ವಿತ್ತ ಸುಧಾರಣೆಗೆ ಕ್ರಮ ಶೀಘ್ರ
Team Udayavani, Aug 12, 2019, 5:28 AM IST
ಹೊಸದಿಲ್ಲಿ: ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದಕ್ಕಾಗಿ ಸರಕಾರ ಹಲವು ಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಜಿಎಸ್ಟಿ ದರಗಳನ್ನು ಇಳಿಸುವ ಯೋಚನೆ ಸರಕಾರದ ಮುಂದಿಲ್ಲ. ಯಾಕೆಂದರೆ ಹಿಂದೆಂದಿಗಿಂತಲೂ ತೆರಿಗೆ ಅತ್ಯಂತ ಕಡಿಮೆ ದರದಲ್ಲಿದೆ ಎಂದು ಸರಕಾರ ಭಾವಿಸಿದೆ.
ಉದ್ಯಮದ ಮುಖಂಡರು, ಬ್ಯಾಂಕರ್ಗಳು ಮತ್ತು ದೇಶೀಯ ಹಾಗೂ ವಿದೇಶಿ ಹೂಡಿಕೆದಾರರೊಂದಿಗೆ ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಿದ್ದು, ಇದರಲ್ಲಿ ವ್ಯಕ್ತವಾದ ಹಲವು ಅಂಶಗಳನ್ನು ಆಧರಿಸಿ ಸರಕಾರ ಕೆಲವು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಉದ್ಯಮದ ಮುಖಂಡರ ಪ್ರಕಾರ, ಸಾಲ ಸೌಲಭ್ಯ ಹೆಚ್ಚಳ, ಬಡ್ಡಿ ದರ ಕಡಿಮೆಗೊಳಿಸುವುದು ಮತ್ತು ಕೆಲವು ನೀತಿಗಳಲ್ಲಿ ಬದಲಾವಣೆ ಮಾಡುವುದರಿಂದ ಆರ್ಥಿಕ ಪ್ರಗತಿಗೆ ಚೇತರಿಕೆ ನೀಡಬಹುದಾಗಿದೆ. ಪ್ರಸ್ತುತ ವಿತ್ತ ವರ್ಷಕ್ಕೆ ಸರಕಾರ ಶೇ. 7ರ ವಿತ್ತ ಪ್ರಗತಿಯ ಗುರಿ ಹಾಕಿಕೊಂಡಿದೆ. ಸದ್ಯ ಈ ಗುರಿ ಸಾಧಿಸುವುದು ಅಷ್ಟೇನೂ ಕಷ್ಟವಲ್ಲ.ಎಂದು ಹೇಳಲಾಗಿದೆ.