ಚಿಣ್ಣರ ಅರಣ್ಯ ದರ್ಶನ
Team Udayavani, Apr 6, 2018, 7:00 AM IST
ವನ್ಯಜೀವಿಗಳ ಸಂರಕ್ಷಣೆ ನಮ್ಮ ನಾಡಿನ ಸಂರಕ್ಷಣೆ’ ಎಂಬ ಗಾದೆಯಂತೆ ನಮ್ಮ ಅರಣ್ಯ ಇಲಾಖೆಯವರು ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿದ್ದಾರೆ. ವನ್ಯಜೀವಿಗಳು ಜಿಂಕೆ, ಮೊಲ, ಕತ್ತೆ, ಕೋಣ. ಅದರಲ್ಲೂ ಕ್ರೂರ ಪ್ರಾಣಿಗಳಾದ ಸಿಂಹ, ಚಿರತೆ ಇಂಥ ಪ್ರಾಣಿಗಳನ್ನು ನಾವು ಕಾಣುತ್ತೇವೆ.
ನಾವು ಸುಮಾರು 8.40ರ ಸುಮಾರಿಗೆ ಸರಕಾರಿ ಪ್ರೌಢಶಾಲೆಯಿಂದ ಹೊರಟು 12 ಗಂಟೆಗೆ ನಾಗರಹೊಳೆಗೆ ತಲುಪಿದೆವು. ಎಲ್ಲರಿಗೂ ಬಸ್ಸಿನಲ್ಲಿ ಜಾಗವು ಸರಿಹೊಂದಿತು. ಬಸ್ಸಿನಲ್ಲಿ ಎಲ್ಲರೂ ಹಾಡು-ಮೋಜಿನೊಂದಿಗೆ ಹೊರಟೆವು. ನಮ್ಮ ಜೊತೆ ಅರಣ್ಯ ಅಧಿಕಾರಿಗಳಾದ ಸಂದೀಪ್ ಸಾರ್, ತಿಲಕ ಹಾಗೂ ನಮ್ಮ ಶಾಲಾ ಶಿಕ್ಷಕರಿದ್ದರು.
ನಾವು ಹನ್ನೆರಡು ಗಂಟೆಗೆ ನಾಗರಹೊಳೆ ತಲುಪಿದೆವು. ಹೊಟ್ಟೆಯು ಚುರುಗುಟ್ಟುತ್ತಿತ್ತು. ಆಗಲೇ ಊಟವು ರೆಡಿಯಾಗಿತ್ತು. ನಮ್ಮ ಊಟ ಮುಗಿದ ಮೇಲೆ ಅಲ್ಲಿನ ಕೆಲ ಕೋತಿಗಳೊಂದಿಗೆ ಆಟ ಆಡಿದೆವು. ಕೋತಿಗಳು ಒಂದೊಂದು ಒಂದೊಂದು ರೀತಿಯಲ್ಲಿದ್ದವು. ಅಲ್ಲಿಗೆ ಜಿಂಕೆಗಳು ಬಂದಿದ್ದವು. ಅವುಗಳು ಎಷ್ಟು ಸುಂದರವಾಗಿದ್ದವು ಎಂದರೆ ಅವುಗಳನ್ನು ಮಾತಲ್ಲಿ ವರ್ಣಿಸಲು ಸಾಧ್ಯವಿಲ್ಲ.
ನಮಗೆ ಹೀಗೆ ನಾಗರಹೊಳೆಯ ಮಹತ್ವ ಗೊತ್ತಾಯಿತು. ನಾಗರಹೊಳೆಯಲ್ಲಿ ಒಂದು ಚಿಕ್ಕ ತೋಡು ಇದ್ದ ಕಾರಣ ಅಲ್ಲಿಗೆ ನಾಗರಹೊಳೆ ಎಂದು ಹೆಸರು ಬಂತು. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲಾಗಿದೆ. ಇದು 1992ರಲ್ಲಿ ಸ್ಥಾಪನೆಯಾಗಿದೆ. ಇದರ ವಿಸ್ತೀರ್ಣ ಸುಮಾರು 642 ಕಿ.ಮೀ. ಆಗಿದ್ದು ಇದು ಕೊಡಗು ಮತ್ತು ಮೈಸೂರು ಭಾಗಕ್ಕೆ ಸೇರಿದೆ. ನಾಗರಹೊಳೆ ಆನೆ ಮತ್ತು ಹುಲಿಗೆ ಹೆಸರುವಾಸಿಯಾಗಿದೆ. ಇಲ್ಲಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅವರಿಗೆ ಶಿಕ್ಷಣ ವ್ಯವಸ್ಥೆ ಕೂಡ ಇದೆ. ಕಾಡಿನಲ್ಲಿ ಬೃಹತ್ತಾದ ಮರಗಳಿವೆ. ಅದರಲ್ಲಿ ಶ್ರೀಗಂಧದ ಮರಗಳು ಹೆಸರುವಾಸಿಯಾಗಿದೆ. ಇದು ಸ್ವಾತಂತ್ರ್ಯದ ಮೊದಲು ಬ್ರಿಟಿಷರ ಅಧೀನದಲ್ಲಿತ್ತು. ಇಲ್ಲಿ ಪ್ರಾಣಿಗಳನ್ನು ಬಂಧಿಸಿಟ್ಟಿಲ್ಲ. ಬದಲು ಸ್ವತಂತ್ರವಾಗಿ ಕಾಡಿನಲ್ಲಿ ಓಡಾಡುತ್ತವೆ. ಆಹಾ! ಆ ಪ್ರಾಣಿಗಳು ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡುವುದನ್ನು ನೊಡುವುದೇ ಒಂದು ಚೆಂದ. ಆದರೆ, ಅವುಗಳಿಗೂ ಭಯವಿದೆ, ಎಲ್ಲಿ ಮನುಷ್ಯರು ಅವುಗಳನ್ನು ಬೇಟೆ ಆಡುತ್ತಾರೆಂದು. ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಒಬ್ಬರಿಂದ ಒಬ್ಬರು ಅವಲಂಬಿತರಾಗಿದ್ದಾರೆ.
ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ. ಸ್ವಲ್ಪ ಸಮಯದ ನಂತರ ಅರಣ್ಯ ವತಿಯಿಂದ ಆಯೋಜಿಸಲಾಗಿದ್ದ ಬಸ್ಸಿನೊಂದಿಗೆ ನಾವು ಅಲ್ಲಿಂದ ತೆರಳಿದೆವು. ಅವರು ನಮ್ಮನ್ನು ಪ್ರಾಣಿಗಳಿರುವ ಜಾಗಕ್ಕೆ ಕರೆದುಕೊಂಡು ಹೋದರು. ನಾವು ಅಲ್ಲಿ ಬಗೆ ಬಗೆಯ ಜಿಂಕೆಗಳನ್ನು ನೋಡಿದೆವು. ಒಂದು ಜಾಗದಲ್ಲಿ ಜಿಂಕೆಗಳು ನೀರು ಕುಡಿಯುತ್ತಿದ್ದವು. ಅದರಲ್ಲಿ ನಾಲ್ಕು ಜಿಂಕೆಗಳು ಇದ್ದವು. ಅದರಲ್ಲಿ ಒಂದು ಜಿಂಕೆ ಕಾವಲು ಕಾಯುತ್ತಿತ್ತು. ಸ್ವಲ್ಪ ಮುಂದೆ ದಾಟಿದ ಮೇಲೆ ಆನೆಗಳ ಹಿಂಡನ್ನು ನೋಡಿದೆವು. ಮತ್ತೆ ಮುಂದೆ ಸಾಗುತ್ತಾ ಸಿಂಗಲಿಕ, ಹದ್ದು, ಕತ್ತೆಕಿರುಬವನ್ನು ನೋಡಿದೆವು. ಗಂಡು ಜಿಂಕೆಯ ಕೊಂಬು ಮೆತ್ತನೆಯ ಸ್ಪಂಜಿನ ಹಾಗೆ ಇತ್ತು. ಕ್ರೂರ ಪ್ರಾಣಿಯಿಂದ ಕಾಡುಕೋಣವೊಂದು ಸತ್ತು ಹೋಗಿತ್ತು. ಆದರೆ, ನಾವು ಅದರ ಕೊಂಬು ಮಾತ್ರ ನೋಡಿದೆವು. ನಮ್ಮಲ್ಲಿ ಹಂದಿ ಸರ್ವೇಸಾಮಾನ್ಯವಾದರೂ ನಾವು ಅದನ್ನು ಕುತೂಹಲದಿಂದ ನೋಡಿದೆವು.
ಬಣ್ಣ ಬಣ್ಣದ ಪಕ್ಷಿಗಳು ಹಾರಾಡುತ್ತಿದ್ದವು. ಅವುಗಳ ಬಣ್ಣ ಆಕರ್ಷಣೀಯವಾಗಿತ್ತು. ಆಮೆಯನ್ನು ಎಷ್ಟು ಕುತೂಹಲದಿಂದ ನೋಡಿದೆವು ಎಂದರೆ ನಾವು ಅದನ್ನು ನೋಡೇ ಇಲ್ಲವಂತೆ ಎಂದು ನೋಡಿದೆವು. ಆದರೆ, ನಾವು ಹುಲಿಯನ್ನು ಮಾತ್ರ ನೋಡಲಿಲ್ಲ. ಆ ಬಿಸಿಲಿಗೆ ನಮ್ಮ ರಾಷ್ಟ್ರ ಪ್ರಾಣಿ ಹುಲಿ ಹೊರಗೆ ಬರಲೇ ಇಲ್ಲ. ಆಕಾಶಕ್ಕೆ ಚಾಚಿನಿಂತ ತೇಗ, ಬೀಟಿ, ಹೊನ್ನೆ ಮರಗಳಿದ್ದವು. ಒಂದು ದೊಡ್ಡ ಮರ ಅಂದರೆ ಏಳು ಜನ ತಬ್ಬಿ ಹಿಡಿಯುವಷ್ಟು ದೊಡ್ಡದಾಗಿತ್ತು. ಹುಲಿಯನ್ನು ನೋಡದೆ ಇದ್ದುದು ನಮಗೆ ತುಂಬ ಬೇಸರವಾಯಿತು. ಆದರೂ ಅದನ್ನು ಮರೆತು ಸಂಭ್ರಮದಿಂದ ಇದ್ದೆವು. ಯಾಕೆಂದರೆ, ವೈವಿಧ್ಯಮಯ ಕೆಲವು ಪ್ರಾಣಿಗಳನ್ನು ನಾವು ಅರಣ್ಯ ಇಲಾಖೆಯ ಸಹಾಯದಿಂದ ನೋಡುವಂತಾಯಿತು. ತುಂಬ ಖುಷಿಯಾಯಿತು. ಅಲ್ಲಿ ಇನ್ನೊಂದು ವಿಷಯ ಎಂದರೆ ಮರಗಳು ಹೆಚ್ಚಾಗಿ ಒತ್ತೂತ್ತಾಗಿರುವುದರಿಂದ ಬಡಪಾಯಿ ಜಿಂಕೆಗಳು ನೀರು ಕುಡಿಯಲು, ಆಹಾರ ತಿನ್ನಲು ಹುಲ್ಲಿಲ್ಲದೆ ಕಷ್ಟಪಡುತ್ತಿದ್ದವು. ಆದರೆ, ಅರಣ್ಯ ಇಲಾಖೆಯವರು ಅದಕ್ಕೂ ಚೆನ್ನಾಗಿ ವ್ಯವಸ್ಥೆ ಮಾಡಿ ನಿರ್ವಹಣೆ ಮಾಡಿರುವುದು ತುಂಬಾ ಸಂತೋಷದ ವಿಚಾರ.
ಅರಣ್ಯವನ್ನೆಲ್ಲಾ ಸುತ್ತಾಡಿ ಸುರಕ್ಷಿತವಾಗಿ ಬಂದಿಳಿದೆವು. ಅಷ್ಟರಲ್ಲಿ ನಮಗೆ ಸಂಜೆಯ ಟೀ ರೆಡಿಯಾಗಿತ್ತು. ಮೋಜು-ಮಸ್ತಿಯಿಂದ ಅಲ್ಲಿಂದ ಹೊರಟೆವು. ಬಸ್ಸಿನಲ್ಲಿ ಕೂತು ಟಿವಿ ನೋಡಿದೆವು. ಕೊನೆಗೆ, ಮನೆಗೆ ತಿನಿಸುಗಳನ್ನು ತೆಗೆದುಕೊಂಡು ನಮ್ಮ ಊರು ಸೇರಿದೆವು.
ಪರಿಸರವಿದ್ದರೆ ವನ್ಯಜೀವಿಗಳು. ಹಾಗಾಗಿ, ನಾವು ಪರಿಸರವನ್ನು ಬೆಳೆಸಿ ವನ್ಯಜೀವಿ ರಕ್ಷಿಸಬೇಕು. “ಪರಿಸರ ಬೆಳೆಸಿ ವನ್ಯಜೀವಿ ರಕ್ಷಿಸಿ’ ಎಂಬ ಮಾತನ್ನು ನನಸು ಮಾಡಬೇಕಾಗಿದೆ. ಅದನ್ನು ಈಗಾಗಲೇ ಅರಣ್ಯ ಇಲಾಖೆಯವರು ನೆರವೇರಿಸಿದ್ದಾರೆ. ಅವರೊಂದಿಗೆ ನಾವೂ ಕೈಜೋಡಿಸೋಣ.
ತೇಜಸ್ವಿನಿ ಬಿ. ಎಲ್. 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಚೆಂಬು, ಕೊಡಗು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ