ಮುಂದುವರಿದ ಮಳೆ: ನೆರೆ ಭೀತಿ, ಬಿರುಗಾಳಿ ಸಾಧ್ಯತೆ
Team Udayavani, Jul 22, 2019, 5:08 AM IST
ಕಾಸರಗೋಡು: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಳೆಯ ಬಿರುಸು ಕಡಿಮೆಯಾಗಿದ್ದರೂ, ನೀಲೇಶ್ವರ, ಹೊಸದುರ್ಗ ಮತ್ತು ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆ ಇನ್ನೂ ಮುಂದುವರಿದಿದೆ.
ಜಿಲ್ಲೆಯ ಎಲ್ಲಾ ಹೊಳೆಗಳು ತುಂಬಿ ಹರಿಯುತ್ತಿದೆ. ಹೊಳೆ ತುಂಬಿ ಹರಿಯುತ್ತಿರುವುದರಿಂದ ನೆರೆ ಭೀತಿಗೆ ಕಾರಣವಾಗಿದೆ. ಹೊಳೆ ಬದಿಗಳಲ್ಲಿ ವಾಸಿಸುವವರು ಅತೀ ಜಾಗ್ರತೆ ವಹಿಸಬೇಕೆಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ 104 ಹೆಕ್ಟರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿವೆ.
ಇದರ ಹೊರತಾಗಿ 124 ಹೆಕ್ಟರ್ ಕೃಷಿ ಭೂಮಿ ಜಲಾವೃತಗೊಂಡಿದ್ದು ಲಕ್ಷಾಂತರ ರೂ. ನಾಶನಷ್ಟ ಸಂಭವಿಸಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 217 ಮಿಲ್ಲಿ ಮೀಟರ್ ಮಳೆ ಸುರಿದಿದ್ದು, 3 ಮನೆಗಳು ಪೂರ್ಣವಾಗಿಯೂ, 11 ಮನೆಗಳು ಆಂಶಿಕವಾಗಿ ಕುಸಿದು ಬಿದ್ದಿದೆ.
ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಅಗತ್ಯದ ಮುಂಜಾಗ್ರತಾ ಕ್ರಮಕೈಗೊಳ್ಳಲು ಮತ್ತು ತುರ್ತು ಮಾಹಿತಿ ನೀಡಲು ಜಿಲ್ಲೆಯ ನಾಲ್ಕು ತಾಲೂಕು ಕಚೇರಿಗಳಲ್ಲಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ಗಳನ್ನು ತೆರೆಯಲಾಗಿದೆ. ಇವು ದೈನಂದಿನ 24 ತಾಸುಗಳೂ ಕಾರ್ಯವೆಸಗುತ್ತಿವೆ.
ರಸ್ತೆಗೆ ಬಿದ್ದ ಮರ
ಬದಿಯಡ್ಕದ ಸಮೀಪದ ಕರಿಂಬಿಲದಲ್ಲಿ ರವಿವಾರ ಬೆಳಗ್ಗೆ 6.30 ಕ್ಕೆ ಬೃಹತ್ ಮರವೊಂದು ರಸ್ತೆಯ ಅಡ್ಡಕ್ಕೆ ಬಿದ್ದಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ನಡೆಸಿದ ಕಾರ್ಯಾಚರಣೆಯಿಂದ ಸಾರಿಗೆ ಸುಗಮಗೊಂಡಿತು.
ಆವರಣ ಗೋಡೆ ಕುಸಿತ
ಉಪ್ಪಳ ನಾಯ್ಕಪು ಶಿವಾಜಿನಗರ ನಿವಾಸಿ ಟೈಲರ್ ವಾಸುದೇವ ಆಚಾರ್ಯ ಅವರ ಮನೆಯೊಳಗೆ ನೀರು ಪ್ರವೇಶಿಸಿದೆ.
ಆವರಣ ಗೋಡೆ ಕುಸಿದು ಬಿದ್ದು ಮನೆಯೊಳಗೆ ನೀರು ಪ್ರವೇಶಿಸಿತು.
ಮಹಿಳೆಯರ ರಕ್ಷಣೆ : ಧಾರಾಕಾರ ಮಳೆಗೆ ಜಲಾವೃತಗೊಂಡು ಮನೆಯಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿದ್ದ ಮೂವರು ಮಹಿಳೆಯರನ್ನು ಕಾಸರಗೋಡು ಅಗ್ನಿಶಾಮಕ ದಳ ರಕ್ಷಿಸಿದೆ.
ಚೆಂಗಳ ನೆಲ್ಲಿಕಟ್ಟೆ ಚೆನ್ನಡ್ಕದ ಖದೀಜಾ(54), ಮಕ್ಕಳಾದ ಸೌಜಾಸ್(31) ಮತ್ತು ಸುಲೈಖಾ(37) ಅವರನ್ನು ರಕ್ಷಿಸಲಾಯಿತು.
ಮನೆಯ ಹೊರಗಡೆ ಅಪಾಯ ಮಟ್ಟದಿಂದ ಮೇಲಕ್ಕೆ ನೀರು ತುಂಬಿದೆ. ಅಗ್ನಿಶಾಮಕ ದಳ ಫೈಬರ್ ಡಿಂಕ್ ದೋಣಿಯನ್ನು ಬಳಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು
ಇದೇ ಪರಿಸರದಲ್ಲಿ ಇನ್ನೊಂದು ಮನೆಯೂ ಜಲಾವೃತಗೊಂಡಿದ್ದು, ಈ ಮನೆಯವರು ಮೊದಲೇ ಮನೆ ಖಾಲಿ ಮಾಡಿದ್ದರು.
ಗುಡ್ಡೆ ಕುಸಿತ
ಬದಿಯಡ್ಕ ಸಮೀಪದ ಚೆನ್ನಾರಕಟ್ಟೆಯ ವಿಶ್ವನಾಥ ರೈ ಅವರ ಮನೆ ಮೇಲೆ ಗುಡ್ಡೆ ಕುಸಿದು ಬಿದ್ದು ಹಾನಿಗೀಡಾಗಿದೆ.
ಅಡುಗೆ ಕೋಣೆಯ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಮನೆ ಅಪಾಯದ ಸ್ಥಿತಿಯಲ್ಲಿದ್ದು, ಮನೆಯವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.