“ಚೂರಿಕಟ್ಟೆ’ ಟಿಂಬರ್ ಮಾಫಿಯಾದಲ್ಲೊಂದು ಸುತ್ತು: ಟ್ರೈಲರ್ ವೀಕ್ಷಿಸಿ
Team Udayavani, Dec 9, 2017, 4:32 PM IST
ರಘುಶಿವಮೊಗ್ಗ ನಿರ್ದೇಶನದ “ಚೂರಿಕಟ್ಟೆ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ಕಥೆ ಇದು. ಅಲ್ಲೊಂದು ಚೂರಿಕಟ್ಟೆ ಎಂಬ ಗ್ರಾಮವಿದೆ. ಬ್ರಿಟಿಷರ ಕಾಲದಲ್ಲಿ ಆ ಗ್ರಾಮಕ್ಕೆ ಸರ್ಕಲ್ ಎಂಬ ಹೆಸರಿತ್ತು. ಆಗೆಲ್ಲಾ ತಾಳಗುಪ್ಪ ಮೂಲಕ ಚೆನ್ನೈವರೆಗೆ ರೈಲು ಓಡಾಡುತ್ತಿತ್ತು. ಆ ಸಂದರ್ಭದಲ್ಲಿ ಪರವಾನಗಿ ಇಲ್ಲದೆಯೇ ಕಳುವ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಆಗ ಅಂತಹ ಕಳ್ಳರನ್ನು ಹಿಡಿದು, ಸುಂಕ ವಸೂಲಿ ಮಾಡೋಕೆ ಅಧಿಕಾರಿಗಳು ಸರ್ಕಲ್ನಲ್ಲಿರುತ್ತಿದ್ದರು. ಕಳ್ಳರು ಆ ಸಂದರ್ಭದಲ್ಲಿ ಕೈಯಲ್ಲಿ ಚೂರಿ ಹಿಡಿದು ಟಿಂಬರ್ ಮಾಫಿಯಾದಲ್ಲಿ ತೊಡಗಿಕೊಳ್ಳುತ್ತಿದ್ದರು. ಹಾಗಾಗಿ ಆ ಸರ್ಕಲ್ನಲ್ಲಿದ್ದ ಕಟ್ಟೆ ಬಳಿ ನಡೆಯುತ್ತಿದ್ದ ಆ ಮಾಫಿಯಾಗೆ “ಚೂರಿಕಟ್ಟೆ’ ಎಂದು ಹೆಸರು ಬಂತು. ಅದೇ ಹೆಸರನ್ನಿಟ್ಟುಕೊಂಡು ಟಿಂಬರ್ ಮಾಫಿಯಾ ಕುರಿತು ಚಿತ್ರ ಮಾಡಿದ್ದಾರೆ. ಅಲ್ಲದೇ ನಯಾಜ್ ಮತ್ತು ತುಳಸಿರಾಮುಡು ನಿರ್ಮಾಣದ ಈ ಚಿತ್ರಕ್ಕೆ ಕೈಲಾಶ್ ಕಥೆ ಬರೆದಿದ್ದಾರೆ. ಅರವಿಂದ್ ಚಿತ್ರಕಥೆ ಬರೆದಿದ್ದಾರೆ. ಪ್ರವೀಣ್ ಮತ್ತು ಪ್ರೇರಣಾ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅಚ್ಯುತ್, ದತ್ತಣ್ಣ, ಮಂಜುನಾಥ್ ಹೆಗಡೆ,ಬಾಲಾಜಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನೊಬಿನ್ಪಾಲ್ ಹಿನ್ನೆಲೆ ಸಂಗೀತವಿದೆ. ಅದ್ವೈತ ಗುರುಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದ ಮಾಫಿಯಾ ಟ್ರೈಲರ್ ವೀಕ್ಷಿಸಿ.