ವರ್ಷಾಂತ್ಯದೊಳಗೆ ಅಂಗನವಾಡಿ ಕಟ್ಟಡ ಮುಗಿಸಿ
Team Udayavani, Sep 30, 2018, 4:11 PM IST
ಯಾದಗಿರಿ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ನಿರ್ಮಿಸಲು ವಹಿಸಿಕೊಂಡಿರುವ ಇಲಾಖೆಗಳ ಏಜೆನ್ಸಿಯವರು ನಿಗದಿತ ಅವಧಿ ಅನುಸಾರ ಪೂರ್ಣಗೊಳಿಸಬೇಕು. ಡಿಸೆಂಬರ್ ಅಂತ್ಯಕ್ಕೆ ಯಾವುದೇ ಅಂಗನವಾಡಿ ಕೇಂದ್ರ ಕಟ್ಟಡಗಳ ನಿರ್ಮಾಣ ಬಾಕಿ ಉಳಿಯಬಾರದು ಎಂದು ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪುರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ನಿರ್ಮಿತಿ ಕೇಂದ್ರಕ್ಕೆ 2014-15ರಿಂದ ಇಲ್ಲಿಯವರೆಗೆ ಒಟ್ಟು 87 ಅಂಗನವಾಡಿ ಕೇಂದ್ರ ವಹಿಸಲಾಗಿದೆ. ಅದರಲ್ಲಿ 14 ಅಂಗನವಾಡಿ ಕೇಂದ್ರ
ಪೂರ್ಣಗೊಂಡಿದ್ದು, 30 ರದ್ದುಪಡಿಸಲಾಗಿದೆ.
ಇನ್ನುಳಿದ 43 ಅಂಗನವಾಡಿ ಕೇಂದ್ರಗಳನ್ನು ಜುಲೈ-7, ಆಗಸ್ಟ್-2, ಸೆಪ್ಟೆಂಬರ್-5, ನವೆಂಬರ್-14, ಡಿಸೆಂಬರ್ ತಿಂಗಳಲ್ಲಿ 7 ಪೂರ್ಣಗೊಳಿಸುತ್ತೇವೆ. ಅದರಂತೆ ಕೆಆರ್ಐಡಿಎಲ್ ಮತ್ತು ಪಿಆರ್ಇ ಇಲಾಖೆಗಳಿಗೆ ಮಾಹೆವಾರು ಕ್ರಿಯಾಯೋಜನೆ ತಯಾರಿಸಿ ನೀಡಲಾಗಿದೆ ಎಂದು ಹೇಳಿದರು. ಈ ವೇಳೆ ಜಿಪಂ ಅಧ್ಯಕ್ಷರು ಮಾತನಾಡಿ, ಜುಲೈನಲ್ಲಿ 7 ಪೂರ್ಣಗೊಳಿಸಲಾಗುವುದು ಎಂದು ತಿಳಿಸಿ 5 ಮಾತ್ರ ಪೂರ್ಣಗೊಳಿಸಿದ್ದೀರಿ ಎಂದು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ವಿಶ್ವನಾಥ ಎಚ್.ಎಂ. ಅವರನ್ನು ಪ್ರಶ್ನಿಸಿದರು. ಅನುದಾನ ಕೊರತೆಯಿಂದ ವಿಳಂಬವಾಗಿದ್ದು, ಎಲ್ಲ ಅಂಗನವಾಡಿ ಕೇಂದ್ರಗಳನ್ನು ಡಿಸೆಂಬರ್ ವರೆಗೆ ಪೂರ್ಣಗೊಳಿಸುತ್ತೇವೆ ಎಂದು ವಿಶ್ವನಾಥ ಅವರು ಉತ್ತರಿಸಿದರು.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಮತ್ತು ಶಿಥಿಲ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಪ್ರತಿ ಸಭೆ ನಡೆದಾಗ ಅ ಧಿಕಾರಿಗಳು ಪ್ರಗತಿಯಲ್ಲಿವೆ ಎಂದು ಸಬೂಬು
ನೀಡುತ್ತಾರೆ. ಆದರೆ, ಫೂರ್ಣಗೊಳಿಸುವುದಿಲ್ಲ. ಈ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಪರಿಶೀಲಿಸಲು ಸಭೆ ನಡೆಸಬೇಕು ಎಂದು ಜಿಪಂ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ವಾರದೊಳಗೆ ಸಭೆ ಕರೆಯಲಾಗುವುದು ಎಂದು ಹೇಳಿದರು.
15 ಖಾಸಗಿ ಶಾಲೆಗಳಿಗೆ ಬೀಗ: ಸುರಪುರ ತಾಲೂಕಿನ 15 ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ. ಈ ಬಗ್ಗೆ 3ನೇ ನೋಟಿಸ್ ಜಾರಿ ಮಾಡಲಾಗಿದ್ದು, ಶೀಘ್ರದಲ್ಲಿ ಈ ಶಾಲೆಗಳನ್ನು ಮುಚ್ಚಲಾಗುವುದು. ಆ ಶಾಲೆಗಳ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ಸೇರ್ಪಡೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಹೇಳಿದರು.
ಜಿಲ್ಲೆಯ ಪ್ರಾಥಮಿಕ ಶಾಲೆಗಳಿಗೆ 1,920 ಅತಿಥಿ ಶಿಕ್ಷಕರ ನೇಮಕಾತಿಗೆ ಇಲಾಖೆಯಿಂದ ಮಂಜೂರಾತಿ ಸಿಕ್ಕಿದೆ. ಈಗಾಗಲೇ 1,600 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 320 ಗಣಿತ ಮತ್ತು ಇಂಗ್ಲಿಷ್ ಶಿಕ್ಷಕರು ಬೇಕು. ಪ್ರೌಢಶಾಲೆಗಳಲ್ಲಿ 119 ಅತಿಥಿ ಶಿಕ್ಷಕರಲ್ಲಿ 105 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.
ಜಿಪಂ ಅಧ್ಯಕ್ಷರು ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಇರುವುದರಿಂದ ಈ ಬಾರಿಯ ಎಸ್ಎಸ್ಎಲ್ಸಿ ಮಕ್ಕಳಿಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ತರಿಸಿಕೊಂಡು ಹೆಚ್ಚುವರಿ ತರಗತಿ ತೆಗೆದುಕೊಳ್ಳಬೇಕು. ಇದಕ್ಕೆ ಬೇಕಾದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಕಡಿಮೆ ಫಲಿತಾಂಶ ಬಂದಾಗ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡದೆ ಆಯಾ ಶಾಲೆಗಳ ವಿಷಯ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೊಡ ಒತ್ತಾಯಿಸಿದರು.
ಉಪನಿರ್ದೇಶಕರು ಮಾತನಾಡಿ, 2017-18ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗೆ ಡುವೆಲ್ ಡೆಸ್ಕ್ ಸರಬರಾಜು ಮಾಡಲು 14 ಲಕ್ಷ ರೂ. ಬಿಡುಗಡೆಯಾಗಿದೆ. ಎಲ್ಲ 14 ಶಾಲೆಗಳಿಗೆ ಡುವೆಲ್ ಡೆಸ್ಕ್ ಸರಬರಾಜು ಮಾಡಲಾಗಿದೆ.
ಪಠ್ಯಪುಸ್ತಕಗಳು ಬಂದಿದ್ದು, 2 ದಿನಗಳಲ್ಲಿ ಎಲ್ಲ ಶಾಲೆಗಳಿಗೆ ಪೂರೈಸಲಾಗುವುದು ಎಂದು ಹೇಳಿದರು.
ರವಿವಾರವೂ ಕಾರ್ಯನಿರ್ವಹಿಸಿ ಪಠ್ಯಪೂಸ್ತಕ ಸರಬರಾಜು ಮಾಡಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು. ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವನ್ನಪ್ಪಿದ್ದಾರೆ. ಅಲ್ಲಿನ ವೈದ್ಯ ಸಂತೋಷ ಅವರನ್ನು ವರ್ಗಾವಣೆ ಮಾಡಬೇಕು ಎಂದು ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಹಬೀಬ್ ಉಸ್ಮಾನ್ ಪಟೇಲ್, ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವೆ. ಇಂದೇ ಆದೇಶ ಮಾಡುತ್ತೇನೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎಸ್.ಅಲ್ಲಾಬಕಷ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಅನುಪಾಲನಾ ವರದಿ ಓದಿದರು. ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಶರಣಗೌಡ ಹೊಸಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಸುಭಾಷ್ಚಂದ್ರ, ಪಂಚಾಯಿತಿ ಸದಸ್ಯರು, ಜಿಪಂ ಉಪ ಕಾರ್ಯದರ್ಶಿ ವಸಂತರಾವ್ ವಿ. ಕುಲಕರ್ಣಿ, ಮುಖ್ಯ ಯೋಜನಾಧಿಕಾರಿ ಗುರುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ