ರಾಜ್ಯದಲ್ಲಿ ಎಡರಂಗಕ್ಕೆ 18ಕ್ಕೂ ಹೆಚ್ಚು ಸ್ಥಾನ: ಪಿಣರಾಯಿ
Team Udayavani, Apr 13, 2019, 6:00 AM IST
ಕಾಸರಗೋಡು: ಕೇರಳದ 20 ಲೋಕಸಭಾ ಸ್ಥಾನಗಳಲ್ಲಿ 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಡರಂಗ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಕೋಟ್ಟಚ್ಚೇರಿಯಲ್ಲಿ ಎಡರಂಗ ಪರ ಚುನಾವಣ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ಪರವಾಗಿದೆ. ಅಯೋಧ್ಯೆಯ ವಿವಾದ ಮಂದಿರ ಧ್ವಂಸಗೈಯಲು ಕಾಂಗ್ರೆಸ್ ಜತೆಗೂಡಿದೆ ಎಂದು ಆರೋಪಿಸಿದ ಅವರು ಮಂದಿರವನ್ನು ಕೋಮುವಾದಿಗಳು ಧ್ವಂಸಗೈದರೂ, ಅದಕ್ಕೆ ಅವಕಾಶ ಮಾಡಿಕೊಟ್ಟದ್ದು ಕಾಂಗ್ರೆಸ್ ಎಂದರು. ಜನರು ಅನುಭವಿಸುತ್ತಿರುವ ಸಂಕಷ್ಟ ಪರಿಹರಿಸಲು ಕಾಂಗ್ರೆಸ್-ಬಿಜೆಪಿಗೆ ಬದಲಿಯಾಗಿ ತೃತೀಯ ರಂಗ ಅಧಿಕಾರಕ್ಕೆ ಬರಬೇಕಾಗಿದೆ ಎಂದ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ನೇತಾರರು ಬಿಜೆಪಿ ಜತೆ ಹೋಗಲಿದ್ದಾರೆ ಎಂದರು.
ಬಿಹಾರ, ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ನೆರವಾಗುವಂತೆ ತನ್ನ ನಿಲುವನ್ನು ಪ್ರತಿಪಾದಿಸಿದೆ. ದಿಲ್ಲಿಯಲ್ಲೂ ಇದೇ ನಿಲುವು ತೋರಿದೆ. ಬಿಜೆಪಿ ವಿರುದ್ಧ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಬಂಗಳಂ ಕುಂಞಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಇ. ಚಂದ್ರಶೇಖರನ್, ಎಂ.ವಿ. ಶ್ರೇಯಾಂಸ್ ಕುಮಾರ್, ಶಾಸಕ ಕೆ.ಕುಂಞಿರಾಮನ್, ಸಂಸದ ಪಿ. ಕರುಣಾಕರನ್, ಐಎನ್ಎಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಹಮ್ಮದ್ ದೇವರ್ಕೋವಿಲ್, ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್, ಗೋವಿಂದನ್ ಪಳ್ಳಿಕಾಪ್ಪಿಲ್, ಎಂ.ವಿ. ಬಾಲಕೃಷ್ಣನ್, ವಿ.ಕೆ.ರಾಜನ್ ಮೊದಲಾದವರು ಮಾತನಾಡಿದರು.