ಗ್ರಾಹಕರೇ ಗಮನಿಸಿ; ಸೆ.26, 27ಎರಡು ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ
Team Udayavani, Sep 24, 2019, 11:44 AM IST
ನವದೆಹಲಿ: ಸರಕಾರಿ ಸ್ವಾಮ್ಯದ ಹತ್ತು ಬ್ಯಾಂಕ್ ಗಳ ವಿಲೀನ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟಂಬರ್ 26-27ರಂದು ಕರೆ ನೀಡಿದ್ದ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಅಖಿಲ ಭಾರತ ಬ್ಯಾಂಕ್ ಒಕ್ಕೂಟ ಮಂಗಳವಾರ ತಿಳಿಸಿದೆ.
ಬ್ಯಾಂಕ್ ಒಕ್ಕೂಟದ ಪ್ರಕಟಣೆ ಪ್ರಕಾರ, ನಮ್ಮ ಬೇಡಿಕೆಗೆ ಸಂಬಂಧಿಸಿಂತೆ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಜತೆಗೆ ನಡೆಸಿದ ಸಭೆಯಲ್ಲಿ ನಮಗೆ ಸಕಾರಾತ್ಮಕ ಬೆಂಬಲ ದೊರಕಿದೆ. ಈ ಹಿನ್ನೆಲೆಯಲ್ಲಿ 48ಗಂಟೆಗಳ (ಎರಡು ದಿನ) ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಮುಷ್ಕರವನ್ನು ಕೈಬಿಟ್ಟಿರುವುದಾಗಿ ಹೇಳಿದೆ.
ವೇತನ ಪರಿಷ್ಕರಣೆ, ವಾರದಲ್ಲಿ ಐದು ದಿನಗಳ ಕೆಲಸ, ಮೂರನೇ ವ್ಯಕ್ತಿಗಳ ಉತ್ಪನ್ನ ಮಾರಾಟಕ್ಕೆ ತಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಭರವಸೆ ಸಿಕ್ಕಿರುವ ನಿಟ್ಟಿನಲ್ಲಿ ಮುಷ್ಕರ ಮುಂದೂಡಿಕೆ ಮಾಡಿರುವುದಾಗಿ ಒಕ್ಕೂಟ ವಿವರಿಸಿದೆ.
ಬ್ಯಾಂಕ್ ಮುಷ್ಕರ ಕೈಬಿಟ್ಟಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಇಲ್ಲದಿದ್ದರೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳುವಂತಾಗಲಿತ್ತು. ಸೆ.26, 27 ಬ್ಯಾಂಕ್ ಮುಷ್ಕರ, 28 ನಾಲ್ಕನೇ ಶನಿವಾರ, 29 ಭಾನುವಾರ. ಆದರೆ ಇದೀಗ ಎರಡು ದಿನಗಳ ಬ್ಯಾಂಕ್ ಮುಷ್ಕರ್ ಕೈಬಿಟ್ಟಿದ್ದರಿಂದ ವಾರದ ಕೊನೆಯ ಎರಡು ದಿನಗಳು ಮಾತ್ರ ಬ್ಯಾಂಕ್ ವ್ಯವಹಾರಕ್ಕೆ ರಜೆ ಸಿಕ್ಕಂತಾಗಿದೆ