ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 19 ಮಂದಿಗೆ ಸೋಂಕು ದೃಢ
Team Udayavani, Mar 24, 2020, 4:36 AM IST
ಕಾಸರಗೋಡು: ಮಾರಣಾಂತಿಕ ಕೋವಿಡ್-19 ವೈರಸ್ ಸೋಂಕು ದೇಶಾದ್ಯಂತ ವೇಗದಲ್ಲಿ ಹರಡುತ್ತಿರುವಂತೆ ಕೇರಳದಲ್ಲಿ ಮಾ. 31ರ ವರೆಗೆ ಲಾಕ್ಡೌನ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 19 ಮಂದಿಯಲ್ಲಿ ಕೋವಿಡ್-19 ದೃಢವಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಬಾಧಿತರ ಒಟ್ಟು ಸಂಖ್ಯೆ 38ಕ್ಕೇರಿದೆ.
ರಾಜ್ಯದಲ್ಲಿ ಸೋಮವಾರ ಒಟ್ಟು 28 ಜನರಿಗೆ ಕೊರೊನಾ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 5, ಪತ್ತನಂತಿಟ್ಟ-1, ಎರ್ನಾಕುಳಂ – 2, ತೃಶ್ಶೂರ್ -1, ಕಾಸರಗೋಡು-19 ಎಂಬಂತೆ ಕೊರೊನಾ ದೃಢಪಡಿಸಲಾಗಿದೆ. ಇವರಲ್ಲಿ 25 ಮಂದಿ ದುಬಾೖಯಿಂದ ಬಂದವರು. ರಾಜ್ಯದಲ್ಲಿ ಒಟ್ಟು 91 ಮಂದಿ ಕೋವಿಡ್-19 ಪತ್ತೆಹಚ್ಚಲಾಗಿದೆ. ನಾಲ್ವರು ರೋಗ ಮುಕ್ತರಾಗಿದ್ದಾರೆ.
64,320 ಮಂದಿ ನಿಗಾದಲ್ಲಿ
ಸೋಮವಾರ ರಾಜ್ಯದಲ್ಲಿ 64,320 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 63,937 ಮಂದಿ ಮನೆಯಲ್ಲೂ, 383 ಮಂದಿ ಆಸ್ಪತ್ರೆಯಲ್ಲೂ ನಿಗಾದಲ್ಲಿದ್ದಾರೆ. ಸೋಮವಾರ 122 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಒಟ್ಟು 4,291 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದ್ದು, ಅದರಲ್ಲಿ 2,987 ಮಂದಿಗೆ ನೆಗೆಟಿವ್ ಫಲಿತಾಂಶ ಬಂದಿದೆ.
ಲಾಕ್ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಸಾರಿಗೆಯನ್ನು ಸಂಪೂರ್ಣವಾಗಿ ನಿಲುಗಡೆಗೊಳಿ ಸಲಾಗಿದೆ. ಕೆಎಸ್ಆರ್ಟಿಸಿ, ಖಾಸಗಿ ಬಸ್ ಸರ್ವೀಸ್ ಸಂಪೂರ್ಣ ನಿಲುಗಡೆಗೊಳಿಲಾಗಿದೆ. ಖಾಸಗಿ ವಾಹನವನ್ನು ಬಳಸಬಹುದು. ಔಷಧ, ಹಾಲು, ಆ್ಯಂಬುಲೆನ್ಸ್, ವೈದ್ಯಕೀಯ, ಪತ್ರಿಕೆಗಳಿಗೆ ಯಾವುದೇ ನಿಷೇಧವಿಲ್ಲ.
ಆರಾಧನಾಲಯಗಳಿಗೆ ನಿಬಂಧನೆ ಜಾರಿಗೊಳಿಸಲಾಗಿದೆ. ಜನರು ಸೇರುವ ಕಾರ್ಯಕ್ರಮಗಳನ್ನು ಆರಾಧನಾಲಯಗಳಲ್ಲಿ ಆಯೋಜಿಸಬಾರದು. ಸರಕಾರಿ ಕಚೇರಿಗಳು ಸಂಪೂರ್ಣ ಭದ್ರತೆಯಲ್ಲಿ ಕಾರ್ಯಾಚರಿಸಲಿವೆ. ರಾಜ್ಯದ ಎಲ್ಲ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಲಾಕ್ಡೌನ್ ಘೋಷಿಸಿರುವುದರಿಂದಾಗಿ ಯಾರೂ ಮನೆಯಿಂದ ಹೊರಗಿಳಿಯಬಾರದು. ಅನಗತ್ಯವಾಗಿ ಹೊರಗೆ ಬಂದರು ಕಠಿನ ಕ್ರಮ ಸಹಿತ ಬಂಧಿಸಲಾಗುವುದು. ಜನರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಒಂದು ಮೀಟರು ಅಂತರ ಕಾಯ್ದುಕೊಳ್ಳಬೇಕು. ಹೊಟೇಲ್ಗಳಲ್ಲಿ ಕುಳಿತುಕೊಂಡು ಆಹಾರ ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಹೋಮ್ ಡೆಲಿವರಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮತ್ತೂಬ್ಬ ಕೇರಳ ಸೋಂಕಿತ ರಾಜ್ಯ ಕರಾವಳಿಯಲ್ಲಿ ಓಡಾಟ
ಸೋಮವಾರ ಕೇರಳದಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾಸರಗೂಡು ಪಾಲಿಕಲ್ನ 54 ವರ್ಷದ ವ್ಯಕ್ತಿಯು ರಾಜ್ಯದ ಕರಾವಳಿಯಲ್ಲಿ ಓಡಾಟ ನಡೆಸಿದ್ದು ವಿವರ ಲಭ್ಯವಾಗಿದೆ.
ಮಾರ್ಚ್ 10ರಂದು ಸಂಜೆ 5.30ಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸ್ವಂತ ಕಾರಿನಲ್ಲಿ ಕಾಸರಗೂಡಿಗೆ ತೆರಳಿದ್ದರು. ಬಳಿಕ ಮಾ. 11ರಂದು ಸ್ಥಳೀಯ ಮೀನು ಮಾರುಕಟ್ಟೆಗೆ ಭೇಟಿ. ಮಾ. 18ರ ಮಧ್ಯಾಹ್ನ 3ಕ್ಕೆ ಅತ್ತಾವರದ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಪರೀಕ್ಷೆ ಮಾಡಿಸಿ ಕೆಎಂಸಿ ಕ್ಯಾಂಟೀನ್ನಲ್ಲಿ ಚಹಾ ಸೇವಿಸಿದ್ದಾರೆ. ಬಳಿಕ 6 ಗಂಟೆಗೆ ಆಟೋ ರಿಕ್ಷಾದಲ್ಲಿ ಮೆಡಿಸಿಟಿ ಕಟ್ಟಡಕ್ಕೆ ತೆರಳಿ ಔಷಧ ಖರೀದಿಸಿ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಕಾಸರಗೂಡಿಗೆ ವಾಪಸಾಗಿದ್ದಾರೆ. ಮಾರ್ಚ್ 20ರಂದು ಖಾಸಗಿ ಕಾರಿನಲ್ಲಿ ಮಂಗಳೂರಿಗೆ ಬಂದು ವೈದ್ಯರನ್ನು ಭೇಟಿ ಮಾಡಿ ಮರಳಿದ್ದರು.
ಈ ಸೋಂಕಿತ ವ್ಯಕ್ತಿ ಸಂಚಾರ ಮಾಡಿದ್ದ ವಿಮಾನದಲ್ಲಿ ಹಾಗೂ ಬಸ್ಗಳಲ್ಲಿ ಯಾರಾದರೂ ಪ್ರಯಾಸಿದ್ದರೆ ಕೂಡಲೇ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್