸ್ಯೆ ಉದ್ಭವಿಸಿದೆ. ಇದೆಲ್ಲವೂ ಮಹಾರಾಷ್ಟ್ರದಲ್ಲಿ ವ್ಯಾಪಾಕ ಮಳೆ ಸುರಿಯುತ್ತಿದ್ದ ಪರಿಣಾಮ ಆಲಮಟ್ಟಿ ಜಲಾಶಯ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ 13 ಕ್ರಸ್ಟ್ಗೇಟ್ ಮೂಲಕ 1.30 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಹಾಗಾಗಿ ಕೃಷ್ಣಾನದಿಯಲ್ಲಿ ಪ್ರವಾಹ ಬಂದಿದ್ದರಿಂದ ನೀಲಕಂಠರಾಯನಗಡ್ಡಿ ಜನರಿಗೆ ಸಮಸ್ಯೆ ಎದುರಾಗಿದೆ. ಸುರಪುರ ತಾಲೂಕು ಅಗ್ನಿ ಶಾಮಕದಳ ಅಧಿ ಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಜ್ವರದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳನ್ನು ಬೋಟ್ ಮೂಲಕ
ಸುರಕ್ಷಿತವಾಗಿ ಕೃಷ್ಣಾ ನದಿ ದಾಟಿಸಿ ಕಕ್ಕೇರಾ ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ.
ಈ ಹಿಂದೇ 2013ರಲ್ಲಿ ಭಾರಿ ಪ್ರವಾಹ ಇದ್ದಾಗ ಯಲ್ಲಮ್ಮ ಎಂಬಾಕೆ ಅಲ್ಲಿನ ಗ್ರಾಮಸ್ಥರ ಸಹಾಯದೊಂದಿಗೆ ಈಜುಗಾಯಿ ಮೂಲಕ ಈಜಿ ಕೃಷ್ಣಾ ನದಿ ದಾಟಿದ್ದಳು. ಆದರೆ ಈ ಬಾರಿ ಸ್ವತಃ ಗ್ರಾಮಸ್ಥರೇ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಬೋಟ್ನೊಂದಿಗೆ ಕರೆತರಲು ಸಾಧ್ಯವಾಗಿದೆ. ನೀಲಕಂಠರಾಯನಗಡ್ಡಿಯಲ್ಲಿ ಸರಕಾರಿ ಶಾಲೆಯೂ ಇದೆ. ಶಿಕ್ಷಕ ಬಸನಗೌಡ ಪಾಟೀಲ ಅವರು ಶಾಲೆಯಲ್ಲಿಯೇ ವಾಸ್ತವ್ಯ ಇದ್ದು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.
ಎಸಿ ಭೇಟಿ: ನೀಲಕಂಠರಾಯನ ಗಡ್ಡಿ ಕೃಷ್ಣಾನದಿ ದಡಕ್ಕೆ ಸಹಾಯಕ ಆಯುಕ್ತ ಮಂಜುನಾಥಸ್ವಾಮಿ ಗುರುವಾರ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಂದ ವಾಸ್ತವ ಸ್ಥಿತಿ ಅರಿತುಕೊಂಡರು.
ಬೋಟ್ ಮೂಲಕ ಜನರೊಂದಿಗೆ ಆಚೆ ದಂಡೆಗೆ ತೆರಳಿ ಪ್ರವಾಹ ಸಮಸ್ಯೆ ತಿಳಿದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿಗೆ ನೀರು ರಭಸವಾಗಿ ಹರಿದು ಬರುತ್ತಿದೆ. ಹಾಗಾಗಿ ಜನರು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು. ಅಗ್ನಿ ಶಾಮಕದಳ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾದಗಿದೆ. ನೀಲಕಂಠರಾಯನಗಡ್ಡಿ ಜನರಿಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಅಂತಹ ಯಾವುದೇ ಆತಂಕ ಕಂಡು ಬಂದರೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಲಿದೆ ಎಂದು ತಿಳಿಸಿದುರು.
ನೀಲಕಂಠರಾಯನ ಗಡ್ಡಿಗೆ ಸೇತುವೆ ಕಾಮಗಾರಿ ನಡೆದಿದೆ. ಸದ್ಯ ನದಿಗೆ ನೀರು ಹರಿಸಿದ್ದರಿಂದ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರವಾಹ ಇಳಿದ ನಂತರ ಅದನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್ ಸುರೇಶ ಅಂಕಲಗಿ, ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ ಸೇರಿದಂತೆ ಇದ್ದರು.
ಪೂಜಮ್ಮಳನ್ನು ಕಕ್ಕೇರಾದಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಎರಡು-ಮೂರು
ದಿನಗಳಲ್ಲಿ ಹೆರಿಗೆ ಆಗಬಹುದು. ತುಂಬು ಗರ್ಭಿಣಿ ಇರುವುದರಿಂದ ರಕ್ತದೊತ್ತಡ (ಬಿಪಿ) ಸಾಮಾನ್ಯವಾಗಿದೆ. ಆರೋಗ್ಯವಾಗಿದ್ದಾಳೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯಾಧಿಕಾರಿ ಧರ್ಮರಾಜ ಹೊಸಮನಿ ತಿಳಿಸಿದ್ದಾರೆ.
ಗರ್ಭಿಣಿ ಕುರಿತು ನನಗೆ ಗ್ರಾಮಸ್ಥರಿಂದ ಕರೆ ಬಂದಾಗ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದೆ. ಬೋಟ್ ಮೂಲಕ ಕರೆತನ್ನಿ ಎಂದು ಸೂಚಿಸಿದರು. ಕೃಷ್ಣ ನದಿಯಲ್ಲಿ ಗುರುವಾರ ಬೋಟ್ ಇಳಿಸಿ ಸುರಕ್ಷಿತವಾಗಿ ಗರ್ಭಿಣಿಯನ್ನು ನದಿ ದಾಟಿಸಲಾಗಿದೆ.
ಸಂತೋಷ ರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ನಮ್ಮೂರಿಗೆ ದಶಕಗಳು ಕಳೆದರೂ ಸಮಸ್ಯೆ ತಪ್ಪಿಲ್ಲ. ಮಳೆ-ಚಳಿ ಬಂದರೂ ನಮ್ಮ ಕಷ್ಟಕ್ಕೆ ದೇವರೆ ಗತಿ. ಬೋಟ್ನಲ್ಲಿ ಬರುವಾಗ ಭಯವಾಯಿತು. ವೈದ್ಯಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಹೆರಿಗೆಯಾದ ನಂತರ ನನ್ನ ತವರು ಮನೆಗೆ ಹೋಗುತ್ತೇನೆ.
ಪೂಜಮ್ಮ, ಗರ್ಭಿಣಿ ಬೋರ್ಗರೆಯುವ ಕೃಷ್ಣಾನದಿಯಲ್ಲಿ ಬೋಟ್ ನಡೆಸುವುದು ಅಷ್ಟೊಂದು ಸುರಕ್ಷಿತವಲ್ಲ. ಆದರೂ ಲೈಫ್ ಜಾಕೆಟ್ ಹಾಕಿಕೊಂಡು ಆತ್ಮವಿಶ್ವಾಸದಿಂದ ನೀಲಕಂಠರಾಯನಗಡ್ಡಿಗೆ ತೆರಳಿ ಗರ್ಭಿಣಿಯನ್ನು ಕರೆ ತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಸಣ್ಣ ಮಾನಯ್ಯ, ಅಗ್ನಿ ಶಾಮಕ ದಳದ ಪ್ರಭಾರಿ ಅಧಿಕಾರಿ ಸುರಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ