‘ಸಮುದಾಯ ಭವನದ ಸದುಪಯೋಗ ಪಡೆಯಿರಿ’
Team Udayavani, Jan 24, 2019, 5:37 AM IST
ಹೊಸಬೆಟ್ಟು: ಸಮುದ್ರ ತೀರದಲ್ಲಿ ತುರ್ತು ಸಂದರ್ಭ ಜನರ ರಕ್ಷಣೆಗಾಗಿ ವಲ್ಡ್ ಬ್ಯಾಂಕ್ ಅನುದಾನದ ಸುಮಾರು 3.80 ಕೋಟಿ ರೂ.ವೆಚ್ಚದಲ್ಲಿ ನೂತನ ಸಭಾಭವನ ನಿರ್ಮಾಣಕ್ಕೆ ಬುಧ ವಾರ ಶಾಸಕ ಡಾ| ಭರತ್ ಶೆಟ್ಟಿ ವೈ. ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಜಾಗತಿಕ ಬ್ಯಾಂಕ್ ಶೇ. 75, ರಾಜ್ಯ ಸರಕಾರ ಶೇ. 25ರಷ್ಟು ಅನುದಾನದಲ್ಲಿ ಈ ತುರ್ತು ಭವನ ನಿರ್ಮಾಣವಾಗುತ್ತಿದೆ. ಇದರ ಸದುಪಯೋಗವನ್ನು ಹೊಸಬೆಟ್ಟು ಮೊಗವೀರ ಸಂಘವು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಇಂತಹ ಉತ್ತಮ ಯೋಜನೆಗೆ ಹೊಸಬೆಟ್ಟು ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು.
ಸದ್ಬಳಕೆ ಮಾಡುತ್ತೇವೆ
ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸಬೆಟ್ಟು ಮೊಗವೀರ ಸಂಘದ ನಿಕಟಪೂರ್ವ ಅಧ್ಯಕ್ಷ ಗಂಗಾಧರಎಚ್., ಭವನದ ನಿರ್ಮಾಣಕ್ಕೆ ಮೂರು ವರ್ಷಗಳಲ್ಲಿ ಹಲವಾರು ಅಡೆತಡೆಗಳು ಎದುರಾದವು. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಲ್ಲಿ ನಿರಂತರವಾಗಿ ನಾನು ಒತ್ತಡ ಹಾಕಿದ ಮೇರೆಗೆ ಅಧಿಕಾರಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಇದನ್ನು ತುರ್ತು ಸಂದರ್ಭದಲ್ಲಿ ಹಾಗೂ ಸ್ಥಳೀಯ ಮೊಗವೀರರ ಕಾರ್ಯಕ್ರಮ ಗಳಿಗೂ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಲೋಕೋಪಯೋಗಿ ಇಲಾಖಾ ಅಧಿಕಾರಿ ರವಿಕುಮಾರ್, ರತ್ನಾಕರ್ ಚೌಟ, ಗುತ್ತಿಗೆದಾರ ಅವಿನಾಶ್, ಶಂಕರ ವಿ. ಸಾಲ್ಯಾನ್, ಬಾಲಕೃಷ್ಣ ಗುರಿಕಾರ, ಭಜನ ಮಂದಿರದ ಅಧ್ಯಕ್ಷ ಉಮೇಶ್ ಎನ್. ಕಾಂಚನ್, ಲೀಲಾವತಿ ಉಪಸ್ಥಿತರಿದ್ದರು. ಜಗದೀಶ್ ವಂದಿಸಿದರು.
ಬಹು ದೊಡ್ಡ ಕೊಡುಗೆ
ಕಾರ್ಪೊರೇಟರ್ ಅಶೋಕ್ ಶೆಟ್ಟಿ ಮಾತನಾಡಿ, ಮೂರು ವರ್ಷಗಳಲ್ಲಿ ಈ ಯೋಜನೆಯ ಬಗ್ಗೆ ಪ್ರಯತ್ನ ಮಾಡಲಾಗಿದೆ. ಇದೀಗ ಬ್ಯಾಂಕ್ನ ಅನುಮತಿ ದೊರಕಿದ್ದು ಸಂಘಕ್ಕೊಂದು ಇದು ಬಹು ದೊಡ್ಡ ಕೊಡುಗೆಯಾಗಲಿದೆ. ಇದರ ಸದುಪಯೋಗವಾಗಲಿ ಎಂದರು.