ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆ
Team Udayavani, Apr 13, 2018, 6:00 AM IST
ಕಾರ್ಕಳದ ಬಳಿಯ ಹಳ್ಳಿಯಿಂದ ಮಂಗಳೂರು ಮಹಾನಗರಕ್ಕೆ ಬಂದು ಹಗಲು ದುಡಿಯುತ್ತ ಸಂಜೆ ಕಲಿತು ತೃತೀಯ ಬಿ.ಎ. ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿನಿ ನಾನು. ನನಗೆ ಈ ಕಾಲೇಜು ವಿದ್ಯೆ ಮತ್ತು ಬದುಕುವ ಕಲೆ ಎರಡನ್ನೂ ಕಲಿಸಿದೆ. ಸಾವಿರಾರು ಜನರ ನಡುವೆ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಕಷ್ಟವೆನಿಸಬಹುದು. ಅಥವಾ ಇಷ್ಟವಿದ್ದರೂ ನಾವು ದೂರಸರಿದಿರಬಹುದು. ಈ ಇಷ್ಟ-ಕಷ್ಟಗಳ ನಡುವೆ ನಮ್ಮನ್ನು ಗುರುತಿಸಿದ್ದು ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆ ಸಂಧ್ಯಾದೀಪ.
ಪ್ರತಿಯೊಬ್ಬರಲ್ಲೂ ಪ್ರತಿಭೆಯಿರುವುದು. ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದು ಪ್ರತಿಭೆಯೇ ಆಗಿರುತ್ತದೆ, ಅದು ಪ್ರತಿಭೆಯೆಂಬ ಹೆಸರನ್ನೇ ಹೊಂದಿರುತ್ತದೆ. ಅದನ್ನು ತೋರ್ಪಡಿಸಿಕೊಳ್ಳುವ ಮನಸ್ಸು ನಮ್ಮಲ್ಲಿರಬೇಕಷ್ಟೆ. ಆ ಮನಸ್ಸು ಮತ್ತು ಧೈರ್ಯ ಕೊಟ್ಟದ್ದು ಸಂಧ್ಯಾದೀಪ. ಕೆಲವೊಂದು ಬಾರಿ ಹರಿದು ಹೋಗುವ ಕಣ್ಣೀರು ಕೆನ್ನೆಯಲ್ಲೇ ಮಾಸಿಹೋಗಿರ ಬಹುದು ಅಥವಾ ಕಣ್ಣಿನಲ್ಲೇಮರೆಯಾಗಿರಬಹುದು. ಅಂಥ ಸಂದರ್ಭದ ಕಾಣದಿರುವಂಥ ಭಾವನೆಗಳು ನನ್ನನ್ನು ಮತ್ತೆ ಅಂದಿನ ನೆನಪಿನೆಡೆಗೆ ಹೊರಳಿಸಿವೆ. ನನ್ನೊಳಗಿದ್ದ ಅಳಿಸಲಾಗದ ನೆನಪು, ಹೇಳಲಾಗದ ಮಾತು ಇಂದು ಅಕ್ಷರ ರೂಪದಿ ನನ್ನ ಗುರುತಿಸಿದೆ, ಬೆಂಬಲಿಸಿದೆ, ಹಾರೈಸಿದೆ. ಅದು ಸಂಧ್ಯಾದೀಪದ ಮೂಲಕ.
ಮಮತಾ ತೃತೀಯ ಬಿ. ಎ., ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜು