“ಧರ್ಮ ಸಮ್ಮೇಳನದಿಂದ ಮನುಷ್ಯ ಧರ್ಮ’
ಕುಕ್ಕೆ ಸುಬ್ರಹ್ಮಣ್ಯ; ಕಿರುಷಷ್ಠಿ ಧರ್ಮ ಸಮ್ಮೇಳನ ಉದ್ಘಾಟಿಸಿ ರೂಪಾ
Team Udayavani, Jan 1, 2020, 10:53 PM IST
ಸುಬ್ರಹ್ಮಣ್ಯ: ಧರ್ಮ ವ್ಯಕ್ತಿಗೆ ಸೀಮಿತವಾದುದಲ್ಲ. ಅದು ಸೂಕ್ಷ್ಮ ವಿಚಾರ. ಧರ್ಮದ ಸಾರ, ಧರ್ಮವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ಅರಿಯಬೇಕು. ಧರ್ಮ ಸಮ್ಮೇಳನಗಳು ಧಾರ್ಮಿಕತೆಯ ಜತೆಗೆ ವ್ಯಕ್ತಿತ್ವ, ಮನುಷ್ಯ ಧರ್ಮವನ್ನು ಕಲಿಸುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಎಂ.ಜೆ. ರೂಪಾ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಬುಧವಾರ ದೇವಳದ ಧರ್ಮ ಸಮ್ಮೇಳನ ಮಂಟಪದಲ್ಲಿ ನಡೆದ ಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಆಚರಣೆ, ಸಮಾಜದಲ್ಲಿ ಬದು ಕುವ ರೀತಿಯೂ ಧಾರ್ಮಿಕತೆ. ಇದನ್ನು ವ್ಯಕ್ತಿಗತವಾಗಿ ಅಳವಡಿಸಿಕೊಂಡಾಗ ಧರ್ಮ ಜಾಗೃತಗೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಪರಮಾತ್ಮನ ಭಕ್ತಿಯಿಂದ ಮಾತ್ರ ಮುಕ್ತಿ ಸಾಧ್ಯ. ಕರ್ಮ ಸೃಷ್ಟಿಯ ಮೂಲವಾಗಿದ್ದು, ಅದನ್ನು ತಿಳಿಯುವ ಪ್ರಯತ್ನ ನಮ್ಮಿಂದ ಆಗುತ್ತಿಲ್ಲ.ನಮ್ಮ ಮನಸ್ಸಿನ ಭಾವನೆಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ಅಂತಹ ಧರ್ಮದಲ್ಲಿ ಸಾಗಿ ಬದುಕಬೇಕು. ಧರ್ಮ ಜಾಗೃತಿಗೆ ಧರ್ಮ ಸಮ್ಮೇಳನ ನಡೆಯುತ್ತಿರಬೇಕು ಎಂದು ಶಾಸಕ ಎಸ್. ಅಂಗಾರ ಹೇಳಿದರು.
ವಿಟ್ಲ ಬೊಳಂತಿ ಮೊಗರು ಶಾಲಾ ಶಿಕ್ಷಕ ವಿಟuಲ ನಾಯಕ್ ಧಾರ್ಮಿಕ ಉಪನ್ಯಾಸ ನೀಡಿ ಪ್ರತಿಯೊಂದು ಧರ್ಮದವರು ತಮ್ಮ ಧರ್ಮವನ್ನು, ಧಾರ್ಮಿಕತೆಯನ್ನು ಉಳಿಸಿ, ಇತರರಿಗೆ ತಿಳಿ ಹೇಳುವುದರ ಜತೆಗೆ ಧಾರ್ಮಿಕತೆಯ ಸಾರವನ್ನು ಅರಿತು ಬದುಕಬೇಕು ಎಂದರು.
ಬದುಕುವ ರೀತಿಯೂ ಧಾರ್ಮಿಕತೆ
ಇಂದು ಸಣ್ಣ ಮಕ್ಕಳು ವಿವಿಧ ಕಾರಣಗಳಿಂದ ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಹೆತ್ತವರು ಎಳೆಯ ಪ್ರಾಯದಲ್ಲಿಯೇ ಅವರಿಗೆ ಧಾರ್ಮಿಕತೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಜತೆಗೆ ನಿಜ ಬದುಕಿಗೆ ಧರ್ಮವನ್ನು ಅಳವಡಿಸುವಂತೆ ಹೇಳಬೇಕು. ಕೇವಲ ಅಂಕಗಳನ್ನಷ್ಟೇ ಗಳಿಸಲು ಕಲಿಸದೇ, ಕಷ್ಟಗಳನ್ನು ಎದುರಿ ಸುವ ರೀತಿಯನ್ನು ವಿವರಿಸಬೇಕು. ಪೂಜೆ ಪುನಸ್ಕಾರಗಳು ಮಾತ್ರ ಧಾರ್ಮಿಕತೆ ಅಲ್ಲ. ಜತೆಗೆ ಧರ್ಮದ ಆಚರಣೆ, ಸಮಾಜದಲ್ಲಿ ಬದುಕುವ ರೀತಿಯೂ ಧಾರ್ಮಿಕತೆ ಎಂದ ಅವರು, ನಾವು ನಮ್ಮ ವೃತ್ತಿಯನ್ನು ನಿಯತ್ತಿನಿಂದ ಪಾಲಿಸುತ್ತ ಹೋದಲ್ಲಿ ಧರ್ಮವನ್ನು ಪಾಲಿಸಿದಂತಾಗುತ್ತದೆ ಎಂದು ಹೇಳಿದರು.
ದೇಗುಲದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪ್ರಥಮ ದರ್ಜೆ ಸಹಾಯಕ ಪಿ.ಎಸ್. ಸುಬ್ರಹ್ಮಣ್ಯ ಭಟ್ ಅವರನ್ನು ಅತಿಥಿಗಳು ಸಮ್ಮಾನಿಸಿದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ ಸ್ವಾಗತಿಸಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು ವಂದಿಸಿದರು. ವಿಶ್ವನಾಥ್ ನಡುತೋಟ ಹಾಗೂ ರತ್ನಕರ ಕಾರ್ಯಕ್ರಮ ನಿರೂಪಿಸಿದರು.