ಬೆಳ್ತಂಗಡಿ: 13ನೇ ಶತಮಾನದ ನಾಗ ಶಿಲೆ ಪತ್ತೆ
Team Udayavani, Mar 17, 2020, 12:30 PM IST
ಬೆಳ್ತಂಗಡಿ: ತಾಲೂಕಿನ ಸೋಣಂದೂರು ಗ್ರಾಮದಲ್ಲಿ, ಶಿವಣ್ಣ ಗೌಡ ಎಂಬವರು ಖರೀದಿಸಿದ ಜಾಗದಲ್ಲಿ ಅಪರೂಪದ 13 ನೇ ಶತಮಾನ ನಾಗ ಶಿಲೆ ಪತ್ತೆಯಾಗಿದೆ.
ಜಾಗದಲ್ಲಿದ್ದ ನಾಗಬನವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಜ್ಯೋತಿಷಿ ಮಂಜುನಾಥ ಭಟ್ ಅಂತರ ಅವರ ಮಾರ್ಗದರ್ಶನದಲ್ಲಿ ಆರೂಢ ಪ್ರಶ್ನೆ ಇರಿಸಲಾಗಿತ್ತು. ಬನವಿರುವ ಸ್ಥಳವನ್ನು ಉತ್ಖನನ ಮಾಡಿದಾಗ 11 ನಾಗ ಶಿಲೆಗಳು ದೊರೆತಿದ್ದು ತುಂಬಾ ಅಪರೂಪವೆನಿಸಿವೆ. ನಾಗ ಯಕ್ಷ ಮತ್ತು ನಾಗ ಯಕ್ಷಿ ಶಿಲೆಗಳು, ಮರಿ ನಾಗನ ಸಹಿತವಾದ ಐದು ಹೆಡೆಯ ನಾಗಶಿಲೆ ಕಂಡು ಬಂದಿದೆ.
ಹಿಂದಿನ ಕಾಲದಲ್ಲಿ ಈ ಜಾಗದಲ್ಲಿ ಸಂತತಿಗೋಸ್ಕರ, ವಿವಾಹ ಸಿದ್ಧಿಗೋಸ್ಕರ ನಾಗಾರಾಧನೆ ನಡೆಯುತ್ತಿದ್ದಿರಬಹುದು ಎನ್ನುವುದಕ್ಕೆ ದ್ಯೋತಕವಾಗಿ ಯಕ್ಷ ಯಕ್ಷಿ ಜೋಡಿ, ಮರಿ ನಾಗರ ಶಿಲೆ ಕಂಡುಬಂದಿದೆ.
ಪುನರ್ ಪ್ರತಿಷ್ಠಾಪನೆಗಾಗಿ, ನೂತನ ನಾಗಶಿಲೆ ತಯಾರಿಗೆ ಊರಿನ ಪರಿಣತ ಶಿಲ್ಪಿಯವರನ್ನು ಭೇಟಿಯಾದಾಗ ಈ ನಾಗ ಶಿಲೆಗಳು 13ನೇ ಶತಮಾನದ ಕಾಲದ್ದು ಎಂದು ಶಿಲ್ಪಿ ಅಭಿಪ್ರಾಯಟ್ಟಿದ್ದಾರೆ.
ಈ ನಾಗಬನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಪುರುಷೋತ್ತಮ ಶೆಟ್ಟಿ ನೇತೃತ್ವದಲ್ಲಿ ನಾಗಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮೇ ತಿಂಗಳಿನಲ್ಲಿ ನಡೆಯಲಿದೆ.